ಬೆಂಗಳೂರು,ಜು.14- ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನಕ್ಕೆ ಚಾಮರಾಜೇಂದ್ರ ಒಡೆಯರ್ ಅವರ ಹೆಸರಿಡಬೇಕು ಎಂದು ಸಂಸದ ಪಿ.ಸಿ.ಮೋಹನ್ ಒತ್ತಾಯಿಸಿದ್ದಾರೆ.ಇಂದು ಬಿಬಿಎಂಪಿ ಕೇಂದ್ರ ಕಚೇರಿಗೆ ಆಗಮಿಸಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ ನಂತರ ಅವರು ಸುದ್ದಿಗಾರರರೊಂದಿಗೆ ಮಾತನಾಡಿದರು.
ಪುರಾತನ ನಗರವಾಗಿರುವ ಚಾಮರಾಜಪೇಟೆಯಲ್ಲಿ ಮೈದಾನ ಸಾರ್ವಜನಿಕರು ಮತ್ತು ಮಕ್ಕಳು ಆಟವಾಡಲು ಇರುವಂತಹ ಪ್ರದೇಶ. ಆದರೆ, ಕೆಲವರು ಸ್ವತ್ತಿಗಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು. ಮೈದಾನ ಬಿಬಿಎಂಪಿ ಆಸ್ತಿಯಾಗಿರುವುದರಿಂದ ಮೈದಾನವನ್ನು ಮಕ್ಕಳ ಆಟದ ಮೈದಾನವಾಗಿಯೇ ಉಳಿಸಿಕೊಳ್ಳಬೇಕು.
ಈಗಾಗಲೇ ಮೈದಾನವನ್ನು ಎಮ್ಮೆ ಮೈದಾನ, ಕುರಿ ಮೈದಾನ ಮತ್ತು ಈದ್ಗಾ ಮೈದಾನ ಎಂದು ಕರೆಯಲಾಗುತ್ತಿದೆ. ಬಿಬಿಎಂಪಿ ಆಸ್ತಿಯಾಗಿರುವ ಈ ಮೈದಾನಕ್ಕೆ ಮೈಸೂರು ಮಹಾರಾಜರಾಗಿದ್ದ ಚಾಮರಾಜೇಂದ್ರ ಒಡೆಯರ್ ಅವರ ಹೆಸರಿಡಬೇಕು ಎಂದು ಆಯುಕ್ತರಿಗೆ ಮನವಿ ಮಾಡಿಕೊಂಡಿದ್ದೇನೆ ಎಂದು ತಿಳಿಸಿದರು.
ಬಿಬಿಎಂಪಿ ಆಸ್ತಿಯಾಗಿರುವ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಯೋಗಾ ದಿನಾಚರಣೆ, ಸ್ವಾಂತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವ, ದಸರಾ ಉತ್ಸವ, ಗಣೇಶೋತ್ಸವ, ಆಜಾದಿ ಕಾ ಅಮೃತ ಮಹೋತ್ಸವ, ಕ್ರೀಡಾಕೂಟಗಳು, ಸರ್ಕಾರಿ ಕಾರ್ಯಕ್ರಮಗಳು ಹಾಗೂ ಮತ್ತಿತರ ನಾಡು ನುಡಿಯ ವೈಭವವನ್ನು ಬಿಂಬಿಸುವಂತಹ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬೇಕು ಎಂದು ಅವರು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.