ಬೆಂಗಳೂರು,ಫೆ.13- ಅರಸೀಕೆರೆ ಕ್ಷೇತ್ರದಲ್ಲಿ ಯಾವುದೇ ಒತ್ತಡ, ಗೊಂದಲ ಇಲ್ಲ.ನಾನು ಇನ್ನು ಜೆಡಿಎಸ್ನಲ್ಲೇ ಇದ್ದೇನೆ. ರಾಜೀನಾಮೆ ಕೊಟ್ಟಿಲ್ಲ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ವಿಧಾನಸಭೆಗೆ ತಿಳಿಸಿದರು.
ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣ ಪ್ರಸ್ತಾವದ ಬಗ್ಗೆ ಆಡಳಿತ ಪಕ್ಷದ ಶಾಸಕ ಸಿ.ಟಿ.ರವಿ ಮಾತನಾಡುತ್ತಿದ್ದಾಗ ಶಿವಲಿಂಗೇಗೌಡರು ಪಕ್ಷದ ಪ್ರಣಾಳಿಕೆ ಹೇಳುವುದಿಲ್ಲ. ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಿ ಎಂದು ಆಕ್ಷೇಪಿಸಿದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಕಂದಾಯ ಸಚಿವ ಅಶೋಕ್, ನೀವು ಪಕ್ಷದ ಸಮಯದಲ್ಲಿ ಮಾತನಾಡುತ್ತೀರಿ, ಬಿಜೆಪಿಯೋ, ಕಾಂಗ್ರೆಸೋ ಅಥವಾ ಜೆಡಿಎಸ್ ಪಕ್ಷದ ಸಮಯದಲ್ಲಿ ಮಾತನಾಡುತ್ತೀರೋ ಎಂದು ಛೇಡಿಸಿದರು.
ಆಗ ಶಿವಲಿಂಗೇಗೌಡರು, ಸಭಾಧ್ಯಕ್ಷರ ವಿವೇಚನಾ ಕೋಟಾದಲ್ಲಿ ಮಾತನಾಡುತ್ತೇನೆ. ಈಗಲೂ ಜೆಡಿಎಸ್ನಲ್ಲಿದ್ದೇನೆ. ರಾಜೀನಾಮೆ ಕೊಟ್ಟಿಲ್ಲ. ಆ ರಾಜಕೀಯದ ವಿಚಾರ ಬೇಡ. ಹೇಳುವವರಿಲ್ಲ, ಕೇಳುವವರು ಇಲ್ಲ ಎಂದು ಚುನಾವಣಾ ಭಾಷಣ ಮಾಡುವುದು ಸರಿಯಲ್ಲ.
ಸದನದ ಮೂಲಕ ತಪ್ಪು ಸಂದೇಶ ಹೋಗಬಾರದು. ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮಾಡಿ. ಪಕ್ಷ ಬಿಡುವವರು, ಇನ್ನೊಂದು ಪಕ್ಷ ಸೇರುವವರು ನೋಡಿದ್ದೇನೆ ಎಂದರು. ಆಗ ಸಿ.ಟಿ.ರವಿ ನಿಮ್ಮ ಅಸಹಾಯಕತೆ ಅರ್ಥವಾಗುತ್ತದೆ ಬಿಡಿ ಎಂದು ಚರ್ಚೆ ಮುಂದುವರೆಸಿದರು.
#Shivalingegowda, #Resignation, #JDS,