ಹಾವೇರಿ : ಉಕ್ರೇನ್ ಹಾಗೂ ರಷ್ಯಾ ನಡುವಿನ ಸಂಘರ್ಷದಲ್ಲಿ ಬಲಿಯಾದ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಗ್ಯಾನಗೌಡ್ರ ನಿವಾಸಕ್ಕೆ ಪರಮಪೂಜನೀಯ ಶ್ರೀ ತರಳಬಾಳು ಜಗದ್ಗುರು ಡಾ॥ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ದಯಮಾಡಿಸಿ ನವೀನ್ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿದರು. ನವೀನ್ ತಂದೆ ಶೇಖರಪ್ಪ ಗ್ಯಾನಗೌಡ್ರ, ತಾಯಿ ವಿಜಯಮ್ಮ ನವೀನ್ ಸಹೋದರನಾದ ಹರ್ಷ ಮತ್ತು ಕುಟುಂಬದವರಿಗೆ ಸಾಂತ್ವನ ಮತ್ತು ಧೈರ್ಯ ತುಂಬಿದರು.
ಶ್ರೀ ಜಗದ್ಗುರುಗಳವರು ಮನೆ ಪ್ರವೇಶಿಸುತ್ತಿದ್ದಂತೆ ಮಡುಗಟ್ಟಿದ್ದ ಕುಟುಂಬದವರ ದುಃಖದ ಕಟ್ಟೆ ಒಡೆದು ಆಕ್ರಂದನದ ದೃಶ್ಯವು ಎಲ್ಲರ ಮನಕಲುಕಿ ಕಣ್ಣುಗಳು ತೇವಗೊಳಿಸಿತು. ಉಕ್ರೇನ್ ದೇಶದ ಕಾರ್ಕಿವ್ನಲ್ಲಿ ನಾಲ್ಕನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ನವೀನ್ ಗ್ಯಾನಗೌಡ್ರು ದಿನಸಿ ಅಗತ್ಯ ವಸ್ತುಗಳನ್ನು ತರಲು ಹೊರಗೆ ಹೋಗಿದ್ದ ಸಂಧರ್ಭದಲ್ಲಿ ತರಕಾರಿಗಾಗಿ ಲೈನಿನಲ್ಲಿ ನಿಂತಿದ್ದ ವೇಳೆ ಉಕ್ರೇನ್-ರಷ್ಯಾ ಸೈನಿಕರ ನಡುವೆ ಗುಂಡಿನ ಚಕಮಕಿ ನಡೆದು ರಷ್ಯಾದ ಶೆಲ್ ದಾಳಿಗೆ ಬಲಿಯಾದ ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ಚಳಗೇರಿ ಗ್ರಾಮದ ಮಠದ ಶಿಷ್ಯರ ಕಿರಿಯ ಪುತ್ರ ಮಾರ್ಚ್ 1 ರಂದು ಮೃತಪಟ್ಟಿರುವುದು ದೇಶವಾಸಿಗಳ ನೋವಿಗೆ ಕಾರಣವಾಗಿದೆ.
ನವೀನ್ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಪೋಷಕರಿಗೆ ಪರಮಪೂಜನೀಯ ಶ್ರೀ ತರಳಬಾಳು ಜಗದ್ಗುರು ಡಾ॥ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ನಿರಂತರವಾಗಿ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದು ಸಾಂತ್ವನ ಮತ್ತು ಧೈರ್ಯವನ್ನು ತುಂಬುತ್ತಿದ್ದರು.
