ಬೆಂಗಳೂರು, ಜು.17- ಬಾರ್ನಲ್ಲಿ ಎರಡು ಗುಂಪಿನ ರೌಡಿಗಳು ಮದ್ಯದ ಬಾಟಲಿನಿಂದ ಹೊಡೆದಾಡಿಕೊಂಡಿರುವ ಘಟನೆ ಉಪ್ಪಾರ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಸವೆನ್ ಹಿಲ್ ಬಾರ್ನಲ್ಲಿ ನಡೆದಿದೆ.
ಮಧ್ಯ ರಾತ್ರಿ ನಡೆದ ಈ ಘಟನೆಯಲ್ಲಿ ಶ್ರೀರಾಂಪುರದ ರೌಡಿ ಶೀಟರ್ ರಾಘವೇಂದ್ರ ಹಾಗೂ ರಾಜರಾಜೇಶ್ವರಿ ನಗರದ
ರೌಡಿ ಶೀಟರ್ ಯಶವಂತ್ ಮತ್ತು ಇತರರಿಗೆ ಗಾಯಗಳಾಗಿವೆ. ಕಳೆದ ರಾತ್ರಿ ಈ ಎರಡು ರೌಡಿಗಳ ಗುಂಪಿನ ಸದಸ್ಯರು ಮದ್ಯ ಸೇವಿಸಲು ಗಾಂಧಿನಗರದ ಬಾರ್ಗೆ ಬಂದಿದ್ದಾರೆ. ಸುಮಾರು 12.30 ಸಂದರ್ಭದಲ್ಲಿ ಬಾತ್ರೂಂ ಗೆ ಹೋದ ರೌಡಿ ಯಶವಂತ್ ಎದುರಿಗೆ ಬಂದ ರೌಡಿ ರಾಘವೇಂದ್ರನನ್ನು ಗುರಾಯಿಸಿದ್ದಾನೆ.
ಈ ವೇಳೆ ರಾಘವೇಂದ್ರ ಯಾಕೆ ಗುರಾಯಿಸುವುದು ಎಂದು ಕೇಳಿದ್ದಕ್ಕೆ ಯಶವಂತ ಹಾಗೂ ಆತನ ಸ್ನೇಹಿತ ಕೃಷ್ಣಮೂರ್ತಿ ಮದ್ಯದ ಬಾಟಲಿಯಿಂದ ಆತನ ಹೊಡೆದಿದ್ದಾರೆ. ನಂತರ ರಾಘವೇಂದ್ರ ಕಡೆಯವರು ಬಾರ್ ಹೊರಗೆ ಬಂದಿದ್ದಾರೆ.
ಯಶವಂತ ಹೊರಗೆ ಬರುತ್ತಿರುವುದನ್ನು ಕಾದಿದ್ದ ರಾಘವೇಂದ್ರನ ಕಡೆಯವರು ಅವನು ಬರುತ್ತಿದ್ದಂತೆಯೇ ಮದ್ಯದ ಬಾಟಲಿನಿಂದ ಆತನ ತಲೆಗೆ ಹೊಡೆದು ಗಲಾಟೆ ಮಾಡಿದ್ದಾರೆ. ಈ ಬಗ್ಗೆ ಉಪ್ಪಾರ ಪೇಟೆ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.