Home Blog Page 1946

ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಸುಳಿವು ನೀಡಿತ್ತು ಅಮೆರಿಕದ ಗುಪ್ತಚರ ಇಲಾಖೆ

ನವದೆಹಲಿ, ಸೆ.24- ಕೆನಡಾದಲ್ಲಿ ಖಲಿಸ್ತಾನ ಟೈಗರ್ ಫೋರ್ಸ್ ನ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ನನ್ನು ಯಾವುದೇ ಸಂದರ್ಭದಲ್ಲೂ ಹತ್ಯೆ ಮಾಡಬಹುದು ಎಂದು ಅಲ್ಲಿನ ಸರ್ಕಾರದ ಅಮೆರಿಕದ ಗುಪ್ತಚರ ವಿಭಾಗದ ಅಧಿಕಾರಿಗಳು ಎಚ್ಚರಿಕೆ ಕೊಟ್ಟಿದ್ದರು.
ಹರ್ದೀಪ್ ಸಿಂಗ್ ನಿಜ್ಜರ್ ಮೇಲೆ ಕೆಲವರು ಕಣ್ಣಿಟ್ಟಿದ್ದಾರೆ.

ಆತನನ್ನು ಎದುರಾಳಿ ತಂಡಗಳು ಯಾವುದೇ ಸಂದರ್ಭದಲ್ಲೂ ಹತ್ಯೆ ಮಾಡಬಹುದು. ನಾವು ಇದನ್ನು ಖಚಿತವಾದ ಮಾಹಿತಿ ಮೇರೆಗೆ ಹೇಳುತ್ತಿದ್ದೇವೆ ಎಂದು ಯುಎಸ್ ಗುಪ್ತಚರ ವಿಭಾಗ ಕೆನಡಾಕ್ಕೆ ಸಲಹೆ ಕೊಟ್ಟಿತ್ತು.ಆದರೆ ಕೆನಡಾ ಸರ್ಕಾರ ಇದನ್ನು ನಿರ್ಲಕ್ಷಿಸಿದ್ದರಿಂದಲೇ ಹರ್ದೀಪ್ ಸಿಂಗ್ ನಿಜ್ಜರ್ ಭೀಕರವಾಗಿ ಹತ್ಯೆಗೀಡಾಗಿದ್ದಾರೆ. ಕೆನಡಾ ಸರ್ಕಾರದ ಪ್ರಮಾದವು ಇದೆ ಎಂದು ಗುಪ್ತಚರ ವಿಭಾಗ ಹೇಳಿದೆ.

ಭಾರತ-ಕೆನಡಾ ಬಿಕ್ಕಟ್ಟಿನಿಂದ ಅಂತರ ಕಾಪಾಡಿಕೊಂಡ ಅಮೆರಿಕ

ನ್ಯೂಯಾರ್ಕ್ ಟೈಮ್ಸ್ ಮಾಡಿರುವ ಸುದ್ದಿಯಂತೆ ಭಾರತದ ಏಜೆನ್ಸಿಗಳು ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ನೇರವಾಗಿ ಶಾಮೀಲಾಗಿವೆಯೋ ಇಲ್ಲವೋ ಎಂಬುದು ತನಿಖೆಯಿಂದ ಗೊತ್ತಾಗುತ್ತದೆ. ಉಭಯ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಸಂಬಂಧ ಹಾಳಾಗಬಾರದೆಂಬುದು ತಮ್ಮ ಉದ್ದೇಶವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ನೇರವಾಗಿ ಭಾಗಿಯಾಗಿರುವುದಕ್ಕೆ ಸಮರ್ಪಕವಾದ ದಾಖಲೆಗಳು ಇಲ್ಲ. ಕೆನಡಾ ಸರ್ಕಾರ ಯಾವ ಆಧಾರದ ಮೇಲೆ ಆರೋಪ ಮಾಡಿದೆ ಎಂಬುದು ನಮಗೂ ತಿಳಿದಿಲ್ಲ. ಎರಡು ರಾಷ್ಟ್ರಗಳ ನಡುವೆ ಪರಿಸ್ಥಿತಿಯನ್ನು ತಿಳಿಗೊಳಿಸಲು ನಾವು ಪ್ರಯತ್ನಿಸುತ್ತೇವೆ. ಯಾವುದೇ ರಾಷ್ಟ್ರ ಉದ್ವಿಗ್ನಗೊಳಿಸುವ ಕೆಲಸವನ್ನು ಮಾಡಬಾರದು ಎಂದು ಅಮೆರಿಕಾದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮದ್ಯಭಾಗ್ಯ ನೀಡಿ ಕರ್ನಾಟಕವನ್ನು ‘ಕುಡುಕರ ತೋಟ’ ಮಾಡುತ್ತಿದೆ ಧನಪಿಶಾಚಿ ಸರ್ಕಾರ : ಹೆಚ್ಡಿಕೆ ಆಕ್ರೋಶ

ಬೆಂಗಳೂರು, ಸೆ.24- ಒಂದೆಡೆ ಮನೆಮನೆಗೂ ಗೃಹಜ್ಯೋತಿ ಎಂದು ಹೇಳಿ, ಈಗ ಮನೆಮನೆಗೂ ಮದ್ಯಭಾಗ್ಯ ನೀಡಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ. ಸರ್ಕಾರವು ಧನಪಿಶಾಚಿ ಅವತಾರವೆತ್ತಿ ಅಬಕಾರಿ ಆದಾಯ ಹೆಚ್ಚಿಸಿಕೊಳ್ಳಲು ಈಗ ಮದ್ಯ ಸಮಾರಾಧನೆಗೆ ಶ್ರೀಕಾರ ಹಾಡಿದೆ. ಇದು 6ನೇ ಗ್ಯಾರಂಟಿ ಎಂದು ಅವರು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಅವರು ವ್ಯಂಗ್ಯವಾಡಿದ್ದಾರೆ.