ಮೃತ ನವೀನ್ ದೇಹವನ್ನು ಮನೆಗೆ ತರುವ ನಿಟ್ಟಿನಲ್ಲಿ ಪೂಜ್ಯ ಶ್ರೀಜಗದ್ಗುರುಗಳವರ ಪ್ರಧಾನಿ ಕಚೇರಿ, ವಿದೇಶಾಂಗ ಇಲಾಖೆಯ ಅಧಿಕಾರಿಗಳು , ಮುಖ್ಯ ಮಂತ್ರಿಗಳ ಬಳಿ ಚರ್ಚಿಸಿರುವುದಲ್ಲದೆ, ಪೂಜ್ಯರ ಸಂಪರ್ಕದಲ್ಲಿರುವ ವಿವಿಧ ದೇಶಗಳ ರಾಯಭಾರಿಗಳ ಮುಖಾಂತರವು ಕಳೆದ ಮೂರ್ನಾಲ್ಕು ದಿನಗಳಿಂದ ತಡರಾತ್ರಿಯವರೆಗೂ ತೀವ್ರ ಪ್ರಯತ್ನಿಸುತ್ತಿದ್ದಾರೆ.
ಮೃತ ನವೀನ್ ಅಂತಿಮ ದರ್ಶನ ಪಡೆಯಲು ತವಕಿಸುತ್ತಿರುವ ಹೆತ್ತವರ ಒಡಲು ಅವನ ಸಧ್ಯದ ಸ್ಥಿತಿಯ ಫೋಟೋವನ್ನು ತರಿಸಿಕೊಡುವಂತೆ ಶ್ರೀಜಗದ್ಗುರುಗಳವರಲ್ಲಿ ಪ್ರಾರ್ಥಿಸಿದ್ದರು, ಪೂಜ್ಯರು ತಮ್ಮ ಸಂಪರ್ಕದ ಅಲ್ಲಿನ ವಿದ್ಯಾರ್ಥಿಗಳ ಮೂಲಕ ನವೀನ್ ಪೋಟೋ ತರಿಸಲು ಪ್ರಯತ್ನಿಸಿದರೂ ವಿಭಿನ್ನ ಪ್ರಾಂತ್ಯಗಳಲ್ಲಿರುವ ಆ ವಿದ್ಯಾರ್ಥಿಗಳು ನೆಲೆಸಿರುವುದಿರಿಂದ ತೀವ್ರ ಪ್ರತಿಕೂಲ ಪರಿಸ್ಥಿತಿಯ ಅನಾನುಕೂಲತೆಯ ಪರಿಣಾಮ ಕಾರ್ಯಸಾಧ್ಯವಾಗದೇ ಇರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು.
ಪೂಜ್ಯರ ಸಂಪರ್ಕದಲ್ಲಿರುವ ಕೆಲ ವಿದ್ಯಾರ್ಥಿಗಳು ತೀವ್ರ ಆತಂಕ ಮತ್ತು ಅಸಹಾಯಕತೆ ವ್ಯಕ್ತಪಡಿಸಿ ದೇಶಕ್ಕೆ ಬರಲು ಸಾಧ್ಯವಾಗದೇ ಇರುವುದನ್ನು ಮನಗಂಡ ಪೂಜ್ಯರ ವಿಶೇಷ ಪ್ರಯತ್ನದ ಫಲವಾಗಿ ನಿನ್ನೆ ರಾತ್ರಿ ಸುರಕ್ಷತೆಯ ತಾಣ ತಲುಪಿದ್ದು ಇಂದು ತಾಯ್ನಾಡಿಗೆ ಬರಲಿರುವ ವಿಷಯವನ್ನು ಅಲ್ಲಿನ ಪ್ರಸಕ್ತ ದೃಶ್ಯಗಳನ್ನು ಪೂಜ್ಯರು ನವೀನ್ ಕುಟುಂಬದವರಿಗೆ ತೋರಿಸಿ ವಿವರಿಸಿದರು. ಈ ಸಂದರ್ಭದಲ್ಲಿ ಹಾಜರಿದ್ದ ಹಿರೇಕೆರೂರಿನ ಮಾಜಿ ಶಾಸಕರಾದ ಯು.ಬಿ.ಬಣಕಾರ್ ಸೇರಿದಂತೆ ಅನೇಕ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದರು.
