ಮೇಕೆದಾಟು ಪಾದಯಾತ್ರೆಗೆ ಮಠಾಧೀಶರ ಬೆಂಬಲ

Social Share

ಬೆಂಗಳೂರು,ಫೆ.28- ಮೇಕೆದಾಟು ಯೋಜನೆಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೋರಾಟ ಕ್ಕಿಳಿದಿರುವುದರಿಂದ ರಾಜ್ಯದಲ್ಲಿ ಹೊಸ ಸಂಚಲನ ಉಂಟಾಗಿದೆ. ಸತ್ಕಾರ್ಯದ ಈ ಹೋರಾಟಕ್ಕೆ ಯಾವತ್ತೂ ನಮ್ಮ ಬೆಂಬಲವಿದೆ ಎಂದು ಚಿತ್ರದುರ್ಗ ಮುರುಘರಾಜೇಂದ್ರ ಮಠದ ಶ್ರೀ ಮುರುಘಾ ಶರಣರು ಹೇಳಿದರು. ಮೇಕೆದಾಟು ಯೋಜನೆಗಾಗಿ
ಆಗ್ರಹಿಸಿ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಿ ಕಾಂಗ್ರೆಸ್ ಕೈಗೊಂಡಿರುವ 2ನೇ ಹಂತದ ಪಾದಯಾತ್ರೆಗೆ 2ನೇ ದಿನಕ್ಕೆ ಕಾಲಿಟ್ಟಿದ್ದು, ಪಾದಯಾತ್ರೆ ಸಂದರ್ಭದಲ್ಲಿ ಹಲವು ಮಠಾೀಶರು ಪಾಲ್ಗೊಂಡು ಬೆಂಬಲ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುರುಘಾ ಶ್ರೀಗಳು, ರಾಜ್ಯದಲ್ಲಿ ಹತ್ತು ಹಲವಾರು ನೀರಾವರಿ ಯೋಜನೆಗಳಿಗಾಗಿ ಹೋರಾಟಗಳು ನಡೆದಿವೆ. ಕಳಸಾಬಂಡೂರಿ ನೀರಾವರಿ ಯೋಜನೆಗಳಿಗಾಗಿ ಹೋರಾಟ ನಡೆದಿವೆ. ಮೇಕೆದಾಟು ಕುಡಿಯುವ ನೀರಿಗಾಗಿ ಹೋರಾಟ ನಡೆಯುವ ಅನಿವಾರ್ಯತೆ ಎದುರಾಗಿದೆ. ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರ ಶಕ್ತಿ, ಯುಕ್ತಿ ಮತ್ತು ಭಕ್ತಿ ಮೆಚ್ಚುವಂತಹದ್ದು ಎಂದರು. ಈ ಹೋರಾಟದಲ್ಲಿ ತಾವು ಪಾಲ್ಗೊಳ್ಳಬೇಕೆಂದು ಹಲವರು ಮನವಿ ಮಾಡಿದ್ದರು.
ಶಾಂತಿ, ಸಾಮರಸ್ಯ ಕಾಪಾಡುವುದು, ಸತ್ಕಾರ್ಯಗಳಲ್ಲಿ ಪಾಲ್ಗೊಳ್ಳುವುದು, ಸಾಮಾಜಿಕ ನ್ಯಾಯ ಒದಗಿಸುವುದು ಸ್ವಾಮೀಜಿಗಳ ಕೆಲಸ. ಇಲ್ಲಿ ಸತ್ಕಾರ್ಯ ನಡೆಯುತ್ತಿದೆ. ಹಾಗಾಗಿ ನಾವು ಹೋರಾಟದಲ್ಲಿ ಭಾಗವಹಿಸಿದ್ದೇವೆ. ಈ ಹಿಂದೆ ಕೂಡ ಕರ್ನಾಟಕದಲ್ಲಿ ಹತ್ತು ಹಲವು ನೀರಾವರಿ ಹೋರಾಟಗಳು ನಡೆದಿವೆ.