ಕರ್ನಾಟಕ ರಾಜ್ಯವು ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರ ಐಟಿ-ಬಿಟಿಗೆ ಪ್ರಸಿದ್ಧಿ. ಇನ್ನು ಮುಂದೆ ಇದು ಬದಲಾಗಬಹುದು. ಕಾರಣವಿಷ್ಟೇ, ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಕುಡುಕರ ತೋಟವನ್ನಾಗಿ ಮಾಡಲಿದೆ ಎಂದು ಅವರು ಆರೋಪಿಸಿದ್ದಾರೆ. ಚುನಾವಣೆಗೆ ಮುನ್ನ ಸರ್ವ ಜನಾಂಗದ ಶಾಂತಿಯ ತೋಟ ಎನ್ನುತ್ತಿದ್ದರು, ಗೆದ್ದ ನಂತರ ಕರ್ನಾಟಕ ಕುಡುಕರ ತೋಟ ಎನ್ನುತ್ತಿದ್ದಾರೆ. ಇದು ರಾಜ್ಯ ಕಾಂಗ್ರೆಸ್ ಸರ್ಕಾರದ ಸಂಕಲ್ಪ ಎಂದು ಅವರು ಟೀಕಿಸಿದ್ದಾರೆ.

ಯೋಜನೆಗಳ ಹೆಸರಲ್ಲಿ ಕೊಳ್ಳೆ ಹೊಡೆಯುವ ಹುನ್ನಾರ ಕಾಂಗ್ರೆಸ್ ಸರ್ಕಾರದ್ದು. ಖೊಟ್ಟಿ ಗ್ಯಾರಂಟಿಗಳಿಂದ ಜನರನ್ನು ಯಾಮಾರಿಸಿದ್ದು ಸಾಲದೆಂಬಂತೆ ಪ್ರತೀ ಪಂಚಾಯಿತಿಯಲ್ಲೂ ಮದ್ಯದ ಅಂಗಡಿ ತೆರೆಯಲು ಸಿದ್ಧತೆ ನಡೆಸಿರುವುದು ನಾಚಿಕೆಗೇಡು ಎಂದಿದ್ದಾರೆ.
ಅಕ್ಕಿ, ಬೇಳೆ, ದವಸ ಧಾನ್ಯ, ಹಣ್ಣು ತರಕಾರಿ, ಹಾಲು-ಮೊಸರು ಸಿಗುವ ಸೂಪರ್ ಮಾರುಕಟ್ಟೆಗಳಲ್ಲೂ ಮುಕ್ತವಾಗಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವುದು ಅಸಹ್ಯದ ಪರಮಾವ. ಇದೇನಾ ಸಮಾಜವಾದ ಎಂದು ಅವರು ಪ್ರಶ್ನಿಸಿದ್ದಾರೆ.

ಗ್ಯಾರಂಟಿ ಸರ್ಕಾರದಲ್ಲಿ ಹುದ್ದೆ ಗುದ್ದಾಟ, ರಾಜಣ್ಣ ವಿರುದ್ಧ ಡಿಕೆಶಿ ಬೆಂಬಲಿಗರ ಆಕ್ರೋಶ

3,000 ಜನಸಂಖ್ಯೆಯುಳ್ಳ ಪ್ರತೀ ಪಂಚಾಯಿತಿ ವ್ಯಾಪ್ತಿಯಲ್ಲಿ ಬಾರ್‍ತೆಗೆದು ಮನೆಹಾಳು ಮಾಡಲಿದೆ ಸರ್ಕಾರ. ಸುಳ್ಳು ಗ್ಯಾರಂಟಿಗಳನ್ನು ನಂಬಿ ಮೋಸ ಹೋದ ಮಹಿಳೆಯರಿಗೆ ಕರ್ನಾಟಕದಲ್ಲಿ ಕೇಡುಗಾಲ ಶುರುವಾಗಿದೆ. ಅವರ ಸೌಭಾಗ್ಯಕ್ಕೆ ಎದುರಾಗಿದೆ ಸಂಚಕಾರ. ಇದು ಮನೆಹಾಳು ಸರ್ಕಾರ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ನಾರಿಯರಿಗೆ ಶಕ್ತಿ ತುಂಬುತ್ತೇವೆ ಎಂದ ಸರ್ಕಾರ, ಈಗ ಅವರ ಬಾಳಿಗೆ ಬೆಂಕಿ ಹಾಕುತ್ತಿದೆ. ಗೃಹಲಕ್ಷ್ಮೀ ಎಂದ ಸರ್ಕಾರ ಅವರ ಬಾಳಿಗೆ ಗ್ರಹಣವಾಗಿದೆ. ಗೃಹಜ್ಯೋತಿ ಎಂದ ಸರ್ಕಾರ ಅವರ ಬಾಳಜ್ಯೋತಿಯನ್ನೇ ನಂದಿಸುತ್ತಿದೆ. ಅನ್ನಭಾಗ್ಯ ಎಂದ ಸರ್ಕಾರ, ಈಗ ಮದ್ಯಭಾಗ್ಯ ಎನ್ನುತ್ತಿದೆ ಎಂದು ಅವರು ಟೀಕಾ ಪ್ರಹಾರ ನಡೆಸಿದ್ದಾರೆ.

ಭಾರತ-ಕೆನಡಾ ಬಿಕ್ಕಟ್ಟಿನಿಂದ ಅಂತರ ಕಾಪಾಡಿಕೊಂಡ ಅಮೆರಿಕ

ನ್ಯೂಯಾರ್ಕ್, ಸೆ.24- ಭಾರತ ಮತ್ತು ಕೆನಡಾ ನಡುವೆ ಉಂಟಾಗಿರುವ ರಾಜತಾಂತ್ರಿಕ ಬಿಕ್ಕಟ್ಟಿನಿಂದ ಸುರಕ್ಷಿತ ಅಂತರ ಕಾಪಾಡಿಕೊಳ್ಳಲು ಅಮೆರಿಕ ಮುಂದಾಗಿದೆ.ಕೆನಡಾದ ಪ್ರಜೆ ಎಂದು ಹೇಳಲಾಗುತ್ತಿರುವ ಖಲಿಸ್ತಾನ ಟೈಗರ್ ಫೋರ್ಸ್ ನ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಉಭಯ ರಾಷ್ಟ್ರಗಳ ನಡುವೆ ಸಂಬಂಧ ವಿಕೋಪಕ್ಕೆ ತಿರುಗಿದೆ.

