ಬೆಂಗಳೂರು, ನ.26- ಮತದಾರರ ಪಟ್ಟಿಯಲ್ಲಿ ಅಕ್ರಮಗಳೇ ನಡೆದಿದ್ದ ಎಂದು ವಾದಿಸುತ್ತಿದ್ದ ಮುಖ್ಯಮಂತ್ರಿಯವರೆ, ಹಾಗಿದ್ದರೆ ಇಬ್ಬರು ಐಎಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದು ಯಾಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಮತದಾರರ ಪಟ್ಟಿ ಅಕ್ರಮಗಳ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಹಗರಣಗಳ ಬಗ್ಗೆ ಬಿಜೆಪಿ ವರಸೆಗಳು ಹಾಸ್ಯಾಸ್ಪದವಾಗಿವೆ. ಮೊದಲು ಅಕ್ರಮವೇ ನಡೆದಿಲ್ಲ ಎಂದು ನಿರಾಕರಿಸಲಾಗುತ್ತದೆ. ಹಗರಣ ಹೊರಬಂದನಂತರ ಇದೊಂದು ಸಣ್ಣ ಲೋಪ ಎಂಬಂತೆ ಮಾತಾಡುತ್ತದೆ.
ಹಗರಣದ ತೀವ್ರತೆ ಹೊರಬಂದಾಗ ಪ್ರಭಾವಿಗಳ ರಕ್ಷಣೆಗೆ ತಂತ್ರ ಹೂಡುತ್ತದೆ. ಪಿಎಸ್ಐ ನೇಮಕಾತಿಯಿಂದ ಚಿಲುಮೆ ಹಗರಣದವರೆಗೂ ಬಿಜೆಪಿ ಸರ್ಕಾರದ ಧೋರಣೆ ಇದೆ ಆಗಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತ ಪಡಿಸಿದೆ.
ಒಕ್ಕಲಿಗರ ಮೀಸಲಾತಿ ಹೆಚ್ಚಳಕ್ಕಾಗಿ ಪಕ್ಷಾತೀತ ಹೋರಾಟಕ್ಕೆ ಸಜ್ಜು
ಬಿಜೆಪಿ ಅಧಿಕಾರವಯಲ್ಲಿ ನಡೆದ ಪ್ರಮುಖ ಕಳ್ಳತನಗಳು ಎಂದು ಹಲವು ಹಗರಣಗಳನ್ನು ಕಾಂಗ್ರೆಸ್ ಪಟ್ಟಿ ಮಾಡಿದೆ. ಶಾಸಕರ ಕಳ್ಳತನ, ಕಮಿಷನ್ ಕಳ್ಳತನ, ಸರ್ಕಾರಿ ಹುದ್ದೆಗಳ ಕಳ್ಳತನ, ಮತದಾರರ ಮಾಹಿತಿ ಕಳ್ಳತನಗಳು ಬಿಜೆಪಿ ಅವಧಿಯಲ್ಲಿ ನಡೆದಿವೆ ಎಂದು ವಿವರಿಸಿದೆ.
ಅಕ್ರಮ ನಡೆದೇ ಇಲ್ಲ ಎಂಬಂತೆ ಮಾತನಾಡುತ್ತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಮತದಾರರ ಮಾಹಿತಿ ಕಳ್ಳತನದ ಅಕ್ರಮದಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳು ಅಮಾನತಾಗಿದ್ದು ಏಕೆ ಎಂದು ಪ್ರಶ್ನಿಸಿದೆ.
ಸರ್ಕಾರದ ಹಸ್ತಕ್ಷೇಪ, ಬಿಜೆಪಿಯ ಹಿತಾಸಕ್ತಿ, ಮುಖ್ಯಮಂತ್ರಿಗಳ ಸಹಕಾರ ಇಲ್ಲದೆ ಐಎಎಸ್ ಮಟ್ಟದ ಅಧಿಕಾರಿಗಳು ಚಿಲುಮೆಗೆ ಸಹಕರಿಸಲು ಸಾಧ್ಯವೇ? ದಮ್ಮು ತಾಕತ್ತು ಇದ್ದರೆ ಉತ್ತರಿಸಿ ಎಂದು ಕಾಂಗ್ರೆಸ್ ಸವಾಲು ಹಾಕಿದೆ.
ಇತರೆ ವರ್ಗಗಳ ಮೀಸಲಾತಿ ಬೇಡಿಕೆ ಹೆಚ್ಚಳ : ಇಕ್ಕಟ್ಟಿನಲ್ಲಿ ಸರ್ಕಾರ
ಬಿಜೆಪಿ ಒಮ್ಮೆಯೂ ಜನಾದೇಶದ ಮೂಲಕ ಅಧಿಕಾರಕ್ಕೆ ಬಂದಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಳ್ಳ ಮಾರ್ಗದಲ್ಲಿ ಹೈಜಾಕ್ ಮಾಡಿ ಅಧಿಕಾರ ಹಿಡಿಯುವ ಬಿಜೆಪಿ ಬಗ್ಗೆ ಜನ ಜಾಗ್ರತೆ ವಹಿಸಬೇಕು ಎಂದು ಎಚ್ಚರಿಸಲಾಗಿದೆ.
Voter, Id, Scam, IAS, officers, suspension, Congress,