ಬೆಂಗಳೂರು,ಫೆ.24-ಪ್ರಶ್ನೋತ್ತರ ಕಲಾಪ ಒಂದೇ ಒಂದು ಪ್ರಶ್ನೆಗೆ ಸೀಮಿತವಾದ ಪ್ರಸಂಗ ವಿಧಾನಸಭೆಯಲ್ಲಿಂದು ಜರುಗಿತು. ಕರ್ನಾಟಕ ವಿಧಾನಸಭೆಯ ಹಾಗೂ ಪ್ರಸಕ್ತ ಬಜೆಟ್ ಅವೇಶನದ ಕೊನೆಯ ದಿನವಾದ ಇಂದು ಸದನದಲ್ಲಿ ಸದಸ್ಯರ ಹಾಜರಾತಿ ಕೊರತೆ ಎದ್ದು ಕಾಣುತ್ತಿತ್ತು.
ಆಡಳಿತ ಮತ್ತು ಪ್ರತಿಪಕ್ಷ ಕಡೆಗಳ ಸದಸ್ಯರ ಹಾಜರಾತಿ ಕಡಿಮೆ ಇತ್ತು. ನಿಗದಿತ ಸಮಯಕ್ಕಿಂತ ಸುಮಾರು ಅರ್ಧಗಂಟೆಯಷ್ಟು ವಿಳಂಬವಾಗಿ ವಿಧಾಸಭೆ ಸಮಾವೇಶಗೊಂಡಾಗ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಅವೇಶನದ ಕೊನೆ ದಿನವಾಗಿದೆ ಎಂದು ಪ್ರಕಟಿಸಿ ಪ್ರಶ್ನೋತ್ತರ ಕಲಾಪಕ್ಕೆ ಅನುವು ಮಾಡಿಕೊಟ್ಟರು.
ವಿಧಾನಸಭೆಯಲ್ಲಿ ದೇವೇಗೌಡರನ್ನು ಕೊಂಡಾಡಿದ ಯಡಿಯೂರಪ್ಪ
ಪ್ರಶ್ನೆ ಕೇಳಿದ್ದ 15 ಸದಸ್ಯರು ಸಹ ಸದನಕ್ಕೆ ಹಾಜರಾಗಿರಲಿಲ್ಲ. ಒಂದು ಪ್ರಶ್ನೆಗೆ ಮಾತ್ರ ಪ್ರಶ್ನೋತ್ತರ ಕಲಾಪ ಸೀಮಿತಗೊಂಡು ದಾಖಲೆಯಾಯಿತು.ಆಡಳಿತ ಪಕ್ಷದ ಶಾಸಕ ಅಪ್ಪಚ್ಚುರಂಜನ್ ಪರವಾಗಿ ಮಾಜಿ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರು ಪ್ರಶ್ನೆ ಕೇಳಿ ಪೌರಾಡಳಿತ ಸಚಿವ ಎನ್.ನಾಗರಾಜ್ ಅವರಿಂದ ಉತ್ತರ ಪಡೆದರು. ಪ್ರಶ್ನೆ ಕೇಳಬೇಕಾದ ಸದಸ್ಯರ ಹೆಸರನ್ನು ಸಭಾಧ್ಯಕ್ಷರು ಎರಡು ಬಾರಿ ಕರೆದರೂ ಪ್ರಶ್ನೆ ಕೇಳುವವರು ಸದನದಲ್ಲಿ ಇರಲಿಲ್ಲ.
ಆಗ ಸಭಾಧ್ಯಕ್ಷರು ಮಾತನಾಡಿ 15 ಪ್ರಶ್ನೆಗಳ ಪೈಕಿ ಒಂದು ಪ್ರಶ್ನೆಗೆ ಮಾತ್ರ ಉತ್ತರಿಸಲಾಗಿದೆ. ಅದು ಸದಸ್ಯ ಅಪ್ಪಚ್ಚುರಂಜನ್ ಪರವಾಗಿ ಬೋಪಯ್ಯ ಅವರು ಪ್ರಶ್ನೆ ಕೇಳಿದ್ದಾರೆ.
ಉಳಿದಂತೆ ಪ್ರಶ್ನೆ ಕೇಳಿದವರು ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿ ಒಂದು ಪ್ರಶ್ನೆಯ ಪ್ರಶ್ನೋತ್ತರ ಇಂದು ಆಗಿದೆ ಎಂದು ಹೇಳುವ ಮೂಲಕ ಸಭಾಧ್ಯಕ್ಷರು ಪ್ರಶ್ನೋತ್ತರ ಕಲಾಪ ಮುಗಿದೆ ಎಂದು ಪ್ರಕಟಿಸಿದರು.
#Session, #SingleQuestion, #AssemblySession,