ಬೆಳಗಾವಿ,ಜ.29- ಮಧ್ಯಪ್ರದೇಶದ ಮೊರೆನಾ ಬಳಿ ಯುದ್ಧ ವಿಮಾನ ಪತನಗೊಂಡು ಹುತಾತ್ಮರಾದ ಬೆಳಗಾವಿ ನಗರದ ವಿಂಗ್ ಕಮಾಂಡರ್ ಹನುಮಂತರಾವ್ ರೇವಣಸಿದ್ದಪ್ಪ ಸಾರಥಿ ಅವರ ಪಾರ್ಥಿವ ಶರೀರಕ್ಕೆ ರಾಜ್ಯ ಸರಕಾರದ ಪರವಾಗಿ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ, ಸಿಇಓ ಎಚ್.ವಿ.ದರ್ಶನ್ ಗೌರವ ವಂದನೆ ಸಲ್ಲಿಸಿದರು.
ಮಧ್ಯಪ್ರದೇಶದ ಗ್ವಾಲಿಯರ್ ವಾಯುನೆಲೆಯಿಂದ ಸಿಡಿದಿದ್ದ ಯುದ್ಧಕೌಶಲ್ಯ ವಿಮಾನಗಳಾದ ಸುಖೋಯ್ ಮತ್ತು ಮಿರಾಜ್ ಪರಸ್ಪರ ಢಿಕ್ಕಿ ಹೊಡೆದದ್ದರಿಂದ ಎರಡೂ ವಿಮಾನಗಳು ಪತನಗೊಂಡು ಇಬ್ಬರು ಪೈಲೆಟ್ಗಳು ಹುತಾತ್ಮರಾಗಿದ್ದರು.

ಈ ಪೈಕಿ ಬೆಳಗಾವಿ ನಗರದ ಗಣೇಶಪುರ ಪ್ರದೇಶದ ಸೈನಿಕ ಕಾಲೋನಿಯ ವಿಂಗ್ ಕಮಾಂಡರ್ ದಾರುಣ ಘಟನೆಯಲ್ಲಿ ಅಸುನೀಗಿದ್ದರು. ಇಂದು ಮಧ್ಯಾಹ್ನ ಗ್ವಾಲಿಯರ್ನಿಂದ ವಿಶೇಷ ವಿಮಾನದಲ್ಲಿ ಬಂದಿಳಿದ ಪಾರ್ಥಿವ ಶರೀರಕ್ಕೆ ಸರಕಾರ, ಜಿಲ್ಲಾಡಳಿತ ಹಾಗೂ ಬೆಳಗಾವಿ ಏರಪೋರ್ಸ್ ಶಾಲೆ ವತಿಯಿಂದ ಗೌರವ ಸಲ್ಲಿಸಲಾಯಿತು. ನಂತರ ಗಣೇಶಪುರದ ಅವರ ಸ್ವಗೃಹದಲ್ಲಿ 20 ನಿಮಿಷ ಪಾರ್ಥೀವ ಶರೀರ ದರ್ಶನಕ್ಕಿರಿಸ ಲಾಗಿತ್ತು.
ನಂತರ ಸಕಲ ಸರಕಾರಿ ಗೌರವಗಳೊಂದಿಗೆ ವಿದಾಯ ಹೇಳಲಾಯಿತು.
ನಾಗರಿಕ ಪೊಲೀಸ್ ಹಾಗೂ ಸೈನ್ಯದ ಉನ್ನತಾಕಾರಿಗಳು, ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಸಂಸದೆ ಮಂಗಲಾ ಅಂಗಡಿ, ಜನಪ್ರತಿನಿಗಳು ಹಾಗೂ ಸಾವಿರಾರು ಜನ ಜಮಾಯಿಸಿದ್ದರು.
ಶ್ರದ್ಧಾಂಜಲಿ:
ಗ್ವಾಲಿಯರ್ ನಲ್ಲಿ ತರಬೇತಿ ಕಾರ್ಯಾಚರಣೆಯಲ್ಲಿದ್ದ ಯುದ್ಧ ವಿಮಾನ ಪತನದಿಂದ ಬೆಳಗಾವಿಯ ವಿಂಗ್ ಕಮಾಂಡರ್ ಶ್ರೀ ಹನುಮಂತರಾವ್ ಸಾರಥಿ ಅವರು ನಿಧನರಾದ ವಿಷಯ ತಿಳಿದು ತುಂಬ ದುಃಖವಾಯಿತು ಎಂದು ಜಿಲ್ಲಾಕಾರಿ ನಿತೇಶ್ ಪಾಟೀಲ ಸಂತಾಪ ವ್ಯಕ್ತಪಡಿಸಿದರು.
ಹೆಮ್ಮೆಯ ಯೋಧ ಹನುಮಂತರಾವನನ್ನು ಕಳೆದುಕೊಂಡಿದ್ದು ದೇಶಕ್ಕೆ ತುಂಬಲಾರದ ನಷ್ಟ. ಅವರ ಕುಟುಂಬದ ದುಃಖದಲ್ಲಿ ನಾನು ಕೂಡ ಭಾಗಿಯಾಗಿದ್ದೇನೆ ಎಂದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಸ್ಥರಿಗೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
Wing Commander Hanumanth Rao