ಈ ಸಂದರ್ಭದಲ್ಲಿ ದೊಡ್ಡಣ್ಣನ ಪಾತ್ರ ನಿರ್ವಹಿಸುತ್ತಿರುವ ಅಮೆರಿಕ ಭಾರತದ ಜೊತೆ ನಿಷ್ಠುರವಾಗಿ ನಡೆದುಕೊಳ್ಳಲು ಹಿಂದೇಟು ಹಾಕುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಆತ್ಮೀಯ ಸಂಬಂಧ ಹೊಂದಿರುವ ಅಧ್ಯಕ್ಷ ಜೋಬಿಡನ್ ಸರ್ಕಾರ ವಿವಾದದಿಂದ ಸಾಧ್ಯವಾದಷ್ಟು ಹೊರಗುಳಿಯಲು ಪ್ರಯತ್ನಿಸುತ್ತಿದೆ ಎಂದು ತಿಳಿದುಬಂದಿದೆ.

ಭಾರತ ಮತ್ತು ಅಮೆರಿಕ ನಡುವೆ ಎಲ್ಲಾ ಕ್ಷೇತ್ರಗಳಲ್ಲೂ ಸಾಕಷ್ಟು ವ್ಯಾಪಾರ ವಹಿವಾಟು ನಡೆಯುತ್ತಿದೆ. ಇತ್ತೀಚಿನ ದಶಕಗಳಲ್ಲಿ ಉಭಯ ರಾಷ್ಟ್ರಗಳು ಭಾಯಿ ಭಾಯಿ ಎನ್ನುವಷ್ಟು ಹತ್ತಿರವಾಗಿವೆ. ಇಂತಹ ವೇಳೆ ಕೆನಡಾಕ್ಕಾಗಿ ಭಾರತದ ಸ್ನೇಹವನ್ನು ಕಳೆದುಕೊಳ್ಳಬಾರದೆಂದು ಅಮೆರಿಕಾದ ರಾಜತಾಂತ್ರಕ ಅಧಿಕಾರಿಗಳು ಜೋಬಿಡನ್‍ಗೆ ಸಲಹೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಗ್ಯಾರಂಟಿ ಸರ್ಕಾರದಲ್ಲಿ ಹುದ್ದೆ ಗುದ್ದಾಟ, ರಾಜಣ್ಣ ವಿರುದ್ಧ ಡಿಕೆಶಿ ಬೆಂಬಲಿಗರ ಆಕ್ರೋಶ

ದಕ್ಷಿಣ ಏಷ್ಯಾದಲ್ಲಿ ಚೀನಾದ ಪ್ರಾಬಲ್ಯವನ್ನು ಕುಗ್ಗಿಸಬೇಕಾದರೆ ಭಾರತದ ಜೊತೆ ನಾವು ನಿಲ್ಲಲೇ ಬೇಕು. ಹತ್ಯೆಗೀಡಾದ ಹರ್ದೀಪ್ ಸಿಂಗ್ ನಿಜ್ಜರ್ ಕೆನಡಾದ ಪ್ರಜೆ ಎಂದು ಅಲ್ಲಿನ ಸರ್ಕಾರ ಹೇಳುತ್ತಿದೆ. ಆದರೆ ಆತ ಮೋಸ್ಟ್ ವಾಂಟೆಡ್ ಉಗ್ರ ಎಂದು ಭಾರತ ಹೇಳಿದೆ. ಸಾಲದ್ದಕ್ಕೆ ನಮ್ಮ ಬಳಿ ಆರೋಪವನ್ನು ಪುಷ್ಠೀಕರಿಸುವ ಸಾಕ್ಷ್ಯಾಧಾರಗಳಿವೆ ಎಂದು ಹೇಳುತ್ತಿದೆ.

ಇಂತಹ ಸಂದರ್ಭದಲ್ಲಿ ನಾವು ವಿವಾದದಿಂದ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಬೇಕು. ಉಭಯ ರಾಷ್ಟ್ರಗಳ ನಡುವೆ ಪರಿಸ್ಥಿತಿ ಕೈಮೀರದಂತೆ ತಿಳಿ ಹೇಳಬೇಕು. ರಾಜತಾಂತ್ರಿಕ ಮಾರ್ಗದಲ್ಲೇ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸಲಹೆ ನೀಡಬಹುದೇ ಹೊರತು ವ್ಯಾಪಾರ, ವಾಣಿಜ್ಯವಹಿವಾಟು ಉದ್ದೇಶದಿಂದ ಭಾರತದ ಜೊತೆ ನಿಷ್ಠುರವಾಗಿ ನಡೆದುಕೊಳ್ಳುವುದು ಅಷ್ಟೊಂದು ಸಮಂಜಸವಲ್ಲ ಎಂದು ಸಿಗ್ನಂ ಗ್ಲೋಬಲ್ ಅಡ್ವೈಸರ್ ಸಂಸ್ಥಾಪಕರು ಹೇಳಿದ್ದಾರೆ.

ಉಭಯ ರಾಷ್ಟ್ರಗಳ ನಡುವೆ ಸಾರ್ವಭೌಮತ್ವ ಪ್ರಶ್ನೆ ಎದುರಾಗಿದೆ. ಅಮೆರಿಕ ನೇರವಾಗಿ ಮಧ್ಯಸ್ಥಿಕೆ ವಹಿಸಿಕೊಂಡರೆ ಭಾರತದ ಸಾತ್ವಿಕ ಆಕ್ರೋಶಕ್ಕೆ ತುತ್ತಾಗಬಹುದು. ಇದು ಅತ್ಯಂತ ಸೂಕ್ಷ್ಮವಾದ ವಿಷಯವಾಗಿರುವುದರಿಂದ ಜೋಬಿಡನ್ ಸರ್ಕಾರ ಅತ್ಯಂತ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಹೇಳಿದ್ದಾರೆ.

