Home Blog Page 32

ಹಾಸನಾಂಬ ದರ್ಶನ ಪಡೆದು ವಾಪಸ್ಸಾಗುತ್ತಿದ್ದಾಗ ಭೀಕರ ಅಫಘಾತ : ಇಬ್ಬರ ಸಾವು

ಹಾಸನ,ಅ.20– ಹಾಸನಾಂಬೆಯ ದರ್ಶನ ಪಡೆದು ವಾಪಸ್ಸಾಗುತ್ತಿದ್ದಾಗ ಎರಡು ದ್ವಿಚಕ್ರವಾಹನ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಫಘಾತದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಕಗ್ಗಲಿಕಾವಲು ಫಾರೆಸ್ಟ್‌ಬಳಿ ನಡೆದಿದೆ.ಬಸವರಾಜು (24), ಅನು (20) ಮೃತಪಟ್ಟ ದುರ್ದೈವಿಗಳು.

ಬೆಂಗಳೂರು ಮೂಲದ ಬಸವರಾಜು, ಅನು ಹಾಗೂ ಛಾಯಾ ಎಂಬುವವರು ಯಮಹಾ ಬೈಕ್‌ನಲ್ಲಿ ಬಂದು ಹಾಸನಾಂಬದೇವಿ ದರ್ಶನ ಪಡೆದು ಒಂದೆ ಬೈಕ್‌ನಲ್ಲಿ ಮೂವರು ತೆರಳುತ್ತಿದ್ದಾಗ ಚನ್ನರಾಯಪಟ್ಟಣ ಕಡೆಯಿಂದ ವೇಗವಾಗಿ ಬಂದ ಕಾರು ಹೌಸಿಂಗ್‌ ಬೋರ್ಡ್‌ ಬಳಿ ಮೊದಲು ಆಕ್ಟಿವಾಗೆ ಡಿಕ್ಕಿ ಹೊಡೆದು ನಂತರ ಬೈಕ್‌ ಅಪ್ಪಳಿಸಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಬಸವಾರಜು ಹಾಗೂ ಅನು ಸ್ಥಳದಲ್ಲೇ ಸಾವನ್ನಪ್ಪಿದರೆ ಛಾಯಾ ಹಾಗೂ ಆಕ್ಟಿವಾ ಸವಾರ ಮೋಹಮದ್‌ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಚನ್ನರಾಯಪಟ್ಟಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದ ಕೂಡೆಲೇ ಚೆನ್ನರಾಯಪಟ್ಟಣ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜಿಟಿ ಮಾಲ್‌ನಿಂದ ಬಿದ್ದು ಯುವಕ ಸಾವು

ಬೆಂಗಳೂರು,ಅ.20- ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್‌ನ 3ನೇ ಮಹಡಿಯಿಂದ ಬಿದ್ದು ಯುವಕ ಮೃತಪಟ್ಟಿರುವ ಘಟನೆ ಕೆಪಿ ಅಗ್ರಹಾರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಸುಮಾರು 30 ರಿಂದ 35 ವರ್ಷದಂತೆ ಕಾಣುವ ಈ ಯುವಕನ ಹೆಸರು, ವಿಳಾಸ ಸದ್ಯಕ್ಕೆ ತಿಳಿದು ಬಂದಿಲ್ಲ.ಇಂದು ಬೆಳಗ್ಗೆ ಮಾಲ್‌ ತೆರೆಯುತ್ತಿದ್ದಂತೆ 10.15 ರ ಸುಮಾರಿನಲ್ಲಿ
ಈ ಯುವಕ ಜಿಟಿ ಮಾಲ್‌ ಪ್ರವೇಶಿಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈತ 3ನೇ ಮಹಡಿಗೆ ಹೋಗಿದ್ದಾಗ ಅಲ್ಲಿಂದ ಬಿದ್ದು ಮೃತಪಟ್ಟಿದ್ದಾನೆ.

ಇದು ಆಕಸಿಕವಾಗಿ ಆಯತಪ್ಪಿ ಬಿದ್ದಿರುವುದೋ ಅಥವಾ ಆತಹತ್ಯೆಯೋ ಎಂಬುವುದು ನಿಗೂಢವಾಗಿದೆ.ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೆಪಿ ಅಗ್ರಹಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಂಡು ಮಾಲ್‌ನ ಸಿಸಿ ಕ್ಯಾಮೆರಾಗಳನ್ನು ಕೂಲಂಕುಶವಾಗಿ ಪರಿಶೀಲಿಸುತ್ತಿದ್ದಾರೆ.

ಈ ಘಟನೆ ಹಿನ್ನೆಲೆಯಲ್ಲಿ ಮಾಲ್‌ಗೆ ಸಾರ್ವಜನಿಕ ಪ್ರವೇಶವನ್ನು ಪೊಲೀಸರು ನಿರ್ಬಂಧಿಸಿದ್ದಾರೆ. ಯುವಕನ ಮೈ ಮೇಲೆ ನೈಟ್‌ ಡ್ರಸ್‌‍ ಇದ್ದು, ಆತನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಅನುಮತಿಗಾಗಿ ಆರ್‌ಎಸ್‌‍ಎಸ್‌‍ ಮರು ಅರ್ಜಿ

ಕಲಬುರಗಿ, ಅ.20- ಹೈಕೋರ್ಟ್‌ ಆದೇಶದ ಬಳಿಕ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನವೆಂಬರ್‌ 2 ರಂದು ಪಥ ಸಂಚಲನ ನಡೆಸಲು ಅನುಮತಿಗಾಗಿ ಆರ್‌ಎಸ್‌‍ಎಸ್‌‍ ಮರು ಅರ್ಜಿ ಸಲ್ಲಿಸಿದೆ. ಆರ್‌ಎಸ್‌‍ಎಸ್‌‍ನ ಕಲಬುರಗಿ ಜಿಲ್ಲಾ ಸಂಚಾಲಕ ಅಶೋಕ್‌ ಪಾಟೀಲ್‌ ಎಂಬುವವರು ಕಲಬುರಗಿ ಜಿಲ್ಲಾಧಿಕಾರಿಗಳ, ಎರಡು ಅಧಿಕೃತ ಇ-ಮೇಲ್‌ ವಿಳಾಸ ಮತ್ತು ವಾಟ್ಸಾಪ್‌ಗೆ ಅರ್ಜಿಯನ್ನು ರವಾನಿಸಿದ್ದು, ಪಥ ಸಂಚಲನಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.

ನಿನ್ನೆ ಚಿತ್ತಾಪುರದಲ್ಲಿ ನಡೆಯಬೇಕಿದ್ದ ಪಥ ಸಂಚಲನಕ್ಕೆ ತಹಶೀಲ್ದಾರ್‌ ಅವರು ಕಡಿವಾಣ ಹಾಕಿದ್ದರು. ಅದನ್ನು ಆರ್‌ಎಸ್‌‍ಎಸ್‌‍ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಕಲಬುರಗಿ ವಿಭಾಗದ ಹೈಕೋರ್ಟ್‌ ಪೀಠ, ತುರ್ತು ವಿಚಾರಣೆ ನಡೆಸಿ ನವೆಂಬರ್‌ 2ರಂದು ಪಥ ಸಂಚಲನಕ್ಕೆ ಅವಕಾಶ ನೀಡುವ ಬಗ್ಗೆ ಪರಿಶೀಲಿಸುವಂತೆ ಸರ್ಕಾರಕ್ಕೆ ಆದೇಶಿಸಿತ್ತು. ಜೊತೆಗೆ ಅನುಮತಿಗಾಗಿ ಮತ್ತೊಮೆ ಅರ್ಜಿ ಸಲ್ಲಿಸಲು ಆರ್‌ಎಸ್‌‍ಎಸ್‌‍ಗೆ ಸೂಚನೆ ನೀಡಿತ್ತು. ಅದನ್ನು ಆಧರಿಸಿ, ಅಶೋಕ್‌ ಪಾಟೀಲ್‌ ಅವರು ಮರು ಅರ್ಜಿ ಸಲ್ಲಿಸಿದ್ದಾರೆ.

ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ತಾವು ಮನವಿ ಸಲ್ಲಿಸಲು ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ್ದು, ಅಲ್ಲಿ ನಮನ್ನು ಒಳಗೆ ಬಿಡಲಿಲ್ಲ. ಆಪ್ತ ಸಹಾಯಕರಿಗೆ ಅರ್ಜಿ ಸಲ್ಲಿಸಲು ಸೂಚನೆ ನೀಡಲಾಗಿತ್ತು. ಆದರೆ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕರು ಕರೆ ಸ್ವೀಕರಿಸಲಿಲ್ಲ, ಹೀಗಾಗಿ ಇ-ಮೇಲ್‌ ಮೂಲಕ ಅರ್ಜಿ ಸಲ್ಲಿಸುತ್ತಿದ್ದೇವೆ. ವಾಟ್ಸಾಪ್‌ ಮೂಲಕವೂ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಹೈಕೋರ್ಟ್‌ ಅದೇಶದ ಹಿನ್ನೆಲೆಯಲ್ಲಿ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಆರ್‌ಎಸ್‌‍ಎಸ್‌‍ ಮುಂದಾಗಿದೆ. ಅಕ್ಟೋಬರ್‌19ರಂದು ಚಿತ್ತಾಪುರದಲ್ಲಿ ಪಥ ಸಂಚಲನ ನಡೆಸಲು ಅನುಮತಿ ನೀಡುವಂತೆ ಈ ಮೊದಲು ಅಕ್ಟೋಬರ್‌ 13 ರಂದು ಅಶೋಕ್‌ ಪಾಟೀಲ್‌ ಅವರು ಚಿತ್ತಾಪುರ ಪುರಸಭೆ ಮುಖ್ಯಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು.

ಈ ವೇಳೆ ಚಿತ್ತಾಪುರ ಎಪಿಎಂಸಿ ಯಾರ್ಡ್‌ ಮತ್ತು ಬಸ್‌‍ ನಿಲ್ದಾಣದ ಎದರುಗಡೆಯಿಂದ ಪಥ ಸಂಚಲನ ಆರಂಭಗೊಂಡು ಅಂಬೇಡ್ಕರ್‌ ವೃತ್ತ, ಭುವನೇಶ್ವರಿ ವೃತ್ತ, ಪಾಲಪ್‌ಗಲ್ಲಿ, ಹೋಳಿಕಟ್ಟಿ, ಬಸವೇಶ್ವರ ಚೌಕ, ಹಳೇ ಕಪಡ ಬಜಾರ್‌ ವೃತ್ತ, ಜನತಾಚೌಕ್‌, ನಾಗಾವಿಚೌಕ್‌ನಿಂದ ನಂದಕಿಶೋರ್‌ ಬಜಾಜ್‌ ಮನೆ ಎದರುಗಡೆ ತಿರುಗಿ ಸೇವಾಲಾಲ್‌ ಚೌಕ್‌ ಪುರಸಭೆ ಕಾರ್ಯಾಲಯ ಮುಂಭಾಗ ಹಳೆ ಗಂಜ್‌ ವೃತ್ತ, ಕಾಶೀಗಲ್ಲಿ, ಗಣೇಶ ಮಂದಿರ ಮೂಲಕ ಬಜಾಜ್‌ ಕಲ್ಯಾಣ ಮಂಟಪ ತಲುಪಿ ಸಾರ್ವಜನಿಕ ಸಮಾರಂಭ ಆಯೋಜಿಸಿರುವುದಾಗಿ ತಿಳಿಸಲಾಗಿತ್ತು. ಈ ಮಾರ್ಗಗಳಲ್ಲಿ ಸ್ಚಚ್ಛ ಮಾಡಿಕೊಡಬೇಕು ಹಾಗೂ ಬ್ಯಾನರ್‌ ಬಟಿಂಗ್‌್ಸಗಳನ್ನು ಕಟ್ಟಲು ಅವಕಾಶ ನೀಡಬೇಕು ಎಂದು ಕೋರಲಾಗಿತ್ತು.

ಚಿತ್ತಾಪುರ ತಹಶೀಲ್ದಾರ್‌ ಅವರು ಪಥ ಸಂಚಲನ ನಡೆಸುವ ಉದ್ದೇಶ, ಭಾಗವಹಿಸುವವರ ಹೆಸರು ಮತ್ತು ಈ ಸಂದರ್ಭದಲ್ಲಿ ಕಾನೂನು ಸುವ್ಯಸ್ಥೆಗೆ ಧಕ್ಕೆಯಾದರೆ ಅದರ ಜವಬ್ದಾರಿ ಹೊರುವ ಹೊಣೆಗಾರಿಕಾ ಪ್ರಮಾಣ ಪತ್ರ ಮತ್ತು ಪಥ ಸಂಚಲನ ಆಯೋಜಿಸುವ ಸಂಸ್ಥೆಯ ನೋಂದಣಿ ದಾಖಲಾತಿ ಪತ್ರಗಳನ್ನು ಒದಗಿಸುವಂತೆ ಸೂಚಿಸಿದರು.

ಅದ್ಯಾವುದನ್ನು ನೀಡದ ಕಾರಣ ತಹಶೀಲ್ದಾರ್‌ ನಾಗಯ್ಯ ಹಿರೇಮಠ್‌ ಪಥ ಸಂಚಲನಕ್ಕೆ ಅನುಮತಿಯನ್ನು ನಿರಾಕರಿಸಿದರು. ಹೈಕೋರ್ಟ್‌ನಲ್ಲಿ ವಾದ-ವಿವಾದದ ಬಳಿಕ ಎರಡನೇ ಅರ್ಜಿ ಸಲ್ಲಿಕೆಯಾಗಿದೆ. ನಿನ್ನೆ ಸಚಿವ ಪ್ರಿಯಾಂಕ ಖರ್ಗೆ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಆರ್‌ಎಸ್‌‍ಎಸ್‌‍ ಮತ್ತೊಮೆ ಅರ್ಜಿ ಸಲ್ಲಿಸಿ ಷರತ್ತುಗಳನ್ನು ಪೂರೈಸಿದರೆ ಪಥ ಸಂಚಲನಕ್ಕೆ ಅನುಮತಿ ನೀಡುವ ಬಗ್ಗೆ ತಾಲ್ಲೂಕು ಆಡಳಿತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು. ಹೈ ಕೋರ್ಟ್‌ ಆದೇಶದ ಬೆನ್ನಲ್ಲೇ ಆರ್‌ಎಸ್‌‍ಎಸ್‌‍ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದೆ.

ಈ ನಡುವೆ ನಿನ್ನೆ ಸೇಡಂನಲ್ಲಿ ನಡೆದ ಆರ್‌ಎಸ್‌‍ಎಸ್‌‍ ಪಥಸಂಚಲನದಲ್ಲಿ ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ನಾಗರಾಜು ಅವರು, ಗಣವೇಷ ಧರಿಸಿ ಭಾಗವಹಿಸಿದ್ದರು. ಕೆಸಿಎಸ್‌‍ಆರ್‌ ನಿಯಮದ ಪ್ರಕಾರ ಸರ್ಕಾರಿ ನೌಕರರು ಸಂಘ ಸಂಸ್ಥೆಗಳ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ ಎಂಬ ನಿಬಂಧನೆಯಿದೆ.

ಈ ಮೊದಲು ನಡೆದಿದ್ದ ಪಥ ಸಂಚಲನದಲ್ಲಿ ಭಾಗವಹಿಸಿದ್ದರು ಎಂಬ ಕಾರಣಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಪಿಡಿಓ ಅವರನ್ನು ಅಮಾನತು ಗೊಳಿಸಲಾಗಿತ್ತು. ಅದರ ಬಳಿಕವೂ ತಾಲ್ಲೂಕು ವೈದ್ಯಾಧಿಕಾರಿ ಅವರು ಪಥ ಸಂಚಲನದಲ್ಲಿ ಭಾಗವಹಿಸಿ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.ನಿನ್ನೆಯ ಸೇಡಂ ಪಥ ಸಂಚಲನದಲ್ಲಿ ಕೆಲ ಕಾಂಗ್ರೆಸ್‌‍ ಕಾರ್ಯಕರ್ತರೂ ಭಾಗವಹಿಸಿದ್ದರು ಎಂದು ಹೇಳಲಾಗುತ್ತಿದೆ.

ಕೇರಳ : ಎಸ್‌‍ಡಿಪಿಐ-ಸಿಪಿಐ ನಡುವೆ ಘರ್ಷಣೆ, ಆ್ಯಂಬುಲೆನ್ಸ್‌ಗೆ ಬೆಂಕಿ

ತಿರುವನಂತಪುರಂ, ಅ. 20 (ಪಿಟಿಐ)– ಕೇರಳದ ನೆಡುಮಂಗಾಡ್‌ನಲ್ಲಿ ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌‍ಡಿಪಿಐ) ಮತ್ತು ಸಿಪಿಐ(ಎಂ) ಕಾರ್ಯಕರ್ತರ ನಡುವಿನ ಘರ್ಷಣೆ ನಡೆದು ಆ್ಯಂಬ್ಯು ಲೆನ್‌್ಸಗೆ ಬೆಂಕಿ ಹಚ್ಚಲಾಗಿದೆ.

