ಕಲ್ಲಕುರಿಚಿ. ಜು.18- ಓದಿನಲ್ಲಿ ಹಿಂದೆಬಿದ್ದಿದೀಯ ಎಂದು ಚಿತ್ರಹಿಂಸೆ ನೀಡಿ ವಿದ್ಯಾರ್ಥಿನಿಯೊಬ್ಬಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ವಸತಿ ಶಾಲೆಯೊಂದರ ಇಬ್ಬರು ಶಿಕ್ಷಕರನ್ನು ಬಂಧಿಸಲಾಗಿದೆ.
ಅಲ್ಲದೆ, ಘಟನೆ ಖಂಡಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಮತ್ತು ಶಾಲೆಯನ್ನು ಧ್ವಂಸಗೊಳಿಸಿದ್ದಕ್ಕಾಗಿ ಸುಮಾರು 300 ಜನರನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಚಿನ್ನಸೇಲಂನ ಕಣಿಯಮೂರ್ ಪ್ರದೇಶದ ಖಾಸಗಿ ವಸತಿ ಶಾಲೆಯಲ್ಲಿ 12 ನೇ ತರಗತಿ ಓದುತ್ತಿದ್ದ 17 ವರ್ಷದ ಬಾಲಕಿ ಜುಲೈ 13 ರಂದು ಹಾಸ್ಟೆಲ್ ಆವರಣದಲ್ಲಿ ಅನುಮಾನ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಳು.
ಹಾಸ್ಟೆಲ್ನ ಮೂರನೇ ಮಹಡಿಯ ಕೊಠಡಿಯೊಂದರಲ್ಲಿ ವಾಸವಾಗಿದ್ದ ಬಾಲಕಿ ಮೇಲಿನ ಮಹಡಿಯಿಂದ ನೆಲಕ್ಕೆ ಜಿಗಿದು ಆತ್ಮಹತ್ಯಮಾಡಿಕೊಂಡಿದ್ದಾಳೆ ಎಂದು ಶಂಕಿಸಲಾಗಿತ್ತು ಆದರೆ ಮರಣೋತ್ತರ ಪರೀಕ್ಷೆಯ ವರದಿಯು ಆಕೆಯ ಸಾವಿಗೆ ಮುಂಚೆಯೇ ಆಕೆಗೆ ಗಾಯಗಳಾಗಿವೆ ಎಂದು ತಿಳಿದುಬಂದಿತ್ತು.
ಗಣಿತ ಮತ್ತು ರಸಾಯನಶಾಸ್ತ್ರವನ್ನು ಬೋಧಿಸುವ ಇಬ್ಬರು ಶಿಕ್ಷಕರೇ ಕಾರಣ ಎಂದು ಮೃತ ಬಾಲಕಿಯ ಕುಟುಂಬದವರು ಆರೋಪಿಸಿದ್ದಾರೆ ಆಕೆಯ ಪೋಷಕರು, ಸಂಬಂಧಿಕರು ಮತ್ತು ಕಡಲೂರು ಜಿಲ್ಲಾಯ ವೇಪ್ಪೂನರ್ ಪೆರಿಯನಸಲೂರು ಗ್ರಾಮದ ಜನರು ಒಟ್ಟಾಗಿ ನ್ಯಾಯಕ್ಕಾಗಿ ಎಡೆಬಿಡದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಘಟನೆಯನ್ನು ಖಂಡಿಸಿ ಕಲ್ಲಕುರಿಚಿ ಮತ್ತು ಕಡಲೂರು ಜಿಲ್ಲಾಗಳಲ್ಲಿ ಪ್ರತಿಭಟನೆಗಳು ನಡೆದಿವೆ.