ಅದಕ್ಕೂ ಬೆಂಬಲ ನೀಡಿದ್ದೇವೆ. ಈಗಲೂ ಕೂಡ ಬೆಂಬಲ ನೀಡುತ್ತಿದ್ದೇವೆ. ಯಾವುದೇ ಪ್ರಾದೇಶಿಕ ಭಾವನೆ ಇಲ್ಲ. ಡಿ.ಕೆ.ಶಿವಕುಮಾರ್ ಅವರು ಐಷರಾಮಿಯಾಗಿ ಏಸಿ ರೂಮ್ನಲ್ಲಿ ಕುಳಿತು ಕಾಲ ಕಳೆಯಬಹುದಿತ್ತು. ಆದರೆ ಜನಸಾಮಾನ್ಯರಿಗಾಗಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಅವರ ಹೋರಾಟ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ನಮ್ಮ ನೀರು, ನಮ್ಮ ಹಕ್ಕು ಇದಕ್ಕಾಗಿ ನಮ್ಮ ಬೆಂಬಲ ಎಂದು ಶ್ರೀಗಳು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕೈಗೊಂಡಿರುವ ಪಾದಯಾತ್ರೆಗೆ ಶ್ರೀಗಳಿಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದ್ದೆವು. ಅವರು ಇದನ್ನು ಒಪ್ಪಿ ಇಲ್ಲಿಗೆ ಆಗಮಿಸಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಇದಕ್ಕೂ ಮುನ್ನ ಸಮಾವೇಶದಲ್ಲಿ ಮಾತನಾಡಿದ ಡಿಕೆಶಿ, ಪಾದಯಾತ್ರೆಯನ್ನು ಹತ್ತಿಕ್ಕುವ ಕೆಲಸವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಾಡುತ್ತಿವೆ. ಆದರೆ ಧೃತಿಗೆಡದೆ ನಮ್ಮ ಕಾರ್ಯಕರ್ತರು ಪಾದಯಾತ್ರೆ ಮೂಲಕ ಯೋಜನೆ ಜಾರಿಗೆ ಅಗ್ರಹಿಸುತ್ತಿದ್ದಾರೆ. ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಇದನ್ನ ನಾವು ದೆಹಲಿ ಮಟ್ಟಕ್ಕೂ ಕೊಂಡೊಯ್ಯುತ್ತೇವೆ ಎಂದರು.
ಮೇಕೆದಾಟು ಯೋಜನೆಯಿಂದ ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ತುಮಕೂರು, ರಾಮನಗರ ಜಿಲ್ಲೆ ಸೇರಿದಂತೆ ಸುಮಾರು ಕೋಟ್ಯಂತರ ಜನರಿಗೆ ಕುಡಿಯುವ ನೀರು ಸರಬರಾಜು ಆಗುತ್ತದೆ. 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ.
ಈ ಯೋಜನೆ ಜಾರಿಗೆ ಬೇರೆ ಯಾವ ರಾಜ್ಯಗಳಿಂದಲೂ ತಕರಾರು ಇಲ್ಲ. ಆದರೆ ಬಿಜೆಪಿಯೇ ತಕರಾರು ಮಾಡುತ್ತಿದೆ. ಅದಕ್ಕಾಗಿಯೇ ನಾವು ಹೋರಟಕ್ಕಿಳಿದಿದ್ದೇವೆ. ಪಕ್ಷಾತೀತವಾಗಿ ಎಲ್ಲರೂ ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಉರಿ ಬಿಸಿಲಿನಲ್ಲೂ ನಮ್ಮ ಕಾರ್ಯಕರ್ತರು ರಸ್ತೆಯಲ್ಲಿ ನಡೆಯುತ್ತಿದ್ದಾರೆ. ಈ ಯೋಜನೆಗಾಗಿ ಪಕ್ಷಾತೀತವಾಗಿ ಎಲ್ಲರೂ ಬೆಂಬಲ ನೀಡಿದ್ದಾರೆ. ಇದರ ನೇತೃತ್ವವನ್ನು ನಮ್ಮ ಪಕ್ಷ ವಹಿಸಿದೆ. ಇದು ನೀರಿಗಾಗಿ ನಡೆಸುತ್ತಿರುವ ಹೋರಾಟ. ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ನಮ್ಮ ಆಡಳಿತ ಅವಯಲ್ಲಿ ಈ ಯೋಜನೆಗೆ ಡಿಪಿಆರ್ ಮಾಡಲಾಗಿತ್ತು. 4 ವರ್ಷಗಳಾದರೂ ಈ ಯೋಜನೆ ಜಾರಿ ಬಗ್ಗೆ ಡಬಲ್ ಇಂಜಿನ್ ಸರ್ಕಾರ ಚಕಾರವೆತ್ತಿಲ್ಲ. ಈ ನಿರ್ಲಕ್ಷ್ಯ ಧೋರಣೆಯನ್ನು ನಾವು ಜನತೆಗೆ ತಿಳಿಸುವ ನಿಟ್ಟಿನಲ್ಲಿ ಹೋರಾಟ ಕೈಗೊಂಡಿದ್ದೇವೆ. ಇದಕ್ಕೆ ಅಭೂತಪೂರ್ವ ದೊರೆತಿದೆ ಎಂದರು.
ಡಾ.ಜಿ.ಪರಮೇಶ್ವರ್ ಮಾತನಾಡಿ, ಕೋವಿಡ್ನಿಂದಾಗಿ ಜನರಿಗೆ ತೊಂದರೆಯಾಗಬಾರದೆಂಬು ನಾವೇ ಪಾದಯಾತ್ರೆ ನಿಲ್ಲಿಸಿದ್ದೆವು. ಇದೀಗ ಮತ್ತೆ ಆರಂಭಿಸಿದ್ದೇವೆ. ಪಾದಯಾತ್ರೆಗೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ ಎಂದರು. ಮೇಕೆದಾಟು ಯೋಜನೆಗೆ ನಮ್ಮ ಅವಯಲ್ಲಿ ಚಾಲನೆ ಕೊಟ್ಟಿದ್ದೆವು. ಮತ್ತೆ ಯೋಜನೆಯನ್ನು ನಾವೇ ಪ್ರಾರಂಭಿಸುತ್ತೇವೆ ಎಂದು ಪರಮೇಶ್ವರ್ ಹೇಳಿದರು.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಮೊದಲ ಹಂತದ ಪಾದಯಾತ್ರೆ ಸಂದರ್ಭದಲ್ಲಿ ಹರಿದುಬಂದ ಜನಸಮೂಹದಿಂದ ಭಯಗೊಂಡ ಸರ್ಕಾರ ಕೊರೊನಾ ನೆಪವೊಡ್ಡಿ ಇದನ್ನು ನಿಯಂತ್ರಿಸಿತು. 2ನೇ ಹಂತದ ಪಾದಯಾತ್ರೆಯಲ್ಲಿ ಅದರ ಎರಡು ಪಟ್ಟು ಜನ ಆಗಮಿಸಿ ಕಾಂಗ್ರೆಸ್ನ ಶಕ್ತಿ ಪ್ರದರ್ಶಿಸಿದ್ದಾರೆ.
