ಬೆಂಗಳೂರು, ಫೆ.4- ದಕ್ಷಿಣ ಭಾರತದ ನದಿಗಳ ಜೋಡಣೆಯಿಂದ ಕರ್ನಾಟಕಕ್ಕೆ ಅನ್ಯಾಯವಾಗಿ, ತಮಿಳುನಾಡಿಗೆ ಲಾಭವಾಗಲಿದೆ. ಕೇಂದ್ರ ಹಣಕಾಸು ಸಚಿವ ನಿರ್ಮಲ ಸೀತಾರಾಮನ್ ತಮಿಳು ನಾಡಿನವರಾಗಿರುವುದರಿಂದ ತವರು ರಾಜ್ಯಕ್ಕೆ ಅನುಕೂಲ ಮಾಡಿಕೊಡಲು ಯೋಜನೆಯನ್ನು ಬಜೆಟ್ನಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಮಂಡಿಸಿರುವ ಕೇಂದ್ರ ಬಜೆಟ್ನಲ್ಲಿ ನದಿ ಜೋಡಣೆಯನ್ನು ಪ್ರಸ್ತಾಪಿಸಿದ್ದಾರೆ. ಈ ಯೋಜನೆ ಅನುಷ್ಠಾನಕ್ಕೆ 46 ಸಾವಿರ ಕೋಟಿ ಯೋಜನೆಗೆ ನಿಗದಿ ಮಾಡಿದ್ದಾರೆ. ಆದರೆ ನದಿ ಜೋಡಣೆ ಕಾರ್ಯಸಾದುವಲ್ಲ. ನಿರ್ಮಲಾ ಸೀತಾರಾಮನ್ ತಮಿಳುನಾಡಿನವರು. ಅದಕ್ಕಾಗಿ ನದಿ ಜೋಡಣೆ ಪ್ರಸ್ತಾಪಿಸಿದ್ದಾರೆ.
ಈ ಯೋಜನೆಯಿಂದ ತಮಿಳುನಾಡಿಗೆ ಲಾಭವಾಗಲಿದೆಯೇ ಹೊರತು ಕರ್ನಾಟಕಕ್ಕೆ ಅಲ್ಲ. ಕೃಷ್ಣಾ,ಕಾವೇರಿ,ಪೆನ್ನಾರ್,ಗೋದಾವರಿ ನದಿಗಳ ಜೋಡಣೆಯಿಂದ 347 ಟಿಎಂಸಿ ನೀರು ಸಿಗುತ್ತೆ ಎಂದಿದ್ದಾರೆ. ಇದರಿಂದ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿಗೆ ನೀರು ಕೊಡಬಹುದೆಂಬ ನಿರೀಕ್ಷೆ ವ್ಯಕ್ತ ಪಡಿಸಿದ್ದಾರೆ. ದೇಶದಲ್ಲಿ ರಾಜಸ್ತಾನ ಬಿಟ್ಟರೆ ಹೆಚ್ಚು ಒಣ ಭೂಮಿ ಇರುವುದು ನಮ್ಮ ರಾಜ್ಯದಲ್ಲಿ ಮಾತ್ರ. ಇಲ್ಲಿ ಶೇ.70ರಷ್ಟು ಹೆಚ್ಚು ಒಣ ಭೂಮಿ ಇದೆ. ಬೇರೆ ರಾಜ್ಯಗಳಲ್ಲಿ ಶೇ.50 ನೀರಾವರಿಯಾಗಿದೆ. ನಮ್ಮಲ್ಲಿ ಶೇ.30 ಮಾತ್ರ ನೀರಾವರಿ ಇದೆ ಎಂದರು.