ಗ್ಯಾರಂಟಿ ಸರ್ಕಾರದಲ್ಲಿ ಹುದ್ದೆ ಗುದ್ದಾಟ, ರಾಜಣ್ಣ ವಿರುದ್ಧ ಡಿಕೆಶಿ ಬೆಂಬಲಿಗರ ಆಕ್ರೋಶ

ಬೆಂಗಳೂರು, ಸೆ.24- ಕಾಂಗ್ರೆಸ್‍ನಲ್ಲಿ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ವಿವಾದ ಮತ್ತಷ್ಟು ತೀವ್ರಗೊಳ್ಳುತ್ತಿದ್ದು, ರಾಜಣ್ಣ ಅವರ ವಿರುದ್ಧ ಡಿ.ಕೆ.ಶಿವಕುಮಾರ್ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ದಾವಣಗೆರೆಯ ಚನ್ನಗಿರಿ ಶಾಸಕ ಬಸವರಾಜು ವಿ.ಶಿವಗಂಗಾ ಅವರು ರಾಜಣ್ಣ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಸಮುದಾಯವಾರು ಆದ್ಯತೆ ನೀಡಬೇಕು ಎಂದಾದರೆ ಉಪಮುಖ್ಯಮಂತ್ರಿಗಳನ್ನು ಹೇಳಬೇಕು ಎಂದಾದರೆ ನೂರಾರು ಮಂದಿಯನ್ನು ಉಪಮುಖ್ಯಮಂತ್ರಿಗಳನ್ನು ಮಾಡಬೇಕಾಗುತ್ತದೆ. ಹೈಕಮಾಂಡ್ ಡಿ.ಕೆ.ಶಿವಕುಮಾರ್ ಅವರ ಪಕ್ಷ ನಿಷ್ಠತೆ, ಬದ್ಧತೆ ಸಂಘಟನಾತ್ಮಕ ಶಕ್ತಿಯನ್ನು ಪರಿಗಣಿಸಿ ಉಪಮುಖ್ಯಮಂತ್ರಿ ಮಾಡಲಾಗಿದೆ.

ಈಗ ರಾಜಣ್ಣ ಅವರು ವಾಲ್ಮೀಕಿ ಸಮುದಾಯದವರು ಹೆಚ್ಚಿದ್ದಾರೆ ಎಂಬ ಕಾರಣಕ್ಕೆ ಉಪಮುಖ್ಯಮಂತ್ರಿ ಹುದ್ದೆ ಕೇಳುತ್ತಿದ್ದಾರೆ. ಹಾಗೆ ನೋಡಿದರೆ ರಾಜ್ಯದಲ್ಲಿ ಲಿಂಗಾಯಿತ ಸಮುದಾಯದವರು ಅತೀ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ನಮಗೆ ಮುಖ್ಯಮಂತ್ರಿ ಹುದ್ದೆಯೇ ನೀಡಬಾಕಾಗುತ್ತದೆ ಎಂದು ಪ್ರತಿಪಾದಿಸಿದರು.

ಗೋಮಾಂಸ ಸಾಗಿಸುತ್ತಿದ್ದ ವಾಹನಕ್ಕೆ ಬೆಂಕಿಯಿಟ್ಟು ಆಕ್ರೋಶ

ಜಾತಿವಾರು ಉಪಮುಖ್ಯಮಂತ್ರಿ ಹುದ್ದೆ ಹಂಚಿಕೆ ಸರಿಯಲ್ಲ. ರಾಜಣ್ಣ ಅವರ ಹೇಳಿಕೆ ಅನಗತ್ಯ. ಹಿರಿಯರೂ, ಸಚಿವರೂ ಆಗಿರುವ ರಾಜಣ್ಣ ಈ ರೀತಿಯ ಗೊಂದಲದ ಹೇಳಿಕೆ ನೀಡಬಾರದಿತ್ತು ಎಂದು ಅಸಮಾಧಾನ ಹೊರಹಾಕಿದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಾತಿವಾರು ಆದ್ಯತೆ ನೀಡುವ ಸಲುವಾಗಿ ಪರಿಶಿಷ್ಟ ಜಾತಿ, ಮುಸ್ಲಿಂ ಮತ್ತು ಲಿಂಗಾಯಿತ ಸಮುದಾಯಕ್ಕೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ ನೀಡಿದ್ದರು.

ಅದರ ಬೆನ್ನಲ್ಲೇ ಸಚಿವರಾದ ಡಾ.ಜಿ.ಪರಮೇಶ್ವರ್, ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್, ಶರಣಗೌಡ ದರ್ಶನಾಪುರ್, ಶಾಸಕರಾದ ಬಸವರಾಜರಾಯರೆಡ್ಡಿ ಮತ್ತಿತರರು ರಾಜಣ್ಣ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು.ಬಸವರಾಜರಾಯರೆಡ್ಡಿ ಒಂದು ಹೆಜ್ಜೆ ಮುಂದೆ ಹೋಗಿ ಜಾತಿವಾರು ಪ್ರಾದೇಶಿಕವಾರು ಅವಕಾಶಗಳನ್ನು ನೀಡುತ್ತಿರುವುದು 3 ಬದಲು 5 ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಬೇಕು ಎಂದು ಸಲಹೆ ನೀಡಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪ್ರಾಬಲ್ಯ ಕುಗ್ಗಿಸಲು ಈ ರೀತಿಯ ಚರ್ಚೆ ಹುಟ್ಟುಹಾಕಲಾಗಿದೆ ಎಂಬ ಆಕ್ಷೇಪಗಳಿವೆ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವ ಡಿ.ಕೆ.ಶಿವಕುಮಾರ್ ಅವರು ತಮ್ಮ ವಿರುದ್ಧ ತೆರೆಮರೆಯಲ್ಲಿ ಮಸಲತ್ತು ನಡೆಸುತ್ತಿರುವವರಿಗೆ ಟಾಂಗ್ ನೀಡಲು ತಮ್ಮದೇ ಆದ ಕಾರ್ಯಸೂಚಿಯನ್ನು ರೂಪಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ನಿಂತಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಡಿಕ್ಕಿ – ಇಬ್ಬರು ಪ್ರಯಾಣಿಕರ ಸಾವು

