ಬೆಂಗಳೂರು,ಫೆ.21-ಆಂಧ್ರಪ್ರದೇಶದ ಶ್ರೀ ಕ್ಷೇತ್ರ ಶ್ರೀಶೈಲಂಗೆ ರಾಜ್ಯದಿಂದ ತೆರಳುವ ಭಕ್ತರಿಗೆ ಹೆಚ್ಚಿನ ಸೌಲಭ್ಯ ಒದಗಿಸಲು ನಿರ್ಮಾಣ ಮಾಡುತ್ತಿರುವ ಕರ್ನಾಟಕ ಭವನಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಸಿಎಂ ಬೊಮ್ಮಾಯಿಗೆ ಮನವಿ ಮಾಡುವುದಾಗಿ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರು ವಿಧಾನಸಭೆಯಲ್ಲಿಂದು ತಿಳಿಸಿದರು.
ಶಾಸಕ ಬಸವರಾಜ ಮತ್ತಿಮೋಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಶ್ರೀಶೈಲಂನ ಶ್ರೀ ಬ್ರಹ್ಮಾರಂಭ ಸ್ವಾಮಿ ದೇವಾಲಯದ ಬಳಿ 300*300 ಅಡಿ ಜಾಗದಲ್ಲಿ ಛತ್ರವನ್ನು ನಿರ್ಮಿಸುತ್ತಿದ್ದೇವೆ. ನೆಲಮಹಡಿ ಮತ್ತು ಮೊದಲ ಮಹಡಿಯಲ್ಲಿ ಒಟ್ಟು 16 ಕೊಠಡಿಗಳು, ನೆಲಮಹಡಿಯಲ್ಲಿ 8 ಕೊಠಡಿಗಳು ಹಾಗೂ ಭೋಜನಶಾಲೆಗಳನ್ನು ಆರಂಭಿಸುತ್ತೇವೆ. ಇದಕ್ಕೆ ಹೆಚ್ಚಿನ ಅನುದಾನವನ್ನು ಬಜೆಟ್ನಲ್ಲಿ ಘೋಷಣೆ ಮಾಡುವಂತೆ ಸಿಎಂಗೆ ಮನವಿ ಮಾಡಿರುವುದಾಗಿ ಹೇಳಿದರು.
ಒಂದಿಷ್ಟು ಜಾಗದ ಸಮಸ್ಯೆಯೂ ಇದೆ. ಆಂಧ್ರಪ್ರದೇಶ ಸರ್ಕಾರದ ಅಕಾರಿಗಳ ಜೊತೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರು ಚರ್ಚಿಸಿ ಇದನ್ನು ಪರಿಹಿರಿಸಿಕೊಡಬೇಕೆಂದು ಮನವಿ ಮಾಡಿದರು. ಶ್ರೀಶೈಲಂನಲ್ಲಿ ಛತ್ರ ಶಿಥಿಲಾವಸ್ಥೆಯಲ್ಲಿದ್ದು, ರಾಜ್ಯದಿಂದ ತೆರಳುವ ಭಕ್ತರಿಗೆ ಊಟ, ವಸತಿ ಮತ್ತು ವಾಸ್ತವ್ಯಕ್ಕೆ ತೊಂದರೆಯಾಗುತ್ತದೆ. ಇದನ್ನು ನವೀಕರಣ ಮಾಡುವ ಕೆಲಸವೂ ಸಹ ಮುಂದುವರೆದಿದೆ. ಯಾತ್ರಿಗಳಿಗೆ ಎಲ್ಲ ರೀತಿಯ ಸಹಕಾರವನ್ನು ನೀಡಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ಆಶ್ವಾಸನೆ ನೀಡಿದರು.
