ಬೆಂಗಳೂರು,ಆ.20- ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳು ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನಡುವಿನ ಮಾತುಕತೆ ಅವರಿಬ್ಬರಿಗೆ ಮಾತ್ರ ಗೊತ್ತು. ಅವರು ಈಗ ಪಶ್ಚಾತ್ತಾಪದ ಬಗ್ಗೆ ಮಾತನಾಡಿದ್ದರೂ ಸತ್ಯ ಜಗತ್ತಿಗೆ ಗೊತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳು ಹಾಗೂ ಸಿದ್ದರಾಮಯ್ಯ ನಡುವಿನ ಮಾತುಕತೆ ಬಗ್ಗೆ ಹೆಚ್ಚು ವ್ಯಾಖ್ಯಾನ ಮಾಡುವುದಿಲ್ಲ. ಸತ್ಯ ಏನೆಂಬುದು ಜಗತ್ತಿಗೆ ಗೊತ್ತು. ಇಬ್ಬರ ನಡುವಿನ ಮಾತುಕತೆ ಬಗ್ಗೆ ನಾನು ಮಾತನಾಡಿದರೆ ಬೇರೆಯದೇ ಅರ್ಥವಾಗುತ್ತದೆ ಎಂದು ಸಿಎಂ ನುಣುಚಿಕೊಂಡರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲು ಈಗಾಗಲೇ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ಕೊಟ್ಟಿದ್ದೇನೆ ಎಂದು ತಿಳಿಸಿದರು. ಗುರುಗಳು ನಿನ್ನೆ ಒಂದು ಹೇಳಿ ಇವತ್ತು ಒಂದು ಹೇಳಿದ್ದಾರೆ. ಅವರಿಬ್ಬರ ಮಧ್ಯೆ ಏನು ಸಂಭಾಷಣೆ ನಡೆದಿದೆ ಅನ್ನುವುದು ನನಗೆ ಗೊತ್ತಿಲ್ಲ ಎಂದರು.
ಇದಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸ್ ಅವರ 107ನೇ ಜನ್ಮದಿನಾಚರಣೆ ಪ್ರಯುಕ್ತ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರು ಹಿಂದುಳಿದ ವರ್ಗಗಳಿಗೆ ಹಾಗೂ ರಾಜ್ಯಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.
ಅರಸು ಅವರು ತಮ್ಮದೇ ಆದಂತಹ ಒಂದು ಸೇವೆಯನ್ನು ಮಾಡಿ ಜನಮನ ಗೆದ್ದಿದ್ದಾರೆ. ಅವರಿಗೆ ಬಡವರ ಬಗ್ಗೆ ಕಳಕಳಿ ಇತ್ತು, ಹಿಂದುಳಿದವರ ನಾಯಕ ಅವರಾಗಿದ್ದರು ಎಂದು ನೆನಪಿಸಿಕೊಂಡರು. ಹಿಂದುಳಿದ ವರ್ಗದವರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸೇವೆ ಮಾಡಿದವರು. ಭೂ ಸುಧಾರಣೆ ಬಗ್ಗೆ ಮೊದಲು ಚಿಂತನೆ ಮಾಡಿ ಕಾರ್ಯರೂಪಕ್ಕೆ ತಂದ ಶ್ರೇಯಸ್ಸು ಅವರಿಗಿದೆ.
ಭೂ ಸುಧಾರಣೆ ಕಾಯ್ದೆಯಿಂದ ಉಳುವುವನೇ ಭೂಮಿಯ ಒಡೆಯ ಕಾನೂನು ಮಾಡಿ ಅನುಷ್ಠಾನಕ್ಕೆ ತಂದವರು. ಜನತಾ ಮನೆ, ವಿದ್ಯುತ್ ರಿಯಾಯತಿ ಮಾಡಿ ಬಡವರಿಗೆ ನೆರವಾದರು. ಹಿಂದುಳಿದ ವರ್ಗ, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿಯನ್ನು ಸಬಲೀಕರಣ ಮಾಡಿದರು ಎಂದರು.
ರಾಜಕೀಯ ರಂಗದಲ್ಲಿ ಎತ್ತರಕ್ಕೆ ಸ್ಥಾನ ತೆಗೆದುಕೊಂಡು ಹೋದವರು. ಯಾರಿಗಾಗಿ ಸಂಘಟನೆ ಮಾಡಿದರು, ಅವರಿಗಾಗಿ ಹೋರಾಟ ಮಾಡಿದರೋ ಕೊನೆಗೆ ಅವರೇ ಅವರ ಜೊತೆ ನಿಲ್ಲಲಿಲ್ಲ, ಇದು ದುರಂತ ಎಂದು ಹೇಳಿದರು. ಆದರೆ, ದೇವರಾಜ್ ಅರಸು ಮಹತ್ವ ಇನ್ನು ಕಡಿಮೆಯಾಗಿಲ್ಲ.
ಹತ್ತು ಹಲವು ಕಾರ್ಯಕ್ರಮಗಳನ್ನು ನಾವೂ ಕೂಡ ಮಾಡುತ್ತಾ ಅವರ ಹಾದಿಯಲ್ಲಿ ಸಾಗುತ್ತಾ ನಿಜವಾದ ನಮನಗಳನ್ನು ಮಾಡುತ್ತಿದ್ದೇವೆ. ರಾಜ್ಯದ ಸಮಗ್ರ ಅಭಿವೃದ್ಧಿಯಲ್ಲಿ ಎಲ್ಲರೂ ಒಳಗೊಂಡಂತೆ ಮಾಡಬೇಕು ಅನ್ನೋ ಅವರ ಧ್ಯೇಯಯೊಂದಿಗೆ ನಾವೂ ನಡೆಯುತ್ತೇವೆ ಎಂದರು.