ಹಾಸನ, ಆ.5- ಗೋಡೆ ಕುಸಿದು ಬಾಲಕ ಸಾವನ್ನಪ್ಪಿರುವ ಘಟನೆ ನುಗ್ಗೆಹಳ್ಳಿ ಹೋಬಳಿಯ ಭುವನಹಳ್ಳಿಯಲ್ಲಿ ನಡೆದಿದೆ.
ಪ್ರಜ್ವಲ್ (13) ಮೃತಪಟ್ಟ ಬಾಲಕ. ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಮನೆಯ ಗೋಡೆಗೆ ನೀರು ಇಳಿದ ಪರಿಣಾಮ ಮಲಗಿದ್ದ ಪ್ರಜ್ವಲ್ ಮೇಲೆ ರಾತ್ರಿ ಗೋಡೆ ಕುಸಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಪೋಷಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಗನನ್ನು ರಕ್ಷಿಸಿಕೊಳ್ಳಲು ಪೋಷಕರು ಹರಸಾಹಸಪಟ್ಟರೂ ಪ್ರಯೋಜನವಾಗಲಿಲ್ಲ. ಏಳನೇ ತರಗತಿ ಓದುತ್ತಿದ್ದ ಪ್ರಜ್ವಲ್ ಪ್ರತಿಭಾವಂತ ವಿದ್ಯಾರ್ಥಿ. ಓದಿನಲ್ಲೂ ಮುಂದಿದ್ದ. ಬಾಲಕನ ಸಾವು ಕುಟುಂಬ ಸದಸ್ಯರಿಗೆ ಬರಸಿಡಿಲಿನಂತೆ ಬಂದೆರಗಿದೆ. ಕಣ್ಣೆದುರೇ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಪೋಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.