ಅಲ್ಲದೆ ಈ ಯೋಜನೆಯ ಅನಿವಾರ್ಯತೆ ಏನೆಂಬುದನ್ನು ಮನಗಂಡಿದ್ದಾರೆ. ದಿವ್ಯ ನಿರ್ಲಕ್ಷ್ಯ ವಹಿಸಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಜನತಾ ನ್ಯಾಯಾಲಯ ಬಿಸಿ ಮುಟ್ಟಿಸಬೇಕು ಎಂದು ಅವರು ಹೇಳಿದರು. ದಾರಿಯುದ್ದಕ್ಕೂ ಪಾದಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಎಳನೀರು, ಕಲ್ಲಂಗಡಿ ಹಣ್ಣು, ಕಬ್ಬಿನ ಹಾಲು, ಮಜ್ಜಿಗೆ, ತಂಪು ಪಾನೀಯಗಳ ವ್ಯವಸ್ಥೆ ಮಾಡಲಾಗಿತ್ತು.
ಕಾಂಗ್ರೆಸ್ ಪರ ಘೋಷಣೆಗಳನ್ನು ಮೊಳಗಿಸುತ್ತಾ, ಸರ್ಕಾರದ ವಿರುದ್ಧದ ಘೋಷಣೆಗಳನ್ನು ಕೂಗುತ್ತಾ ಕಾಂಗ್ರೆಸ್ ಧ್ವಜ ಹಿಡಿದು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಸಾಗಿಬಂದರು. ಡಿ.ಕೆ.ಶಿ ಬಿಡದಿಯಿಂದ ಕೆಂಗೇರಿವರೆಗೆ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಕಾಲ್ನಡಿಗೆ ಮೂಲಕ ಸಾಗಿಬಂದರು.
ಉರಿ ಬಿಸಿಲಿನಲ್ಲಿ ಕಾಂಗ್ರೆಸ್ ಮುಖಂಡರು ಹೆಜ್ಜೆ ಹಾಕುತ್ತಾ ನಮ್ಮ ನೀರು, ನಮ್ಮ ಹಕ್ಕು ಮೇಕೆದಾಟು ಯೋಜನೆ ಆಗಲೇಬೇಕು ಎಂಬ ಘೋಷಣೆಗಳನ್ನು ಕೂಗುತ್ತಾ ಸಾಗಿದರು. ನಿನ್ನೆ ರಾಮನಗರದಲ್ಲಿ ಮಂಡ್ಯ ಜಿಲ್ಲಾ ಕಾಂಗ್ರೆಸಿಗರು ಭಾರೀ ಸಂಖ್ಯೆಯಲ್ಲಿ ಆಗಮಿಸಿ ಕಾಂಗ್ರೆಸ್ನ ಶಕ್ತಿಪ್ರದರ್ಶನ ಮಾಡಿ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದರು.
ಇಂದು ತುಮಕೂರು ಜಿಲ್ಲೆಯಾದ್ಯಂತ ಆಗಮಿಸಿದ್ದ ಸಾವಿರಾರು ಕಾರ್ಯಕರ್ತರು ಡಿ.ಕೆ.ಶಿವಕುಮಾರ್, ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಬಿಡದಿಯಿಂದ ಕೆಂಗೇರಿವರೆಗೆ ಪಾದಯಾತ್ರೆ ನಡೆಸಿ ಮೇಕೆದಾಟು ಯೋಜನೆ ಅನುಷ್ಠಾನಗೊಳಿಸಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.  ಮುಖಂಡರು, ಕಾರ್ಯಕರ್ತರು ಬಿಸಿಲಿನ ಝಳವನ್ನು ಮರೆತು ಹೆಜ್ಜೆ ಹಾಕಿದರು. ಇಂದು ಕೆಂಗೇರಿ ಸಮೀಪದ ಪೂರ್ಣಿಮಾ ಕನ್ವೆಷನ್ ಹಾಲ್ನಲ್ಲಿ ಕಾರ್ಯಕರ್ತರು ವಾಸ್ತವ್ಯ ಹೂಡಲಿದ್ದಾರೆ.

Articles You Might Like

Share This Article