ನದಿ ಜೋಡಣೆಯಿಂದ ತಮಿಳುನಾಡಿಗೆ ಹೆಚ್ಚು ನೀರು ಸಿಗುತ್ತದೆ. ರಾಜ್ಯಗಳ ಸಮ್ಮತಿಯಿಲ್ಲದೆ ಈ ಯೋಜನೆ ಅನುಷ್ಠಾನ ಮಾಡುವುದು ಅಸಾಧ್ಯ. ನದಿ ಜೋಡಣೆಯಿಂದ ರಾಜ್ಯಗಳ ನಡುವೆ ವ್ಯಾಜ್ಯ ಶುರುವಾಗುತ್ತದೆ. ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಮುಖ್ಯಸ್ಥರ ಸಭೆಯನ್ನು ಕರ್ನಾಟಕದಲ್ಲೇ ನಡೆಸಬೇಕು. ಗೋದಾವರಿ, ಕಾವೇರಿ, ಪೆನ್ನಾರ್ ನದಿಗಳಿಂದ ಎಷ್ಟು ನೀರು ಲಭ್ಯವಾಗಲಿದೆ. ಯಾವ ರಾಜ್ಯಕ್ಕೆ ರಾಜ್ಯಕ್ಕೆ ಎಷ್ಟು ನೀರು ಸಿಗುತ್ತದೆ ಎಂಬ ಸಂಪೂರ್ಣ ಮಾಹಿತಿ ಜನರ ಮುಂದಿಡಬೇಕು ಎಂದು ಒತ್ತಾಯಿಸಿದರು.
ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಕೇಂದ್ರ ಸರ್ಕಾರ ಏಕಮುಖವಾಗಿ ನಡೆದುಕೊಳ್ಳುವುದು ಸರಿಯಲ್ಲ, ಅದು ಸರ್ವಾಧಿಕಾರಿ ಧೋರಣೆಯಾಗಲಿದೆ. ಇದಕ್ಕೆ ನಮ್ಮ ತೀರ್ವ ವಿರೋಧವಿದೆ ಎಂದು ಹೇಳಿದರು.
ಕಾವೇರಿ ನಮ್ಮ ಕೊಡಗಿನಲ್ಲಿ ಹುಟ್ಟುತ್ತದೆ. ಹೆಚ್ಚು ನೀರು ತಮಿಳುನಾಡಿಗೆ ಹೋಗುತ್ತದೆ. ನದಿ ಜೋಡಣೆ ವಿಚಾರ ಹೊಸದಲ್ಲ. ಮುರಾರ್ಜಿ ದೇಸಾಯಿ ಕಾಲದಲ್ಲೇ ಈ ಚಿಂತನೆ ನಡೆದಿತ್ತು. ಆಗ ಗಂಗ-ಕಾವೇರಿ ನದಿಗಳ ಜೋಡಣೆ ಬಗ್ಗೆ ಚರ್ಚಿಸಿದ್ದರು. ನದಿ ಜೋಡಣೆ ಎಂದರೆ ಗಂಗಾ,ಬ್ರಹ್ಮಪುತ್ರಾ,ಕಾವೇರಿ ಸಂಗಮವಾಗುವುದು. ಆಗ ಎಲ್ಲ ರಾಜ್ಯಗಳಿಗೆ ಅನುಕೂಲವಾಗಲಿದೆ. ಬಜೆಟ್ನಲ್ಲಿ ದಕ್ಷಿಣ ರಾಜ್ಯಗಳ ನದಿ ಜೋಡಣೆಯನ್ನು ಮಾತ್ರ ಪ್ರಸ್ತಾಪಿಸಿದ್ದಾರೆ. ಮೊದಲು ಉತ್ತರ ಭಾರತದ ನದಿಗಳ ಜೋಡಣೆ ಮಾಡಲಿ ಎಂದು ಒತ್ತಾಯಿಸಿದರು.
ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ನದಿ ಜೋಡಣೆ ಮಾಡಿ ಎಂದು ನಮ್ಮ ರಾಜ್ಯ ಕೇಳಿದೆಯಾ ?, ಸಂಸದರೇನಾದರೂ ಒತ್ತಾಯ ಮಾಡಿದ್ದಾರಾ ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ನಮ್ಮ ರಾಜ್ಯದ ಸಂಸದರು ಕರ್ನಾಟಕದ ಹಿತ ದೃಷ್ಠಿಯಿಂದ ಚರ್ಚೆ ಮಾಡಬೇಕು. ಜನ ಇವರನ್ನು ಆರಿಸಿ ಕಳುಹಿಸಿರುವುದು ನಾಡಿನ ಹಿತ ಕಾಪಾಡಲು.
