ಬೆಂಗಳೂರು,ಸೆ.20- ಮನೆಗಳ್ಳ ತನವನ್ನೇ ಚಾಳಿಯನ್ನಾಗಿಸಿಕೊಂಡು ಹಗಲು ಮತ್ತು ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿ 12.5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಪೀಣ್ಯಾ ನಿವಾಸಿಗಳಾದ ಕಾಂತರಾಜ್ ಅಲಿಯಾಸ್ ಮೋರಿ(45 ) ಮತ್ತು ಸುರೇಶ್ ಅಲಿಯಾಸ್ ಸೂಪರ್ ಸೂರಿ(47) ಬಂಧಿತ ಆರೋಪಿಗಳು. ಆರೋಪಿಗಳ ಬಂಧನದಿಂದ ಅಶೋಕನಗರ ಪೊಲೀಸ್ ಠಾಣೆ, ಆರ್ಎಂಸಿಯಾರ್ಡ್ ಹಾಗೂ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯ ಒಂದು ಪ್ರಕರಣ ಸೇರಿ ಒಟ್ಟು 3 ಪ್ರಕರಣಗಳು ಪತ್ತೆಯಾಗಿದ್ದು, ಸುಮಾರು 12.5 ಲಕ್ಷ ಮೌಲ್ಯದ 269 ಗ್ರಾಂ ಚಿನ್ನದ ಒಡವೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ : ಪೊಲೀಸ್ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ ಇಲ್ಲ
ಆರೋಪಿಗಳು ಈ ಹಿಂದೆ ರಾಜಗೋಪಾಲನಗರ ಆರ್ಎಂಸಿಯಾರ್ಡ್, ಚಂದ್ರಲೇಔಟ್, ವಿಜಯನಗರ, ಸಿಸಿಬಿ, ನಂದಿನಿಲೇಔಟ್, ಕೋರಮಂಗಲ, ಬಸವೇಶ್ವರನಗರ, ಬ್ಯಾಡರಹಳ್ಳಿ, ಮಂಡ್ಯ, ಹಾಸನ, ತಿಪಟೂರು ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಕಳ್ಳತನ ಮಾಡಿ ಬಂಧಿತರಾಗಿರುವುದು ತನಿಖೆಯಿಂದ ಗೊತ್ತಾಗಿದೆ.
ಜೈಲಿನಿಂದ ಹೊರಬಂದ ನಂತರವು ಇವರು ತಮ್ಮ ಚಾಳಿಯನ್ನು ಮುಂದುವರೆಸಿ ಬೀಗ ಹಾಕಿದ್ದ ಮನೆಗಳನ್ನು ನೋಡಿಕೊಂಡು ಹಗಲು ಮತ್ತು ರಾತ್ರಿ ವೇಳೆಯಲ್ಲಿ ಆ ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದರು. ಕಳವು ಮಾಡಿದ ಆಭರಣಗಳನ್ನು ಬೇರೆ ಬೇರೆ ಒಡವೆ ಅಂಗಡಿಗಳಲ್ಲಿ ಗಿರವಿ ಇಡುತ್ತಿದ್ದರು. ಇನ್ನು ಕೆಲವು ಆಭರಣಗಳನ್ನು ಮಾರಾಟ ಮಾಡಿರುವುದು ವಿಚಾರಣೆಯಿಂದ ಕಂಡುಬಂದಿರುತ್ತದೆ.
ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಅವರ ಮಾರ್ಗದರ್ಶನದಲ್ಲಿ ಕಬ್ಬನ್ಪಾರ್ಕ್ ಎಸಿಪಿ ರಾಜೇಂದ್ರ ಅವರ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಶ್ರೀಕಾಂತ್ ಎಫ್.ತೋಟಗಿ ಅವರನ್ನೊಳಗೊಂಡ ಸಿಬ್ಬಂದಿ ತಂಡ ಈ ಕಾರ್ಯಚರಣೆ ಕೈಗೊಂಡಿತ್ತು.