Home Blog Page 53

“ಡಿಸೆಂಬರ್‌ನಲ್ಲಿ ನಿತಿನ್‌ ಗಡ್ಕರಿ ಪ್ರಧಾನಿಯಾಗ್ತಾರೆ” : ಸಂತೋಷ್‌ ಲಾಡ್‌ ಭಯಂಕರ ಭವಿಷ್ಯ

ಬೆಂಗಳೂರು, ಅ.11– ಡಿಸೆಂಬರ್‌ನಲ್ಲಿ ರಾಜಕೀಯ ಕ್ರಾಂತಿಯಾಗಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬದಲಾಗುತ್ತಾರೆ, ನಿತಿನ್‌ ಗಡ್ಕರಿ ಹೊಸದಾಗಿ ಪ್ರಧಾನಿಯಾಗುತ್ತಾರೆ ಎಂದು ಕಾರ್ಮಿಕ ಸಚಿವ ಸಂತೋಷ್‌ಲಾಡ್‌ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಕ್ರೈಸ್ಟ್‌ ವಿಶ್ವವಿದ್ಯಾಲಯ ಅಸೋಷಿಯೇಟ್‌ ಡಿನ್‌ ಸಹಾಯಕ ಡಾ. ಸ್ವಪ್ನ ಎಸ್‌‍. ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಋತುಚಕ್ರ ನೀತಿ ಕುರಿತು ಸಮಿತಿಯ ಸದಸ್ಯರ ಜೊತೆ ಚರ್ಚೆ ನಡೆಸಿ, ಅವರನ್ನು ಅಭಿನಂದಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಮುಖ್ಯಮಂತ್ರಿಯವರು ಸಚಿವರನ್ನು ಔತಣಕೂಟಕ್ಕೆ ಕರೆದಿರುವುದು ವಿಶೇಷವೇನಿಲ್ಲ. ನಮಲ್ಲಿ ನವೆಂಬರ್‌ ಕ್ರಾಂತಿ ಎಂಬುದೇನಿಲ್ಲ. ಆದರೆ ಕೇಂದ್ರದಲ್ಲಿ ನಿತಿನ್‌ ಗಡ್ಕರಿ ಪ್ರಧಾನಿಯಾಗುತ್ತಾರೆ ಎಂದರು.

ಬಿಜೆಪಿಯಲ್ಲಿನ ಆಂತರಿಕ ಚರ್ಚೆಗಳ್ನು ನಾನು ಹೇಳುತ್ತಿದ್ದೇನೆ. ಮೋದಿ ಅವರ ವಿರುದ್ಧ ಬಿಜೆಪಿಯ ನಾಯಕರಾಗಲಿ, ಮಾಧ್ಯಮದವರಾಗಲಿ ಮಾತನಾಡಲು ಅವಕಾಶ ಇಲ್ಲದಂತಹ ವಾತಾವರಣವಿದೆ. ಹೀಗಾಗಿ ಡಿಸೆಂಬರ್‌ ಒಳಗಾಗಿ ಬದಲಾವಣೆಯಾಗುತ್ತದೆ ಎಂದರು. ಪ್ರಧಾನಿಯವರು ತಮ ಹುದ್ದೆಯ ಜವಾಬ್ದಾರಿ ಮರೆತು ನಡೆದುಕೊಳ್ಳುತ್ತಿದ್ದಾರೆ. ವಿದೇಶಗಳಿಗೆ ಹೋದರೆ ಏನೋ ಒಂದು ಮಾತನಾಡುತ್ತಾರೆ. ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಹೋದಾಗ ಪ್ರಾಸ ಬದ್ದವನ್ನಾಗಿ ಮಾತನಾಡುತ್ತಾರೆ. ಇದು ಪ್ರಧಾನಿ ಅವರ ಕೆಲಸವೇ? ಎಂದು ಆಕ್ಷೇಪಿಸಿದರು.

