ಶಿವಮೊಗ್ಗ,ಆ.16- ನಿಷೇಧಾಜ್ಞೆ ನಡುವೆಯೂ ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ಮೂವರ ಗುಂಪೊಂದು ಚಾಕುವಿನಿಂದ ಇರಿಯಲು ಯತ್ನಿಸಿರುವ ಘಟನೆ ಭದ್ರಾವತಿಯ ಹಳೆನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೂದಲೆಳೆಯ ಅಂತರದಲ್ಲಿ ಬಜರಂಗದಳ ಕಾರ್ಯಕರ್ತ ಸುನೀಲ್(28) ಪಾರಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಪೊಲೀಸರ ಹೈ ಅಲರ್ಟ್, ನಿಷೇಧಾಜ್ಞೆ ನಡುವೆಯೂ ಗುಂಪೊಂದು ಬಾಲಬಿಚ್ಚಿದ್ದು, ಇಂದು ಬೆಳಗ್ಗೆ ಭದ್ರಾವತಿಯ ನೆಹರು ಬಡಾವಣೆಯಲ್ಲಿ ಗಲಾಟೆ ನಡೆದಿದ್ದು, ಕೆಲಸಕ್ಕೆ ನಡೆದುಕೊಂಡು ಹೋಗುತ್ತಿದ್ದ ಸುನೀಲ್ ಎಂಬಾತನ ಮೇಲೆ ಡಿಚ್ಚಿ ಅಲಿಯಾಸ್ ಮುಬಾರಕ್ ಸೇರಿದಂತೆ ಮೂವರು ಮನಬಂದಂತೆ ಕೈಗಳಿಂದ ಮುಖ, ಕೈ ಹಾಗೂ ಇನ್ನಿತರ ಭಾಗಗಳಿಗೆ ಹಲ್ಲೆ ನಡೆಸಿ ಚಾಕುವಿನಿಂದ ಇರಿಯಲು ಯತ್ನಿಸಿದ್ದಾರೆ.
ತಕ್ಷಣ ಸುನೀಲ್ ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದು, ಹಲ್ಲೆಯಿಂದ ಮುಖಕ್ಕೆ ಗಂಭೀರ ಪೆಟ್ಟಾಗಿದೆ. ಸುದ್ದಿ ತಿಳಿದು ಹಳೆನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.