ಹೊಸದಿಲ್ಲಿ,ಫೆ.8- ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸಲು ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ಗೆ ಮಧ್ಯಂತರ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಬಿ.ಆರ್. ಗವಾಯಿ ಅವರನ್ನೊಳಗೊಂಡ ಪೀಠವು, ಅಜಂಖಾನ್ ಅರ್ಜಿಯ ವಿಚಾರಣೆ ನಡೆಸಿ ತನ್ನ ಅಭಿಪ್ರಾಯ ತಿಳಿಸಿದೆ.
ಆದಾಗ್ಯೂ ಅಜಂಖಾನ್ ಕೆಳ ಹಂತದ ನ್ಯಾಯಾಲಯವನ್ನು ಸಂಪರ್ಕಿಸಲು ಸ್ವತಂತ್ರರಿದ್ದಾರೆ. ಕೆಳ ಹಂತದಲ್ಲಿ ಅರ್ಜಿಯ ತರ್ತು ವಿಚಾರಣೆ ನಡೆಸಬೇಕಿದೆ ಎಂದು ಸಲಹೆ ನೀಡಿದೆ. ಖಾನ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಅಜಂಖಾನ್ ವಿರುದ್ಧ 87 ಎಫ್ಐಆರ್ ಗಳುದಾಖಲಿಸಲಾಗಿವೆ. ಅವುಗಳ ಪೈಕಿ 84 ಪ್ರಕರಣಗಳಲ್ಲಿ ಅವರು ಜಾಮೀನು ಪಡೆದಿದ್ದಾರೆ ಎಂದು ಹೇಳಿದರು.
ವಾದ ಆಲಿಸಿದ ನ್ಯಾಯಮೂರ್ತಿಗಳು ಜಾಮೀನಿಗಾಗಿ 32 ಅರ್ಜಿಗಳನ್ನು ಹೇಗೆ ಸಲ್ಲಿಸಿರುವ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದ್ದು, ನ್ಯಾಯಾಲಯದಲ್ಲಿ ರಾಜಕೀಯ ತರಬೇಡಿ ಎಂದು ಅಸಮಧಾನ ವ್ಯಕ್ತ ಪಡಿಸಿದ್ದರು.
ನನ್ನ ಕಕ್ಷೀದಾರ ಜೈಲಿನೊಳಗಿದ್ದಾರೆ. ಇದರಲ್ಲಿ ನಾನು ಯಾವುದೇ ರಾಜಕೀಯವನ್ನು ತರುವುದಿಲ್ಲ. ಅರ್ಜಿಯ ವಿಚಾರಣೆಗೆ ಪದೇ ಪದೇ ಮನವಿ ಮಾಡಿದರೂ ಕಳೆದ 3-4 ತಿಂಗಳಿಂದ ಜಾಮೀನು ಅರ್ಜಿಯನ್ನು ಕೈಗೆತ್ತಿಕೊಳ್ಳಲಾಗುತ್ತಿಲ್ಲ ಎಂದು ಸಿಬಲ್ ವಾದಿಸಿದ್ದಾರೆ.
