ತಾಂಡಾ(ತೆಲಂಗಾಣ),ಜ.12- ಕೇಂದ್ರ ಮೀಸಲು ಪಡೆಯ(ಸಿಆರ್ಪಿಎಫ್) ಯೋಧರೊಬ್ಬರು ತನ್ನ ಎರಡು ಮಕ್ಕಳನ್ನು ಬಾವಿಗೆ ತಳ್ಳಿ ನಂತರ ತಾನೂ ಕೂಡ ಚಲಿಸುತ್ತಿರುವ ರೈಲಿನತ್ತ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಾಂಗಣದಲ್ಲಿ ನಡೆದಿದೆ. ಹಮಿಜಾಕ್ಷಿ(8), ಜಾನಿ(4) ಕೊಲೆಗೀಡಾದ ಮಕ್ಕಳು. ರಾಜ್ಕುಮಾರ್ ಆತ್ಮಹತ್ಯೆ ಮಾಡಿಕೊಂಡಿರುವ ಯೋಧ.
ರಾಜ್ಕುಮಾರ್ ಅವರನ್ನು ಮುಂಬೈಗೆ ನಿಯೋಜಿಸಲಾಗಿತ್ತು. ಸಕ್ರಾಂತಿ ಹಬ್ಬದ ರಜೆ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಹುಟ್ಟೂರಾದ ಮಹಾಬುಬಾಬಾದ್ದ ಮಂಡಲ್ಗೆ ಬಂದಿದ್ದರು.
ಹತ್ತು ವರ್ಷಗಳ ಹಿಂದೆ ಸಿರಿಶಾ ಅವರೊಂದಿಗೆ ವಿವಾಹವಾಗಿತ್ತು. ಇಬ್ಬರು ಮಕ್ಕಳಿದ್ದರು. ಇತ್ತೀಚೆಗೆ ಕುಟುಂಬದಲ್ಲಿ ಸಣ್ಣಪುಟ್ಟ ಕಲಹಗಳು ಎದಿದ್ದವು. ಸೋಮವಾರ ರಾತ್ರಿ ಪತ್ನಿ ಸಿರಿಶಾ ಅವರೊಂದಿಗೆ ಜಗಳ ನಡೆದಿದ್ದು, ಇದರಿಂದ ಕುಪಿತಗೊಂಡಿದ್ದ ರಾಜ್ಕುಮಾರ್ ಬೆಳಗ್ಗೆ ತನ್ನ ಎರಡು ಮಕ್ಕಳನ್ನು ಬೈಕ್ನಲ್ಲಿ ಕರೆದುಕೊಂಡು ಹೋಗಿ ಬಾವಿಗೆ ಎಸೆದು ಬಂದಿದ್ದಾನೆ. ಎರಡೂ ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿವೆ.
ಬಳಿಕ ರೈಲ್ವೆ ನಿಲ್ದಾಣಕ್ಕೆ ಬಂದು ಚಲಿಸುತ್ತಿದ್ದ ರೈಲಿಗೆ ಜಿಗಿದು ರಾಜ್ಕುಮಾರ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಸ್ಥಳೀಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
