ಹುಬ್ಬಳ್ಳಿ,ಮಾ.6-ಭಾರತದ ಸುಮಾರು 200ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಇನ್ನು ಅಲ್ಲಿಯೇ ಇದ್ದಾರೆ. ಪ್ರಧಾನಿ ಮೋದಿಯವರು ವಿದ್ಯಾರ್ಥಿಗಳನ್ನು ಕರೆತರುವ ನಿರಂತರ ಪ್ರಯತ್ನದಲ್ಲಿ ತೊಡಗಿದ್ದಾರೆ. ಬಹಳ ದೊಡ್ಡ ಪ್ರಮಾಣದಲ್ಲಿ ಏರ್ ಲಿಫ್ಟ್ ಕಾರ್ಯ ಆಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ದೇಶಕ್ಕೆ ಆಗಮಿಸಿದ ಎಂಬಿಬಿಎಸ್ ವಿದ್ಯಾರ್ಥಿನಿ ಚೈತ್ರಾ ಸಂಶಿ ಅವರನ್ನು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಹೂಗುಚ್ಛ ನೀಡಿ ಸ್ವಾಗತಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಕ್ರೇನ್ ಗಡಿಯ 4-5 ರಾಷ್ಟ್ರಗಳು ಮೋದಿಯವರೊಂದಿಗೆ ಬಹಳ ಉತ್ತಮ ಸಂಬಂಧ ಹೊಂದಿದ್ದಾರೆ. ಅಲ್ಲದೆ ಮೃತ ನವೀನ್ ದೇಹ ಸಹ ತರುವ ಕಾರ್ಯ ನಡೆಯುತ್ತಿದೆ. ಯುದ್ಧದ ಸ್ಥಿತಿ ನೋಡಿಕೊಂಡು ಮೃತ ದೇಹ ತರುವ ಕಾರ್ಯ ನಡೆಯುತ್ತೆ. ಆದಷ್ಟು ಬೇಗ ಮೃತ ದೇಹ ತರುವ ಪ್ರಾಮಾಣಿಕ ಪ್ರಯತ್ನ ನಡೆಯುತ್ತೆ ಎಂದರು.
ಚೈತ್ರಾ ಅವರ ಕುಟುಂಬ ತುಂಬಾನೇ ಭಯಗೊಂಡಿದ್ದರು. ಅಂತಹ ಸಮಯದಲ್ಲಿ ಜಿಲ್ಲಾಡಳಿತ ಸಹ ಅವರ ಕುಟುಂಬಕ್ಕೆ ಧೈರ್ಯ ತುಂಬಲಾಗಿತ್ತು. ದೇವರ ಆಶೀರ್ವಾದದಿಂದ ಚೈತ್ರಾ ಸುರಕ್ಷಿತವಾಗಿ ಇಲ್ಲಿಗೆ ಬಂದಿದ್ದಾರೆ ಎಂದು ಹೇಳಿದರು.
ಚೈತ್ರಾ ಸಂಶಿ ಉಕ್ರೇನ್ನಲ್ಲಿ ಮೂರನೇ ವರ್ಷದ ಮೆಡಿಕಲ್ ಓದುತ್ತಿದ್ದಳು. ಬಹಳಷ್ಟು ಜನ ವಿದ್ಯಾರ್ಥಿನಿಯರು ಅಲ್ಲಿ ಸಿಲುಕಿದ್ದರು. ಅವರಲ್ಲಿ ಚೈತ್ರಾ ಬಂಕರ್ನಲ್ಲಿ ಉಳಿದು, 4-5 ಕಿಮೀ ರಸ್ತೆಯ ಮೂಲಕ ನಡೆದುಕೊಂಡು ಬಂದು, ವಿಮಾನದಲ್ಲಿ ದೇಶಕ್ಕೆ ಆಗಮಿಸಿದ್ದಾರೆ. ವಿದ್ಯಾರ್ಥಿನಿಯನ್ನು ಕರೆತರಲು ಉಕ್ರೇನ್ನಲ್ಲಿರುವ ಭಾರತದ ರಾಯಭಾರಿ ಕಚೇರಿ ಸಾಕಷ್ಟು ಸಹಾಯ ಮಾಡಿದೆ ಎಂದು ತಿಳಿಸಿದರು.