ರಾಜ್ಯ ಸರ್ಕಾರ ರೂಪಿಸಿರುವ ಋತುಚಕ್ರ ರಜೆ ನೀತಿಯ ಕಾರಣಕ್ಕಾಗಿ ಖಾಸಗಿ ಸಂಸ್ಥೆಯವರು ಮಹಿಳಾ ಉದ್ಯೋಗಿಗಳಿಗೆ ಅವಕಾಶ ನಿರಾಕರಿಸಿದರೆ, ಸರ್ಕಾರ ಮಧ್ಯಪ್ರವೇಶ ಮಾಡಲಿದೆ ಎಂದು ಎಚ್ಚರಿಕೆ ನೀಡಿದರು.ಇದೊಂದು ಪ್ರಗತಿಪರ ಮಸೂದೆ. ಎಲ್ಲರೂ ಇದನ್ನು ಸ್ವಾಗತಿಸಿದ್ದಾರೆ. ಈವರೆಗೂ ಯಾರೂ ವಿರೋಧ ಮಾಡಿರುವುದು ಕಂಡು ಬಂದಿಲ್ಲ. ಅಂತಹ ಸಂದರ್ಭ ಬಂದಾಗ ಪರಿಶೀಲಿಸುತ್ತೇವೆ ಎಂದರು.

ಪ್ರಿಯತಮೆಗಾಗಿ ಸಂಬಂಧಿಕರ ಮಳೆಯಲ್ಲೇ ಕಳ್ಳತನ ಮಾಡಿ ಕಥೆ ಕಟ್ಟಿದ್ದ ಪ್ರೇಮಿ ಅಂದರ್‌

ಬೆಂಗಳೂರು, ಅ.11 – ಪ್ರಿಯತಮೆಗೆ ಹಣ, ಆಭರಣ ಕೊಡಲು ತಮ್ಮ ಸಂಬಂಧಿಕರ ಮನೆಯಲ್ಲಿಯೇ ನಗದು ಸೇರಿದಂತೆ 52.71 ಲಕ್ಷ ರೂ. ಬೆಲೆಯ ಚಿನ್ನಾಭರಣ ಕಳ್ಳತನ ಮಾಡಿ ನಾಟಕವಾಡಿದ್ದ ಯುವಕನೊಬ್ಬನನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗಟ್ಟಿಹಳ್ಳಿಯ ನಿವಾಸಿ ಶ್ರೇಯಸ್‌‍(22) ಬಂಧಿತ ಆರೋಪಿ. ಈತ ಕೋಳಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ತಮದೇ ಊರಿನ ಸಂಬಂಧಿಕರಾದ ಹರೀಶ್‌ ಎಂಬುವವರ ಮನೆಗೆ ಈ ಶ್ರೇಯಸ್‌‍ ಆಗಾಗ್ಗೆ ಹೋಗುತ್ತಿದ್ದ. ಕಳೆದ ತಿಂಗಳ 14ರಂದು ಹರೀಶ್‌ ಅವರ ತಾಯಿ ಮನೆಗೆ ಬೀಗಹಾಕಿ ಪಕ್ಕದ ಬೀದಿಯಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದರು.

ಆ ಸಂದರ್ಭದಲ್ಲಿ ಮನೆಯ ಬಳಿ ಬಂದ ಶ್ರೇಯಸ್‌‍ ಬೀಗ ಮುರಿದು 3.46 ಲಕ್ಷ ರೂ. ನಗದು, 416 ಗ್ರಾಂ ಚಿನ್ನವನ್ನು ದೋಚಿ ಹೋಗಿದ್ದನು.ಕಳ್ಳತನ ಮಾಡಿದ್ದ ಕೆಲವು ಆಭರಣಗಳನ್ನು ಬನ್ನೇರುಘಟ್ಟದಲ್ಲಿ ವಾಸವಿರುವ ತನ್ನ ಪ್ರಿಯತಮೆಗೆ ಕೊಟ್ಟಿದ್ದು, ಉಳಿದ ಆಭರಣಗಳನ್ನು ಪರಪ್ಪನ ಅಗ್ರಹಾರದಲ್ಲಿರುವ ಮುತ್ತೂಟ್‌ ಫೈನಾನ್‌್ಸನಲ್ಲಿ ಅಡವಿಟ್ಟಿದ್ದ. ನಗದನ್ನು ಸೂರ್ಯಸಿಟಿಯಲ್ಲಿರುವ ಬ್ಯಾಂಕ್‌ನ ತನ್ನ ಖಾತೆಗೆ ಜಮಾ ಮಾಡಿಕೊಂಡಿದ್ದ.
ನಂತರ ಹರೀಶ್‌ ಅವರ ಮನೆ ಬಳಿ ಬಂದ ಶ್ರೇಯಸ್‌‍ ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ನೀವು ಬೇಗ ಪೊಲೀಸರಿಗೆ ದೂರು ಕೊಡಿ ಎಂದು ಅವನೇ ಪೊಲೀಸರಿಗೆ ದೂರು ಕೊಡಿಸಿದ್ದ.

ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಕೊನೆಗೆ ತಾಂತ್ರಿಕ ಸಾಕ್ಷ್ಯಾಧಾರದ ಮೇಲೆ ಶ್ರೇಯಸ್‌‍ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.ನಂತರ ಪೊಲೀಸರು ಆತನನ್ನು ಬಂಧಿಸಿ ಸಂಬಂಧಿಕರ ಮನೆಯಲ್ಲಿ ಕದ್ದಿದ್ದ ಹಣ, ಆಭರಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ಬಂಧನ: 86 ಗ್ರಾಂ ಮಾಂಗಲ್ಯ ಸರ ವಶ
ಕೆರೆಯ ಬಳಿ ವಾಯುವಿಹಾರ ಮಾಡುತ್ತಿದ್ದ ಮಹಿಳೆಯೊಬ್ಬರ ಮಾಂಗಲ್ಯಸರ ಕಿತ್ತುಕೊಂಡು ಪರಾರಿಯಾಗಿದ್ದ ಸರಗಳ್ಳನನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿ 9 ಲಕ್ಷ ಮೌಲ್ಯದ 86 ಗ್ರಾಂ ತೂಕದ ಸರವನ್ನು ವಶಪಡಿಸಿಕೊಂಡಿದ್ದಾರೆ.

ಗೊಲ್ಲಹಳ್ಳಿಯ ನಿವಾಸಿ ನಿತಿನ್‌ ಬಂಧಿತ ಆರೋಪಿ. ಈತ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಾಗಿದ್ದ ಮಹಿಳೆಯೊಬ್ಬರು ಸೆ.12ರಂದು ಮಾರುಗೊಂಡನಹಳ್ಳಿಯ ಕೆರೆ ಬಳಿ ವಾಕಿಂಗ್‌ ಮಾಡುತ್ತಿದ್ದಾಗ ಅವರ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತು ಪರಾರಿಯಾಗಿದ್ದ.

ಈ ಸಂಬಂಧ ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡ ಪೊಲೀಸರು ಬಾತಿದಾರನಿಂದ ಬಂದ ಖಚಿತ ಮಾಹಿತಿಯನ್ನು ಕಲೆ ಹಾಕಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸರ ಅಪಹರಣ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಚಿನ್ನದ ಸರವನ್ನು ಹಾಸನದ ಆಭರಣ ಅಂಗಡಿಯೊಂದರಲ್ಲಿ ಅಡಮಾನ ಇಟ್ಟಿದ್ದ ಸುಮಾರು 9,03,000 ರೂ. ಮೌಲ್ಯದ 86 ಗ್ರಾಂ ತೂಕದ ಮಾಂಗ್ಯಲ ಸರವನ್ನು ವಶಪಡಿಸಿಕೊಂಡಿದ್ದಾರೆ.ಎಲೆಕ್ಟ್ರಾನಿಕ್‌ಸಿಟಿ ಉಪವಿಭಾಗದ ಉಪ ಪೊಲೀಸ್‌‍ ಆಯುಕ್ತ ನಾರಾಯಣ್‌ ಅವರ ಮಾರ್ಗದರ್ಶನದಲ್ಲಿ ಉಪವಿಭಾಗದ ಸಹಾಯಕ ಪೊಲೀಸ್‌‍ ಆಯುಕ್ತರಾದ ಕೆ.ಎಂ.ಸತೀಶ್‌ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ ಸೋಮಶೇಖರ್‌ ಹಾಗೂ ಸಿಬ್ಬಂದಿಗಳ ತಂಡ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉಪನ್ಯಾಸಕರ ಮನೆಗೆ ನುಗ್ಗಿ 1.40 ಕೋಟಿ ದೋಚಿದ್ದ 7 ಮಂದಿ ಡಕಾಯಿತರ ಗ್ಯಾಂಗ್ ಅರೆಸ್ಟ್

ಬೆಂಗಳೂರು, ಅ.11- ಉಪನ್ಯಾಸಕರೊಬ್ಬರ ಮನೆಗೆ ಜಾಗೃತ ದಳದ ಅಧಿಕಾರಿಗಳಂತೆ ನುಗ್ಗಿ 1.40 ಕೋಟಿ ರೂ. ದೋಚಿದ್ದ ಏಳು ಮಂದಿ ಡಕಾಯಿತರ ತಂಡವನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಈ ಹಿಂದೆ ಉಪನ್ಯಾಸಕರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಶಂಕರ್‌, ಆಂಧ್ರ ಮೂಲದ ಜಗನ್‌ಮೋಹನ್‌, ಅವನ ಸಹೋದರ ಶ್ರೀನಿವಾಸ್‌‍, ಯಲಹಂಕದಲ್ಲಿ ಮಾನವ ಹಕ್ಕುಗಳ ಸಂಘಟನೆ ಕಚೇರಿ ಹೊಂದಿದ್ದ ರಾಜೇಂದ್ರ, ಹೇಮಂತ, ಶ್ರೀನಿವಾಸ ಹಾಗೂ ಕಿರಣ್‌ ಬಂಧಿತ ಆರೋಪಿಗಳು.