ರಾಯಚೂರು,ಸೆ.24- ರಸ್ತೆ ಬದಿ ನಿಂತಿದ್ದ ಲಾರಿಗೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಪ್ರಯಾಣಿಕರು ಮೃತಪಟ್ಟಿರುವ ಘಟನೆ ಸಿಂಧನೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ. ಸುದೀಪ್(18) ಮತ್ತು ರಾಮಪ್ಪ (60) ಮೃತಪಟ್ಟ ಪ್ರಯಾಣಿಕರು.

ಅಪಘಾತದಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಈ ಪೈಕಿ ಗಂಭೀರವಾಗಿ ಗಾಯಗೊಂಡಿರುವ ಐವರು ಪ್ರಯಾಣಿಕರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಉಳಿದ ಗಾಯಾಳು ಪ್ರಯಾಣಿಕರಿಗೆ ರಾಯಚೂರಿನ ರಿಮ್ಸ್ ಹಾಗೂ ಸಿಂಧನೂರು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ರಾಯಚೂರು ಜಿಲ್ಲೆ ಸಿಂಧನೂರು ಬಳಿ ರಾತ್ರಿ ರಸ್ತೆ ಬದಿ ಯಾವುದೇ ಸಿಗ್ನಲ್ ಲೈಟ್ ಹಾಕದೆ ಲಾರಿ ನಿಲ್ಲಿಸಲಾಗಿದೆ. ಈ ಮಾರ್ಗದಲ್ಲಿ ಹೋಗುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಚಾಲಕನಿಗೆ ಲಾರಿ ನಿಲ್ಲಿಸಿರುವುದು ಗಮನಕ್ಕೆ ಬಾರದೆ ಚಾಲನೆ ಮಾಡಿಕೊಂಡು ಬಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಗೋಮಾಂಸ ಸಾಗಿಸುತ್ತಿದ್ದ ವಾಹನಕ್ಕೆ ಬೆಂಕಿಯಿಟ್ಟು ಆಕ್ರೋಶ

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಸಂಬಂಧ ಬಸ್ ಚಾಲಕ ಅಮರೇಶ್ ಹಾಗೂ ಲಾರಿ ಚಾಲಕ ನಾಗೇಶ್ವರ ರಾವ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಗೋಮಾಂಸ ಸಾಗಿಸುತ್ತಿದ್ದ ವಾಹನಕ್ಕೆ ಬೆಂಕಿಯಿಟ್ಟು ಆಕ್ರೋಶ

ದೊಡ್ಡಬಳ್ಳಾಪುರ,ಸೆ.24- ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ವಾಹನಗಳನ್ನು ತಡೆದು ವಾಹನಕ್ಕೆ ಬೆಂಕಿ ಹಚ್ಚಿ ಶ್ರೀರಾಮಸೇನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಠಿಯಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ವಾರಾಂತ್ಯದ ದಿನಗಳಲ್ಲಿ ಆಂಧ್ರದ ಹಿಂದೂಪುರದಿಂದ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಿಗೆ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುವುದು ಮಾಮೂಲು, ಇದರ ಬೆನ್ನತ್ತ ಶ್ರೀರಾಮಸೇನೆ ಕಾರ್ಯಕರ್ತರು ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದ ಬಳಿ ಗೋಮಾಂಸ ಸಾಗಾಟದ ವಾಹನಗಳನ್ನ ತಡೆದು ಪರಿಶೀಲನೆ ಮಾಡಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-09-2023)

ಐದು ವಾಹನಗಳಲ್ಲಿ ಗೋಮಾಂಸ ಪತ್ತೆಯಾಗಿದೆ. ಇದರಿಂದ ಆಕ್ರೋಶಗೊಂಡ ಕಾರ್ಯಕರ್ತರು ಕಾರಿಗೆ ಬೆಂಕಿ ಹಚ್ಚಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರುವಂತೆ ಪ್ರತಿಭಟನೆ ನಡೆಸಿದರು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ದೊಡ್ಡಬಳ್ಳಾಪುರ ಠಾಣೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ವಿಮಾನ ನಿಲ್ದಾಣ ಮಾದರಿಯಲ್ಲಿ ವಿಶ್ವದರ್ಜೆಯ ಹುಬ್ಬಳ್ಳಿ ರೈಲ್ವೆ ನಿಲ್ದಾಣ ಅಭಿವೃದ್ಧಿ : ಜೋಶಿ

