ಬೆಂಗಳೂರು,ಜ.31- ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆಯಡಿ ಕೆಲಸ ಮಾಡುತ್ತಿರುವ ತ್ಯಾಜ್ಯ ವಿಲೇವಾರಿ ವಾಹನ ಚಾಲಕರು ಹಾಗೂ ನೀರು ಸರಬರಾಜು ಸಹಾಯಕರು ಉದ್ಯೋಗ ಖಾಯಂಗೊಳಿಸಲು ಒತ್ತಾಯಿಸಿ ನಾಳೆಯಿಂದ ಕೆಲಸ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ, ತಹಸೀಲ್ದಾರ್ ಕಚೇರಿ ಎದುರು ಅನಿರ್ದಿಷ್ಟಾವ ಧರಣಿ ಕೈಗೊಳ್ಳಲು ನಿರ್ಧರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘದ ರಾಜಾ್ಯಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಪೌರಕಾರ್ಮಿಕರನ್ನು ಕಾಯಂಗೊಳಿಸಲು ಮುಂದಾಗಿರುವ ಸರ್ಕಾರ, ಕಸ ವಿಲೇವಾರಿ ವಾಹನ ಚಾಲಕರು, ಸಹಾಯಕರು, ನೀರು ಪೂರೈಕೆದಾರರನ್ನು ಕಡೆಗಣಿಸಿದೆ.
ಜತೆಗೆ ಲೋಡರ್ಸ್, ಕ್ಲೀನರ್ಸ್, ಡಾಟಾ ಎಂಟ್ರಿ ಆಪರೇಟರ್ಸ್, ಸ್ಯಾನಿಟರಿ ಸೂಪರ್ವೈಸರ್ಗಳನ್ನು ಕೂಡ ನೇರ ನೇಮಕಾತಿಗೆ ಪರಿಗಣಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರದ ಈ ತಾರತಮ್ಯ ನಡೆಯಿಂದ ರಾಜ್ಯದಲ್ಲಿ 15 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಅತಂತ್ರರಾಗಿದ್ದಾರೆ.
ಹೀಗಾಗಿ ರಾಜ್ಯದ 330 ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಕಾರ್ಮಿಕರು ಜಿಲ್ಲಾಕಾರಿ, ತಾಲೂಕು ಆಡಳಿತ ಕಚೇರಿ ಎದುರು ಧರಣಿ ನಡೆಸಲಿದ್ದೇವೆ. ಮುಖ್ಯಮಂತ್ರಿಗಳು ಈ ಬಗ್ಗೆ ಸ್ಪಷ್ಟತೀರ್ಮಾನ ಪ್ರಕಟಿಸುವವರೆಗೂ ಹೋರಾಟದಿಂದ ಹಿಂದೆ ಸರಿಯಲ್ಲ ಎಂದರು.
2017ರಲ್ಲಿ ಪೌರಕಾರ್ಮಿಕರನ್ನು ನೇಮಕಾತಿ ಮಾಡಿದ ವೇಳೆಯೂ ಇದೇ ರೀತಿ ತ್ಯಾಜ್ಯ ವಿಲೇವಾರಿ ಹೊರಗುತ್ತಿಗೆಯವರನ್ನು ಖಾಯಂಗೊಳಿಸಿರಲಿಲ್ಲ. ಪೌರಕಾರ್ಮಿಕರನ್ನು ನೇರ ನೇಮಕಾತಿ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ ಪ್ರತಿನಿತ್ಯ ಅವರ ಜತೆಗೆ ದುಡಿಯುವ ನಮ್ಮನ್ನೂ ಈ ಪ್ರಕ್ರಿಯೆಯಡಿ ಕಾಯಂಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
#Statewidestrike, #tomorrow, #civillabor,