ರಾಜ್ಯ ಸರ್ಕಾರ ಕೂಡಲೇ ಸರ್ವಪಕ್ಷ ಸಭೆ ಕರೆದು ನದಿ ಜೋಡಣೆಯಿಂದಾಗುವ ಲಾಭ-ನಷ್ಟಗಳ ಕುರಿತು ಚರ್ಚೆ ನಡೆಸಬೇಕು. ರಾಜ್ಯಕ್ಕಾಗುವ ನಷ್ಟದ ಬಡಿÉ್ಗಯೂ ಮಾಹಿತಿ ಹಂಚಿಕೊಳ್ಳಬೇಕು. ಅನಂತರ ನದಿ ಜೋಡಣೆ ಬಗ್ಗೆ ನಿರ್ಧಾರವಾಗಬೇಕು. ಚರ್ಚೆಯಾಗದೆ ರಾಜ್ಯ ಸರ್ಕಾರ ಯಾವ ಕಾರಣಕ್ಕೂ ಒಪ್ಪಿಗೆ ನೀಡಬಾರದು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಸವಾರಿ ಮಾಡುತ್ತಿದೆ. ಕೃಷಿ,ಎಪಿಎಂಸಿ ಕಾಯ್ದೆ ತಿದ್ದುಪಡಿಗಳಲ್ಲೂ ಇದೇ ರೀತಿ ನಡೆದುಕೊಂಡಿದೆ. ರಾಜ್ಯಗಳ ವ್ಯಾಪ್ತಿಗೆ ಒಳ ಪಡುವ ವಿಷಯಗಳಲ್ಲೂ ಕೇಂದ್ರ ಸರ್ಕಾರ ಹಸ್ತಕ್ಷೇಪ ನಡೆಸುತ್ತಿದೆ. ಸರ್ವಾಧಿಕಾರಿ ಧೋರಣೆಯಿಂದ ನಡೆದುಕೊಳ್ಳುತ್ತಿದೆ. ನೆಲ,ಜಲ,ಭಾಷೆಯ ಬಗ್ಗೆ ರಾಜಕೀಯ ಬೇಡ. ಈವರೆಗೂ ಯಾವ ಪಕ್ಷಗಳು ರಾಜಕೀಯ ಮಾಡಿಲ್ಲ. ಮುಂದೆಯೂ ಮಾಡಬಾರದು ಎಂದು ಸಲಹೆ ನೀಡಿದರು.
ಹಿಜಾಬ್ ಧರಿಸಿರುವ ಬಂದ ಮುಸ್ಲಿಂ ಹೆಣ್ಣು ಮಕ್ಕಳನ್ನು ಕಾಲೇಜು ಪ್ರವೇಶಿಸದಂತೆ ಗೇಟ್ ಬಂದ್ ಮಾಡಿ ಉಡುಪಿ ಜಿಲ್ಲೆ ಕುಂದಾಪುರ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.
ಬಿಜೆಪಿಯವರು ಶಾಲಾ ಕಾಲೇಜುಗಳಲ್ಲೂ ರಾಜಕಾರಣ ಮಾಡಲಾರಂಭಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಧರಿಸುತ್ತಿರುವುದು ಹೊಸದಲ್ಲ, ಆರಂಭದಿಂದಲೂ ಅವರು ಹಿಜಾಬ್ ಧರಿಸಿಯೇ ಬರುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ಈ ಮೊದಲು ಕೇಸರಿ ಶಾಲು ಧರಿಸಿ ಬರುತ್ತಿರಲಿಲ್ಲ. ಇದ್ದಕ್ಕಿದ್ದಂತೆ ಕೇಸರಿ ಶಾಲು ಹಾಕಿಕೊಳ್ಳುತ್ತಿರುವುದರ ಹಿಂದೆ ಇರುವ ದುರುದ್ದೇಶವೇನು ಎಂದು ಪ್ರಶ್ನಿಸಿದರು.
ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಧರಿಸಿ ಕಾಲೇಜಿಗೆ ಬರುವುದು ಧಾರ್ಮಿಕ ನಿಯಮ. ನಮ್ಮ ಸಂವಿಧಾನ ಎಲ್ಲಾ ಧರ್ಮದವರಿಗೂ ಅವರು ನಂಬಿದ ಆಚರಣೆಗಳನ್ನು ಪಾಲಿಸಲು ಅವಕಾಶ ನೀಡಿದೆ. ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯನ್ನು ನಾನು ನೋಡಿದ್ದೇನೆ. ಅದರಲ್ಲಿ ವಸ್ತ್ರ ಸಂಹಿತೆ ಇಲ್ಲ. ಬಿಜೆಪಿಯವರು ತಮ್ಮ ಸರ್ಕಾರದ ಲೋಪ ದೋಷಣಗಳನ್ನು ಹಾಗೂ ವೈಪಲ್ಯಗಳನ್ನು ಮರೆ ಮಾಚಲು ವಿಷಯಾಂತರ ಮಾಡುತ್ತಿದ್ದಾರೆ. ಹಿಜಾಬ್ ವಿಷಯವನ್ನು ಬೇಕೆಂತಲೇ ಮುನ್ನೆಲೆಗೆ ತಂದಿದ್ದಾರೆ ಎಂದು ಆರೋಪಿಸಿದರು.
ಅವರ್ಯಾರೋ ಬಿಜೆಪಿಯ ಶಾಸಕ ರಘುಪತಿ ಭಟ್ ಸಭೆ ಮಾಡಿ ಹೇಳಿದರು ಎಂಬ ಕಾರಣಕ್ಕೆ ಪ್ರಾಂಶುಪಾಲರು ಕಾಲೇಜಿನ ಗೇಟ್ ಮುಚ್ಚಿ ಹಿಜಾಬ್ ಧರಿಸಿ ಬಂದ ಮಕ್ಕಳಿಗೆ ಪ್ರವೇಶ ನಿರಾಕರಿಸಿದ್ದಾರೆ. ಈ ರೀತಿ ಆದೇಶ ನೀಡಲು ರಘುಪತಿ ಭಟ್ ಯಾರು. ಪ್ರಾಂಶುಪಾಲರ ನಡವಳಿಕೆ ಶಿಕ್ಷಣದ ಮೂಲಭೂತ ಹಕ್ಕಿಗೆ ವಿರುದ್ಧವಾಗಿದೆ. ಕಡ್ಡಾಯ ಶಿಕ್ಷಣ ಕಾಯ್ದೆಯ ಉಲ್ಲಂಘನೆಯಾಗಿದೆ. ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಈ ಹುನ್ನಾರ ಸರಿಯಲ್ಲ ಎಂದರು.
ಹಿಜಾಬ್ ಕುರಿತಂತೆ ರಾಜ್ಯ ಹೈಕೋರ್ಟ್ಗೆ ಎರಡು ಅರ್ಜಿಗಳು ಸಲ್ಲಿಕೆಯಾಗಿವೆ. ಎರಡನ್ನು ಫೆ.8ರಂದು ನ್ಯಾಯಾೀಶರು ವಿಚಾರಣೆಗೆ ಕೈಗೆತ್ತಿಕೊಳ್ಳುತ್ತಿದ್ದಾರೆ. ಹೈಕೋರ್ಟ್ ಏನು ಹೇಳುತ್ತದೆ ಎಂದು ನಾವು ಕಾದು ನೋಡುತ್ತೇವೆ. ಆದರೆ ವೈಯಕ್ತಿಕವಾಗಿ ನನ್ನ ಅಭಿಪ್ರಾಯ ಹಿಜಾಬ್ಗೆ ವಿಧಿರೋಸುತ್ತಿರುವುದು ಧಾರ್ಮಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಎಂದು ಆವರು ಆರೋಪಿಸಿದರು.
ಅಶೋಕ್ ಪಟ್ಟಣ್ ಗೆ ನೊಟೀಸ್ ನೀಡಿರುವ ವಿಚಾರಕ್ಕೆ ಸಂಬಂಸಿದಂತೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ವಿವರಣೆ ನೀಡಲು ತಾವು ಅಶೋಕ್ ಅವರಿಗೆ ಸೂಚಿಸಿರುವುದಾಗಿ ಹೇಳಿದರು. ವಿಧಾನಸಭೆಯ ಪ್ರತಿಪಕ್ಷದ ನಾಯಕನ ಹುದ್ದೆಯನ್ನು ಈವರೆಗೂ ನಾನೇ ನಿಭಾಯಿಸುತ್ತಿದ್ದೆ, ಈಗ ಶಾಸಕ ಯು.ಟಿ.ಖಾದರ್ರನ್ನು ನೇಮಿಸಲಾಗಿದೆ. ಅವರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.