ಹುಬ್ಬಳ್ಳಿ, ಸೆ.24- ನಗರದ ಶ್ರೀಸಿದ್ಧಾರೂಢ ಸ್ವಾಮಿ ರೈಲ್ವೆ ನಿಲ್ದಾಣವನ್ನು ವಿಶ್ವದರ್ಜೆಯ ರೈಲ್ವೆ ನಿಲ್ದಾಣವನ್ನಾಗಿ ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ಶ್ರೀಸಿದ್ಧಾರೂಢ ಸ್ವಾಮಿ ರೈಲ್ವೆ ನಿಲ್ದಾಣದ ಪ್ಲಾಟ್ ಫಾರಂ 1ರಲ್ಲಿ 2.08 ಕೋಟಿ ರೂ. ವೆಚ್ಚದಲ್ಲಿ ಅಳವಡಿಸಿದ ಎರಡು ಎಸ್ಕಲೇಟರ್‍ಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ರೈಲ್ವೆ ನಿಲ್ದಾಣವನ್ನು ವಿಮಾನ ನಿಲ್ದಾಣದ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಕೆಲವು ವರ್ಷಗಳ ಹಿಂದೆ ಇಲ್ಲಿ ಎರಡು ಪ್ಲಾಟ್ ಫಾರಂ ಇದ್ದವು. ಇಂದು 8 ಪ್ಲಾಟ್ ಫಾರಂಗಳನ್ನು ಕಲ್ಪಿಸಲಾಗಿದೆ ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಉನ್ನತೀಕರಣಕ್ಕೆ ನಿರಂತರವಾಗಿ ಪ್ರಯತ್ನಿಸಿದ ಪರಿಣಾಮ ಪ್ರಯಾಣಿಕರಿಗೆ ಸಾಕಷ್ಟು ಸೌಲಭ್ಯಗಳು ಕಲ್ಪಿಸಿದಂತಾಗಿದೆ ಎಂದು ಹೇಳಿದರು.

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕ ಭೇಟೆ ಆರಂಭ, ಏರ್ ರೈಫಲ್ ಶೂಟಿಂಗ್‍ನಲ್ಲಿ ಬೆಳ್ಳಿ

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮೇಯರ್ ವೀಣಾ ಬರದ್ವಾಡ, ಪಾಲಿಕೆ ಸದಸ್ಯರಾದ ಸಂತೋಷ್ ಚವ್ಹಾಣ, ರಾಜಣ್ಣ ಕೊರವಿ, ಶಿವು ಮೆಣಸಿನಕಾಯಿ, ಬಿಜೆಪಿ ಮುಖಂಡ ಪ್ರಭು ನವಲಗುಂದಮಠ, ರಂಗಾಬದ್ದಿ, ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಹರ್ಷ ಖರೆ, ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಸಂತೋಷ ಹೆಗಡೆ, ಹರಿತಾ ಎಸ್, ಇತರರು ಉಪಸ್ಥಿತರಿದ್ದರು.

ಕಾಂಗ್ರೆಸ್ ವಿರುದ್ಧ ಕೇರಳ ಸಿಎಂ ಪಿಣರಾಯಿ ವಾಗ್ದಾಳಿ

ಕಾಸರಗೋಡು, ಸೆ. 24- ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು ಸಾಮಾಜಿಕ ಮಾಧ್ಯಮವನ್ನು ಕಾಂಗ್ರೇಸ್ ನಾಯಕರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಟೀಕಿಸಿದ್ದಾರೆ. ಸಾಮಾಜಿಕ ಮಾಧ್ಯಮ ಮತ್ತು ಮುಖ್ಯವಾಹಿನಿಯ ಮಾಧ್ಯಮಗಳ ಮೂಲಕ ಜನರ ಮೇಲೆ ಪ್ರಭಾವ ಬೀರಲು ಲಕ್ಷಗಟ್ಟಲೆ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ ಮತ್ತು ವಿಶೇಷ ಏಜೆನ್ಸಿಗಳನ್ನು ರಾಜ್ಯಕ್ಕೆ ತರಲಾಗುತ್ತಿದೆ ಎಂದು ಹಿರಿಯ ಸಿಪಿಐ(ಎಂ) ನಾಯಕರೂ ಆಗಿರುವ ವಿಜಯನ್ ಆರೋಪಿಸಿದ್ದಾರೆ.

ಇಲ್ಲಿನ ಸಿಪಿಐ(ಎಂ) ನಾಯಕನ ಕುಟುಂಬದ ಮಹಿಳಾ ಸದಸ್ಯರಿಗೆ ಆನ್‍ಲೈನ್‍ನಲ್ಲಿ ಕಿರುಕುಳ ನೀಡಿದ ಆರೋಪದ ಮೇಲೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತನನ್ನು ಬಂಧಿಸಿದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಸ್ಥಾನಗಳನ್ನು ಗಳಿಸಲು ವಿಫಲರಾಗಿದ್ದರು. ಈ ಬಾರಿ, ಅವರು ತಮ್ಮ ರಾಜಕೀಯ ವಿರೋಗಳ ಹೆಸರನ್ನು ಹಾಳುಮಾಡಲು ನಕಲಿ ಸುದ್ದಿಗಳನ್ನು ಹರಡಲು ಮತ್ತು ವೈಯಕ್ತಿಕ ಮತ್ತು ಉದ್ದೇಶಿತ ಅವಮಾನಗಳನ್ನು ಎಸೆಯಲು ಸಿದ್ಧರಾಗಿದ್ದಾರೆ, ಎಂದು ತ್ರಿಕರಿಪುರದಲ್ಲಿ ಪಕ್ಷದ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ವಿಜಯನ್ ಮಿತ್ರ ಪಕ್ಷದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-09-2023)

ಅಂತಹ ಯಾವುದೇ ಆನ್‍ಲೈನ್ ವೈಯಕ್ತಿಕ ದಾಳಿಗಳಲ್ಲಿ ತೊಡಗಬೇಡಿ ಮತ್ತು ಆನ್‍ಲೈನ್ ಕಿರುಕುಳದಲ್ಲಿ ತೊಡಗಿರುವವರನ್ನು ಬಹಿರಂಗಪಡಿಸುವಂತೆ ಅವರು ಸಿಪಿಐ(ಎಂ) ಕಾರ್ಯಕರ್ತರನ್ನು ಕರೆ ನೀಡಿದರು ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಜನತೆಗೆ ತಿಳಿಸಿ ಎಂದರು.

