ಕೋಲ್ಕತ್ತಾ, ಜ. 3- ರಣಜಿ ಸರಣಿಗೆ ದಿನಾಂಕ ಸಮೀಪಿಸುತ್ತಿರುವಾಗಲೇ ಬಂಗಾಳದ 6 ಆಟಗಾರರು ಹಾಗೂ ಒಬ್ಬ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದರ ಬಗ್ಗೆ ಬಂಗಾಳ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ. ಜನವರಿ 13 ರಿಂದ ರಣಜಿ ಸರಣಿ ಆರಂಭಗೊಳ್ಳಲಿದ್ದು ಬಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಬಂಗಾಳ ತಂಡವು ವಿದರ್ಭ, ರಾಜಸ್ಥಾನ, ಕೇರಳ, ಹರಿಯಾಣ ಮತ್ತು ತ್ರಿಪುರ ತಂಡಗಳ ಸವಾಲನ್ನು ಎದುರಿಸಲಿದೆ.
ರಣಜಿ ಕ್ರೀಡಾಕೂಟಕ್ಕಾಗಿ ತಾಲೀಮು ನಡೆಸುತ್ತಿರುವ ಬಂಗಾಳ ಕ್ರಿಕೆಟಿಗರನ್ನು ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಿದಾಗ ಆಟಗಾರರು ಹಾಗೂ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವುದರಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಳದ ಕಾರ್ಯದರ್ಶಿ ಸ್ನೇಹಶೀಶ್ ಗಂಗೂಲಿ ಅವರು ತಿಳಿಸಿದ್ದಾರೆ.
ಸುದೀಪ್ ಚಟರ್ಜಿ, ಅನುಸ್ತಾಪ್ ಮುಜುಂದಾರ್, ಕಾಜಿ ಜುನೈದ್ ಶೈಫಿ, ಗೀತ್ಪುರಿ, ಪ್ರದೀಪ್ತಾ ಪರಮಾಣಿಕ್, ಸುರ್ಜಿತ್ ಯಾದವ್ ಹಾಗೂ ಸಹ ತರಬೇತುದಾರ ಸೌರಶಿಶ್ ಲಹರಿ ಅವರಿಗೂ ಕೊರೊನಾ ಸೋಂಕು ತಗುಲಿದೆ.
ಬಂಗಾಳ ತಂಡವು ನಿನ್ನೆ ಜಾಧವ್ಪುರ್ ಯುನಿವರ್ಸಿಟಿಯಲ್ಲಿ ಸಾಲ್ಟ್ಲೇಕ್ನಲ್ಲಿ ಅಭ್ಯಾಸ ಪಂದ್ಯ ಆಡಿದ್ದು ನಾಳೆ ಪೃಥ್ವಿ ಶಾ ನಾಯಕತ್ವದ ಮುಂಬೈ ತಂಡದ ವಿರುದ್ಧ ಅಭ್ಯಾಸ ಪಂದ್ಯ ಆಟಬೇಕಾಗಿತ್ತು, ಆದರೆ 6 ಆಟಗಾರರು ಹಾಗೂ ಸಹ ಕೋಚ್ಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿರುವುದರಿಂದ ಪಂದ್ಯವನ್ನು ರದ್ದುಗೊಳಿಸಿದ್ದು, ಈ ಕುರಿತು ಮುಂದಿನ ಕ್ರಮಕೈಗೊಳ್ಳುವ ಬಗ್ಗೆ ಚರ್ಚಿಸುವ ಸಂಬಂಧ ನಾಳೆ ಸಿಎಬಿ ಮಹತ್ತರ ಸಭೆಯನ್ನು ಹಮ್ಮಿಕೊಂಡಿದೆ.
