ಬೆಂಗಳೂರು, ಜ. 5- ಈ ಹಿಂದಿನ ಕೊರೊನಾ ಲಾಕ್ಡೌನ್ನಿಂದಾಗಿ ಚಿತ್ರರಂಗವು ಬಹಳಷ್ಟು ನಷ್ಟವನ್ನು ಅನುಭವಿಸಿದ್ದು ಈಗ ತಾನೇ ಚಿತ್ರರಂಗ ಮತ್ತೆ ಲಯ ಕಂಡುಕೊಳ್ಳುತ್ತಿದೆ ಇಂತಹ ಸಂದರ್ಭದಲ್ಲಿ ಮತ್ತೆ ವೀಕೆಂಡ್ ಲಾಕ್ ಡೌನ್ ಮಾಡಲು ಸರ್ಕಾರ ಮುಂದಾಗಿರುವುದರಿಂದ ಚಿತ್ರ ಮಂದಿ ಮತ್ತೆ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಕರ್ನಾಟಕ ವಾಣಿಜ್ಯಮಂಡಳಿ ಅಧ್ಯಕ್ಷ ಕೆ.ಜಯರಾಜ್ ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಚಿತ್ರಮಂದಿರಗಳಲ್ಲಿ ಶೇ. 50ರ ಅನುಪಾತದಲ್ಲಿ ಒಪ್ಪಿಗೆ ನೀಡಿರುವುದು ಜನರ ಆರೋಗ್ಯ ದೃಷ್ಟಿಯಿಂದ ಸರಿಯಾದ ಕ್ರಮವಾಗಿದೆ ಆದರೆ ವೀಕೆಂಡ್ ಲಾಕ್ಡೌನ್ ಮಾಡುವ ನಿರ್ಧಾರದಿಂದ ಚಿತ್ರರಂಗಕ್ಕೆ ಭಾರೀ ನಷ್ಟ ಉಂಟಾಗಲಿದೆ.
ಕನ್ನಡ ಚಿತ್ರರಂಗದಲ್ಲಿ ಶುಕ್ರವಾರ ಹೊಸ ಚಿತ್ರಗಳು ಬಿಡುಗಡೆ ಆಗುತ್ತವೆ ಆದರೆ ಸಿನಿಮಾ ಬಿಡುಗಡೆಗೊಂಡ ನಂತರವೇ ದಿನವೇ ಅಂದರೆ ಶನಿವಾರ ಹಾಗೂ ಭಾನುವಾರಗಳಂದು ಚಿತ್ರಮಂದಿರಗಳು ಪ್ರದರ್ಶನ ನಿಲ್ಲಿಸುವುದರಿಂದ ಹೊಸ ಚಿತ್ರಗಳ ಮೇಲೆಯೂ ಪರಿಣಾಮ ಬೀರಲಿದೆ ಎಂದು ಅವರು ಹೇಳಿದರು.
