ಚೆನ್ನೈ, ಆ.30- ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸಾವಿನ ಕುರಿತು ತನಿಖೆ ನಡೆಸಿದ ನಿವೃತ್ತ ನ್ಯಾಯಮೂರ್ತಿ ಆರ್ಮುಗಂ ಸ್ವಾಮಿ ಅವರ ಆಯೋಗವು ಜಯಾ ಅವರ ಮಾಜಿ ಸಹಾಯಕಿ ವಿ.ಕೆ.ಶಶಿಕಲಾ ಹಾಗೂ ಇತರರ ವಿರುದ್ಧ ತನಿಖೆ ನಡೆಸುವಂತೆ ಶಿಫಾರಸು ಮಾಡಿದೆ.
ನಿವೃತ್ತ ನ್ಯಾಯಮೂರ್ತಿ ಆರ್ಮುಗಂ ಸ್ವಾಮಿ ಆಯೋಗದ ವರದಿಯನ್ನು ತಮಿಳುನಾಡು ವಿಧಾನಸಭೆಯಲ್ಲಿ ಸೋಮವಾರ ಮಂಡಿಸಲಾಗಿದ್ದು, ವರದಿ ಕುರಿತು ಕಾನೂನು ಅಭಿಪ್ರಾಯ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.
2021ರ ಚುನಾವಣಾ ಪ್ರಚಾರದ ಸಮಯದಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದರೆ ಜಯಲಲಿತಾ ಅವರ ಸಾವಿನ ಬಗ್ಗೆ ಹಾಗೂ ಆಸ್ಪತ್ರೆಯಲ್ಲಿ ನಡೆದ ಘಟನೆಗಳ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿ ಸ್ಟ್ಯಾಲಿನ್ ಘೋಷಿಸಿದ್ದರು. ಶಶಿಕಲಾ ಮತ್ತು ಸೋದರಳಿಯ ಟಿ.ಟಿ.ವಿ.ದಿನಕರನ್ ಅವರೊಂದಿಗೆ ಮೈತ್ರಿ ಮಾಡಿಕೊಳ್ಳಲು ಮತ್ತು ಪಕ್ಷವನ್ನು ಹಿಡಿತಕ್ಕೆ ಪಡೆದುಕೊಳ್ಳಲು ಎಐಡಿಎಂಕೆ ಸಂಯೋಜಕ ಪನ್ನೀರ್ಸೆಲ್ವಂ ಅವರ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.
ಎಐಎಡಿಎಂಕೆ ಮಾಜಿ ನಾಯಕಿ ಶಶಿಕಲಾ ಮತ್ತು ದಿನಕರನ್ ಅವರೊಂದಿಗೆ ಭವಿಷ್ಯದ ಮೈತ್ರಿಗಾಗಿ ಸಾಕಷ್ಟು ಕಸರತ್ತು ನಡೆಸಿದ್ದರು. ಈ ಮೂಲಕ ಪ್ರಬಲ ತೇವರ್ ಸಮುದಾಯದ ಬೆಂಬಲ ಪಡೆಯುವ ಸಾಹಸ ಮಾಡಿದ್ದರು ಎಂದು ಒಪಿಎಸ್ ಪರ ನಾಯಕರು ಮಾಧ್ಯಮಕ್ಕೆ ತಿಳಿಸಿದ್ದಾರೆ.