ಉತ್ತರ ಪ್ರದೇಶ, ಮಾ.10- ಉತ್ತರ ಪ್ರದೇಶದ ನೋಯ್ಡಾ ನಗರಕ್ಕೆ ಭೇಟಿ ನೀಡಿದರೆ ಮುಖ್ಯಮಂತ್ರಿ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮಾತನ್ನು ಯೋಗಿ ಆದಿತ್ಯನಾಥ್ ಸುಳ್ಳು ಮಾಡಿದ್ದಾರೆ. ಕಳೆದ 29 ವರ್ಷಗಳಿಂದ ಉತ್ತರ ಪ್ರದೇಶದಲ್ಲಿ ಉದ್ಭವವಾಗಿದ್ದ ಮೂಢನಂಬಿಕೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತೊಡೆದುಹಾಕಿದ್ದಾರೆ.
ನೋಯ್ಡಾ ನಗರಕ್ಕೆ ಭೇಟಿ ನೀಡಿ ಗೆಲುವಿನ ನಗೆ ಬೀರಿದ್ದಾರೆ. ಕರ್ನಾಟಕದ ಚಾಮರಾಜನಗರಕ್ಕೆ ಭೇಟಿ ನೀಡಿದರೆ ಮುಖ್ಯಮಂತ್ರಿ ಅಧಿಕಾರ ಕಳೆದುಕೊಳ್ಳುತ್ತಾರೆಂಬ ಮೂಢನಂಬಿಕೆಯಂತೆ ಉತ್ತರ ಪ್ರದೇಶದ ನೋಯ್ಡಾಗೆ ಭೇಟಿ ನೀಡಿದರೂ ಸಿಎಂ ಅಧಿಕಾರ ಕಳೆದುಕೊಳ್ಳುತ್ತಾರೆಂಬ ಮೂಢನಂಬಿಕೆ ಉತ್ತರ ಪ್ರದೇಶದಲ್ಲಿ ಜನಜನಿತವಾಗಿತ್ತು. ಆದರೆ, ಅದನ್ನೀಗ ಸಿಎಂ ಯೋಗಿ ಆದಿತ್ಯನಾಥ್ ಸುಳ್ಳು ಮಾಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಮಹತ್ವದ ಬದಲಾವಣೆ ತರುವಲ್ಲಿ ಯಶಸ್ವಿಯಾಗಿರುವ ಮುಖ್ಯಮಂತ್ರಿ ಯೋಗಿ, 2022ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ದಾಖಲು ಮಾಡುವ ಮೂಲಕ ಬಹುದೊಡ್ಡ ಮೂಢನಂಬಿಕೆಯನ್ನು ತೊಡೆದುಹಾಕಿದ್ದಾರೆ. ರಾಜ್ಯದಲ್ಲಿ ಉತ್ತಮ ಕೆಲಸ ಮಾಡಿದರೆ ಜನರ ವಿಶ್ವಾಸ ಗಳಿಸಬಹುದು ಎಂಬುದನ್ನು ಸಾಬೀತು ಮಾಡಿದ್ದಾರೆ.
ಕಳೆದ 29 ವರ್ಷಗಳಿಂದ ಯಾವುದೇ ಮುಖ್ಯಮಂತ್ರಿ ನೋಯ್ಡಾಗೆ ಭೇಟಿ ನೀಡಿರಲಿಲ್ಲ. 2018ರಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಭೇಟಿ ನೀಡಿದ್ದರು. ಇದಾದ ಬಳಿಕ 2021ರಲ್ಲಿ ಮತ್ತೊಂದು ಬಾರಿ ನೋಯ್ಡಾಗೆ ತೆರಳಿ ಕೋವಿಡ್ ಆಸ್ಪತ್ರೆ ಉದ್ಘಾಟಿಸಿದ್ದರು.
ತಮ್ಮ ಅಧಿಕಾರಾವಧಿಯಲ್ಲಿ ಯೋಗಿ ಸುಮಾರು 10ಕ್ಕೂ ಹೆಚ್ಚು ಸಲ ಇಲ್ಲಿಗೆ ಭೇಟಿ ನೀಡಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಗಳಾಗಿ ಅಖಿಲೇಶ್ ಯಾದವ್, ಮುಲಾಯಂಸಿಂಗ್ ಯಾದವ್, ಕಲ್ಯಾಣ್ಸಿಂಗ್ ಮತ್ತು ರಾಜನಾಥ್ಸಿಂಗ್ ಯಾರೂ ಕೂಡ ನೋಯ್ಡಾಗೆ ಭೇಟಿ ನೀಡಿರಲಿಲ್ಲ.
