ಹೈದರಾಬಾದ್, ಅ.11- ತಂತ್ರಜ್ಞಾನ ಮತ್ತು ಪ್ರತಿಭೆ ಭಾರತದ ಅಭಿವೃದ್ಧಿ ಪಯಣದ ಎರಡು ಆಧಾರ ಸ್ತಂಭಗಳು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಎರಡನೇ ಜಾಗತಿಕ ಜಿಯೋಸ್ಪೇಷಿಯಲ್ ಇನಾರ್ಮೇಶನ್ ಕಾಂಗ್ರೆಸ್-2022ಕ್ಕೆ ವಿಡಿಯೋ ಸಂದೇಶ ರವಾನಿಸಿರುವ ಪ್ರಧಾನಿಯವರು, ದೇಶದ ಅಭಿವೃದ್ಧಿಯಲ್ಲಿ ತಂತ್ರಜ್ಞಾನದ ಮಹತ್ವವನ್ನು ಒತ್ತಿ ಹೇಳಿದ್ದಾರೆ.
ತಮ್ಮ ಸರ್ಕಾರ ಅಂತ್ಯೋದಯದ ದೃಷ್ಟಿಕೋದಲ್ಲಿ ಕೆಲಸ ಮಾಡುತ್ತಿದೆ. ದೇಶದ ಕೊನೆಯ ಮೈಲಿನಲ್ಲಿರುವ ಕೊನೆಯ ವ್ಯಕ್ತಿಗೂ ಸೌಲಭ್ಯ ಸಿಗಬೇಕು, ಆತ ಸಬಲೀಕರಣಗೊಳ್ಳಬೇಕು ಎಂಬ ನಿಟ್ಟಿನಲ್ಲಿ ಮಿಷನ್ ಮೋಡ್ನಲ್ಲಿ ಕೆಲಸ ಮಾಡಲಾಗುತ್ತಿದೆ .ಈ ಕಾರ್ಯಯೋಜನೆ ನಮಗೆ ಪ್ರತಿಯೊಬ್ಬರಿಗೂ ಸೌಲಭ್ಯವನ್ನು ತಲುಪಿಸಲು ಮತ್ತು ಬೃಹತ್ ಪ್ರಮಾಣದಲ್ಲಿ ಅಭಿವೃದ್ಧಿಗೆ ನೆರವಾಗಲಿದೆ ಎಂದರು.
ದೇಶದಲ್ಲಿ ಬ್ಯಾಂಕಿಂಗ್ ಸೇವೆ ವಂಚಿತ 450 ದಶಲಕ್ಷ ಜನರನ್ನು ಬ್ಯಾಂಕಿಂಗ್ ಸೇವೆಗೆ ಸೇರ್ಪಡೆ ಮಾಡಲಾಗಿದೆ. ಈ ಪ್ರಮಾಣ ಅಮೆರಿಕಾದ ಜನಸಂಖ್ಯೆಯಷ್ಟು ಗಾತ್ರ ಹೊಂದಿದೆ ಎಂದರು. ಫ್ರಾನ್ಸ್ನ ಜನಸಂಖ್ಯೆಯ ಗಾತ್ರದಷ್ಟೆ ಪ್ರಮಾಣದ 135 ದಶಲಕ್ಷ ಜನರನ್ನು ವಿಮಾ ಸೌಲಭ್ಯಕ್ಕೆ , 110 ದಶಲಕ್ಷ ಕುಟುಂಬಗಳಿಗೆ ನೈರ್ಮಲ್ಯ ಸೌಲಭ್ಯಗಳನ್ನು, 60 ದಶಲಕ್ಷ ಕುಟುಂಬಗಳಿಗೆ ನಲ್ಲಿಲ ಸಂಪರ್ಕದ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ದೇಶದಲ್ಲಿ ಯಾರೋಬ್ಬರು ಹಿಂದುಳಿಯದಂತೆ ಕೇಂದ್ರ ಸರ್ಕಾರ ನೋಡಿಕೊಳ್ಳುತ್ತಿದೆ ಎಂದು ಹೇಳಿದರು.
ನೈಜ-ಸಮಯದ ಡಿಜಿಟಲ್ ಪಾವತಿಗಳಲ್ಲಿ ಭಾರತವು ವಿಶ್ವದ ಮೊದಲ ಸ್ಥಾನದಲ್ಲಿದೆ. ಸಣ್ಣ ಪ್ರಮಾಣದ ಮಾರಾಟಗಾರರು ಡಿಜಿಟಲ್ ಪಾವತಿಗಳನ್ನು ಸ್ವೀಕರಿಸುತ್ತಿದ್ದಾರೆ. ಭಾರತವು ನಾವೀನ್ಯ ಮನೋಭಾವ ಹೊಂದಿರುವ ಯುವ ರಾಷ್ಟ್ರವಾಗಿದೆ. ವಿಶ್ವದ ಅಗ್ರ ಸ್ಟಾರ್ಟ್-ಅಪ್ ಹಬ್ಗಳಲ್ಲಿ ಭಾರತವಿದೆ. 2021 ರಿಂದಯುನಿಕಾರ್ನ್ , ಸ್ಟಾರ್ಟ್ ಅಪ್ಗಳ ಸಂಖ್ಯೆ ದ್ವಿಗುಣಗೊಂಡಿದೆ. ಭಾರತದ ಪ್ರತಿಭೆಗಳಿಂದಾಗಿ ಇದು ಸಾಧ್ಯವಾಗಿದೆ ಎಂದರು.