ನೆಡುಮಂಗಾಡ್‌ ಪೊಲೀಸರ ಪ್ರಕಾರ, ಸ್ಥಳೀಯ ಸಿಪಿಐ(ಎಂ) ನಾಯಕನ ಮೇಲೆ ನಿನ್ನೆ ಸಂಜೆ ಎಸ್‌‍ಡಿಪಿಐ ಕಾರ್ಯಕರ್ತರು ದಾಳಿ ನಡೆಸಿದ್ದರು. ಹೀಗಾಗಿ ಅಪರಿಚಿತ ವ್ಯಕ್ತಿಗಳು ಎಸ್‌‍ಡಿಪಿಐ ಕಾರ್ಯಕರ್ತರ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಮುಖವಾಡ ಧರಿಸಿದ ವ್ಯಕ್ತಿಗಳು ತಡರಾತ್ರಿ ಆಂಬ್ಯುಲೆನ್ಸ್ ಮತ್ತು ಎಸ್‌‍ಡಿಪಿಐ ಕಾರ್ಯಕರ್ತನ ಒಡೆತನದ ಕಾರಿಗೆ ಹಾನಿ ಮಾಡಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂದೇಹವಾದ ಪ್ರತೀಕಾರದ ಕ್ರಮದಲ್ಲಿ, ಸರ್ಕಾರಿ ಆಸ್ಪತ್ರೆಯ ಬಳಿ ನಿಲ್ಲಿಸಲಾಗಿದ್ದ ಸಿಪಿಐ(ಎಂ) ಯುವ ಘಟಕವಾದ ಡೆಮಾಕ್ರಟಿಕ್‌ ಯೂತ್‌ ಫೆಡರೇಶನ್‌ ಆಫ್‌ ಇಂಡಿಯಾ (ಡಿವೈಎಫ್‌ಐ) ನಡೆಸುತ್ತಿದ್ದ ಆಂಬ್ಯುಲೆನ್ಸ್ಗೆ ಇಂದು ಮುಂಜಾನೆ ಬೆಂಕಿ ಹಚ್ಚಲಾಗಿದೆ.

ಈ ದಾಳಿಗಳು ಹಿಂದಿನ ಘರ್ಷಣೆಯ ಪರಿಣಾಮವೇ ಎಂದು ಖಚಿತಪಡಿಸಿಕೊಳ್ಳಲು ಮತ್ತು ಭಾಗಿಯಾಗಿರುವವರನ್ನು ಗುರುತಿಸಲು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೆ, ಪ್ರದೇಶದಲ್ಲಿ ಯಾವುದೇ ಹೆಚ್ಚಿನ ಘರ್ಷಣೆಗಳನ್ನು ತಡೆಗಟ್ಟಲು ಗಸ್ತು ತಿರುಗುವ ಚಟುವಟಿಕೆಗಳನ್ನು ಬಲಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಐಎನ್‌ಎಸ್‌‍ ವಿಕ್ರಾಂತ್‌ನಲ್ಲಿ ಪ್ರಧಾನಿ ದೀಪಾವಳಿ ಸಂಭ್ರಮ, ರಕ್ಷಣಾ ರಫ್ತಿನಲ್ಲಿ ಅಗ್ರಸ್ಥಾನಕ್ಕೇರಲು ಮೋದಿ ಸಂಕಲ್ಪ

ಪಣಜಿ, ಅ. 20 (ಪಿಟಿಐ) ಐಎನ್‌ಎಸ್‌‍ ವಿಕ್ರಾಂತ್‌ ಕೇವಲ ಯುದ್ಧನೌಕೆಯಲ್ಲ, ಅದು 21 ನೇ ಶತಮಾನದ ಭಾರತದ ಕಠಿಣ ಪರಿಶ್ರಮ, ಪ್ರತಿಭೆ, ಪ್ರಭಾವ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಪ್ರಧಾನ ಮಂತ್ರಿ ಮೋದಿ ಇಂದಿಲ್ಲಿ ಹೇಳಿದರು.ಐಎನ್‌ಎಸ್‌‍ ವಿಕ್ರಾಂತ್‌ ಭಾರತದ ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ ಮತ್ತು ಆತ್ಮನಿರ್ಭರ ಭಾರತದ ಅತ್ಯುನ್ನತ ಸಂಕೇತವಾಗಿದೆ ಎಂದು ಅವರು ಹೇಳಿದರು.

ಗೋವಾ ಮತ್ತು ಕಾರವಾರ ಕರಾವಳಿಯಲ್ಲಿರುವ ಐಎನ್‌ಎಸ್‌‍ ವಿಕ್ರಾಂತ್‌ಗೆ ಭೇಟಿ ನೀಡಿ ಭಾರತೀಯ ನೌಕಾಪಡೆಯ ಪಡೆಗಳೊಂದಿಗೆ ಬೆಳಕಿನ ಹಬ್ಬವನ್ನು ಆಚರಿಸಿ ಭಾರತೀಯ ನೌಕಾಪಡೆಯ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತವನ್ನು ವಿಶ್ವದ ಅಗ್ರ ರಕ್ಷಣಾ ರಫ್ತುದಾರರಲ್ಲಿ ಒಂದನ್ನಾಗಿ ಮಾಡುವ ಗುರಿಯನ್ನು ತಮ್ಮ ಸರ್ಕಾರ ಹೊಂದಿದೆ ಎಂದು ಪ್ರತಿಪಾದಿಸಿದ ಪ್ರಧಾನಿ ನರೇಂದ್ರ ಮೋದಿ, 2014 ರಿಂದ ನಮ್ಮ ಹಡಗು ಕಟ್ಟೆಗಳು 40 ಕ್ಕೂ ಹೆಚ್ಚು ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಿವೆ ಎಂದು ಹೇಳಿದರು.ಬ್ರಹ್ಮೋಸ್‌‍ ಎಂಬ ಹೆಸರು ಕೆಲವು ಮನಸ್ಸಿನಲ್ಲಿ ಭಯವನ್ನು ಉಂಟುಮಾಡುತ್ತದೆ ಮತ್ತು ಈಗ ಅನೇಕ ದೇಶಗಳು ಈ ಕ್ಷಿಪಣಿಗಳನ್ನು ಖರೀದಿಸಲು ಉತ್ಸುಕವಾಗಿವೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಐಎನ್‌ಎಸ್‌‍ ವಿಕ್ರಾಂತ್‌ನಲ್ಲಿ ನಿನ್ನೆ ಕಳೆದ ರಾತ್ರಿಯನ್ನು ಪದಗಳಲ್ಲಿ ಹೇಳುವುದು ಕಷ್ಟ. ನೀವೆಲ್ಲರೂ ತುಂಬಿದ್ದ ಅಪಾರ ಶಕ್ತಿ ಮತ್ತು ಉತ್ಸಾಹವನ್ನು ನಾನು ನೋಡಿದೆ. ನಿನ್ನೆ ನೀವು ದೇಶಭಕ್ತಿ ಗೀತೆಗಳನ್ನು ಹಾಡುವುದನ್ನು ನಾನು ನೋಡಿದಾಗ ಮತ್ತು ನಿಮ್ಮ ಹಾಡುಗಳಲ್ಲಿ ಆಪರೇಷನ್‌ ಸಿಂಧೂರ್‌ ಅನ್ನು ನೀವು ಹೇಗೆ ವಿವರಿಸಿದ್ದೀರಿ ಎಂಬುದನ್ನು ನೋಡಿದಾಗ, ಯುದ್ಧಭೂಮಿಯಲ್ಲಿ ನಿಂತಿರುವ ಜವಾನನ ಅನುಭವವನ್ನು ಯಾವುದೇ ಪದಗಳು ಸಂಪೂರ್ಣವಾಗಿ ತಿಳಿಸಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದರು.ನನ್ನ ದೀಪಾವಳಿ ನಿಮ್ಮೊಂದಿಗೆ ಕಳೆದಂತೆ ವಿಶೇಷವಾಗಿದೆ ಎಂದು ಅವರು ಹೇಳಿದರು.

ಆಪರೇಷನ್‌ ಸಿಂಧೂರ್‌ ಸಮಯದಲ್ಲಿ ಪಾಕಿಸ್ತಾನ ಶರಣಾಗುವಂತೆ ಮಾಡುವಲ್ಲಿ ನಮ ಮೂರು ಸೇನಾ ಪಡೆಗಳ ನಡುವಿನ ಅಸಾಧಾರಣ ಸಮನ್ವಯ ಸಾಧಿಸಿತ್ತು ಎಂದು ಪ್ರಧಾನಿ ಹೇಳಿದರು.
ಭಾರತ ಮಾವೋವಾದಿ ಹಿಂಸಾಚಾರದಿಂದ ಸ್ವಾತಂತ್ರ್ಯದ ಹೊಸ್ತಿಲಲ್ಲಿದೆ ಮತ್ತು ಈ ಸ್ವಾತಂತ್ರ್ಯ ನಮ್ಮ ಬಾಗಿಲುಗಳನ್ನು ತಟ್ಟುತ್ತಿದೆ ಎಂದು ಹೇಳಿದರು.

ಮೊದಲು, 125 ಜಿಲ್ಲೆಗಳು ಮಾವೋವಾದಿ ಭಯೋತ್ಪಾದನೆಯ ಹಿಡಿತದಲ್ಲಿದ್ದವು ಆದರೆ ಈಗ ಅದು ಕೇವಲ 11 ಜಿಲ್ಲೆಗಳಿಗೆ ಇಳಿದಿದೆ.ನಕ್ಸಲ್‌ ನಿರ್ಮೂಲನೆಯಲ್ಲಿ ಶೇ.90 ರಷ್ಟು ಯಶಸ್ಸನ್ನು ಸಾಧಿಸಲಾಗಿದ್ದರೂ, ಪೊಲೀಸ್‌‍ ಪಡೆಗಳು ಮಾವೋವಾದಿ ಹಿಂಸಾಚಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವಲ್ಲಿ ಯಶಸ್ವಿಯಾಗುತ್ತವೆ ಎಂದು ನನಗೆ ವಿಶ್ವಾಸವಿದೆ ಎಂದು ಅವರು ಹೇಳಿದರು.

ಆರ್‌ಎಸ್‌‍ಎಸ್‌‍ ಪಥಸಂಚಲನದಲ್ಲಿ ಭಾಗಿಯಾಗಿದ್ದ ನೌಕರರ ಅಮಾನತು : ಕಾನೂನು ಹೋರಾಟಕ್ಕಿಳಿದ ಬಿಜೆಪಿ

ಬೆಂಗಳೂರು,ಅ.20– ಆರ್‌ಎಸ್‌‍ಎಸ್‌‍ ಪಥಸಂಚಲನದಲ್ಲಿ ಭಾಗಿಯಾಗಿದ್ದರು ಎಂಬ ಕಾರಣಕ್ಕಾಗಿ ಪಿಡಿಒ ಅಮಾನತು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಸರ್ಕಾರದ ವಿರುದ್ಧ ಕಾನೂನು ಹೋರಾಟಕ್ಕೆ ಸಜ್ಜಾಗಿದೆ.

ಕೇಂದ್ರ ಸರ್ಕಾರಿ ನೌಕರರು ಆರ್‌ಎಸ್‌‍ಎಸ್‌‍ ಪಥಸಂಚಲನ ಸೇರಿದಂತೆ ಇತರೆ ಚಟುವಟಿಕೆಗಳಲ್ಲಿ ಭಾಗವಹಿಸಲು 66 ವರ್ಷಗಳ ಹಿಂದೆ ಜಾರಿ ಮಾಡಿದ್ದ ನಿರ್ಬಂಧವನ್ನು ತೆಗೆದು ಹಾಕಿತ್ತು.
ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಪ್ರತ್ಯೇಕವಾದ ನಿಯಮಗಳಿರುತ್ತವೆ. ಈ ನಿಯಮಗಳು ರಾಜ್ಯದಿಂದ ಬೇರೊಂದು ರಾಜ್ಯಕ್ಕೂ ಸಹ ಬದಲಾಗುತ್ತವೆ.

ಹಿಂದೆ ಪಂಜಾಬ್‌ ಮತ್ತು ತಮಿಳುನಾಡಿನಲ್ಲಿ ಇದೇ ರೀತಿ ಆರ್‌ಎಸ್‌‍ಎಸ್‌‍ ಚಟುವಟಿಕೆಯಲ್ಲಿ ಕಾಣಿಸಿಕೊಂಡಿದ್ದ ಕಾರಣಕ್ಕಾಗಿ ಅಲ್ಲಿನ ಸರ್ಕಾರಗಳು ನೌಕರರನ್ನು ಸೇವೆಯಿಂದ ಅಮಾನತುಪಡಿಸಿತ್ತು.

ಕಳೆದ ಶುಕ್ರವಾರ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ರೋಡಲಬಂಡ ಗ್ರಾಮದ ಪಿಡಿಒ ಪ್ರವೀಣ್‌ಕುಮಾರ್‌ ಅವರನ್ನು ಆರ್‌ಎಸ್‌‍ಎಸ್‌‍ ಪಥಸಂಚಲನದಲ್ಲಿ ಭಾಗಿಯಾಗಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಪಂಚಾಯತ್‌ರಾಜ್‌ ಇಲಾಖೆಯ ಆಯುಕ್ತೆ ಡಾ.ಅರುಂಧತಿ ಅವರು ಇಲಾಖಾ ತನಿಖೆಯನ್ನು ಕಾಯ್ದಿರಿಸಿ ಸೇವೆಯಿಂದ ಅಮಾನತುಪಡಿಸಿದ್ದರು.

ಅ.12ರಂದು ಲಿಂಗಸಗೂರು ಪಟ್ಟಣದಲ್ಲಿ ಆರ್‌ಎಸ್‌‍ಎಸ್‌‍ ಶತಮಾನೋತ್ಸವದ ಹಿನ್ನಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರವೀಣ್‌ಕುಮಾರ್‌ ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಗಣವೇಷಧಾರಿಯಾಗಿ ಭಾಗಿಯಾಗಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಅವರನ್ನು ಸೇವೆಯಿಂದ ಅಮಾನತುಪಡಿಸಿತ್ತು. ಇದರ ಬೆನ್ನಲ್ಲೇ ಭಾನುವಾರ ಕಲಬುರಗಿಯ ವಿವಿಧ ಕಡೆ ನಡೆದ ಆರ್‌ಎಸ್‌‍ಎಸ್‌‍ ಪಥಸಂಚಲನದಲ್ಲಿ ಸರ್ಕಾರದ ಆದೇಶಕ್ಕೂ ಕ್ಯಾರೆ ಎನ್ನದೆ ಕೆಲವು ನೌಕರರು ಭಾಗಿಯಾಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲಾಗಿದೆ.

ಸೇಡಂ ತಾಲ್ಲೂಕಿನ ಆಡಳಿತ ವೈದ್ಯಾಧಿಕಾರಿ ಡಾ.ನಾಗರಾಜ್‌ ಮನ್ನೆ ಅವರು ಆರ್‌ಎಸ್‌‍ಎಸ್‌‍ ಪಥಸಂಚಲನದಲ್ಲಿ ಭಾಗಿಯಾಗುವ ಮೂಲಕ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ. ಇದಲ್ಲದೆ ಇನ್ನು ಕೆಲವು ನೌಕರರು ಕೂಡ ಭಾಗಿಯಾಗಿದ್ದರು.

ನಾಲ್ಕು ದಿನಗಳ ಹಿಂದೆ ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ ಸರ್ಕಾರಿ ನೌಕರರು ಖಾಸಗಿ ಸಂಘಸಂಸ್ಥೆಗಳು ನಡೆಸುವ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಂತಿಲ್ಲ. ಒಂದು ವೇಳೆ ಭಾಗಿಯಾದರೆ ವೃಂದ ಮತ್ತು ನೇಮಕಾತಿಯಡಿ ಅಂಥವರ ವಿರುದ್ದ ಸರ್ಕಾರಿ ಆದೇಶ ಉಲ್ಲಂಘನೆ ಮೇಲೆ ಶಿಸ್ತುಕ್ರಮದ ಬಗ್ಗೆ ಎಚ್ಚರಿಕೆ ಕೊಟ್ಟಿತ್ತು.

ಈಗ ಸರ್ಕಾರದ ಆದೇಶದ ವಿರುದ್ಧ ನ್ಯಾಯಾಲಯದಲ್ಲಿ ಮೇಲನವಿ ಅರ್ಜಿ ಸಲ್ಲಿಸಲು ಬಿಜೆಪಿ ಮುಂದಾಗಿದೆ. ಆರ್‌ಎಸ್‌‍ಎಸ್‌‍ ನೋಂದಾಯಿತ ಸಂಘಸಂಸ್ಥೆಯಲ್ಲ.ನೋಂದಾಯಿತ ಸಂಘಸಂಸ್ಥೆ ಜೊತೆ ಗುರುತಿಸಿಕೊಂಡರೆ ಅಂತಹ ನೌಕರರ ವಿರುದ್ದ ಕ್ರಮ ಜರುಗಿಸಬಹುದು. ಸರ್ಕಾರದ ಆದೇಶವನ್ನು ರದ್ದುಪಡಿಸುವಂತೆ ಮೇಲನವಿ ಅರ್ಜಿ ಹಾಕಲು ಸಿದ್ದತೆ ನಡೆದಿದೆ.

ಕಾನೂನು ಹೋರಾಟ

  1. ಹೈಕೋರ್ಟ್‌/ಸುಪ್ರೀಂಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಬಹುದು.
    ರಾಜ್ಯ ಸರ್ಕಾರ ಈ ಆದೇಶದ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ರಿಟ್‌ ಅರ್ಜಿಯನ್ನು (ಹೈಕೋರ್ಟ್‌ನಲ್ಲಿ ಆರ್ಟಿಕಲ್‌ 226 ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ಆರ್ಟಿಕಲ್‌ 32ರಡಿ) ಸಲ್ಲಿಸಲು ಅವಕಾಶವಿದೆ.

ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆ- ಸಂವಿಧಾನದ ಪರಿಚ್ಛೇದ 19(1)(ಎ)ದಡಿಯೂ ಅರ್ಜಿ ಸಲ್ಲಿಸಬಹುದು.ಶಾಂತಿಯುತವಾಗಿ ಸಭೆ ಸೇರುವ ಹಕ್ಕಿನ ಉಲ್ಲಂಘನೆ (ಪರಿಚ್ಛೇದ 19(1)(ಬಿ)ಆರ್‌ಎಸ್‌‍ಎಸ್‌‍ ತನ್ನ ದಿನನಿತ್ಯದ ಚಟುವಟಿಕೆಗಳು (ೞಶಾಖೆಗಳುೞ ಅಥವಾ ಸಭೆಗಳಂತೆ) ಶಾಂತಿಯುತ ಸಭೆಗಳಾಗಿವೆ ಮತ್ತು ಸರ್ಕಾರದ ಆದೇಶವು ಈ ಮೂಲಭೂತ ಹಕ್ಕಿಗೆ ಅಸಮಂಜಸ ಅಡಚಣೆಯನ್ನು ಪರಿಣಾಮಕಾರಿಯಾಗಿ ಸೃಷ್ಟಿಸುತ್ತದೆ ಎಂದು ಆರ್‌ ಎಸ್‌‍ಎಸ್‌‍ ನ್ಯಾಯಾಲಯದಲ್ಲಿ ವಾದಿಸಬಹುದು.

ಸಂಘಗಳನ್ನು ರಚಿಸುವ ಹಕ್ಕಿನ ಉಲ್ಲಂಘನೆ – ಪರಿಚ್ಛೇದ 19(1)(ಸಿ)
ಆರ್‌ಎಸ್‌‍ಎಸ್‌‍ ತನ್ನ ಸದಸ್ಯರನ್ನು ಒಟ್ಟುಗೂಡಿಸುವ ಸಾಮರ್ಥ್ಯವನ್ನು ನಿಗ್ರಹಿಸಲು ಆದೇಶವನ್ನು ಬಳಸಿದರೆ, ಅದನ್ನು ಸಂಘದ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಪ್ರಯತ್ನವೆಂದು ಪ್ರಶ್ನಿಸಬಹುದು.

ಅನಿಯಂತ್ರಿತತೆ-ತಾರತಮ್ಯ: ಪರಿಚ್ಛೇದ 14- ಸಮಾನತೆಯ ಹಕ್ಕು
ಅನುಮೋದನೆ ಪ್ರಕ್ರಿಯೆ ನಿರಂಕುಶವಾಗಿ ಜಾರಿಗೊಳಿಸಿದರೆ ಅಥವಾ ನಿರ್ದಿಷ್ಟವಾಗಿ ಒಂದು ಸಂಸ್ಥೆಯನ್ನು (ಆರ್‌ಎಸ್‌‍ಎಸ್‌‍) ಗುರಿಯಾಗಿಸಿಕೊಂಡು ಜಾರಿಗೊಳಿಸಿದರೆ ಅದು ಸಮಾನತೆಯ ಹಕ್ಕಿನ ಉಲ್ಲಂಘನೆ ಎಂದು ಆರ್‌.ಎಸ್‌‍.ಎಸ್‌‍ ನ್ಯಾಯಾಲಯದಲ್ಲಿ ವಾದಿಸಬಹುದು.

  1. ಕಾರ್ಯಕಾರಿ ಆದೇಶ/ನಿಯಮಗಳನ್ನು ಪ್ರಶ್ನಿಸುವುದು
    ಸರ್ಕಾರಿ ಆದೇಶವು ಸಂಪೂರ್ಣವಾಗಿ ಕಾರ್ಯಾಂಗದ ನಿರ್ಧಾರವಾಗಿದ್ದರೆ, ಕಾರ್ಯಕಾರಿ ಅಧಿಕಾರದ ವ್ಯಾಪ್ತಿಯನ್ನು ಮೀರಿರುವಂಥದ್ದಾಗಿದೆ ಎಂಬ ಆಧಾರದ ಮೇಲೆ ಆರ್‌ಎಸ್‌‍ಎಸ್‌‍ ಆ ಆದೇಶವನ್ನು ಪ್ರಶ್ನಿಸಬಹುದು.
    ಶಾಸಕಾಂಗದ ಬೆಂಬಲವಿಲ್ಲದೆ ಜಾರಿಗೆ ತರಲಾಗಿರುವ ಕೇವಲ ಅಧಿಕಾರಿಶಾಹಿ ಆದೇಶವು ಮೂಲಭೂತ ಹಕ್ಕುಗಳನ್ನು ಅತಿಕ್ರಮಿಸುವ ಉದ್ದೇಶವನ್ನು ಹೊಂದಿದೆ ಅಥವಾ ಆ ಉದ್ದೇಶವು ನ್ಯಾಯಾಲಯಗಳು ನಿಗದಿಪಡಿಸಿರುವ ಚೌಕಟ್ಟಿನಲ್ಲಿಲ್ಲ ಎಂದು ವಾದಿಸಬಹುದು.
  2. ಸರ್ಕಾರಕ್ಕೇ ಮೇಲನವಿ ಸಲ್ಲಿಸಬಹುದು!
    ಈಗ ಜಾರಿಯಾಗಿರುವ ಸರ್ಕಾರಿ ಆದೇಶವನ್ನು ಸರ್ಕಾರಕ್ಕೇ ಅರ್ಜಿ ಸಲ್ಲಿಸಿ ಪ್ರಶ್ನಿಸಲು ಅವಕಾಶವಿದೆ. ಇಲ್ಲವೇ ಮುಂದೆ, ಆರ್‌ಎಸ್‌‍ಎಸ್‌‍ ಒಂದು ಕಾರ್ಯಕ್ರಮಕ್ಕೆ ಅನುಮತಿಗಾಗಿ ಅರ್ಜಿ ಸಲ್ಲಿಸಿದರೆ ಅದನ್ನು ಸಂಬಂಧಿಸಿದ ಪೊಲೀಸ್‌‍ ಇಲಾಖೆಯ ಅಧಿಕಾರಿ ಅಥವಾ ಜಿಲ್ಲಾಡಳಿತ ನಿರಾಕರಿಸಿದರೆ, ಆರ್‌ಎಸ್‌‍ಎಸ್‌‍ ಆ ನಿರ್ದಿಷ್ಟ ನಿರಾಕರಣೆಯನ್ನು ಸರ್ಕಾರದ ಮಟ್ಟದಲ್ಲೇ ಪ್ರಶ್ನಿಸಬಹುದು.
  3. ಜನಾಂದೋಲನಗಳ ಮೂಲಕ ನಿರ್ಧಾರ ವಾಪಸ್ಸಿಗೆ ಒತ್ತಡ ಹೇರಬಹುದು
    ಮೇಲೆ ತಿಳಿಸಿದಂತೆ ರಾಜ್ಯ ಸರ್ಕಾರದ ಈ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದು ಅಥವಾ ಸರ್ಕಾರವನ್ನೇ ಪ್ರಶ್ನಿಸುವುದನ್ನು ಆರ್‌ಎಸ್‌‍ಎಸ್‌‍ಗೆ ಪ್ರಶ್ನಿಸಲು ಅವಕಾಶವಿದೆ. ಅದನ್ನು ಹೊರತಪಡಿಸಿ ಮತ್ತೇನು ಮಾಡಬಹುದು ಎಂದರೆ, ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗಲು ಅವಕಾಶವಿದೆ.

ಆರ್‌ಎಸ್‌‍ಎಸ್‌‍ ತನ್ನ ರಾಜಕೀಯ ಪ್ರಭಾವ ಮತ್ತು ಬೆಂಬಲವನ್ನು (ವಿಶೇಷವಾಗಿ ರಾಜ್ಯದ ವಿರೋಧ ಪಕ್ಷದಿಂದ) ಬಳಸಿಕೊಂಡು ರಾಜ್ಯ ಸರ್ಕಾರವು ಆದೇಶವನ್ನು ಹಿಂತೆಗೆದುಕೊಳ್ಳಲು ಅಥವಾ ಮಾರ್ಪಡಿಸಲು ಒತ್ತಡ ಹೇರಲು ಪ್ರತಿ-ಪ್ರಚಾರಗಳು, ಪ್ರತಿಭಟನೆಗಳು ಮತ್ತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಮಾಧ್ಯಮ ಮತ್ತು ಸೋಷಿಯಲ್‌ ಮೀಡಿಯಾಗಳನ್ನು ಬಳಸಿಕೊಂಡು ಆನ್‌ ಲೈನ್‌ ಮಾಧ್ಯಮದ ಮೂಲಕವೂ ಜನಾಭಿಪ್ರಾಯ ರೂಪಿಸಬಹುದು.

ಧನ್‌ತೆರಸ್‌‍ ದಿನ 60 ಸಾವಿರ ಕೋಟಿ ಚಿನ್ನಾಭರಣ ಖರೀದಿ

ನವದೆಹಲಿ, ಅ.20– ಧನ್‌ತೆರಸ್‌‍ ದಿನವಾದ ಇಂದು ದೇಶದಲ್ಲಿ ಒಂದು ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಬೆಲೆಬಾಳುವ ಚಿನ್ನ, ಬೆಳ್ಳಿ, ಪಾತ್ರೆಗಳು, ಅಡುಗೆ ಸಾಮಾನುಗಳು, ವಾಹನಗಳು, ಎಲೆಕ್ಟ್ರಾನಿಕ್‌ ಮತ್ತು ವಿದ್ಯುತ್‌ ವಸ್ತುಗಳು ಮತ್ತು ಇತರ ಶುಭ ವಸ್ತುಗಳ ಮಾರಾಟವಾಗಿದೆ.

ಧನ್‌ತೆರಸ್‌‍ ದಿನದಂದು, ದೇಶಾದ್ಯಂತ ಗ್ರಾಹಕರು ಸಾಂಪ್ರದಾಯಿಕವಾಗಿ ಚಿನ್ನ, ಬೆಳ್ಳಿ, ಪಾತ್ರೆಗಳು, ಅಡುಗೆ ಸಾಮಾನುಗಳು, ವಾಹನಗಳು, ಪೊರಕೆಗಳು, ಎಲೆಕ್ಟ್ರಾನಿಕ್‌ ಮತ್ತು ವಿದ್ಯುತ್‌ ವಸ್ತುಗಳು, ಲಕ್ಷಿ ಮತ್ತು ಗಣೇಶನ ವಿಗ್ರಹಗಳು, ಮಣ್ಣಿನ ದೀಪಗಳು ಮತ್ತು ಇತರ ಪೂಜಾ ಸಾಮಗ್ರಿಗಳನ್ನು ಖರೀದಿಸುತ್ತಾರೆ, ಇವೆಲ್ಲವನ್ನೂ ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ ಅಂದಾಜಿನ ಪ್ರಕಾರ, ವ್ಯಾಪಾರಿಗಳು ಮತ್ತು ಮಾರುಕಟ್ಟೆ ಕೇಂದ್ರಗಳ ಒಟ್ಟು ವ್ಯವಹಾರವು ದೇಶಾದ್ಯಂತ 1 ಲಕ್ಷ ಕೋಟಿ ದಾಟಿದೆ.
ಈ ವರ್ಷ ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ನಾಣ್ಯಗಳು (60,000 ಕೋಟಿ), ಪಾತ್ರೆಗಳು ಮತ್ತು ಅಡುಗೆ ಸಾಮಾನುಗಳು ಮತ್ತು ಉಪಕರಣಗಳು (15,000 ಕೋಟಿ), ಎಲೆಕ್ಟ್ರಾನಿಕ್‌ ಮತ್ತು ವಿದ್ಯುತ್‌ ವಸ್ತುಗಳು (10,000 ಕೋಟಿ), ಅಲಂಕಾರಿಕ ವಸ್ತುಗಳು, ದೀಪಗಳು ಮತ್ತು ಪೂಜಾ ಸಾಮಗ್ರಿಗಳು (3,000 ಕೋಟಿ), ಒಣ ಹಣ್ಣುಗಳು, ಸಿಹಿತಿಂಡಿಗಳು, ಹಣ್ಣುಗಳು, ಜವಳಿ, ವಾಹನಗಳು ಮತ್ತು ವಿವಿಧ ವಸ್ತುಗಳು (12,000) ಕೋಟಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದಾಖಲೆಯ ಮಾರಾಟವಾಗಿದೆ.

ಹೀಗಾಗಿ, ಈ ದಿನ ದೇಶಾದ್ಯಂತ ಒಟ್ಟು ವ್ಯವಹಾರವು 1 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ ಎಂದು ಸಿಎಐಟಿಯ ಪ್ರಧಾನ ಕಾರ್ಯದರ್ಶಿ ಮತ್ತು ಚಾಂದನಿ ಚೌಕ್ನ ಸಂಸತ್‌ ಸದಸ್ಯ ಪ್ರವೀಣ್‌ ಖಂಡೇಲ್ವಾಲ್‌ ಹೇಳಿದರು.

ಅಖಿಲ ಭಾರತ ಆಭರಣ ವ್ಯಾಪಾರಿಗಳು ಮತ್ತು ಚಿನ್ನದ ಸಿತ್‌ ಫೆಡರೇಶನ್‌ನ ರಾಷ್ಟ್ರೀಯ ಅಧ್ಯಕ್ಷ ಪಂಕಜ್‌ ಅರೋರಾ ಅವರ ಪ್ರಕಾರ, ಕಳೆದ ಎರಡು ದಿನಗಳಲ್ಲಿ ಆಭರಣ ಮಾರುಕಟ್ಟೆಗಳಲ್ಲಿ ಅಭೂತಪೂರ್ವ ಜನದಟ್ಟಣೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ.

ಪ್ರಾಥಮಿಕ ಅಂದಾಜಿನ ಪ್ರಕಾರ, ಚಿನ್ನ ಮತ್ತು ಬೆಳ್ಳಿ ವ್ಯಾಪಾರವು 60,000 ಕೋಟಿಗಳನ್ನು ಮೀರಿದೆ, ಆದರೆ ದೆಹಲಿಯ ಬೆಳ್ಳಿಯ ಮಾರುಕಟ್ಟೆಗಳು 10,000 ಕೋಟಿಗೂ ಹೆಚ್ಚು ಮೌಲ್ಯದ ಮಾರಾಟವನ್ನು ದಾಖಲಿಸಿವೆ, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 25 ರಷ್ಟು ಏರಿಕೆಯಾಗಿದೆ ಎಂದು ಅವರು ಹೇಳಿದರು.

ಬೆಲೆಗಳಲ್ಲಿ ತೀವ್ರ ಏರಿಕೆಯ ಹೊರತಾಗಿಯೂ, ಗ್ರಾಹಕರು ಚಿನ್ನ ಮತ್ತು ಬೆಳ್ಳಿಯನ್ನು ಅತ್ಯಂತ ಸುರಕ್ಷಿತ ಹೂಡಿಕೆಯ ರೂಪಗಳೆಂದು ಪರಿಗಣಿಸಲಾಗಿರುವುದರಿಂದ ಅವುಗಳನ್ನು ಖರೀದಿಸುವುದನ್ನು ಮುಂದುವರೆಸಿದ್ದಾರೆ, ಆದರೆ ನಿಯಮಿತ ಗ್ರಾಹಕರು ಈ ಋತುವಿನಲ್ಲಿ ಹಗುರವಾದ ಆಭರಣಗಳಿಗೆ ಆದ್ಯತೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇದರೊಂದಿಗೆ, ಮುಂಬರುವ ಚಳಿಗಾಲದ ವಿವಾಹ ಋತುವಿಗಾಗಿ ಭಾರವಾದ ಆಭರಣಗಳಿಗೆ ಬೇಡಿಕೆ ಹೆಚ್ಚಿದೆ ಎಂದು ಗಮನಿಸಲಾಗಿದೆ. ಒಟ್ಟಾರೆಯಾಗಿ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಧನ್ತೇರಸ್‌‍ ಹಬ್ಬದಂದು ಶೇ. 15 ರಿಂದ 18 ರಷ್ಟು ಹಬ್ಬದ ಏರಿಕೆ ಕಂಡುಬಂದಿದ್ದು, ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಅವರು ಹೇಳಿದರು.

ಈ ವರ್ಷ ಹಬ್ಬದ ವ್ಯಾಪಾರದಲ್ಲಿ ತೀವ್ರ ಏರಿಕೆಗೆ ಜಿಎಸ್ಟಿ ದರಗಳಲ್ಲಿನ ಗಮನಾರ್ಹ ಇಳಿಕೆಯೇ ಕಾರಣ ಎಂದು ಖಂಡೇಲ್ವಾಲ್‌ ತಿಳಿಸಿದ್ದಾರೆ.ಮತ್ತು ಪ್ರಧಾನ ಮಂತ್ರಿಯವರ ಸ್ವದೇಶಿ ಅಪ್ನಾವೋ (ಸ್ಥಳೀಯ ಉತ್ಪನ್ನಗಳನ್ನು ಅಳವಡಿಸಿಕೊಳ್ಳಿ) ಅಭಿಯಾನದ ಪರಿಣಾಮವನ್ನು ಪ್ರತಿಬಿಂಬಿಸುವ ಸ್ಥಳೀಯವಾಗಿ ತಯಾರಿಸಿದ ಮತ್ತು ಭಾರತೀಯ ಉತ್ಪನ್ನಗಳ ಬಗ್ಗೆ ಗ್ರಾಹಕರು ಸ್ಪಷ್ಟ ಒಲವು ತೋರಿಸುತ್ತಿದ್ದಾರೆ.

ಈ ಹಬ್ಬದ ಋತುವಿನಲ್ಲಿ, ಮಾಲ್‌ಗಳು ಮಾತ್ರವಲ್ಲದೆ ಸಾಂಪ್ರದಾಯಿಕ ಮಾರುಕಟ್ಟೆಗಳು, ಆಭರಣ ಬಜಾರ್ಗಳು, ಪಾತ್ರೆಗಳ ಕೇಂದ್ರಗಳು, ಎಲೆಕ್ಟ್ರಾನಿಕ್‌ ಮಾರುಕಟ್ಟೆಗಳು ಮತ್ತು ಸ್ಥಳೀಯ ಚಿಲ್ಲರೆ ಅಂಗಡಿಗಳು ಅಸಾಧಾರಣ ಉತ್ಸಾಹ ಮತ್ತು ದಾಖಲೆಯ ಗ್ರಾಹಕರ ಮತದಾನಕ್ಕೆ ಸಾಕ್ಷಿಯಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಪಾಪಿ’ಸ್ತಾನಕ್ಕೆ ದುಃಸ್ವಪ್ನವಾಗಿರುವ 800ಕಿ.ಮಿ. ವ್ಯಾಪ್ತಿಯ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ

ನವದೆಹಲಿ,ಅ.20- ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಬ್ರಹೋಸ್‌‍ ಸೂಪರ್‌ ಸಾನಿಕ್‌ ಕ್ಷಿಪಣಿ ಪಾಕಿಸ್ತಾನದ ನಿದ್ದೆಗೆಡಿಸಿದೆ. ಈಗಾಗಲೇ ಆಪರೇಷನ್‌ ಸಿಂಧೂರ್‌ನಲ್ಲಿ ಬಳಸಲಾಗಿದ್ದ ಬ್ರಹೋಸ್‌‍ ಕ್ಷಿಪಣಿ ಇಡೀ ವಿಶ್ವವೇ ಭಾರತದ ಸೇನಾ ಬತ್ತಳಿಕೆಯ ಹೊಸ ಅಸ್ತ್ರದ ಬಗ್ಗೆ ಚಕಿತಗೊಂಡಿತ್ತು.

ಕಡಿಮೆ ಅಂತರದ ನಿರ್ದಿಷ್ಟ ಗುರಿಯನ್ನು ತಲುಪಬಹುದಾದ ಬ್ರಹೋಸ್‌‍ ಸೂಪರ್‌ ಸಾನಿಕ್‌ ಕ್ಷಿಪಣಿ ಅಭಿವೃದ್ಧಿಗೆ (450 ಕಿ.ಮೀ.) ಭಾರತದ ವಿಜ್ಞಾನಿಗಳು ಸತತ ಪ್ರಯತ್ನ ನಡೆಸಿ ಯಶಸ್ವಿಯಾಗಿದ್ದರು.

ಈಗ 800 ಕಿಲೋಮೀಟರ್‌ ದೂರ ಕ್ರಮಿಸಬಹುದಾದ ಕ್ಷಿಪಣಿ ಪರೀಕ್ಷೆಯನ್ನು ಆರಂಭಿಸಿದೆ. ಕೇವಲ ಎರಡೇ ವರ್ಷದಲ್ಲಿ ಹೊಸ ಆವೃತ್ತಿಯ ಬ್ರಹೋಸ್‌‍ ಕ್ಷೀಪಣಿಗಳ ಸರಣಿಯನ್ನು ಅಭಿವೃದ್ಧಿಪಡಿಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ವಾಯುಪಡೆಯಲ್ಲಿ ಬಳಸಬಹುದಾದ 200 ಕಿಮೀ. ರೇಂಜಿನ ಅಸ್ತ್ರ ಕ್ಷಿಪಣಿಯನ್ನು ಕೂಡ ಮುಂದಿನ 2026-27ರ ನಡುವೆ ಸಿದ್ಧಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಪಾಕಿಸ್ತಾನದ ಪ್ರತಿಯೊಂದು ಜಾಗವನ್ನು ಮುಟ್ಟುವ ಸಾಮರ್ಥ್ಯ ಹೊಂದಿರುವ ಬ್ರಹೋಸ್‌‍ ಕ್ಷಿಪಣಿ ಸಿದ್ಧವಾಗಿದ್ದು, ಈಗ ದೂರಗಾಮಿ ಆವೃತ್ತಿಯನ್ನು ಅಭಿವೃದ್ಧಿಪಡಿಸುವತ್ತ ಹೆಚ್ಚಿನ ಚಿತ್ತಹರಿಸಲಾಗಿದೆ.

ಮುಂದಿನ 2027ರ ವೇಳೆಗ ಬ್ರಹೋಸ್‌‍ ಸೂಪರ್‌ ಸಾನಿಕ್‌ ಸರಣಿ ಕ್ಷಿಪಣಿಗಳು ಸಿದ್ದಗೊಳ್ಳಲಿದ್ದು, ನೆರೆಯ ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದೆ. ಮಾಹಿತಿಯ ಪ್ರಕಾರ, ಉಪಗ್ರಹ ಆಧಾರಿತ ಉಡಾವಣಾ ವ್ಯವಸ್ಥೆಯನ್ನು ಕೂಡ ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರಸ್ತುತ ಇದರ ಬಗ್ಗೆ ಹಲವು ಪರೀಕ್ಷೆಗಳು ನಡೆಯಬೇಕಾಗಿದೆ.

ಕಳೆದ ಅಪರೇಷನ್‌ ಸಿಂಧೂರ್‌ ವೇಳೆ ಸುಖೋಯ್‌ 30 ಎಂಕೆಐ ಸಮರ ವಿಮಾನದ ಮೂಲಕ 450 ಕಿಲೋಮೀಟರ್‌ ರೇಂಜಿನ ಬ್ರಹೋಸ್‌‍ ಕ್ಷಿಪಣಿಯನ್ನು ಬಳಸಲಾಗಿತ್ತು. ಭಾರತದ ವಾಯು ಪ್ರದೇಶವನ್ನು ಸುರಕ್ಷಿತಗೊಳಿಸುವಲ್ಲಿ ಈ ಸುಖೋಯ್‌ ಯುದ್ಧ ವಿಮಾನದ ಪಾತ್ರ ಮಹತ್ವದಾಗಿದ್ದು, ಅದು ಉಡಾಯಿಸಿದ ಬ್ರಹೋಸ್‌‍ ಕ್ಷಿಪಣಿ ನಿರ್ದಿಷ್ಟ ತಾಣಕ್ಕೆ ಪಾಕಿಸ್ತಾನದ ದೂರದ ತಾಣದಲ್ಲಿ ಘರ್ಜಿಸಿದೆ.

ದೀಪಾವಳಿ ಕೊಡುಗೆ ನೆಪದಲ್ಲಿ ಬೆಂಗಳೂರು ಜನರಿಗೆ ಕಾಂಗ್ರೆಸ್‌‍ ಸರ್ಕಾರದಿಂದ ಮಹಾ ದೋಖಾ : ನಿಖಿಲ್‌

ಬೆಂಗಳೂರು, ಅ.20-ದೀಪಾವಳಿ ಕೊಡುಗೆ ನೆಪದಲ್ಲಿ ಬೆಂಗಳೂರು ಜನರಿಗೆ ಕಾಂಗ್ರೆಸ್‌‍ ಮಹಾ ದೋಖಾ ಮಾಡುತ್ತಿದೆ. ನೀವು ಹಬ್ಬವನ್ನು ಸಂತೋಷದಿಂದ ಆಚರಿಸಿ, ಕಾಂಗ್ರೆಸ್‌‍ ಲೂಟಿಯ ವಿರುದ್ಧ ಜೆಡಿಎಸ್‌‍ ಹೋರಾಡುತ್ತೇವೆ ಎಂದು ಜೆಡಿಎಸ್‌‍ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಈ ಬಗ್ಗೆ ತಮ ಎಕ್ಸ್ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಬಿ ಖಾತದಿಂದ ಎ ಖಾತಾ ಮಾಡುವ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್‌‍ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಶುಭೋದಯ ಬೆಂಗಳೂರು, ಎಲ್ಲರಿಗೂ ದೀಪಾವಳಿಯ ಶುಭಾಶಯಗಳು.

ನೀವು ದೀಪ ಹಚ್ಚುತ್ತಿರುವಾಗ, ಕಾಂಗ್ರೆಸ್‌‍ ಬಿ ಖಾತಾದಿಂದ ಎ ಖಾತಾ ಮಾಡಲು ಶೇ.5 ತೆರಿಗೆಯಿಂದ ಮಧ್ಯಮ ವರ್ಗವನ್ನು ಸುಟ್ಟು ಹಾಕುತ್ತಿದೆ. 7.5 ಲಕ್ಷ ಮನೆ ಮಾಲೀಕರು 100 ದಿನಗಳಲ್ಲಿ ಲಕ್ಷ ಲಕ್ಷ ಪಾವತಿಸುವಂತೆ ಒತ್ತಾಯಿಸುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಇದರ ಬಗ್ಗೆ ಚಿಂತಿಸಬೇಡಿ, ಜೆಡಿಎಸ್‌‍ ಪಕ್ಷವು ಪ್ರತಿಯೊಬ್ಬ ಬಿ ಖಾತಾ ಹೊಂದಿರುವವರ ಪರವಾಗಿ ಹೋರಾಡುತ್ತದೆ. ನಾವು ಪ್ರತಿಭಟನೆ ಮೂಲಕ ಮತ್ತು ನ್ಯಾಯಾಲಯದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತೇವೆ. ನಿಮ ಹಬ್ಬವನ್ನು ಸಂತೋಷದಿಂದ ಆಚರಿಸಿ, ನಾವು ಕಾಂಗ್ರೆಸ್‌‍ ಲೂಟಿಯ ವಿರುದ್ಧ ಹೋರಾಡುತ್ತೇವೆ. ಈ ಬಗ್ಗೆ ನಾನು ಪೂರ್ಣ ವಿವರಗಳನ್ನು ಗುರುವಾರ ಮಾಧ್ಯಮದ ಮೂಲಕ ತಿಳಿಸುವುದಾಗಿ ಅವರು ಹೇಳಿದ್ದಾರೆ.

ದೀಪಾವಳಿ ದಿನವೇ ಭಾರತಕ್ಕೆ ಟ್ರಂಪ್ ಸುಂಕದ ಭೀತಿ

ವಾಷಿಂಗ್ಟನ್‌.ಅ. 20: ಬೆಳಕಿನ ಹಬ್ಬ ದೀಪಾವಳಿ ದಿನವೂ ಅಮೆರಿಕ ಅಧ್ಯಕ್ಷ ಭಾರತದ ವಿರುದ್ಧ ಗುಡುಗಿದ್ದಾರೆ. ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸದಿದ್ದರೆ ಮತ್ತಷ್ಟು ಭಾರಿ ಸುಂಕ ವಿಧಿಸುವುದಾಗಿ ಎಚ್ಚರಿಸಿದ್ದಾರೆ. ಇದಲ್ಲದೆ, ಭಾರತ ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ ಮತ್ತು ಈ ವಿಷಯದ ಬಗ್ಗೆ ಪ್ರಧಾನಿ ಮೋದಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂದು ಟ್ರಂಪ್‌ ಹೇಳಿದ್ದಾರೆ.

ಆದಾಗ್ಯೂ, ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್‌ ನಡುವೆ ಯಾವುದೇ ಸಂಭಾಷಣೆ ನಡೆದಿಲ್ಲ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಈಗಾಗಲೇ ಹೇಳಿದೆ.ಒನ್‌ಫೋರ್ಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌, ಭಾರತ ತನ್ನ ಷರತ್ತುಗಳಿಗೆ ಒಪ್ಪದಿದ್ದರೆ ಭಾರೀ ಸುಂಕ ವಿಧಿಸುವುದಾಗಿ ಹೇಳಿದರು. ರಷ್ಯಾದ ತೈಲ ಖರೀದಿಸುವ ವಿಷಯದ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಿದ್ದೇನೆ ಎಂದು ಅವರು ಹೇಳಿದರು.

ಅಮೆರಿಕದ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಭಾರತದ ಮೇಲೆ ಶೇ.50 ರಷ್ಟು ಸುಂಕ ವಿಧಿಸಿದ್ದು, ಇದುವರೆಗಿನ ಅತ್ಯಧಿಕವಾಗಿದೆ ಎಂಬುದು ಗಮನಾರ್ಹ. ಭಾರತದ ರಷ್ಯಾದ ತೈಲ ಖರೀದಿಯು ಉಕ್ರೇನ್‌ ಯುದ್ಧದಲ್ಲಿ ಪುಟಿನ್‌ ಅವರ ಪಾಲ್ಗೊಳ್ಳುವಿಕೆಗೆ ಪರೋಕ್ಷವಾಗಿ ಹಣಕಾಸು ಒದಗಿಸುತ್ತಿದೆ ಎಂದು ಟ್ರಂಪ್‌ ವಾದಿಸುತ್ತಿದ್ದಾರೆ.

ಪಾಶ್ಚಿಮಾತ್ಯ ದೇಶಗಳು ತೈಲವನ್ನು ಖರೀದಿಸಲು ನಿರಾಕರಿಸಿದ್ದರ ಹೊರತಾಗಿಯೂ ಮತ್ತು 2022 ರಲ್ಲಿ ಉಕ್ರೇನ್‌ ಜೊತೆಗಿನ ರಷ್ಯಾದ ಸಂಘರ್ಷದ ಹೊರತಾಗಿಯೂ ಭಾರತವು ಮಾಸ್ಕೋದಿಂದ ತೈಲವನ್ನು ಖರೀದಿಸುತ್ತಿದೆ. ರಷ್ಯಾ ಭಾರತಕ್ಕೆ ಕಡಿಮೆ ಬೆಲೆಗೆ ತೈಲವನ್ನು ಪೂರೈಸುತ್ತಿದೆ.ಏತನ್ಮಧ್ಯೆ, ಭಾರತ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸದಿದ್ದರೆ ಮತ್ತಷ್ಟು ಸುಂಕ ವಿಧಿಸುವುದಾಗಿ ಟ್ರಂಪ್‌ ಪದೇ ಪದೇ ಬೆದರಿಕೆ ಹಾಕಿದ್ದಾರೆ.

ರಾಷ್ಟ್ರೀಯ ಹಿತಾಸಕ್ತಿಗಳಿಗೆ ಮೊದಲ ಸ್ಥಾನ ನೀಡುವುದು ನಮ್ಮ ಆದ್ಯತೆ ಎಂದು ಭಾರತ ಈಗಾಗಲೇ ಸ್ಪಷ್ಟಪಡಿಸಿದೆ ಎಂಬುದು ಗಮನಿಸಬೇಕಾದ ಸಂಗತಿ. ಇತ್ತೀಚಿನ ತಿಂಗಳುಗಳಲ್ಲಿ ರಷ್ಯಾ ಜೊತೆ ವ್ಯಾಪಾರ ಮಾಡುವ ದೇಶಗಳ ಮೇಲೆ ಅಮೆರಿಕ ಒತ್ತಡ ಹೆಚ್ಚಿಸುತ್ತಿದೆ.ರಷ್ಯಾದಿಂದ ತೈಲ ಖರೀದಿಸುವ ದೇಶಗಳು ಪರೋಕ್ಷವಾಗಿ ಉಕ್ರೇನ್‌ ಯುದ್ಧಕ್ಕೆ ಹಣಕಾಸು ಒದಗಿಸುತ್ತಿವೆ ಎಂದು ಟ್ರಂಪ್‌ ಆಡಳಿತ ಹೇಳುತ್ತಿದೆ. ಭಾರತ-ಯುಎಸ್‌‍ ವ್ಯಾಪಾರ ಮಾತುಕತೆಯಲ್ಲಿ ರಷ್ಯಾದಿಂದ ಅಗ್ಗದ ತೈಲ ಖರೀದಿಸುವುದು ಪ್ರಮುಖ ಅಡಚಣೆಯಾಗಿ ಉಳಿದಿದೆ.