ಬೆಂಗಳೂರು,ಫೆ.10- ಸೇಡಂ ಕ್ಷೇತ್ರದ ಶಾಸಕರ ವಿರುದ್ಧ ಸಂತ್ರಸ್ತೆ ನೀಡಿರುವ ದೂರಿನ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಎಸಿಪಿಯೊಬ್ಬರಿಗೆ ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯ ರಾವ್ ಆದೇಶಿಸಿದ್ದಾರೆ. ಈ ಸಂಬಂಧ ಸಂಪೂರ್ಣ ವರದಿಯನ್ನು ಐದ ದಿನದೊಳಗೆ ಸಲ್ಲಿಸುವಂತೆ ಅವರು ಸೂಚಿಸಿದ್ದಾರೆ.
ಕಲಬುರಗಿ ಜಿಲ್ಲೆ ಸೇಡಂ ಕ್ಷೇತ್ರದ ಶಾಸಕ ರಾಜ್ಕುಮಾರ್ ಪಾಟೀಲ್ ತೇಲ್ಕೂರ್ ಹಲವಾರು ವರ್ಷಗಳಿಂದ ನನ್ನ ಜೊತೆ ಸಲುಗೆಯಿಂದ ಇದ್ದು ಆ ಸಂದರ್ಭದಲ್ಲಿ ಗಂಡು ಮಗು ಜನಿಸಿತು. ಈಗ ಆತನಿಗೆ 14 ವರ್ಷ. ತೇಲ್ಕೂರ್ನಿಂದ ನನಗೆ ಮತ್ತು ಮಗನಿಗೆ ಅನ್ಯಾಯವಾಗಿದೆ ಎಂದು ಮಹಿಳೆಯೊಬ್ಬರು ನ್ಯಾಯಕ್ಕಾಗಿ ಹಿರಿಯ ಪೊಲೀಸ್ ಅಧಿಕಾರಿಯನ್ನು ಭೇಟಿ ಮಾಡಿದ್ದಾರೆ.
ಕಳೆದ ಸೋಮವಾರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿ ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತರಿಗೆ ಶಾಸಕರ ವಿರುದ್ಧ ದೂರು ನೀಡಿದ್ದಾರೆ.
# ಪೊಲೀಸರ ವಿರುದ್ಧ ಆರೋಪ:
ಪೊಲೀಸರು ನನ್ನನ್ನು ಒತ್ತಾಯವಾಗಿ ವಿಧಾನಸೌಧ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಕಾಂಗ್ರೆಸ್ನ ಪ್ರಚೋದನೆಯಿಂದ ಶಾಸಕರ ವಿರುದ್ಧ ಆರೋಪ ಮಾಡುತ್ತಿರುವುದಾಗಿ ಬರೆದುಕೊಂಡು, ಮಾಧ್ಯಮಗಳ ಬಳಿಯೂ ಹೀಗೆಯೇ ಹೇಳಿಕೆ ನೀಡಬೇಕು.
ನಿನಗೆ ಒಳ್ಳೆಯದಾಗುತ್ತೆ ಎಂದು ಒತ್ತಾಯಿಸಿದರೆಂದು ಸಂತ್ರಸ್ತೆ ಹೆಚ್ಚುವರಿ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದಾರೆ. ಈ ಬಗ್ಗೆಯೂ ವಿಚಾರಣೆ ನಡೆಸಿ ವರದಿ ನೀಡುವಂತೆ ಎಸಿಪಿ ಅವರಿಗೆ ಹೆಚ್ಚುವ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.
