ಬೆಂಗಳೂರು,ಜ.11- ಉನ್ನತ ವಿಚಾರ, ಸರಳ ಬದುಕು ಮತ್ತು ಉತ್ಕೃಷ್ಟ ನೈತಿಕತೆಯ ಪ್ರತೀಕವಾಗಿದ್ದ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಬದುಕು ದೇಶಕ್ಕೆ ಮಾದರಿಯಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸ್ಮರಿಸಿದರು.
ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಪುಣ್ಯತಿಥಿಯ ಅಂಗವಾಗಿ ವಿಧಾನಸೌಧದ ಆವರಣದಲ್ಲಿ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ನಂತರ ಮಾತನಾಡಿದ ಅವರು, ದೇಶದ ರಕ್ಷಣೆಗೆ ಕಟಿಬದ್ಧರಾಗಿದ್ದ ಅವರ ಕೆಚ್ಚು ಭಾರತದ ಸಮಗ್ರತೆಯನ್ನು ಉಳಿಸುವಲ್ಲಿ ನಿರ್ಣಾಯಕ ಶಕ್ತಿಯಾಗಿದೆ ಎಂದು ಹೇಳಿದರು.
ಮಹಾತ್ಮ ಗಾಂೀಧಿಜಿಯವರ ವಿಚಾರ ಮತ್ತು ಜೀವನಗಳಿಂದ ಪ್ರೇರೇಪಿತರಾಗಿ ದೇಶಸೇವೆಗೆ ಧುಮುಕಿದ ಶಾಸ್ತ್ರಿಯವರು ವಿದ್ವತ್ತು ಮತ್ತು ದೂರದರ್ಶಿತ್ವಗಳನ್ನು ಹೊಂದಿದ್ದ ತುಂಬಾ ಅಪರೂಪದ್ದ ರಾಜನೀತಿಜ್ಞರಾಗಿದ್ದರು. ಅವರು ಇನ್ನಷ್ಟು ವರ್ಷಗಳ ಕಾಲ ನಮ್ಮ ಪ್ರಧಾನಿಯಾಗಿ ಇದ್ದಿದ್ದರೆ ದೇಶವು ಹಲವು ಶಾಪಗಳಿಂದ ವಿಮುಕ್ತವಾಗಿರುತ್ತಿತ್ತು ಎಂದರು.
ದೇಶವು ಅನುಸರಿಸಬೇಕಾದ ವಿದೇಶಾಂಗ ನೀತಿ ಹೇಗಿರಬೇಕೆನ್ನುವುದು ಶಾಸ್ತ್ರಿಯವರಿಗೆ ಚೆನ್ನಾಗಿ ಗೊತ್ತಿತ್ತು. ಈ ವಿಚಾರದಲ್ಲಿ ಅವರು ತಮ್ಮ ಸಮಕಾಲೀನರಿಗಿಂತ ಹೆಚ್ಚು ವಾಸ್ತವಿಕ ದೃಷ್ಟಿಕೋನವನ್ನು ಹೊಂದಿದ್ದರು. ಅದರಲ್ಲೂ ದೇಶವನ್ನು ಕಾಯುವ ಸೇನಾಸಿಬ್ಬಂದಿಯನ್ನು ಗುರುತಿಸುವ ಮೂಲಕ ಅವರಿಗೆಲ್ಲ ಮನ್ನಣೆ ಸಿಕ್ಕುವಂತೆ ನೋಡಿಕೊಂಡರು ಇದು ಅನುಸರಣೀಯ ಎಂದರು.
