BIG NEWS : ಗಣರಾಜ್ಯೋತ್ಸವದಂದು ಪ್ರಧಾನಿ ಮೋದಿ ಸೇರಿ ಗಣ್ಯರ ಹತ್ಯೆಗೆ ಉಗ್ರರ ಸಂಚು..!

Social Share

ನವದೆಹಲಿ,ಜ.18-ಆಜಾದಿ ಕಾ ಅಮೃತ್ ಮಹೋತ್ಸವದ ವೇಳೆ ನಡೆಯುವ ಗಣರಾಜ್ಯೋತ್ಸವದಲ್ಲಿ ಭಾಗವಹಿಸುವ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಏಷ್ಯಾ ಖಂಡದ ಐದು ರಾಷ್ಟ್ರಗಳ ಗಣ್ಯರನ್ನು ಹತ್ಯೆ ಮಾಡಲು ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನದ ಉಗ್ರ ಸಂಘಟನೆಗಳು ಸಂಚು ರೂಪಿಸಿರುವ ಆತಂಕಕಾರಿ ಮಾಹಿತಿ ಹೊರಬಂದಿದೆ.
ಕೇಂದ್ರ ಗುಪ್ತದಳ ರವಾನಿಸಿರುವ 9 ಪುಟಗಳ ಮಾಹಿತಿ ಮಾಧ್ಯಮಗಳಿಗೆ ಲಭ್ಯವಾಗಿದ್ದು, ಅದರಲ್ಲಿ ವಿಧ್ವಂಸಕ ಕೃತ್ಯದ ಸಂಚಿನ ಸಮಗ್ರ ವಿವರಣೆ ಇದೆ. 75ನೇ ವರ್ಷದ ಗಣರಾಜ್ಯೋತ್ಸವದ ವೇಳೆ ಪ್ರಧಾನಿ ನರೇಂದ್ರ ಮೋದಿ, ಖಜಕಿಸ್ತಾನ್, ಕಿಜಕಿಸ್ತಾನ್, ತುರ್ಕಿಸ್ತಾನ್, ತಜಕಿಸ್ತಾನ್ ಹಾಗೂ ಉಬೇಕಿಸ್ತಾನ್ ದೇಶಗಳ ಗಣ್ಯ ಅತಿಥಿಗಳನ್ನು ಹತ್ಯೆ ಮಾಡುವ ಹುನ್ನಾರ ನಡೆದಿದೆ.
ಸ್ವಾತಂತ್ರೋತ್ಸವದ ಆಜಾದಿ ಕಾ ಅಮೃತ ಮಹೋತ್ಸವದ ವೇಳೆ ನಡೆಯುವ ಗಣರಾಜ್ಯೋತ್ಸವಕ್ಕೆ ಏಷ್ಯಾ ಖಂಡದ ಈ ಐದು ದೇಶಗಳ ಪ್ರಮುಖರನ್ನು ಅತಿಥಿಗಳನ್ನಾಗಿ ಆಹ್ವಾನಿಸುವ ಸಾಧ್ಯತೆಯಿದೆ.
ಈ ದೇಶಗಳ ನೀತಿಗಳ ಜೊತೆ ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಉಗ್ರ ಸಂಘಟನೆಗಳು ಕಡು ವಿರೋಧ ಹೊಂದಿವೆ. ಜೊತೆಗೆ ಭಾರತವನ್ನು ಉಗ್ರ ಸಂಘಟನೆಗಳು ತಮ್ಮ ಎದುರಾಳಿ ಎಂದು ಭಾವಿಸಿವೆ. ಹೀಗಾಗಿ ಭಾರೀ ವಿಧ್ವಂಸಕ ಕೃತ ನಡೆಸಲು ಸಂಚು ರೂಪಿಸಿವೆ ಎಂದು ಗುಪ್ತದಳ ಮಾಹಿತಿ ಕೇಂದ್ರ ರಕ್ಷಣಾ ಪಡೆಗಳಿಗೆ ಎಚ್ಚರಿಕೆ ಸಂದೇಶ ನೀಡಿದೆ.
ಅತ್ಯುನ್ನತ ನಾಯಕರು ಹಾಗೂ ಸಾರ್ವಜನಿಕ ಸಭೆ, ಸಮಾರಂಭಗಳು, ಜನಸಂದಣಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಸಂಚು ನಡೆದಿದೆ. ಈ ಹುನ್ನಾರದ ಹಿಂದೆ ಲಷ್ಕರ್-ಇ-ತೊಯ್ಬಾ, ಜೈಷ್-ಇ-ಮೊಹಮ್ಮದ್, ಹರ್ಕತ್-ಉಲ್ -ಮುಜಾಯಿದ್ದೀನ್ ಸಂಘಟನೆಗಳ ಕೈವಾಡವಿದೆ.
ಕಲಿಸ್ತಾನದ ಪರವಾಗಿ ಕೆಲಸ ಮಾಡುವ ಕೆಲವು ಗುಂಪುಗಳು ಪಾಕಿಸ್ತಾನದ ಉಗ್ರ ಸಂಘಟನೆಗಳ ಜೊತೆ ಕೈ ಜೋಡಿಸಿದ್ದು, ಸಂಚಿಗೆ ಸಹಕಾರ ನೀಡುತ್ತಿವೆ. ಪಂಜಾಬ್ ಸೇರಿದಂತೆ ಇತರ ರಾಜ್ಯಗಳಲ್ಲೂ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಲಾಗಿದೆ. ಈ ಹಿಂದೆ 2021ರ ಫೆಬ್ರವರಿಯಲ್ಲೂ ಇದೇ ರೀತಿಯ ಸಂಚಿನ ಮಾಹಿತಿ ತಿಳಿದುಬಂದು ರಕ್ಷಣಾ ಪಡೆಗಳು ಬಿಗಿ ಕ್ರಮ ಕೈಗೊಂಡಿದ್ದವು.

Articles You Might Like

Share This Article