ಬೆಂಗಳೂರು,ಮಾ.9-ರಾಜ್ಯದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ( ಎಆರ್ಟಿಒ ) ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ(ಆರ್ಟಿಒ )ಯ ಸೇವೆಗಳನ್ನು ಆನ್ಲೈನ್ನಲ್ಲಿ ನೀಡುತ್ತಿದ್ದು, ಪೇಪರ್ ಮುಕ್ತ ಮಾಡುತ್ತಿದ್ದೇವೆ ಎಂದು ಸಾರಿಗೆ ಸಚಿವ ಶ್ರೀರಾಮುಲು ವಿಧಾನಸಭೆಗೆ ತಿಳಿಸಿದರು.
ಶಾಸಕ ಹೊಲಿಗೇರಿ.ಡಿ.ಎಸ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಎಆರ್ಟಿಒ ಮತ್ತು ಆರ್ಟಿಒ ಕಚೇರಿಗಳಲ್ಲಿ ಸೇವೆಗಳನ್ನು ಆನ್ಲೈನ್ ಮೂಲಕ ನೀಡುತ್ತಿದ್ದೇವೆ. ಡಿ.ಎಲ್ ಸೇರಿದಂತೆ ಎಲ್ಲವೂ ಈಗ ಆನ್ಲೈನ್ನಲ್ಲೇ ಲಭ್ಯವಾಗಿರುವುದರಿಂದ ಪೇಪರ್ ಮುಕ್ತವಾಗಿದೆ. ಈ ಕಚೇರಿಗಳಿಗೆ ಸಾರ್ವಜನಿಕರ ಭೇಟಿಯೂ ಗಣನೀಯವಾಗಿ ಕಡಿಮೆಯಾಗುತ್ತದೆ ಎಂದರು.
ರಾಜ್ಯದಲ್ಲಿ ಹೊಸದಾಗಿ ಸಹಾಯಕ/ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯನ್ನು ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ, ಸಿಂಧಗಿ ಅಥವಾ ಇಂಡಿ ಪಟ್ಟಣ, ದಾವಣಗೆರೆ ಜಿಲ್ಲೆಯ ಹೊನ್ನಾಳಿ /ಚೆನ್ನಗಿರಿ, ಕಲುಬುರಗಿ ಜಿಲ್ಲೆಯ ಸೇಡಂ, ರಾಯಚೂರಿನ ಸಿಂಧನೂರು/ಲಿಂಗಸೂರು, ಉಡುಪಿಯ ಕುಂದಾಪುರ ತಾಲ್ಲೂಕಿನಲ್ಲಿ ಸ್ಥಾಪನೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ರಾಯಚೂರು ಜಿಲ್ಲೆಯ ಲಿಂಗಸೂರು ಅಥವಾ ಸಿಂಧನೂರಿನಲ್ಲಿ ಎಆರ್ಟಿಒ, ಆರ್ಟಿಒ ಕಚೇರಿಗಳನ್ನು ತೆರೆಯಲು ಹೆಚ್ಚಿನ ಬೇಡಿಕೆ ಬಂದಿದೆ. ಇದೇ ರೀತಿ ರಾಜ್ಯಾದ್ಯಂತ ತೆರೆಯಬೇಕೆಂಬ ಒತ್ತಡವೂ ಇದೆ. ಹಣಕಾಸಿನ ಲಭ್ಯತೆಯನ್ನು ನೋಡಿಕೊಂಡು ಹಂತ ಹಂತವಾಗಿ ಪ್ರಾರಂಭಿಸುವದಾಗಿ ತಿಳಿಸಿದರು.