ಇಂದು ಸಾಮಾಜಿಕ ಮಾಧ್ಯಮವನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ, ಆದರೆ, ಅದನ್ನು ಬಳಸುವಾಗ ನಾವು ನಮ್ಮ ಸಭ್ಯತೆಯನ್ನು ಕಳೆದುಕೊಳ್ಳಬಾರದು. ನಮ್ಮ ಭಾಷಣವು ಗೌರವಯುತವಾಗಿರಬೇಕು ಮತ್ತು ಯಾರನ್ನೂ ವೈಯಕ್ತಿಕವಾಗಿ ನಿಂದಿಸುವ ಅಥವಾ ಗುರಿಯಾಗಿಸುವ ಗುರಿಯನ್ನು ಹೊಂದಿರಬಾರದು ಎಂದು ವಿಜಯನ್ ಹೇಳಿದರು.

ಎಡ ನಾಯಕರ ಕುಟುಂಬದ ಮಹಿಳಾ ಸದಸ್ಯರನ್ನು ಆನ್‍ಲೈನ್‍ನಲ್ಲಿ ಅಸಭ್ಯ ರೀತಿಯಲ್ಲಿ ಟಾರ್ಗೆಟ್ ಮಾಡಲಾಗುತ್ತಿದೆ ಇದು ಸಾಮಾಜಿಕ ಮಾಧ್ಯಮವನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಿದೆ ಮತ್ತು ರಾಜಕೀಯ ವಿರೋಧಿಗಳ ಮೇಲೆ ದಾಳಿ ಮಾಡಲು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಟೀಕಿಸಿದರು.

ಕಳೆದ ಸೆ17 ರಂದು, ಸಿಪಿಐ(ಎಂ) ರಾಜ್ಯಸಭಾ ಸದಸ್ಯ ಎ ಎ ರಹೀಮ್ ಅವರ ಪತ್ನಿ ಅಮೃತಾ ಸತೀಶನ್ ಅವರು ಸೈಬರ್‍ಸ್ಪೇಸ್ ಮೂಲಕ ಕಿರುಕುಳ ನೀಡಲಾಗಿದೆ ಅವರು ಕೊಟ್ಟಾಯಂನ ಕುಂಜಾಚನ್ ಹೆಸರಿನ ಫೇಸ್‍ಬುಕ್ ಪುಟದ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕ ಭೇಟೆ ಆರಂಭ, ಏರ್ ರೈಫಲ್ ಶೂಟಿಂಗ್‍ನಲ್ಲಿ ಬೆಳ್ಳಿ

ಹ್ಯಾಂಗ್‍ಝೌ,(ಚೀನಾ) ಸೆ 24 -ಏಷ್ಯನ್ ಗೇಮ್ಸ್‍ನಲ್ಲಿ ಭಾರತ ಪದಕ ಭೇಟೆ ಆರಂಭಿಸಿದ್ದು ಇಂದು 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಮಹಿಳಾ ಶೂಟರ್ ತಂಡ ಬೆಳ್ಳಿ ಪದಕ ಗೆದ್ದು ಬೀಗಿದೆ.ಅನುಭವಿ ಮೆಹುಲಿ ಘೋಷ್, ರಮಿತಾ ಜಿಂದಾಲ್ ಮತ್ತು ಆಶಿ ಚೌಕ್ಸೆ ಅವರ ಸಂಯೋಜಿತವಾಗಿ 1,886.0 ಅಂಕ ಗಳಿಸಿ ಬೆಳ್ಳಿ ಪದಕ ಗೆದ್ದರೆ ಆತಿಥೇಯ ಚೀನಾದ ಅದ್ಭುತ 1896.6 ಅಂಕಗಳೊಂದಿಗೆ ಚಿನ್ನ ಗೆದ್ದು ಹೊಸ ದಾಖಲೆ ಸೃಷ್ಠಿಸಿದೆ.

ಇನ್ನು ಏರ್ ರೈಫಲ್ ವೈಯಕ್ತಿಕ ಪದಕಕ್ಕಾಗಿ ಭಾರತ ಕೂಡ ಸಾಲಿನಲ್ಲಿದೆ ಮೆಹುಲಿ ಮತ್ತು ರಮಿತಾ ಕೂಡ ಎಂಟು ಶೂಟರ್‍ಗಳ ಫೈನಲ್‍ಗೆ ತಲುಪಿದ್ದಾರೆ ವಿಶೇಷವಾಗಿ ಕೇವಲ 19 ವರ್ಷದ ರಮಿತಾ 631.9 ಅಂಕಗಳನ್ನು ಗಳಿಸಿ ಎರಡನೇ ಸ್ಥಾನ ಗಳಿಸಿದರೆ, ಮೆಹುಲಿ 630.8 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-09-2023)

ಉಳಿದಂತೆ ಚೀನಾದ ಎಲ್ಲಾ ಮೂವರು ಶೂಟರ್‍ಗಳಾದ ಹಾನ್ ಜಿಯಾಯು, ಹುವಾಂಗ್ ಯುಟಿಂಗ್ ಮತ್ತು ವಾಂಗ್ ಝಿಲಿನ್ ಫೈನಲ್‍ಗೆ ಪ್ರವೇಶಿಸಿದರೆ, ದಕ್ಷಿಣ ಕೊರಿಯಾದ ಲೀ ಯುನ್‍ಸಿಯೊ, ಮಂಗೋಲಿಯಾದ ಗನ್ಹುಯಾಗ್ ನಂದಿನ್‍ಜಯಾ ಮತ್ತು ಚೈನೀಸ್ ತೈಪೆಯ ಚೆನ್ ಚಿ ಅವರು ಫೈನಲ್‍ಗೆ ಪ್ರವೇಶಿಸಿದ ಇತರ ಶೂಟರ್‍ಗಳಾಗಿದ್ದರು.

