ಬೆಂಗಳೂರು,ಮಾ.8- ರಾಜ್ಯ ದಲ್ಲಿರುವ ಎಲ್ಲ ಕೆರೆಗಳಿಗೆ ನೀರು ತುಂಬಿಸಲು ಕನಿಷ್ಠ ಪಕ್ಷ 1,20,000 ಕೋಟಿ ಅನುದಾನ ಬೇಕಾಗುತ್ತದೆ. ಅನುದಾನದ ಲಭ್ಯತೆ ಮೇಲೆ ಹಂತ ಹಂತವಾಗಿ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಶಾಸಕ ಭೀಮಾನಾಯಕ್ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಇಲಾಖೆಗೆ ವಾರ್ಷಿಕವಾಗಿ 40 ಸಾವಿರ ಕೋಟಿ ಅನುದಾನವನ್ನು ಸಹ ನೀಡುವುದಿಲ್ಲ. ಇನ್ನು ಎಲ್ಲ ಕೆರೆಗಳಿಗೆ ನೀರು ತುಂಬಿಸಲು ಅನುದಾನವನ್ನು ಎಲ್ಲಿಂದ ತರಬೇಕು ಎಂದು ಪ್ರಶ್ನಿಸಿದರು.
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ 10 ಕೆರೆಗಳಿಗೆ ನೀರು ತುಂಬಿಸಲು 85 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಸಿದ್ದಪಡಿಸಲಾಗಿತ್ತು. ತುಂಗಭದ್ರ ಜಲಾಶಯ ಹಿನ್ನೀರಿನಿಂದ ನೀರನ್ನು ಕೊಟ್ಟರೂ ಇತರೆ 11 ಕೆರೆಗಳಿಗೆ ತುಂಬಿಸಲು ಬಜೆಟ್ನಲ್ಲಿ ಅನುಮೋದಿಸಲಾಗಿತ್ತು. ಆದರೆ ಇದಕ್ಕೆ ಆಡಳಿತಾತ್ಮಕ ಅನುದಾನ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
ಈಗ ನಮ್ಮ ಸರ್ಕಾರ ಇದನ್ನು ಕೈಗೆತ್ತಿಕೊಂಡಿದ್ದು, ಅಂದಾಜು 389 ಕೋಟಿ ಬೇಕಾಗುತ್ತದೆ. 379 ಕೋಟಿ ಮೊತ್ತದ ವಿಸ್ತೃತ ಯೋಜನೆಯನ್ನು ಸಿದ್ದಪಡಿಸಿ ಕರ್ನಾಟಕ ನೀರಾವರಿ ಅಂದಾಜು ಸಮಿತಿಗೆ ಕಳುಹಿಸಲಾಗಿದೆ. ಸಮಿತಿ ನೀಡುವ ವರದಿ ಹಾಗೂ ಹಣಕಾಸು ಲಭ್ಯತೆ ನೋಡಿಕೊಂಡು ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