ಕೋಟು, ಟೈ ಹಾಕಿಕೊಂಡು ಠಾಕುಟೀಕಾಗಿ ಡ್ರೆಸ್‌‍ ಮಾಡಿಕೊಂಡು ಕಳೆದ ಸೆ.19ರಂದು ಬೆಳಗ್ಗೆ ವಿನಾಯಕ ನಗರದಲ್ಲಿ ವಾಸವಾಗಿರುವ, ಪ್ರತಿಷ್ಠಿತ ಕಾಲೇಜೊಂದರ ಉಪನ್ಯಾಸಕ ಗಿರಿರಾಜ್‌ ಎಂಬುವವರ ಮನೆ ಬಳಿ ಎಂಟು ಮಂದಿ ಬಂದಿದ್ದಾರೆ. ನಾಲ್ವರು ಹೊರಗೆ ನಿಂತಿದ್ದು, ನಾಲ್ಕು ಮಂದಿ ಮನೆ ಒಳಗೆ ಹೋಗಿದ್ದರು.

ನಂತರ ಗಿರಿರಾಜ್‌ ಅವರ ತಾಯಿ ಹಾಗೂ ಪತ್ನಿಗೆ ನಾವು ಜಾಗೃತ ದಳದ ಅಧಿಕಾರಿಗಳೆಂದು ಹೇಳಿ ಬೆದರಿಸಿ ಮನೆ ಶೋಧ ನಡೆಸಬೇಕೆಂದು ಕೆಲ ದಾಖಲೆಗಳು, ಹಣವಿದ್ದ ಸೂಟ್‌ಕೇಸ್‌‍ ಹಾಗೂ ಬ್ಯಾಗ್‌ಗಳನ್ನು ದೋಚಿ ಕಾರಿನಲ್ಲಿ ಪರಾರಿಯಾಗಿದ್ದರು.

ಗಿರಿರಾಜ್‌ ಅವರು ಊಟಕ್ಕೆಂದು ಬಂದಾಗ ಮೊದಲು ಮನೆಯವರು ಏನನ್ನೂ ಹೇಳಲಿಲ್ಲ, ನಂತರ ಜಮೀನು ಮಾರಿ ಇಟ್ಟಿದ್ದ ಹಣವನ್ನು ನೋಡಿದ್ದಾರೆ. ಹಣ ಇಲ್ಲದಿದ್ದಾಗ ಮನೆಯವರನ್ನು ವಿಚಾರಿಸಿದ್ದಾರೆ. ನಂತರ ನಡೆದ ಘಟನೆಯನ್ನು ತಿಳಿದುಕೊಂಡಿದ್ದಾರೆ.ಕೂಡಲೇ ಯಲಹಂಕ ಪೊಲೀಸ್‌‍ ಠಾಣೆಗೆ ಹೋಗಿ ಡಕಾಯಿತರು ಮನೆಗೆ ನುಗ್ಗಿ ಜಮೀನು ಮಾರಿ ಬಂದಿದ್ದ ಸುಮಾರು 1.40 ಕೋಟಿ ರೂ.ಗಳನ್ನು ದೋಚಿದ್ದಾರೆ ಎಂದು ದೂರು ನೀಡಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಯಲಹಂಕ ಠಾಣೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡ ನಂತರ ಸಂಜಯನಗರದಲ್ಲಿ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಡಕಾಯಿತಿ ಘಟನೆ ಬೆಳಕಿಗೆ ಬಂದಿದೆ.

ಈತನನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಇನ್ನೂ ಏಳು ಮಂದಿ ತಲೆಮರೆಸಿಕೊಂಡಿರುವುದು ಗೊತ್ತಾಗಿದೆ. ನಂತರ ಆರೋಪಿಯ ಗೋಡೌನ್‌ ಮತ್ತು ಆಫೀಸ್‌‍ ಮೇಲೆ ದಾಳಿ ನಡೆಸಿ ಅಲ್ಲಿಟ್ಟಿದ್ದ 38,80,200 ರೂ. ನಗದು, ದಾಖಲಾತಿಗಳಿದ್ದ ಮೂರು ಬ್ಯಾಗ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಕಾರನ್ನು ವಶಪಡಿಸಿಕೊಳ್ಳಲಾಯಿತು.

ಇದೇ ವೇಳೆ ಆರೋಪಿ ನೀಡಿದ ಮಾಹಿತಿ ಮೇರೆಗೆ ಕೃತ್ಯದಲ್ಲಿ ಭಾಗಿಯಾಗಿದ್ದ ಆಂಧ್ರ ಪ್ರದೇಶದ ರೇಣುಕಾಮಾಪಲ್ಲಿ ಗ್ರಾಮದ ಜಗನ್‌ಮೋಹನ್‌ನನ್ನು ಬಂಧಿಸಿ ಆತನ ಮನೆಯಲ್ಲಿಟ್ಟಿದ್ದ 55 ಲಕ್ಷ ರೂ. ಮತ್ತು ಆತನ ಸಂಬಂಧಿಕರ ಮನೆಯಲ್ಲಿರಿಸಿದ್ದ 25 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಯಿತು.

ನಂತರ ವಿಜಯನಗರದ ಚೋಳರಪಾಳ್ಯದ ಆರೋಪಿ ಮನೆಯಿಂದ 1.50 ಲಕ್ಷ ರೂ. ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಓಮ್ನಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತಿಬ್ಬರು ಆರೋಪಿಗಳನ್ನು ಶ್ರೀನಗರ ಹಾಗೂ ರಾಮಮೂರ್ತಿ ನಗರದಲ್ಲಿ ವಶಕ್ಕೆ ಪಡೆದು ಎಲ್ಲ ಏಳು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ 10 ದಿನಗಳ ಕಾಲ ಅಧಿರಕ್ಷೆಗೆ ಪಡೆದುಕೊಳ್ಳಲಾಯಿತು.

ಈ ಹಿಂದೆ ಗಿರಿರಾಜ್‌ ಅವರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಶಂಕರ್‌ ಈ ಪ್ರಕರಣದ ಮಾಸ್ಟರ್‌ ಮೈಂಡ್‌ ಎಂದು ತಿಳಿದುಬಂದಿದ್ದು, ಈತ ಕಳೆದ ಆರು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದು, ದೊಮಲೂರಿನಲ್ಲಿ ವಾಸವಾಗಿದ್ದ. ಗಿರಿರಾಜ್‌ ಅವರ ಮನೆಯಲ್ಲಿ ಹಣವಿರುವ ಬಗ್ಗೆ ಸುಳಿವು ಪಡೆದುಕೊಂಡು ಪೂರ್ವ ನಿಯೋಜಿತ ಚರ್ಚೆ ನಡೆಸಿ ಈ ಡಕಾಯಿತಿ ನಡೆಸಿದ್ದರು.

ಶಂಕರ್‌ ಮನೆಯಲ್ಲಿದ್ದ 4 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ ಈಗ ಪೊಲೀಸರು 1.27 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.ಈಶಾನ್ಯ ವಿಭಾಗದ ಡಿಸಿಪಿ ವಿ.ಜೆ.ಸಜೀತ್‌ ಮಾರ್ಗದರ್ಶನದಲ್ಲಿ ಎಸಿಪಿ ನರಸಿಂಹಮೂರ್ತಿ ನೇತೃತ್ವದಲ್ಲಿ ಯಲಹಂಕ ಠಾಣೆ ಇನ್ಸ್ ಪೆಕ್ಟರ್‌ ಎಂ.ಎನ್‌.ಕೃಷ್ಣಮೂರ್ತಿ ಮತ್ತವರ ಸಿಬ್ಬಂದಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಹಾರ ಫಲಿತಾಂಶ ನಂತರ ಸಂಪುಟ ಪುನಾರಚನೆ ಚರ್ಚೆ : ಸಚಿವ ಚೆಲುವರಾಯ ಸ್ವಾಮಿ

