ನವದೆಹಲಿ,ಸೆ.24- ನಮ್ಮದು ವಸುದೈವ ಕುಟಂಬ ಪರಿಕಲ್ಪನೆ ಹೀಗಾಗಿ ನಮ್ಮಿಂದ ಯಾವುದೇ ದೇಶಕ್ಕೆ ಬೆದರಿಕೆ ಹಾಕುವ ಪ್ರಶ್ನೆಯೇ ಇಲ್ಲ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ. ಸಂಕಲ್ಪ್ ಫೌಂಡೇಷನ್ ಆಯೋಜಿಸಿದ್ದ ಉಪನ್ಯಾಸ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ದೇಶದಿಂದ ಯಾವುದೆ ದೇಶಕ್ಕೆ ಬೆದರಿಕೆ ಒಡ್ಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಮ್ಮ ರಾಷ್ಟ್ರೀಯತೆಯು ಇತರರಿಗೆ ಯಾವುದೇ ಬೆದರಿಕೆಯನ್ನು ಉಂಟುಮಾಡುವುದಿಲ್ಲ . ಅದು ನಮ್ಮ ಸ್ವಭಾವವಲ್ಲ. ನಮ್ಮ ರಾಷ್ಟ್ರೀಯತೆಯು ಪ್ರಪಂಚವೆ ಒಂದು ಕುಟುಂಬ ಎಂಬ ವಸುದೈವ ಕುಟುಂಬದ ಪರಿಕಲ್ಪನೆ ಹೊಂದಿದೆ ಎಂದರು. ವಸುದೈವ ಕುಟುಂಬದ ಪರಿಕಲ್ಪನೆ ಹೊಂದಿರುವ ನಮ್ಮ ದೇಶದಲ್ಲಿ ಎಂದಿಗೂ ಹಿಟ್ಲರ್ ಹುಟ್ಟಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಎಲ್ಲರೂ ವಿಶ್ವ ಮಾರುಕಟ್ಟೆಯ ಬಗ್ಗೆ ಮಾತನಾಡುತ್ತಾರೆ, ಆದರೆ ಭಾರತ ಮಾತ್ರ ‘ವಸುಧೈವ ಕುಟುಂಬ’ ದ ಬಗ್ಗೆ ಮಾತನಾಡುತ್ತದೆ, ಮಾತ್ರವಲ್ಲದೆ ನಾವು ಜಗತ್ತನ್ನು ಒಂದು ಕುಟುಂಬವನ್ನಾಗಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.
ಭಾರತದ ರಾಷ್ಟ್ರೀಯತೆಯ ಪರಿಕಲ್ಪನೆಯು ರಾಷ್ಟ್ರೀಯತೆಯ ಇತರ ಪರಿಕಲ್ಪನೆಗಳಿಗಿಂತ ಭಿನ್ನವಾಗಿದೆ, ಅದು ಧರ್ಮ ಅಥವಾ ಒಂದು ಭಾಷೆ ಅಥವಾ ಜನರ ಸಾಮಾನ್ಯ ಸ್ವಹಿತಾಸಕ್ತಿಗಳನ್ನು ಆಧರಿಸಿದೆ ಎಂದು ಅವರು ಒತ್ತಿ ಹೇಳಿದರು.