ಕೈಕಾಲು ಕಟ್ಟಿ ಹಾಕಿ ಚಿಕ್ಕಪೇಟೆಯ ಎಲೆಕ್ಟ್ರಿಕಲ್ಸ್ ಅಂಗಡಿ ಮಾಲೀಕನ ಹತ್ಯೆ
ಬೆಂಗಳೂರು, ಮೇ 25- ಎಲೆಕ್ಟ್ರಿಕಲ್ಸ್ ಅಂಗಡಿಯ ಮಾಲೀಕರು ಹಾಗೂ ಡಿಸ್ಟಿಬ್ಯೂಟರ್ರೊಬ್ಬರ ಕೈ-ಕಾಲು ಕಟ್ಟಿಹಾಕಿ, ಕತ್ತು ಹಿಸುಕಿ ಕೊಲೆ ಮಾಡಿ ಲಕ್ಷಾಂತರ ರೂ. ನಗದು ಹಾಗೂ ಭಾರೀ ಬೆಲೆಬಾಳುವ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಾಮರಾಜಪೇಟೆಯ 4ನೆ ಕ್ರಾಸ್, 4ನೆ ಮುಖ್ಯರಸ್ತೆಯಲ್ಲಿನ ಅಪಾರ್ಟ್ಮೆಂಟ್ 3ನೆ ಮಹಡಿಯಲ್ಲಿ ವಾಸವಾಗಿದ್ದ ಜಗ್ಗುರಾಜ್ ಜೈನ್ (75) ಕೊಲೆಯಾಗಿರುವ ಎಲೆಕ್ಟ್ರಿಕಲ್ ಡಿಸ್ಟ್ರಿಬ್ಯೂಟರ್.ಚಿಕ್ಕಪೇಟೆಯಲ್ಲಿನ ದೀಪಂ ಎಲೆಕ್ಟ್ರಿಕಲ್ ಅಂಗಡಿ ಮಾಲೀಕರಾದ ಜಗ್ಗುರಾಜ್ ಜೈನ್ ಅವರು ಹಾವೆಲ್ಸ್ ಎಲೆಕ್ಟ್ರಿಕಲ್ ಉಪಕರಣಗಳ ಡಿಸ್ಟಿಬ್ಯೂಟರ್.
ಚಾಮರಾಜಪೇಟೆಯ ಕಿಂಗ್ಸ್ ಎನ್ಕ್ಲೈವ್ ಅಪಾರ್ಟ್ಮೆಂಟ್ನ ಮೂರನೆ ಮಹಡಿಯಲ್ಲಿ ಜಗ್ಗುರಾಜ್ ಜೈನ್ ತನ್ನ ಮಗ ಆನಂದ್ಕುಮಾರ್ ಮತ್ತು ಸೊಸೆ ಜತೆ ವಾಸವಾಗಿದ್ದರು. ಇವರ ಮತ್ತೊಬ್ಬ ಮಗ ಬೆಂಗಳೂರಿನಲ್ಲೇ ವಾಸವಾಗಿದ್ದಾನೆ. ಆನಂದ್ಕುಮಾರ್ ವ್ಯವಹಾರ ನಿಮಿತ್ತ ಗೋವಾಕ್ಕೆ ತೆರಳಿದ್ದು, ಅವರ ಪತ್ನಿ ಉಷಾರಾಣಿ ಅವರು ಶಿಕಾರಿಪುರಕ್ಕೆ ಹೋಗಿದ್ದಾರೆ.
ಹಾಗಾಗಿ ರಾತ್ರಿ ಮನೆಯಲ್ಲಿ ಒಬ್ಬರೇ ಇದ್ದರು. ಸುಮಾರು 10.30ರ ಸುಮಾರಿನಲ್ಲಿ ಜಗ್ಗುರಾಜ್ ಜೈನ್ ಅವರ ಕೈ-ಕಾಲು ಕಟ್ಟಿದ ದುಷ್ಕರ್ಮಿ ಮುಖಕ್ಕೆ ಖಾರದ ಪುಡಿ ಹಾಕಿ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಇಂದು ಬೆಳಗ್ಗೆ ಆನಂದ್ಕುಮಾರ್ ಅವರು ತನ್ನ ತಂದೆಗೆ ಫೋನ್ ಮಾಡಿದ್ದಾರೆ. ಅವರು ಕರೆ ಸ್ವೀಕರಿಸಿರಲಿಲ್ಲ.
ಬೆಂಗಳೂರಿನಲ್ಲೇ ವಾಸವಾಗಿರುವ ತನ್ನ ಅಣ್ಣನ ಮಗನಿಗೆ ವಿಷಯ ತಿಳಿಸಿದ್ದಾರೆ. ಅಣ್ಣನ ಮಗ ಅಪಾರ್ಟ್ಮೆಂಟ್ಗೆ ಬಂದು ನೋಡಿದಾಗ ಬಾಗಿಲು ತೆರೆದಿಲ್ಲ. ವಿಷಯವನ್ನು ತಂದೆ ಪ್ರಕಾಶ್ಚಂದ್ಗೆ ತಿಳಿಸಿದ್ದಾರೆ.
ಅವರು ಬಂದು ನಕಲಿ ಕೀ ಬಳಸಿ ಬಾಗಿಲು ತೆಗೆದಾಗ ಜಗ್ಗುರಾಜ್ ಜೈನ್ ಕೊಲೆಯಾಗಿರುವುದು ಕಂಡುಬಂದಿದೆ. ತಕ್ಷಣ ಅವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮನೆ ಪರಿಶೀಲನೆ ನಡೆಸಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.
ಜಗ್ಗುರಾಜ್ ಜೈನ್ ಅವರ ಮಗ ಆನಂದ್ಕುಮಾರ್ ಗೋವಾದಿಂದ ಬಂದ ನಂತರವಷ್ಟೇ ಮನೆಯಿಂದ ತೆಗೆದುಕೊಂಡಿರುವ ಹೋಗಿರುವ ಹಣ-ಆಭರಣಗಳ ಮೌಲ್ಯ ಗೊತ್ತಾಗಲಿದೆ.ಜಗ್ಗುರಾಜ್ ಜೈನ್ ಮನೆಯಲ್ಲಿದ್ದ ಕೆಲಸಗಾರ ನಾಪತ್ತೆಯಾಗಿದ್ದು, ಆತನ ಮೇಲೆ ಶಂಕೆ ವ್ಯಕ್ತವಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮನೆ ಸುತ್ತ ಮುತ್ತಲಿನ ರಸ್ತೆಗಳಲ್ಲಿ ಅಳವಡಿಸಿರುವ ಸಿಸಿಟಿವಿ ಫುಟೇಜ್ಗಳನ್ನು ಪಡೆದುಕೊಂಡು ದುಷ್ಕರ್ಮಿಗಾಗಿ ಬಲೆ ಬೀಸಿದ್ದಾರೆ.