ಭಾರತದ ರೋವರ್ ಜೋಡಿಗೆ ಬೆಳ್ಳಿ
ಇನ್ನು ರೋಯಿಂಗ್‍ನಲ್ಲಿ (ದೋಣಿ ಸ್ಪರ್ಧೆ)ಭಾರತದ ಅರ್ಜುನ್ ಲಾಲ್ ಜಾಟ್ ಮತ್ತು ಅರವಿಂದ್ ಸಿಂಗ್ ಅವರು ಪುರುಷರ ಲೈಟ್‍ವೇಟ್ ಡಬಲ್ಸ್ ಸ್ಕಲ್ಸ್ ಸ್ಪರ್ಧೆಯಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟರು.ಕೆಲವೇ ಸೆಕೆಂಡ್‍ನಲ್ಲಿ ಚಿನ್ನ ಕೈತಪ್ಪದೆ ಚೀನಾದ ಜುಂಜಿ ಫ್ಯಾನ್‍ಮತ್ತು ಮ್ಯಾನ್ ಸನ್, 6:23.16ಸೆಕೆಂಡುಗಳೊಂದಿಗೆ ಸ್ವರ್ಣ ಪಡೆದರೆ ಭಾರತದ ಜೋಡಿಯು 6:28.18 ಸೆಕೆಂಡ್‍ಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಗಳಿಸಿದರು.ಉಜ್ಬೇಕಿಸ್ತಾನ್ ಜೋಡಿ ಶಖ್ಜೋದ್ ನುರ್ಮಾಟೋವ್ ಮತ್ತು ಸೊಬಿರ್ಜಾನ್ ಸಫರೊಲಿಯೆವ್ ಅವರು 6:33.42 ಸೆಕೆಂಡ್‍ಗಳಲ್ಲಿ ಕಂಚಿನ ಪದಕ ಪಡೆದರು.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-09-2023)

ನಿತ್ಯ ನೀತಿ :
ಮಾನವನು ನಿಜವಾದ ಜ್ಞಾನದಿಂದ ವಂಚಿತನಾಗಿರುವುದು ಸಹಜ. ಏಕೆಂದರೆ, ಅವನನ್ನು ಅಜ್ಞಾನವು ಸದಾ ಕಾಲ ಸುತ್ತುವರಿದಿರುತ್ತದೆ.

ಪಂಚಾಂಗ : ಭಾನುವಾರ, 24-09-2023
ಶೋಭಕೃತ್ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಭಾದ್ರಪದ ಮಾಸ / ಶುಕ್ಲ ಪಕ್ಷ
ತಿಥಿ: ನವಮಿ / ನಕ್ಷತ್ರ: ಪೂರ್ವಾಷಾಢ / ಯೋಗ: ಶೋಭನ / ಕರಣ: ತೈತಿಲ

ಸೂರ್ಯೋದಯ : ಬೆ.06.09
ಸೂರ್ಯಾಸ್ತ : 06.15
ರಾಹುಕಾಲ : 4.30-6.00
ಯಮಗಂಡ ಕಾಲ : 12.00-1.30
ಗುಳಿಕ ಕಾಲ : 3.00-4.30

ಇಂದಿನ ರಾಶಿಭವಿಷ್ಯ
ಮೇಷ
: ನೀವು ಮಾಡುವ ತಪ್ಪಿನಿಂದಾಗಿ ಜೀವನ ಪರ್ಯಂತ ನೆನಪಿಟ್ಟುಕೊಳ್ಳುವ ಪಾಠ ಕಲಿಯಬೇಕಾಗುತ್ತದೆ.
ವೃಷಭ: ಆರ್ಥಿಕವಾಗಿ ಹೆಚ್ಚು ಲಾಭ ಗಳಿಸಲು ಶ್ರಮ ಪಡಬೇಕಾದೀತು. ನಿಮ್ಮ ಲೆಕ್ಕಾಚಾರ ತಪ್ಪಾಗಬಹುದು.
ಮಿಥುನ:ಹಿತವಾದ ಮಾತುಗಳಿಂದ ಸಂಗಾತಿ ಅಥವಾ ಪ್ರೀತಿಪಾತ್ರರನ್ನು ಮೆಚ್ಚಿಸಲು ಪ್ರಯತ್ನಿಸುವಿರಿ.

ಕಟಕ: ಮಕ್ಕಳ ವಿದ್ಯಾಭ್ಯಾಸ ಅಥವಾ ವಿವಾಹದ ವಿಚಾರವಾಗಿ ಅನವಶ್ಯಕ ವಾದ ಮಾಡದಿರಿ.
ಸಿಂಹ: ನಿಮ್ಮ ಕೆಲಸಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಇಂದು ಸಾಧ್ಯವಾಗುತ್ತದೆ.
ಕನ್ಯಾ: ವಿದ್ಯಾರ್ಥಿಗಳು ಏಕಾಗ್ರತೆ ಕಾಯ್ದುಕೊಳ್ಳಲು ಹೆಚ್ಚಿನ ಪರಿಶ್ರಮ ವಹಿಸಬೇಕಾಗುತ್ತದೆ.

ತುಲಾ: ವ್ಯಾಪಾರ ಕ್ಷೇತ್ರದಲ್ಲಿ ಹೊಸ ಮಿತ್ರರು ಸಿಗುವರು.
ವೃಶ್ಚಿಕ: ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುವಿರಿ.
ಧನುಸ್ಸು: ಉದ್ಯಮಿಗಳು ತಮ್ಮ ಸಹೋದ್ಯೋಗಿ ಗಳೊಂದಿಗೆ ಭವಿಷ್ಯದ ಯೋಜನೆಗಳ ಬಗ್ಗೆ ಚಿಂತಿಸಿ.

ಮಕರ: ಸಹೋದ್ಯೋಗಿಗಳು ಗೌರವಾನ್ವಿತವಾಗಿ ವರ್ತಿಸುವುದರಿಮದ ಕೆಲಸ ಸರಾಗವಾಗಿ ಸಾಗಲಿದೆ.
ಕುಂಭ: ಅವಸರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಬೇಕಾಗುತ್ತದೆ.
ಮೀನ: ಒಡಹುಟ್ಟಿದವ ರೊಂದಿಗಿನ ಸಂಬಂಧ ಸುಧಾ ರಿಸುತ್ತದೆ. ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ.