Home Blog Page 51

‘ಉದ್ಯಾನವನ ನಡಿಗೆ’ ಕಾರ್ಯಕ್ರಮ : ಸಂವಾದದ ವೇಳೆ ಡಿಕೆಶಿ-ಮುನಿರತ್ನ ನಡುವೆ ವಾಗ್ವಾದ, ಹೈಡ್ರಾಮಾ

ಬೆಂಗಳೂರು, ಅ.12- ಬೆಂಗಳೂರು ನಗರಾಭಿವೃದ್ದಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಉದ್ಯಾನವನ ನಡಿಗೆ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಮುನಿರತ್ನ ಪ್ರತಿಭಟನೆ ನಡೆಸಿ, ಗದ್ದಲ ಎಬ್ಬಿಸಿದ್ದರಿಂದಾಗಿ ಕಾವೇರಿದ ವಾತಾವರಣ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ತಮ ಮೇಲೆ ಹಲ್ಲೆಯಾಗಿದೆ ಎಂದು ಮುನಿರತ್ನ ಗಂಭೀರ ಆರೋಪ ಮಾಡಿದ್ದಾರೆ.

ಸಾರ್ವಜನಿಕರ ಅಹವಾಲುಗಳನ್ನು ಖುದ್ದು ಆಲಿಸಿ ಬಗೆಹರಿಸುವ ಮೂಲಕ ಬ್ರ್ಯಾಂಡ್‌ ಬೆಂಗಳೂರು ಕಲ್ಪನೆಯನ್ನು ಸಾಕಾರಗೊಳಿಸಲು ಡಿ.ಕೆ.ಶಿವಕುಮಾರ್‌ ಬೆಂಗಳೂರು ನಡಿಗೆ ಆರಂಭಿಸಿದ್ದಾರೆ. ನಿನ್ನೆ ಲಾಲ್‌ಬಾಗ್‌ನಲ್ಲಿ ಕಾರ್ಯಕ್ರಮ ನಡೆಸಿದರು. ಇಂದು ಮತ್ತಿಕೆರೆಯ ಜೆ.ಪಿ. ಪಾರ್ಕ್‌ನಲ್ಲಿ ವಾಯುವಿಹಾರಿಗಳೊಂದಿಗೆ ನಡಿಗೆ, ನಾಗರಿಕರೊಂದಿಗೆ ಸ್ಪಂದನೆ ಹಾಗೂ ವಿವಿಧ ಸ್ಥಳಗಳ ಪರಿಶೀಲನೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮ ಆರಂಭವಾದಾಗ ಶಾಸಕ ಮುನಿರತ್ನ ವೇದಿಕೆಯ ಮುಂದೆ ಸಾರ್ವಜನಿಕರೊಂದಿಗೆ ಆರ್‌ಎಸ್‌‍ಎಸ್‌‍ನ ಸಮವಸ್ತ್ರವಾಗಿರುವ ಬಿಳಿ ಅಂಗಿ, ಖಾಕಿ ಪ್ಯಾಂಟ್‌, ಕರಿಟೋಪಿ ಧರಿಸಿ ಕುಳಿತಿದ್ದರು. ಕಾರ್ಯಕ್ರಮ ಚಾಲನೆಯಾಗುತ್ತಿದ್ದಂತೆ ಡಿ.ಕೆ.ಶಿವಕುಮಾರ್‌ ಅವರು, ಮುನಿರತ್ನ ಅವರನ್ನು ಎಂಎಲ್‌ಎ ಮೇಲೆ ಬನ್ನಿ ಎಂದು ಕರೆದರು. ಈ ಸಂದರ್ಭದಲ್ಲಿ ನೀರು ಕುಡಿದು ಸಾವರಿಸಿಕೊಳ್ಳುತ್ತಿದ್ದ ಮುನಿರತ್ನ ಡಿ.ಕೆ.ಶಿವಕುಮಾರ್‌ ಕರೆಗೆ ಸ್ಪಂದಿಸಲಿಲ್ಲ, ಕರಿ ಟೋಪಿ ಎಂಎಲ್‌ಎ ಬನ್ನಿ ಎಂದು ಉಪಮುಖ್ಯಮಂತ್ರಿ ಮತ್ತೆ ಕರೆದರು. ಈ ಸಂದರ್ಭದಲ್ಲಿ ವೇದಿಕೆ ಬಳಿ ಹೋದ ಮುನಿರತ್ನ ಉಪಮುಖ್ಯಮಂತ್ರಿ ಅವರಿಂದಲೇ ಮೈಕ್‌ ಪಡೆದು, ಇದು ಸರ್ಕಾರದ ಕಾರ್ಯಕ್ರಮವಾಗಿದ್ದರೂ, ಶಾಸಕನಾದ ನನಗೆ ಆಹ್ವಾನವಿಲ್ಲ, ಸಂಸದರಿಗೂ ಆಹ್ವಾನವಿಲ್ಲ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರ ಫೋಟೋ ಹಾಕಿಕೊಂಡು ಕಾರ್ಯಕ್ರಮ ಮಾಡುತ್ತಿದ್ದಾರೆ. ಹೀಗಾಗಿ ನಾನು ವೇದಿಕೆ ಮೇಲಿರುವುದಿಲ್ಲ. ಬೆಂಗಳೂರಿನ ಸಾಮಾನ್ಯ ಪ್ರಜೆಯಾಗಿ ಬಂದಿದ್ದೇನೆ. ಜನರ ನಡುವೆಯೇ ಕುಳಿತಿರುತ್ತೇನೆ ಎಂದು ಹೇಳಿ ವಾಪಸ್‌‍ ಹೋದರು.

ಕಾರ್ಯಕ್ರಮ ಆರಂಭದ ಸಲುವಾಗಿ ಸ್ವಾಗತ ಕೋರುವ ವೇಳೆ ನಿರೂಪಕಿ ಶಾಸಕ ಮುನಿರತ್ನ ಅವರು ವೇದಿಕೆಗೆ ಬರಬೇಕೆಂದು ಮನವಿ ಮಾಡಿದರು. ಈ ವೇಳೆ ಮತ್ತೆ ಎದ್ದು ಬಂದ ಮುನಿರತ್ನ ನಿರೂಪಕಿಯಿಂದ ಮೈಕ್‌ ಕಸಿದುಕೊಂಡು, ಇದು ಸರ್ಕಾರದ ಕಾರ್ಯಕ್ರಮ. ನನಗೆ ಆಹ್ವಾನವಿಲ್ಲ. ಜಿಬಿಎ ಮುಖ್ಯ ಆಯುಕ್ತರೇ ಇದು ನಿಮ ಗಮನಕ್ಕೆ ಇರಲಿ. ಇಲ್ಲಿ ರಾಜಕೀಯ ಬೇಡ, ಶಾಸಕರು, ಸಂಸದರಿಗೆ ಆಹ್ವಾನ ಇಲ್ಲ. ಇದು ಸಾರ್ವಜನಿಕರ ಕುಂದುಕೊರತೆ ಕಾರ್ಯಕ್ರಮವಲ್ಲ, ಕಾಂಗ್ರೆಸ್‌‍ ಕಾರ್ಯಕ್ರಮ ಎಂದು ರೋಷಾವೇಶದ ಮಾತುಗಳನ್ನಾಡಿದರು.

ಈ ವೇಳೆ ಸಿಟ್ಟಾದ ಕಾಂಗ್ರೆಸ್‌‍ ಕಾರ್ಯಕರ್ತರು ಮುನಿರತ್ನ ಅವರನ್ನು ಸುತ್ತುವರೆದು ಪ್ರತಿರೋಧ ವ್ಯಕ್ತಪಡಿಸಿದರು. ಇಲ್ಲಿ ಗೂಂಡಾಗಿರಿ ಮಾಡಲು ಬಂದಿದ್ದೀಯ? ವೇದಿಕೆಯಿಂದ ಕೆಳಗೆ ಇಳಿ, ಇಲ್ಲಿಂದ ಹೊರಡು ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಇನ್ನೂ ಕೆಲವರು ರೇಪಿಸ್ಟ್‌ ಎಂದು ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಕಾವೇರಿದ ವಾತಾವರಣ ನಿರ್ಮಾಣವಾದಾಗ ಪೊಲೀಸರು ಮಧ್ಯ ಪ್ರವೇಶಿಸಿ, ಮುನಿರತ್ನ ಅವರನ್ನು ಸುತ್ತುವರೆದು ರಕ್ಷಣೆ ನೀಡಲಾರಂಭಿಸಿದರು. ಈ ಹಂತದಲ್ಲಿ ಮುನಿರತ್ನ ವೇದಿಕೆ ಬಳಿಯೇ ಕುಳಿತು ಧರಣಿ ಆರಂಭಿಸಿದರು. ಅವರನ್ನು ಕರೆದೊಯ್ಯಲು ಬಂದ ಪೊಲೀಸರಿಗೆ ಎಚ್ಚರಿಕೆ ನೀಡಿ, ನನ್ನದು ಮೌನ ಪ್ರತಿಭಟನೆ. ಮುಟ್ಟಿದರೆ ಸುಮನಿರುವುದಿಲ್ಲ. ನಾನೊಬ್ಬ ಶಾಸಕ, ದೌರ್ಜನ್ಯ, ದಬ್ಬಾಳಿಕೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.

ಮುನಿರತ್ನ ಅವರ ಗದ್ದಲದಿಂದಾಗಿ ಗೊಂದಲ ನಿರ್ಮಾಣವಾಗಿ ಕಾರ್ಯಕ್ರಮ ಅಸ್ತವ್ಯಸ್ತವಾಗಿತ್ತು. ಡಿ.ಕೆ.ಶಿವಕುಮಾರ್‌ ಮುನಿರತ್ನ ಅವರ ಗದ್ದಲವನ್ನು ಮೌನವಾಗಿ ನೋಡುತ್ತಾ ಕುಳಿತಿದ್ದರು. ಒಂದು ಹಂತದಲ್ಲಿ ಮುನಿರತ್ನ ಅವರ ಬಳಿ ಹೋಗಿ, ಸರ್ಕಾರಿ ಕಾರ್ಯಕ್ರಮವನ್ನು ಕಾಂಗ್ರೆಸ್‌‍ ಕಾರ್ಯಕ್ರಮ ಮಾಡಿದ್ದೀರ ಎಂದು ಕಿಡಿ ಕಾರಿದಾಗ, ಮೈಕ್‌ ಕಿತ್ತುಕೊಂಡು ಅವರನ್ನು ಕಳುಹಿಸಿ ಎಂದು ಡಿ.ಕೆ.ಶಿವಕುಮಾರ್‌ ಸೂಚನೆ ನೀಡಿದರು.

ಪೊಲೀಸರು ಶಾಸಕರನ್ನು ವೇದಿಕೆ ಬಳಿಯಿಂದ ಸ್ವಲ್ಪ ದೂರ ಕರೆದುಕೊಂಡು ಹೋದರು. ಈ ಹಂತದಲ್ಲಿ ನನ್ನ ಮೇಲೆ ಹಲ್ಲೆಯಾಗಿದೆ. ಹಿಂದಿನಿಂದ ಒದ್ದಿದ್ದಾರೆ. ಕನಕಪುರದಲ್ಲಿ ದೌರ್ಜನ್ಯ, ದಬ್ಬಾಳಿಕೆ ಮಾಡಿದವರು ಬೆಂಗಳೂರಿನಲ್ಲೂ ಅದನ್ನೇ ಮುಂದುವರಿಸಲು ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರ್‌ಎಸ್‌‍ಎಸ್‌‍ನ 100ನೇ ವರ್ಷಾಚರಣೆ ಮುಗಿಸಿಕೊಂಡು ನಾನು ಇಲ್ಲಿಗೆ ಬಂದಿದ್ದೇನೆ. ಕನಿಷ್ಠ ಮರ್ಯಾದೆ ಕೊಟ್ಟಿಲ್ಲ, ಕರಿ ಟೋಪಿ ಎಂದು ಕರೆಯುತ್ತಾರೆ, ನನ್ನ ಮೇಲೆ ಹಲ್ಲೆ ಮಾಡಿದ್ದಾರೆ, ಈಗಲೂ ಹೊಡೆಯಲು ಬರುತ್ತಿದ್ದಾರೆ. ನನ್ನ ಆರ್‌ಎಸ್‌‍ಎಸ್‌‍ ಟೋಪಿಯನ್ನು ಕಿತ್ತುಕೊಂಡು, ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.

ನನ್ನನ್ನು ಹೊಡೆಯಲು ಚೆನ್ನಪಟ್ಟಣ, ರಾಮನಗರ, ಕನಕಪುರದಿಂದ ಪುಡಿರೌಡಿಗಳನ್ನು ಕರೆಸಿದ್ದಾರೆ. ನಮ ಪಕ್ಷಕ್ಕೆ ದ್ರೋಹ ಮಾಡಿ ಉಪಮುಖ್ಯಮಂತ್ರಿ ಅವರ ಸಹೋದರ ಡಿ.ಕೆ. ಸುರೇಶ್‌ನನ್ನು ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸಿದ್ದರೆ, ನಾನು ಒಳ್ಳೆಯವನಾಗಿರುತ್ತಿದ್ದೆ. ಅವರ ಸೋಲಿಗೆ ನಾನು ಕಾರಣ ಎಂಬ ಕಾರಣಕ್ಕೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನನಗೆ 15 ವರ್ಷದ ಮೊಮಗ ಇದ್ದಾನೆ. ಈಗ ರೇಪ್‌ ಕೇಸ್‌‍ ಹಾಕಿಸಿದ್ದಾರೆ. ಪಾಲಿಕೆ ಸದಸ್ಯರಾಗುವ ಆಕಾಂಕ್ಷಿಗಳಿಂದ ದೂರಿನ ಮೇಲೆ ದೂರು ಕೊಡಿಸುತ್ತಿದ್ದಾರೆ. 7 ವರ್ಷಗಳಿಂದಲೂ ಒಳ್ಳೆಯವನಾಗಿದ್ದ ಮುನಿರತ್ನ ಅವರನ್ನು ಬಿಟ್ಟು ಬಂದ ಮೇಲೆ ರೇಪಿಸ್ಟ್‌ ಆಗಿದ್ದಾನೆ. ದಲಿತ ದೌರ್ಜನ್ಯದ ಪ್ರಕರಣ ದಾಖಲಾಗಿದೆ. ಇವರ ದ್ವೇಷಕ್ಕೆ ಜಾರಕಿಹೊಳಿ, ಕೆ.ಎನ್‌. ರಾಜಣ್ಣ, ಎಚ್‌ಡಿ ರೇವಣ್ಣ ಅವರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಕಿಡಿಕಾರಿದರು.

ಜಿಬಿಎನ 5 ಪಾಲಿಕೆಗಳನ್ನು ಗೆಲ್ಲಬೇಕು ಎಂಬ ಕಾರಣಕ್ಕೆ ರಾಜಕೀಯ ಗಿಮಿಕ್‌ ಮಾಡುತ್ತಿದ್ದಾರೆ. 400 ಎಕರೆ ಜಾಗ ಇರುವ ಲಾಲ್‌ಬಾಗ್‌, 200 ಎಕರೆಯಿರುವ ಕಬ್ಬನ್‌ ಪಾರ್ಕ್‌ನಲ್ಲಿ ತಲಾ ಒಂದು ಕಾರ್ಯಕ್ರಮ ಮಾಡಿದ್ದಾರೆ. ನನ್ನ ಕ್ಷೇತ್ರದ ಜೆ.ಪಿ. ಪಾರ್ಕ್‌ನಲ್ಲಿ ಎರಡು ಕಾರ್ಯಕ್ರಮ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷಿಗಳಾಗಿರುವವರನ್ನು ಸುತ್ತಲೂ ನಿಲ್ಲಿಸಿಕೊಂಡಿದ್ದಾರೆ.ನನಗೆ ಯಾವುದೇ ಆಹ್ವಾನ ಬಂದಿಲ್ಲ, ಒಂದು ವೇಳೆ ಆಹ್ವಾನ ಬಂದಿದ್ದರೆ ರಾಜಕೀಯ ಬಿಟ್ಟು ಹೋಗುತ್ತೇನೆ ಎಂದು ಸವಾಲು ಹಾಕಿದರು.

ಈ ಸಂದರ್ಭದಲ್ಲಿ ಪೊಲೀಸರು ಮುನಿರತ್ನ ಅವರಿಗೆ ನೀರು ಕುಡಿಸಿ ಸಮಾಧಾನ ಪಡಿಸುವ ಮೂಲಕ ಅಲ್ಲಿಂದ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದರು. ಆದರೆ ಅದಕ್ಕೆ ಮಣಿಯದ ಮುನಿರತ್ನ ಧರಣಿ ಆರಂಭಿಸಿದರು. ಪರಿಸ್ಥಿತಿ ನಿಯಂತ್ರಸಿಲು ಪೊಲೀಸರು ಮುನಿರತ್ನ ಅವರನ್ನು ಬಲವಂತವಾಗಿ ಕರೆದೊಯ್ದರು.

ಬೆಂಗಳೂರಲ್ಲಿ ಸಾರ್ವಜನಿಕರ ಜೊತೆ ಡಿಸಿಎಂ ಡಿಕೆಶಿ ಸಂವಾದ

ಬೆಂಗಳೂರು, ಅ.12- ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎರಡನೇ ದಿನವೂ ತಮ್ಮ ಉದ್ಯಾನ ನಡಿಗೆಯನ್ನು ಮುಂದುವರೆಸಿದ್ದು, ಬೆಂಗಳೂರು ಉತ್ತರ ಪಾಲಿಕೆಯ ಮತ್ತಿಕೆರೆಯಲ್ಲಿರುವ ಜೆ.ಪಿ. ಪಾರ್ಕ್‌ನಲ್ಲಿ ಸಾರ್ವಜನಿಕರ ಜೊತೆ ಸಂವಾದ ನಡೆಸಿದರು. ಬಿ.ಕೆ.ನಗರದ ಫಾತಿಮಾ ಅವರು, ವಿದ್ಯುತ್‌ ಸಮಸ್ಯೆ ಬಗ್ಗೆ ದೂರು ಹೇಳಿದರು. ಉಚಿತ ವಿದ್ಯುತ್‌ ನೀಡುತ್ತಿದ್ದೇವೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದಾಗ, ವಿದ್ಯುತ್ತೇ ಇಲ್ಲ ಉಚಿತ ತೆಗೆದುಕೊಂಡು ಏನು ಮಾಡೋಣ ಎಂದು ಪ್ರತಿಕ್ರಿಯಿಸಿದರು.

ಸಂಜೆ 7.30ರ ಮೇಲೆ ಉದ್ಯಾನವನದೊಳಗೆ ಬಿಡುತ್ತಿಲ್ಲ, ವಾಕಿಂಗ್‌ ಮಾಡಲು ಸಮಸ್ಯೆಯಾಗುತ್ತಿದೆ. ಸ್ವಚ್ಛತೆಯಿಲ್ಲ ಎಂದು ನಾಗರಿಕರು ದೂರಿದರು.
ಇದು ರಾಜಕೀಯಕ್ಕಾಗಿ ಮಾಡುತ್ತಿರುವ ಸಂವಾದ ಅಲ್ಲ. ಜನರ ಸಮಸ್ಯೆಗೆ ಸ್ಪಂದಿಸಬೇಕು, ಬೆಂಗಳೂರಿಗೆ ಹೊಸ ಸ್ವರೂಪ ನೀಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡಿದ್ದೇನೆ ಎಂದು ವೇದಿಕೆಯಲ್ಲಿ ಹೇಳಿದರು.

ಪ್ರತಿ ಶನಿವಾರ, ಭಾನುವಾರ ಉದ್ಯಾನವನಗಳಿಗೆ ಹೋಗಿ ಜನರನ್ನು ಭೇಟಿ ಮಾಡುತ್ತೇನೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾರ್ವಜನಿಕವಾಗಿ ಮುಕ್ತ ಆಹ್ವಾನ ನೀಡಿದ್ದೇವೆ.
ಇಲ್ಲಿನ ಜನಪ್ರತಿನಿಧಿ (ಶಾಸಕ ಮುನಿರತ್ನಂ ನಾಯ್ಡು) ವರ್ತನೆ ನೋಡಿದರೆ, ನೀವು ಎಂತಹ ನರಕದಲ್ಲಿ ಬದುಕುತ್ತಿದ್ದೀರಿ ಎನಿಸುತ್ತಿದೆ. ಇಂತಹ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ ಪರಿಸ್ಥಿತಿ ನನಗೆ ಅರ್ಥವಾಗುತ್ತದೆ ಎಂದು ಹೇಳಿದರು.

ಸ್ಥಳೀಯ ಶಾಸಕ ಮುನಿರತ್ನ ಅವರಿಗೆ ತಾಳೆಯಿಲ್ಲ. ಅವರು ಕಾರ್ಯಕ್ರಮವನ್ನು ಹಾಳು ಮಾಡಬೇಕು ಎಂದೇ ಬಂದರೋ ಏನೋ. ಇದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ, ನೀವೂ ತಲೆಕೆಡಿಸಿಕೊಳ್ಳಬೇಡಿ. ಇಂತಹವರನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ನಿಮ ಮನಸಿಗೆ ಬಹಳ ನೋವಾಗುತ್ತಿದೆ ಎಂದು ನನಗೆ ಚೆನ್ನಾಗಿ ಗೊತ್ತಿದೆ. ಇದಕ್ಕೆಲ್ಲಾ ಸೂಕ್ತ ಸಮಯದಲ್ಲಿ ಉತ್ತರ ನೀಡಿ ಎಂದು ಹೇಳಿದರು.

ಇಂತಹ ಪ್ರತಿನಿಧಿಯನ್ನು ಇಟ್ಟುಕೊಳ್ಳುವುದೋ, ಬೇಡವೋ ಎಂಬುದನ್ನು ಜನ ತೀರ್ಮಾನ ಮಾಡಬೇಕು. ಇದರ ಬಗ್ಗೆ ನಾನು ಹೆಚ್ಚು ಮಾತನಾಡಲು ಹೋಗುವುದಿಲ್ಲ. ಜನಪ್ರತಿನಿಧಿಗಳಿಗೆ ಏನು ಗೌರವ ನೀಡಬೇಕು ಎನ್ನುವ ಅರಿವು ನನಗಿದೆ. ರಾಜಕಾರಣದಲ್ಲಿ ಸೋಲು, ಗೆಲುವು ಇದ್ದೇ ಇರುತ್ತದೆ ಯಾವುದೂ ಶಾಶ್ವತವಲ್ಲ ಎಂದು ತಿಳಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಸಾರ್ವಜನಿಕರ ದೂರುಗಳನ್ನು ಆಲಿಸಲು ಆಯೋಜಿಸಲಾಗಿದ್ದ ಕಾರ್ಯಕ್ರಮ.

ನಿನ್ನೆ ಲಾಲ್‌ಬಾಗ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ಶಾಸಕ ರಿಜ್ವಾನ್‌ ಅರ್ಷದ್‌ ಬಂದಿದ್ದರು, ಜನರಿಗೆ ಸಮಸ್ಯೆ ಹೇಳಿಕೊಳ್ಳಲು ಅವಕಾಶ ನೀಡಿದರು. ಮುನಿರತ್ನ ಕೂಡ ಅದೇ ರೀತಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಿತ್ತು. ಆಹ್ವಾನ ನೀಡಲು ಇದು ಶಿಲಾನ್ಯಾಸ ಕಾರ್ಯಕ್ರಮವಲ್ಲ, ಆಗಮಿಸಿದ ಜನ ಪ್ರತಿನಿಧಿಗಳಿಗೆ ಸೂಕ್ತ ಗೌರವ ನೀಡುವುದು ನಮಗೆ ಗೊತ್ತಿದೆ ಎಂದರು.

ವಿಧಾನಸಭೆ ಹಾಗೂ ನಿನ್ನೆ ನಡೆದಂತಹ ಜಿಬಿಎ ಸಭೆಯಲ್ಲಿ ಶಾಸಕರಿಗೆ ಮಾತನಾಡಲು ಅವಕಾಶ ಇತ್ತು. ಇಲ್ಲಿ ಬಂದು ಗದ್ದಲ ಮಾಡುವುದು ಸರಿಯಲ್ಲ, ನಾನು ಜನರ ಅಹವಾಲು ಸ್ವೀಕರಿಸುವ ಕಾರ್ಯಕ್ರಮವನ್ನು ಕಳೆದ ವರ್ಷವೂ ಎಲ್ಲಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲೂ ನಡೆಸಿದ್ದೇನೆ. ಇದು ಹೊಸದಲ್ಲ ಎಂದರು.

ತಮ ಮೇಲೆ ಹಲ್ಲೆ ನಡೆಸಲು ರೌಡಿಗಳನ್ನು ಕರೆಸಲಾಗಿತ್ತು. ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮುನಿರತ್ನ ಅವರ ಮನಸ್ಸಿನಲ್ಲಿದ್ದರೆ, ಅದಕ್ಕೆ ನಾನೇನೂ ಮಾಡಲು ಸಾಧ್ಯವಿಲ್ಲ ಎಂದರು.ಮುನಿರತ್ನ ಅವರನ್ನು ಇಲ್ಲಿ ನಾಗರಿಕರೇ ಹೊಡೆದು, ಓಡಿಸುತ್ತಿದ್ದರು. ನಾವ್ಯಾರೂ ಮುಟ್ಟುತ್ತಿರಲಿಲ್ಲ. ಜನರಿಗೆ ಅಷ್ಟರ ಮಟ್ಟಿನ ಆಕ್ರೋಶ ಇದೆ. ಕಮೀಷನ್‌ ಕೊಟ್ಟಿಲ್ಲ ಎಂದು 10 ವರ್ಷದಿಂದ ಶಾಸಕರು ಬಿಲ್‌ ಪಾವತಿಸಲು ಬಿಟ್ಟಿಲ್ಲ ಎಂದು ಗುತ್ತಿಗೆದಾರರು ದೂರು ಹೇಳಿಕೊಂಡಿದ್ದಾರೆ. ಅದರ ತನಿಖೆ ನಡೆಸಲಾಗುವುದು ಎಂದರು.

ಮುನಿರತ್ನ ಆರ್‌ಎಸ್‌‍ಎಸ್‌‍ನ ಸಮವಸ್ತ್ರ ಧರಿಸಿ, ಇಲ್ಲಿಗೆ ಬಂದು ಗಲಾಟೆ ಮಾಡುವ ಮೂಲಕ ಆ ಸಂಸ್ಥೆಗೆ ಅವಮಾನ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೂ, ಆರ್‌ಎಸ್‌‍ಎಸ್‌‍ಗೂ ಏನು ಸಂಬಂಧ? ಅವರಿಗೆ ರಾಜಕಾರಣ ಮಾಡಬೇಕು ಎಂಬ ಉದ್ದೇಶ ಇದೆ. ಮಾಧ್ಯಮಗಳು ಪ್ರಚಾರ ನೀಡುತ್ತವೆ. ಅದಕ್ಕಾಗಿ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಇಂತಹವರಿಂದ ಆರ್‌ಎಸ್‌‍ಎಸ್‌‍ಗೂ ಅಗೌರವ ಎಂದು ತಿರುಗೇಟು ನೀಡಿದರು.

ಬೆಂಗಳೂರಿನ 5 ಪಾಲಿಕೆಗಳಲ್ಲೂ ಜನರ ಸಮಸ್ಯೆಯನ್ನು ಆಲಿಸಲು ಉದ್ಯಾನವನ ನಡಿಗೆ ಆರಂಭಿಸಲಾಗಿದೆ. ಜನರ ಸಮಸ್ಯೆಗಳನ್ನು ಕೇಳಿ ಅವರ ಫೋನ್‌ ನಂಬರ್‌ಗಳನ್ನು ಪಡೆದು ಸ್ಪಂದಿಸುವ ಪ್ರಯತ್ನ ಮಾಡುತ್ತಿದ್ದೇವೆ. ಇನ್ನೂ ಸಮಸ್ಯೆಗಳಿದ್ದರೆ 1533 ಸಹಾಯವಾಣಿಗೆ ಸಂಪರ್ಕಿಸಬಹುದು ಎಂದು ಹೇಳಿದರು.

ಜೆ.ಪಿ.ಪಾರ್ಕ್‌ನಲ್ಲಿ ಹಲವಾರು ಸಮಸ್ಯೆಗಳಿರುವುದನ್ನು ಸ್ಥಳೀಯರು ಹೇಳಿಕೊಂಡಿದ್ದಾರೆ. ಈಜುಕೊಳ ಸ್ಥಗಿತಗೊಂಡಿದೆ, ಮಕ್ಕಳ ಆಟದ ಸ್ಥಳ, ಯೋಗ ಕೇಂದ್ರ, ಶೌಚಾಲಯ, ಮಕ್ಕಳ ರೈಲು ಎಲ್ಲವೂ ಅರ್ಧಕ್ಕೆ ನಿಂತಿವೆ. ಈ ಅವ್ಯವಸ್ಥೆಗಳನ್ನು ಹಾಗೂ ಮಳೆ ನೀರಿನ ಸಮಸ್ಯೆ ಮತ್ತು ರಸ್ತೆ ಗುಂಡಿಗಳನ್ನು ಸರಿಪಡಿಸುವುದಾಗಿ ಹೇಳಿದರು.

ಆಪರೇಷನ್‌ ಬ್ಲೂ ಸ್ಟಾರ್‌ ತಪ್ಪಿನಿಂದಾಗಿ ಇಂದಿರಾ ಗಾಂಧಿ ಬಲಿಯಾದರು ; ಪಿ.ಚಿದಂಬರಂ

ನವದೆಹಲಿ, ಅ.12- ಕಳೆದ 1984 ರಲ್ಲಿ ಅಮೃತಸರದ ಸ್ವರ್ಣ ಮಂದಿರದಿಂದ ಭಯೋತ್ಪಾದಕರನ್ನು ಹೊರದಬ್ಬಲು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಸೂಚನೆಯ ಮೇರೆಗೆ ನಡೆಸಲಾದ ಆಪರೇಷನ್‌ ಬ್ಲೂ ಸ್ಟಾರ್‌ ತಪ್ಪು ಮಾರ್ಗವಾಗಿತ್ತು ಮತ್ತು ಆ ತಪ್ಪಿಗಾಗಿ ಇಂದಿರಾಜಿ ತಮ್ಮ ಪ್ರಾಣವನ್ನೇ ತೆತ್ತರು ಎಂದು ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಹೇಳಿದ್ದಾರೆ.

ಆದಾಗ್ಯೂ, ಈ ಕಾರ್ಯಾಚರಣೆಯು ಸೇನೆ, ಪೊಲೀಸ್‌‍, ಗುಪ್ತಚರ ಮತ್ತು ನಾಗರಿಕ ಸೇವೆಯ ಸಂಚಿತ ನಿರ್ಧಾರ ಎಂದು ಅವರು ಹೇಳಿದರು, ಇದಕ್ಕೆ ಗಾಂಧಿಯವರನ್ನು ಮಾತ್ರ ದೂಷಿಸಲಾಗುವುದಿಲ್ಲ ಎಂದು ಹೇಳಿದರು.

ಹಿಮಾಚಲ ಪ್ರದೇಶದ ಕಸೌಲಿಯಲ್ಲಿ ನಡೆದ ಖುಷ್ವಂತ್‌ ಸಿಂಗ್‌ ಸಾಹಿತ್ಯ ಉತ್ಸವದಲ್ಲಿ ಪತ್ರಕರ್ತ ಹರಿಂದರ್‌ ಬವೇಜಾ ಅವರ ದೆ ವಿಲ್‌ ಶೂಟ್‌ ಯು, ಮೇಡಂ ಪುಸ್ತಕದ ಕುರಿತು ಚರ್ಚೆಯನ್ನು ನಡೆಸುವಾಗ ಮಾಜಿ ಗೃಹ ಮತ್ತು ಹಣಕಾಸು ಸಚಿವರು ಈ ಹೇಳಿಕೆಗಳನ್ನು ನೀಡಿದರು.

ಇಲ್ಲಿ ಹಾಜರಿದ್ದ ಯಾವುದೇ ಸೇವಾ ಅಧಿಕಾರಿಗಳಿಗೆ ಅಗೌರವವಿಲ್ಲ ಆದರೆ ಸ್ವರ್ಣ ಮಂದಿರವನ್ನು ಹಿಂಪಡೆಯಲು ಅದು ತಪ್ಪು ಮಾರ್ಗವಾಗಿತ್ತು. ಮೂರ್ನಾಲ್ಕು ವರ್ಷಗಳ ನಂತರ, ಸೈನ್ಯವನ್ನು ಹೊರಗಿಡುವ ಮೂಲಕ ಸುವರ್ಣ ಮಂದಿರವನ್ನು ಹಿಂಪಡೆಯಲು ನಾವು ಸರಿಯಾದ ಮಾರ್ಗವನ್ನು ತೋರಿಸಿದ್ದೇವೆ ಎಂದು ಹಿರಿಯ ಕಾಂಗ್ರೆಸ್‌‍ ನಾಯಕರು ಹೇಳಿದರು.

ಎಲ್ಲಾ ಉಗ್ರಗಾಮಿಗಳನ್ನು ಮರಳಿ ಸೆರೆಹಿಡಿಯಲು ಒಂದು ಮಾರ್ಗವಿತ್ತು. ಬ್ಲೂ ಸ್ಟಾರ್‌ ತಪ್ಪು ಮಾರ್ಗವಾಗಿತ್ತು. ಆ ತಪ್ಪಿಗೆ ಗಾಂಧಿ ತಮ್ಮ ಜೀವವನ್ನೇ ತೆತ್ತರು ಎಂದು ನಾನು ಒಪ್ಪಿಕೊಂಡೆ ಆದರೆ ಆ ತಪ್ಪು ಸೇನೆ, ಪೊಲೀಸ್‌‍, ಗುಪ್ತಚರ ಮತ್ತು ನಾಗರಿಕ ಸೇವೆಯ ಒಟ್ಟು ನಿರ್ಧಾರವಾಗಿತ್ತು.
ನಾವು ಗಾಂಧಿಯವರನ್ನು ಮಾತ್ರ ದೂಷಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.1984 ರಲ್ಲಿ ಜೂನ್‌ 1 ಮತ್ತು ಜೂನ್‌ 8 ರ ನಡುವೆ ಇಂದಿರಾ ಗಾಂಧಿ ಸರ್ಕಾರ ಪಂಜಾಬ್‌ನಲ್ಲಿ ಮೂಲಭೂತವಾದಿ ಪ್ರಚಾರಕ ಜರ್ನೈಲ್‌ ಸಿಂಗ್‌ ಭಿಂದ್ರನ್‌ವಾಲೆ ನೇತೃತ್ವದ ಪ್ರತ್ಯೇಕತಾವಾದಿ ಚಳುವಳಿಯನ್ನು ಹತ್ತಿಕ್ಕಲು ಪ್ರಯತ್ನಿಸಿದಾಗ ಆಪರೇಷನ್‌ ಬ್ಲೂ ಸ್ಟಾರ್‌ ಅನ್ನು ನಡೆಸಲಾಯಿತು.
ಸಿಖ್‌ ಧರ್ಮದ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾದ ಆವರಣಕ್ಕೆ ಭಾರತೀಯ ಸೇನೆ ನುಗ್ಗಿದ ನಂತರ ಸ್ವರ್ಣ ದೇವಾಲಯದೊಳಗೆ ಅಡಗಿಕೊಂಡಿದ್ದ ಭಿಂದ್ರನ್‌ವಾಲೆ ಕೊಲ್ಲಲ್ಪಟ್ಟರು. ಅಕಾಲ್‌ ತಖ್‌್ತ ಅನ್ನು ಶಿಥಿಲಗೊಳಿಸಿದ ಸೇನಾ ಕಾರ್ಯಾಚರಣೆಯು ಸಿಖ್‌ ಸಮುದಾಯದಲ್ಲಿ ಭಾರಿ ಅಸಮಾಧಾನವನ್ನು ಹುಟ್ಟುಹಾಕಿತು.ತಿಂಗಳುಗಳ ನಂತರ, ಗಾಂಧಿಯನ್ನು ಅವರ ಸಿಖ್‌ ಅಂಗರಕ್ಷಕರು ಗುಂಡಿಕ್ಕಿ ಕೊಂದರು. ಅವರ ಹತ್ಯೆಯ ನಂತರ ಸಮುದಾಯದ ವಿರುದ್ಧ ವ್ಯಾಪಕ ಹಿಂಸಾಚಾರ ನಡೆಯಿತು. ಈ ಹಿಂಸಾಚಾರಕ್ಕೆ ಹಲವಾರು ಕಾಂಗ್ರೆಸ್‌‍ ನಾಯಕರು ಕಾರಣರೆಂದು ಶಂಕಿಸಲಾಗಿದೆ.

ಕನಕಪುರ : ರಾಜಿ ಮಾಡುವ ನೆಪದಲ್ಲಿ ಕರೆಸಿಕೊಂಡು ಕಲ್ಲು ಎತ್ತಿಹಾಕಿ ಯುವಕನ ಕೊಲೆ

ಕನಕಪುರ, ಅ.12– ರಾಜಿ ಮಾಡುವ ನೆಪದಲ್ಲಿ ಕರೆಸಿಕೊಂಡು ಯುವಕನ ಎದೆ ಮೇಲೆ ಕಲ್ಲು ಎತ್ತಿಹಾಕಿ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಕಳೆದ ರಾತ್ರಿ ಗ್ರಾಮಾಂತರ ಪೊಲೀಸ್‌‍ ಠಾಣೆ ವ್ಯಾಪ್ತಿಯ ಗೆಂಡಿಗೆರೆಯಲ್ಲಿ ನಡೆದಿದೆ.

ಯಡವನಗೇಟ್‌ ಸಮೀಪದ ನಿವಾಸಿ ಸುನೀಲ್‌ (30) ಮೃತಪಟ್ಟಿದ್ದು, ಆತನ ಸಹೋದರ ಕಿರಣ್‌ ಸೇರಿದಂತೆ ಹಲವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕನಕಪುರದ ನುಗುಲು ಗ್ರಾಮದಲ್ಲಿ ಮುನಿರಾಜು ಮತ್ತು ಜಯಲಕ್ಷ್ಮಿ ಎಂಬ ದಂಪತಿ ವಾಸವಾಗಿದ್ದು, ಅವರಿಗೆ ಸುನಿಲ್‌ ಮತ್ತು ಕಿರಣ್‌ ಎಂಬ ಮಕ್ಕಳಿದ್ದಾರೆ. ಇವರಿಗೆ ಒಂದೂವರೆ ಎಕರೆ ಕೃಷಿ ಜಮೀನಿದೆ.

ಈ ನಡುವೆ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡು ಜಯಲಕ್ಷ್ಮಿ ಮತ್ತು ಮಕ್ಕಳು ಮುನಿರಾಜುನನ್ನು ಬಿಟ್ಟು ಯಡವನಗೇಟ್‌ ಬಳಿ ಮನೆ ಮಾಡಿಕೊಂಡು ವಾಸವಾಗಿದ್ದರು.
ಮುನಿರಾಜು ಇತ್ತೀಚೆಗೆ ತನ್ನ ಒಂದೂವರೆ ಎಕರೆ ಜಮೀನನ್ನು ಪಾರ್ಥ ಎಂಬುವವರಿಗೆ ಮಾರಾಟ ಮಾಡಿದ್ದ. ಇದು ಜಯಲಕ್ಷ್ಮಿ ಮತ್ತು ಅವರ ಮಕ್ಕಳಿಗೆ ತಿಳಿದು ನಿನ್ನೆ ಇವರು ಪಾರ್ಥನ ಮನೆ ಬಳಿ ಬಂದು ನಮಗೆ ತಿಳಿಯದೆ ಮತ್ತು ನಮ ಸಹಿ ಪಡೆಯದೆ ನೀವು ಜಮೀನು ಕೊಂಡಿದ್ದೀರಿ ಮತ್ತು ನೋಂದಣಿ ಕೂಡ ಮಾಡಿಸಿಕೊಂಡಿದ್ದೀರಿ.

ಇದು ಹೇಗೆ ಎಂದು ಕೇಳಿದ್ದಾರೆ. ಸ್ಥಳೀಯರು ಇವರನ್ನು ಸಮಾಧಾನ ಮಾಡಿ ಕಳುಹಿಸಿದ್ದಾರೆ.ನಂತರ ರಾತ್ರಿ ಪಾರ್ಥ ಕುಳಿತು ಮಾತನಾಡಿ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳೋಣ ಬನ್ನಿ ಎಂದು ಕರೆದಿದ್ದಾರೆ. ಎಲ್ಲರೂ ಇವರ ಮಾತನ್ನು ನಂಬಿ ಸುನಿಲ್‌, ಕಿರಣ್‌ ಮತ್ತಿತರರು ಅಲ್ಲಿಗೆ ಹೋಗಿದ್ದಾರೆ.

ಈ ಸಂದರ್ಭದಲ್ಲಿ ಗುಂಪು ಕಟ್ಟಿಕೊಂಡು ಬಂದಿದ್ದ ಪಾರ್ಥ ಏಕಾಏಕಿ ಕಿರಣ್‌ ಮತ್ತು ಸುನಿಲ್‌ ಮೇಲೆ ಎರಗಿದ್ದಾರೆ. ಸುನೀಲ್‌ ಮೇಲೆ ಕಲ್ಲು ಎತ್ತಿ ಹಾಕಿದರೆ, ಕಿರಣ್‌ಗೆ ದೊಣ್ಣೆಯಿಂದ ಹೊಡೆದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.

ಗಲಾಟೆ ನಡೆಯುತ್ತಿದ್ದನ್ನು ನೋಡಿದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದಾವಿಸಿದ ಸಿಬ್ಬಂದಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುನಿಲ್‌ ಮತ್ತು ಕಿರಣ್‌ನನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸುನಿಲ್‌ ಮೃತಪಟ್ಟಿದ್ದಾರೆ. ಕನಕಪುರ ಗ್ರಾಮಾಂತರ ಠಾಣೆ ಪೊಲೀಸರು ಪಾರ್ಥ ಹಾಗೂ ಆತನ ಪುತ್ರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಅಫ್ಘಾನ್‌ ಸಚಿವ ಮುತ್ತಕಿ ತಾಜ್‌ಮಹಲ್‌ ಭೇಟಿ ರದ್ದು

ಆಗ್ರಾ, ಅ. 12 (ಪಿಟಿಐ) ಅಫ್ಘಾನಿಸ್ತಾನ ವಿದೇಶಾಂಗ ಸಚಿವ ಅಮೀರ್‌ ಖಾನ್‌ ಮುತ್ತಕಿ ಅವರ ಆಗ್ರಾ ಭೇಟಿ ರದ್ದಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಆದಾಗ್ಯೂ, ಆಗ್ರಾದ ಅಧಿಕಾರಿಗಳು ರದ್ದತಿಗೆ ಯಾವುದೇ ಕಾರಣವನ್ನು ಉಲ್ಲೇಖಿಸಿಲ್ಲ.

ಅಫ್ಘಾನಿಸ್ತಾನ ವಿದೇಶಾಂಗ ಸಚಿವರು ತಾಜ್‌ ಮಹಲ್‌ ನೋಡಲು ಆಗ್ರಾಕ್ಕೆ ಪ್ರಯಾಣಿಸಬೇಕಿತ್ತು.ದೆಹಲಿಗೆ ಹಿಂತಿರುಗುವ ಮೊದಲು ಮುತ್ತಕಿ ಸ್ಮಾರಕದಲ್ಲಿ ಸುಮಾರು ಒಂದೂವರೆ ಗಂಟೆ ಕಳೆಯಬೇಕಿತ್ತು.ರದ್ದತಿಯನ್ನು ಜಿಲ್ಲಾಡಳಿತದ ಪ್ರೋಟೋಕಾಲ್‌ ವಿಭಾಗವೂ ದೃಢಪಡಿಸಿದೆ.

ಆರು ದಿನಗಳ ಪ್ರವಾಸದಲ್ಲಿ ಕಳೆದ ಗುರುವಾರ ನವದೆಹಲಿಗೆ ಬಂದಿಳಿದ ಮುತ್ತಕಿ, ನಾಲ್ಕು ವರ್ಷಗಳ ಹಿಂದೆ ತಾಲಿಬಾನ್‌ ಗುಂಪು ಅಧಿಕಾರವನ್ನು ವಶಪಡಿಸಿಕೊಂಡ ನಂತರ ಭಾರತಕ್ಕೆ ಭೇಟಿ ನೀಡಿದ ಮೊದಲ ಹಿರಿಯ ತಾಲಿಬಾನ್‌ ಸಚಿವರಾಗಿದ್ದಾರೆ. ಭಾರತ ಇನ್ನೂ ತಾಲಿಬಾನ್‌ ಸ್ಥಾಪನೆಯನ್ನು ಗುರುತಿಸಿಲ್ಲ.

ಅಫ್ಘಾನಿಸ್ತಾನ ವಿದೇಶಾಂಗ ಸಚಿವರು ನಿನ್ನೆ ದಕ್ಷಿಣ ಏಷ್ಯಾದ ಅತ್ಯಂತ ಪ್ರಭಾವಶಾಲಿ ಇಸ್ಲಾಮಿಕ್‌ ಸೆಮಿನರಿಗಳಲ್ಲಿ ಒಂದಾದ ಸಹರಾನ್‌ಪುರದಲ್ಲಿರುವ ದಾರುಲ್‌ ಉಲೂಮ್‌ ದಿಯೋಬಂದ್‌ಗೆ ಭೇಟಿ ನೀಡಿದರು.ಅಫ್ಘಾನಿಸ್ತಾನ ವಿದೇಶಾಂಗ ಸಚಿವರ ಭಾರತ ಭೇಟಿಯು ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಪಾಕಿಸ್ತಾನದೊಂದಿಗೆ ಹಿಮಪಾತದ ಸಂಬಂಧವನ್ನು ಹೊಂದಿರುವ ಸಮಯದಲ್ಲಿ ಬಂದಿದೆ.

ಮಧ್ಯಪ್ರದೇಶ : ಬ್ರಾಹಣನ ಪಾದ ತೊಳೆದು ನೀರು ಕುಡಿದ ಒಬಿಸಿ ಯುವಕ

ಭೋಪಾಲ್‌‍, ಅ.12- ಜಾತಿ ಆಧಾರಿತ ತಾರತಮ್ಯದ ಆಘಾತಕಾರಿ ಘಟನೆಯಲ್ಲಿ, ಮಧ್ಯಪ್ರದೇಶದ ದಾಮೋಹ್‌ ಜಿಲ್ಲೆಯಲ್ಲಿ ಯುವಕನೊಬ್ಬನನ್ನು ಅವಮಾನಿಸಿದ ಕಾರಣಕ್ಕಾಗಿ ಬ್ರಾಹ್ಮಣ ವ್ಯಕ್ತಿಯ ಪಾದಗಳನ್ನು ತೊಳೆದು ನೀರು ಕುಡಿಯುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ.

ಈಗ ವೈರಲ್‌ ಆಗಿರುವ ಈ ಕೃತ್ಯದ ವೀಡಿಯೊ ಪ್ರದೇಶದಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ಆದಾಗ್ಯೂ, ಎರಡೂ ಪಕ್ಷಗಳು ಈ ವಿಷಯವನ್ನು ಕಡಿಮೆ ಮಾಡಿ ಅದನ್ನು ರಾಜಕೀಯಗೊಳಿಸುವ ಪ್ರಯತ್ನಗಳನ್ನು ಖಂಡಿಸಿವೆ.

ವಿವಿಧ ಸಮುದಾಯಗಳ ನಡುವಿನ ಸಾಮರಸ್ಯಕ್ಕೆ ಧಕ್ಕೆ ತರುವ ಕೃತ್ಯಕ್ಕೆ ಸಂಬಂಧಿಸಿದಂತೆ ಹಲವಾರು ವಿಭಾಗಗಳ ಅಡಿಯಲ್ಲಿ ಪೊಲೀಸ್‌‍ ಪ್ರಕರಣ ದಾಖಲಿಸಲಾಗಿದೆ. ಈ ಎಫ್‌ಐಆರ್‌ ಕುಶ್ವಾಹ ಸಮುದಾಯದ ಸದಸ್ಯರೊಬ್ಬರು ಸಲ್ಲಿಸಿದ ದೂರನ್ನು ಆಧರಿಸಿದೆ.

ಇತರ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯದ ಪರ್ಶೋತ್ತಮ್‌ ಕುಶ್ವಾಹ ಅವರನ್ನು ಬ್ರಾಹ್ಮಣ ಅನು ಪಾಂಡೆ ಅವರ ಪಾದಗಳನ್ನು ತೊಳೆದು ಗ್ರಾಮಸ್ಥರ ಮುಂದೆ ನೀರು ಕುಡಿಯುವಂತೆ ಮಾಡಲಾಯಿತು. ಅವರಿಗೆ 5,100 ರೂ. ದಂಡ ವಿಧಿಸಲಾಯಿತು ಮತ್ತು ಬ್ರಾಹ್ಮಣ ಸಮುದಾಯದಲ್ಲಿ ಕ್ಷಮೆಯಾಚಿಸುವಂತೆ ಮಾಡಲಾಯಿತು.ಇದು ಗ್ರಾಮ ಮಟ್ಟದ ವಿವಾದದೊಂದಿಗೆ ಪ್ರಾರಂಭವಾಯಿತು.

ಪರ್ಶೋತ್ತಮ್‌ ಕುಶ್ವಾಹ ಮತ್ತು ಅನು ಪಾಂಡೆ ವಾಸಿಸುವ ಸತಾರಿಯಾ ಗ್ರಾಮವು ಮದ್ಯ ನಿಷೇಧವನ್ನು ಘೋಷಿಸಿದೆ. ಇಷ್ಟೆಲ್ಲಾ ಇದ್ದರೂ, ಅನು ಪಾಂಡೆ ಮದ್ಯ ಮಾರಾಟ ಮಾಡುತ್ತಲೇ ಇದ್ದನೆಂದು ಆರೋಪಿಸಲಾಗಿದೆ. ಸಿಕ್ಕಿಬಿದ್ದಾಗ, ಗ್ರಾಮಸ್ಥರು ಸಾರ್ವಜನಿಕವಾಗಿ ಕ್ಷಮೆಯಾಚಿಸಿ 2,100 ರೂ. ದಂಡ ವಿಧಿಸುವಂತೆ ಶಿಕ್ಷೆ ವಿಧಿಸಿದರು, ಪಾಂಡೆ ಈ ನಿರ್ಣಯವನ್ನು ಒಪ್ಪಿಕೊಂಡರು.

ಆದರೆ ಪರ್ಶೋತ್ತಮ್‌ ಶೂಗಳ ಹಾರವನ್ನು ಧರಿಸಿರುವ ಅನುವಿನ ಎಐ ರಚಿತ ಚಿತ್ರವನ್ನು ರಚಿಸಿ ಹಂಚಿಕೊಂಡಾಗ ವಿಷಯವು ಬೇರೆಯದೇ ತಿರುವು ಪಡೆದುಕೊಂಡಿತು. ಅವರು ಕೆಲವೇ ನಿಮಿಷಗಳಲ್ಲಿ ಪೋಸ್ಟ್‌ ಅನ್ನು ಅಳಿಸಿ ಕ್ಷಮೆಯಾಚಿಸಿದರೂ, ಕೆಲವರು ಈ ಕೃತ್ಯವನ್ನು ಬ್ರಾಹ್ಮಣ ಸಮುದಾಯಕ್ಕೆ ಮಾಡಿದ ಅವಮಾನವೆಂದು ಭಾವಿಸಿದರು, ಇದು ಗ್ರಾಮದ ವಿವಾದಕ್ಕೆ ಜಾತಿ ತಿರುವು ನೀಡಿತು.

ಸ್ಥಳೀಯ ಮೂಲಗಳ ಪ್ರಕಾರ, ಬ್ರಾಹ್ಮಣ ಸಮುದಾಯದ ಒಂದು ಗುಂಪು ಒಟ್ಟುಗೂಡಿತು ಮತ್ತು ಪರ್ಶೋತ್ತಮ್‌ ತನ್ನ ಕೃತ್ಯಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕೆಂದು ಒತ್ತಾಯಿಸಿತು. ಒತ್ತಡದ ಮೇರೆಗೆ, ಯುವಕನನ್ನು ಅನುವಿನ ಪಾದಗಳನ್ನು ತೊಳೆಯುವುದು, ಆ ನೀರನ್ನು ಕುಡಿಯುವುದು ಮತ್ತು ಇಡೀ ಸಮುದಾಯಕ್ಕೆ ಕ್ಷಮೆಯಾಚಿಸುವ ಅವಮಾನಕರ ಆಚರಣೆಯನ್ನು ಮಾಡುವಂತೆ ಮಾಡಲಾಯಿತು. ಗೊಂದಲದ ದೃಶ್ಯಗಳು ಪರ್ಶೋತ್ತಮ್‌ ಮಂಡಿಯೂರಿ ಅನುವಿನ ಪಾದಗಳನ್ನು ತೊಳೆಯುವುದನ್ನು ತೋರಿಸುತ್ತವೆ.

ವೀಡಿಯೊ ವೈರಲ್‌ ಆದ ನಂತರ, ಇಬ್ಬರೂ ಆಕ್ರೋಶವನ್ನು ಶಮನಗೊಳಿಸಲು ಪ್ರಯತ್ನಿಸಿದರು.ನಾನು ತಪ್ಪು ಮಾಡಿದೆ, ಮತ್ತು ನಾನು ಕ್ಷಮೆಯಾಚಿಸಿದ್ದೇನೆ. ಅನು ಪಾಂಡೆ ನನ್ನ ಕುಟುಂಬದ ಗುರು. ದಯವಿಟ್ಟು ಇದನ್ನು ರಾಜಕೀಯಗೊಳಿಸಬೇಡಿ ಎಂದು ಪರ್ಶೋತ್ತಮ್‌ ವೀಡಿಯೊ ಮನವಿಯಲ್ಲಿ ಹೇಳಿದ್ದಾರೆ, ವೈರಲ್‌ ದೃಶ್ಯಗಳನ್ನು ಇಂಟರ್ನೆಟ್‌ನಿಂದ ತೆಗೆದುಹಾಕುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.

ಅನು ಪಾಂಡೆ ಕೂಡ ಇದನ್ನು ಪರಸ್ಪರ ವಿಷಯ ಎಂದು ಕರೆದರು, ಅದನ್ನು ಪರಿಹರಿಸಲಾಗಿದೆ. ಕೆಲವರು ಇದನ್ನು ರಾಜಕೀಯಗೊಳಿಸುತ್ತಿದ್ದಾರೆ. ನಮ್ಮ ನಡುವೆ ಗುರು-ಶಿಷ್ಯ ಸಂಬಂಧವಿದೆ. ನಾನು ಅವರನ್ನು ಅವಮಾನಿಸಲಿಲ್ಲ. ಅದು ಸ್ವಯಂಪ್ರೇರಿತವಾಗಿತು ಎಂದಿದ್ದಾರೆ.

ದೇವದುರ್ಗ ಶಾಸಕಿ ಕರೆಮ್ಮ ನಾಯಕ್‌ ಕಾರು ಅಪಘಾತ

ಬೆಂಗಳೂರು, ಅ.12- ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಗೊಲ್ಲಪಲ್ಲಿ ಗ್ರಾಮದ ಬಳಿ ಇಂದು ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ದೇವದುರ್ಗ ಕ್ಷೇತ್ರದ ಜೆಡಿಎಸ್‌‍ ಶಾಸಕಿ ಕರೆಮ ನಾಯಕ್‌ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಶಾಸಕರು ಇಂದು ಬೆಳಗ್ಗೆ ಸುಮಾರು 8 ಗಂಟೆ ಸಂದರ್ಭದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ದೇವದುರ್ಗದಿಂದ ಹುಬ್ಬಳ್ಳಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಗೊಲ್ಲಪಲ್ಲಿ ಗ್ರಾಮದ ಬಳಿ ಶಾಸಕರ ಕಾರು ಚಲಿಸುತ್ತಿತ್ತು. ಆಗ ಅವರ ಮುಂದೆ ಹೋಗುತ್ತಿದ್ದ ಮತ್ತೊಂದು ಕಾರಿಗೆ ನಾಯಿ ಅಡ್ಡ ಬಂದಿದ್ದರಿಂದ ಚಾಲಕ ದಿಢೀರನೆ ಬ್ರೇಕ್‌ ಹಾಕಿದ್ದಾನೆ.
ಆ ಸಂದರ್ಭದಲ್ಲಿ ಇವರ ಕಾರು ಮುಂದೆ ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಅಪಘಾತದಲ್ಲಿ ಎರಡೂ ಕಾರುಗಳು ಜಖಂಗೊಂಡಿವೆ. ನಂತರ ಶಾಸಕರು ಕಾರಿನಲ್ಲಿ ಹುಬ್ಬಳ್ಳಿ ಕಡೆ ಪ್ರಯಾಣ ಬೆಳೆಸಿದ್ದಾರೆ. ಸುದ್ದಿ ತಿಳಿದ ಹಟ್ಟಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಶಾಸಕ ಮುನಿರತ್ನ ಮೇಲೆ ಹಲ್ಲೆ : ಕಾಂಗ್ರೆಸ್‌‍ನ ಗೂಂಡಾಗಿರಿ ಅನಾವರಣಗೊಂಡಿದೆ ಎಂದ ಆರ್‌.ಅಶೋಕ್‌

ಬೆಂಗಳೂರು, ಅ.12– ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರ ಮೇಲೆ ಹಲ್ಲೆ ನಡೆಸುವ ಮೂಲಕ ಕಾಂಗ್ರೆಸ್‌‍ ಪಕ್ಷದ ಗೂಂಡಾಗಿರಿ ಸಂಸ್ಕೃತಿ ಅನಾವರಣಗೊಂಡಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಶಾಸಕರಿಗೆ ಗೌರವ ಕೊಡದೇ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.ಎರಡು ವರ್ಷ ಮಾತ್ರ ನೀವು ಅಧಿಕಾರದಲ್ಲಿ ಇರುತ್ತೀರಿ. ಏಕೆ ಗೂಂಡಾಗಿರಿ ಮಾಡುತ್ತೀರಾ .? ಇದು ನಿಮ ಕಾಂಗ್ರೆಸ್‌‍ ಪಕ್ಷದ ಸಂಸ್ಕೃತಿ ಹಾಗೂ ಗೂಂಡಾಗಿರಿ ಪ್ರವತ್ತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.

ಮುನಿರತ್ನ ಅವರ ಮೇಲೆ ಆಗಿರುವ ಹಲ್ಲೆ , ಪ್ರಜಾಪ್ರಭುತ್ವದ ಮೇಲೆ ಆಗಿರುವ ಹಲ್ಲೆ. ನಾವು ಮುನಿರತ್ನಗೆ ಬೆಂಬಲ ನೀಡಲಿದ್ದೇವೆ. ಪೊಲೀಸರು ಅವರಿಗೆ ರಕ್ಷಣೆ ಕೊಡಬೇಕು. ಕಾಂಗ್ರೆಸ್‌‍ ಔಟ್‌ ಗೋಯಿಂಗ್‌ ಪಾರ್ಟಿ ಎಂದು ಜನ ತೀರ್ಮಾನ ಮಾಡಿದ್ದಾರೆ. ಕಾಂಗ್ರೆಸ್‌‍ ಮುಕ್ತ ಭಾರತ ಮಾಡುವುದೇ ನಮ ಅಜೆಂಡಾ ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರ ನಡೆಯನ್ನು ಖಂಡಿಸಿದ ಅವರು, ಇದು ಸರ್ಕಾರದ ಹಣದಲ್ಲಿ ಮಾಡುತ್ತಿರುವ ಕಾರ್ಯಕ್ರಮ. ಕಾಂಗ್ರೆಸ್‌‍ ಪಕ್ಷದ ಕಾರ್ಯಕ್ರಮ ಅಲ್ಲ. ಸ್ಥಳೀಯ ಶಾಸಕರು ಮತ್ತು ಸಂಸದರಿಗೆ ಆಹ್ವಾನ ನೀಡದೇ ಅವಮಾನ ಮಾಡುವ ಮೂಲಕ ಸಂವಿಧಾನಕ್ಕೆ ಅಗೌರವ ತೋರಿದ್ದಾರೆ ಎಂದು ಟೀಕಿಸಿದರು.

ಆರ್‌ ಎಸ್‌‍ ಎಸ್‌‍ ನಿಷೇಧ ಮಾಡುವ ಬಗ್ಗೆ ಕಾಂಗ್ರೆಸ್‌‍ ನಾಯಕರ ಹೇಳಿಕೆ ವಿಚಾರವಾಗಿ, ಆರ್‌.ಎಸ್‌‍ ಎಸ್‌‍ ನಿಷೇಧಿಸಲು ಮೂರು ಬಾರಿ ಪ್ರಯತ್ನ ಮಾಡಿದ್ದರು. ಮಾಜಿ ಪ್ರಧಾನಿ ಇಂಧಿರಾ ಗಾಂಧಿ ಕೈಯಲ್ಲೇ ಆಗಲಿಲ್ಲ. ಇನ್ನು ಇಂತಹವರಿಂದ ಇದು ಸಾಧ್ಯವೇ? ಎಂದು ಅಶೋಕ್‌ ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗಹ ಸಚಿವ ಅಮಿತ್‌ ಶಾ ಸೇರಿದಂತೆ ದೇಶದ ಬಹುತೇಕ ರಾಜ್ಯಪಾಲರು ಆರ್‌ ಎಸ್‌‍ ಎಸ್‌‍ ಹಿನ್ನಲೆಯಿಂದಲೇ ಬಂದವರು. ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಕೂಡಾ ಹೀಗೆಯೇ ಲಘುವಾಗಿ ಮಾತನಾಡುತ್ತಾರೆ ಎಂದರೆ ಅವರಿಗೆ ಭಾರತದ ಇತಿಹಾಸ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಇಂತಹವರಿಗೆ ಆರ್‌ ಎಸ್‌‍ ಎಸ್‌‍ ಬಗ್ಗೆ ಮಾತಾಡುವ ಅರ್ಹತೆ ಇಲ್ಲ. ಅದು ರಾಷ್ಟ್ರ ಪ್ರೇಮ ಕೊಡುವ ಸಂಸ್ಥೆ. ಇವರಿಗೆ ರಾಷ್ಟ್ರಪ್ರೇಮ ಇಲ್ಲ, ಕಾಂಗ್ರೆಸ್‌‍ ಗೆ ವೋಟಿನ ಪ್ರೇಮ ಮಾತ್ರ ಇದೆ ಎಂದು ಕುಹಕವಾಡಿದರು. ಇದಕ್ಕೂ ಮುನ್ನ ಆರ್‌ಎಸ್‌‍ಎಸ್‌‍ ಗೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಬನಶಂಕರಿಯಲ್ಲಿ ನಡೆದ ಆರ್‌ಎಸ್‌‍ಎಸ್‌‍ ಪಥ ಸಂಚಲನದಲ್ಲಿ ಗಣವೇಶಧಾರಿಗಳಾಗಿ ಪಥ ಸಂಚಲನದಲ್ಲಿ ಭಾಗವಹಿಸಿದ ಅಶೋಕ್‌ ಮತ್ತು ಪಿ ಸಿ ಮೋಹನ್‌ ಮತ್ತಿತರರು ಭಾಗಿಯಾಗಿದ್ದರು.

ನಮಸ್ತೇ ಸದಾ ವತ್ಸಲೇ ಹಾಡು ಹಾಡಿದ ಆರ್‌ ಅಶೋಕ್‌‍, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶತಮಾನೋತ್ಸವ ಆಚರಿಸುತ್ತಿದೆ. ಇವತ್ತು ಶತಮಾನೋತ್ಸವ ಹಿನ್ನೆಲೆ ಪಥಸಂಚಲನ ಮಾಡಿ ಭಾರತಮಾತೆಗೆ ಗೌರವ ಸಲ್ಲಿಸುತ್ತೇವೆ. ದೇಶದ ವಿಚಾರವಾಗಿ, ಸಾಮಾಜಿಕವಾಗಿ ಸಮಸ್ಯೆ ಅಂತಾ ಬಂದಾಗ ಸಂಘ ಮುಂದೆ ನಿಂತಿದೆ. ಆರೆಸ್ಸೆಸ್‌‍ನವನು ಎಂದು ಹೇಳಿಕೊಳ್ಳಲು ನನಗೆ ಹೆಮೆ ಆಗುತ್ತದೆ. ನಾನು ಹಲವು ಹೋರಾಟಗಳಲ್ಲಿ ಭಾಗಿಯಾಗ್ದೆಿ ಎಂದು ಅಶೋಕ್‌ ಹಿಂದಿನ ಘಟನೆಯನ್ನು ನೆನಪಿಸಿಕೊಂಡರು.

ಶಾಸಕ ಮುನಿರತ್ನ ಅವರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಶಿಸ್ತು ಕ್ರಮಕ್ಕೆ ಅಶ್ವತ್ಥ ನಾರಾಯಣ ಒತ್ತಾಯ

ಬೆಂಗಳೂರು, ಅ.12- ಶಾಸಕ ಮುನಿರತ್ನ ಅವರ ಮೇಲೆ ಯಾರು ಹಲ್ಲೆ ಮಾಡಿದ್ದಾರೋ ಅವರ ವಿರುದ್ಧ ವಿಳಂಬನೀತಿ ತೋರದೇ ತಕ್ಷಣವೇ ಶಿಸ್ತು ಕ್ರಮ ಜರುಗಿಸಬೇಕು ಎಂದು ಮಲ್ಲೇಶ್ವರಂ ಶಾಸಕ ಡಾ. ಅಶ್ವತ್ಥ ನಾರಾಯಣ ಒತ್ತಾಯಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು,ಯಾವುದೇ ಪಕ್ಷದ ಶಾಸಕರಿರಲಿ. ಹಲ್ಲೆ ನಡೆಸುವುದು ಯಾರೊಬ್ಬರಿಗೂ ಶೋಭೆ ತರುವುದಿಲ್ಲ. ಮುನಿರತ್ನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕೂಡಲೇ ಕ್ರಮ ಕೈಗೊಂಡು ಸ್ಪಷ್ಟ ಸಂದೇಶ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರೇ, ಕಾರ್ಯಕ್ರಮ ಯಶಸ್ವಿಯಾಗಬೇಕು ಅಂದರೆ, ಎಲ್ಲರಿಗೂ ಆಹ್ವಾನ ಕೊಟ್ಟು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.ರಾಜಕೀಯ ಕ್ಷೇತ್ರದಲ್ಲಿ ನಿಮಗೆ ಸಾಕಷ್ಟು ಅನುಭವ ಇದೆ. ನಿಮಂತಹವರಿಂದಲೇ ಈ ರೀತಿ ಎಡವಟ್ಟು ಆದರೆ ಹೇಗೆ ? ಎಂದು ಪ್ರಶ್ನಿಸಿದರು.
ಈ ಕಾರ್ಯಕ್ರಮ ಮಹತ್ವ ಕಳೆದುಕೊಂಡಿದೆ.ಇಲ್ಲಿ ಬರೀ ವೈಯಕ್ತಿಕ ಪ್ರತಿಷ್ಠೆ, ದ್ವೇಷ, ವೈಮನಸ್ಯ ಎದ್ದು ಕಾಣುತ್ತಿದೆ. ನಿಮ ನಡೆ ಸರಿಯಲ್ಲ . ಡಿಕೆ ಶಿವಕುಮಾರ್‌ ವರ್ಸಸ್‌‍ ಮುನಿರತ್ನ ಎಂಬಂತಾಗುತ್ತದೆ. ನಿಮ ಕಾರ್ಯಕ್ರಮವನ್ನು ನೀವೇ ಸೋಲಿಸುತ್ತೀರಾ ? ಇದು ಜನರ ಕಾರ್ಯಕ್ರಮ, ಸರ್ಕಾರದ ಕಾರ್ಯಕ್ರಮ ಎಂದರು.

ಇಂತಹ ಘಟನೆಗಳಿಗೆ ನೀವೇ ಕಾರಣೀಭೂತರು. ನೀವು ನೀಡಿರುವ ಸ್ವಾತಂತ್ರ್ಯದಿಂದ ಕಾರ್ಯಕರ್ತರು ಅವರಿಷ್ಟ ಬಂದಂತೆ ನಡೆದುಕೊಳ್ಳುತ್ತಿದ್ದಾರೆ.ಕಾರ್ಯಕ್ರಮ ಅಲ್ಲ, ಹಲ್ಲೆ ಎಂದುಕೇಳಿದ್ದೇನೆ. ಇದನ್ನು ಖಂಡಿಸುತ್ತೇವೆ ಎಂದು ಹೇಳಿದರು.

ಬೆಂಗಳೂರಿನ ಆರು ಭಾಗಗಳಲ್ಲಿ ಡಿಕೆ ಶಿವಕುಮಾರ್‌ ಅವರು ಕಾರ್ಯಕ್ರಮ ಮಾಡುತ್ತಿದ್ದಾರೆ. ಒಳ್ಳೆಯದು. ಈ ಕಾರ್ಯಕ್ರಮದಲ್ಲಿ ಚುನಾಯಿತ ಪ್ರತಿನಿಧಿಗೆ ಅವಮಾನ ಮಾಡುವುದು, ಹಲ್ಲೆ ನಡೆಸುವುದು, ತಿರಸ್ಕಾರ ಮಾಡುವುದು ಸರಿಯಲ್ಲ. ಆಹ್ವಾನ ಕೊಡದೇ ಈ ರೀತಿ ಕಾರ್ಯಕ್ರಮ ಮಾಡುವುದು ಪ್ರಜಾಪ್ರಭುತ್ವಕ್ಕೆ ಮಾಡುವ ಅಪಮಾನ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರಿಯಾದ ದಾರಿಯಲ್ಲಿ ನಡೆದುಕೊಳ್ಳುವುದು ನಿಮ ಕರ್ತವ್ಯ ಎಂದು ಹೇಳಿದರು.

ಮೆಟ್ರೋದ ಹಳದಿ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ, ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು,ಅ.12- ಇತ್ತೀಚೆಗೆ ಆರಂಭಗೊಂಡ ನಮ ಮೆಟ್ರೋದ ಹಳದಿ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ರೈಲುಗಳ ಸಂಚಾರ ಸಮಯದಲ್ಲಿ ವ್ಯತ್ಯಯವಾಗಿದೆ. ಹಳದಿ ಮಾರ್ಗದಲ್ಲಿ ಸಂಚರಿಸುವ ಒಂದು ರೈಲಿನಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಪ್ರತಿ 25 ನಿಮಿಷದ ಅಂತರದಲ್ಲಿ ರೈಲುಗಳು ಸಂಚರಿಸಲಿವೆ.

ಆರ್‌ವಿ ಕಾಲೇಜ್‌ ರಸ್ತೆಯಿಂದ ಬೊಮಸಂದ್ರದ ವರೆಗೆ ಸಾಗುವ 19.15 ಕಿಮೀ. ಉದ್ದದ ಹಳದಿ ಮಾರ್ಗಕ್ಕೆ ಆಗಸ್ಟ್‌ 10 ರಂದು ಪ್ರಧಾನಿ ನರೇಂದ್ರಮೋದಿಯವರು ಚಾಲನೆ ನೀಡಿದ್ದರು. ಈ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳಿದ್ದು, 3 ಮೆಟ್ರೋ ಲೈನ್‌ಗೆ ಸಂಪರ್ಕ ಕಲ್ಪಿಸುತ್ತದೆ.

ಒಟ್ಟು 4 ರೈಲುಗಳು ಪ್ರಸ್ತುತ ಸಂಚಾರ ನಡೆಸುತ್ತಿದ್ದು, ಶೀಘ್ರವೇ 5 ನೇ ರೈಲು ಸೇರ್ಪಡೆಯಾಗುವ ಸಾಧ್ಯತೆ ಇದ್ದು, ಹಳದಿ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ತುಸು ಅಡಚಣೆಯಾಗಿದ್ದು, ಪ್ರಯಾಣಿಕರು ಸಹಕರಿಸುವಂತೆ ಬಿಎಂಆರ್‌ಸಿಎಲ್‌ ಮನವಿ ಮಾಡಿದೆ.