ಇಡುಕ್ಕಿ, ಅ,4- ಹಸುವನ್ನು ಕೊಂದು, ಸ್ಥಳೀಯರಲ್ಲಿ ಭಯ ಸೃಷ್ಟಿಸಿರುವ ಹುಲಿಯನ್ನು ಹಿಡಿಯಲ್ಲಿ ಅರಣ್ಯಾಧಿಕಾರಿಗಳು ಡ್ರೋಣ್ ಬಳಕೆ ಮಾಡಿದ್ದಾರೆ. ಕೇರಳದ ಮುನ್ನಾರ್ ಜಿಲ್ಲೆಯ ದಟ್ಟ ಪ್ರದೇಶದಲ್ಲಿ ಹುಲಿ ಹಿಡಿಯುವ ಕಾರ್ಯಾಚರಣೆ ಆರಂಭಿಸಲಾಗಿದೆ.
ಕಳೆದ ವಾರಾಂತ್ಯದಲ್ಲಿ ನ್ಯಾಮಕ್ಕಾಡ್ ಎಸ್ಟೇಟ್ನಲ್ಲಿ ಕನಿಷ್ಠ 10 ಹಸುಗಳನ್ನು ಹುಲಿ ಕೊಂದಿದೆ. ಈ ಪ್ರದೇಶದಲ್ಲಿ ಮೂರು ಬೋನುಗಳನ್ನು ಇಟ್ಟರು ಚಾಲಾಕಿ ಹುಲಿ ತಪ್ಪಿಸಿಕೊಂಡಿದೆ. ಬೋನಿನ ಸುತ್ತ ಹಸಿ ಮಾಂಸ ಇಟ್ಟರೂ ಹುಲಿ ಹತ್ತಿರ ಸುಳಿದಿಲ್ಲ. ಕಳೆದ ವಾರ ಜನರ ಕಣ್ಣಿಗೆ ಕಾಣಿಸಿಕೊಂಡಿದ್ದ ಹುಲಿ ನಂತರ ಹಸುಗಳನ್ನು ಕೊಂದು ತಿಂದಿದೆ.
ಸ್ಥಳೀಯರಲ್ಲಿ ಬಹುಭಾಗ ಎಸ್ಟೇಟ್ ಕಾರ್ಮಿಕರಾಗಿದ್ದಾರೆ. ಬೆಳಿಗ್ಗೆಯ ವೇಳೆಯೇ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆ ಕಾರ್ಮಿಕರಿಗಿದೆ. ಈಗ ಹುಲಿಯ ಭಯ ಅವರನ್ನು ಆವರಿಸಿದೆ. ಹಾಗಾಗಿ ಹುಲಿ ಹಿಡಿಯಲು ಅರಣ್ಯಾಧಿಕಾರಿಗಳ ಮೇಲೆ ಒತ್ತಡ ಹೆಚ್ಚಾಗಿದೆ. ನ್ಯಾಮಕ್ಕಾಡ್ನಿಂದ ಸುಮಾರು 2 ಕಿಮೀ ದೂರದಲ್ಲಿ ಎರಡನೇ ಬಾರಿ ಹುಲಿ ಕಾಣಿಸಿಕೊಂಡಿದೆ.
ಇದು ಹುಲಿಗಳು ಮತ್ತು ಚಿರತೆಗಳ ಮಿಲನದ ಅವಧಿಯಾಗಿದ್ದು, ಹುಲಿ ಹತ್ತಿರದ ಎರವಿಕುಲಂ ರಾಷ್ಟ್ರೀಯ ಉದ್ಯಾನವನದ ಒಳಗೆ ಮತ್ತು ಹೊರಗೆ ಚಲಿಸುತ್ತವೆ ಎಂದು ಹೇಳಲಾಗಿದೆ. ಹುಲಿ ಹಿಡಿಯಲು 30 ಸದಸ್ಯರ ತಂಡವನ್ನು ನಿಯೋಜಿಸಲಾಗಿದೆ. ಹುಲಿಯ ಚಲನವಲನವನ್ನು ಪತ್ತೆಹಚ್ಚಲು ನೈಟ್ ವಿಷನ್ ಕ್ಯಾಮೆರಾ ಸೇರಿದಂತೆ ವಿವಿಧ ಸಲಕರಣೆಗಳನ್ನು ಒದಗಿಸಲಾಗಿದೆ.