ಮಂಡ್ಯ, ಅ.11– ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ನವೆಂಬರ್‌ 14ರಂದು ಪ್ರಕಟವಾಗಲಿದ್ದು, ಆ ಬಳಿಕ ಸಂಪುಟ ಪುನರ್‌ ರಚನೆಯ ಬಗ್ಗೆ ಮುಖ್ಯಮಂತ್ರಿ ಮತ್ತು ಪಕ್ಷ ಚರ್ಚೆ ಮಾಡಿ ನಿರ್ಧರಿಸಲಾಗುವುದು ಎಂದು ಕೃಷಿ ಸಚಿವ ಚೆಲುವರಾಯ ಸ್ವಾಮಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌‍ನ 138 ಮಂದಿ ಶಾಸಕರು ಸಚಿವರಾಗಬೇಕೆಂಬ ಆಕಾಂಕ್ಷೆ ಹೊಂದಿರುತ್ತಾರೆ. ಆದರೆ 34 ಮಂದಿಗೆ ಮಾತ್ರ ಅವಕಾಶ ಸಿಕ್ಕಿದೆ. ಪಂಚಾಯಿತಿಗಳಲ್ಲಿ 10 ತಿಂಗಳಿಗೆ ಅಧಿಕಾರ ಬದಲಾಗುತ್ತದೆ, ಸರ್ಕಾರದಲ್ಲಿ ಎರಡೂವರೆ ವರ್ಷದ ಬಳಿಕ ಬದಲಾವಣೆ ಕೇಳುವುದು ತಪ್ಪೇ? ಎಂದು ಪ್ರಶ್ನಿಸಿದರು.
ಸಂಪುಟ ಪುನರ್‌ ರಚನೆಯ ವೇಳೆ 34 ಜನರಲ್ಲಿ ಯಾರನ್ನು ತೆಗೆಯುತ್ತಾರೋ ಗೊತ್ತಿಲ್ಲ. 10 ಜನ ತೆಗೆಯುತ್ತಾರೋ, 33 ಜನರನ್ನು ತೆಗೆಯುತ್ತಾರೋ ಎಂಬುದು ಪಕ್ಷಕ್ಕೆ ಬಿಟ್ಟ ವಿಚಾರ. ಸದ್ಯಕ್ಕೆ ಇದ್ಯಾವ ವಿಚಾರಗಳು ಇಲ್ಲ ಎಂದರು.

ಸಚಿವರು ಜಿಲ್ಲೆಗಳಲ್ಲಿ ಯಾವ ರೀತಿಯ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ನಿರ್ವಹಿಸುತ್ತಿರುವ ಜವಾಬ್ದಾರಿ ಬಗ್ಗೆ ಚರ್ಚೆ ಮಾಡಲು ಸಚಿವರ ಔತಣ ಕೂಟ ಆಯೋಜಿಸಿದ್ದಾರೆ. ಇದನ್ನು ಬೇರೆ ರೀತಿ ಬಿಂಬಿಸಬಾರದು, ಔತಣಕೂಟದಲ್ಲಿ ನಿರ್ಗಮಿಕ ಸಚಿವರಿಗೆ ಸಮಾಧಾನ ಪಡಿಸಲಾಗುವುದು ಎಂಬುವುದು ಕೇವಲ ವದಂತಿ ಎಂದರು.

ಈ ಮುಂಗಾರಿನಲ್ಲಿ ಮಳೆಯಿಂದ ಹೆಚ್ಚು ಹಾನಿಯಾಗಿದೆ. ಕಾವೇರಿ ನದಿ ಪಾತ್ರದಲ್ಲೂ ಕೃಷಿ ಮತ್ತು ತೋಟಗಾರಿಕೆ ಬೆಲೆ ಹಾನಿಯಾಗಿದೆ. ಮಳೆ ನಿಂತ ಮೇಲೆ ನಿರ್ಧಿಷ್ಠ ಪ್ರಮಾಣದ ಅಂದಾಜನ್ನು ಜಂಟಿ ಸರ್ವೇ ಮೂಲಕ ಗುರುತಿಸಿ, ತಕ್ಷಣ ಪರಿಹಾರ ನೀಡಲಾಗುವುದು.
ಈ ಮೊದಲು ಒಣ ಬೇಸಾಯಕ್ಕೆ 8,500, ನೀರಾವರಿಗೆ 22500 ರೂ.ಗಳನ್ನು ಹೆಕ್ಟೇರ್‌ಗೆ ಪರಿಹಾರ ನೀಡಲಾಗುತ್ತಿತ್ತು, ಅದನ್ನು ಹೆಚ್ಚಿಸಲಾಗಿದೆ.

ರೈತರ ಜೊತೆ ಚರ್ಚಿಸಿ ಬೇಡಿಕೆಯಂತೆ ಒಣ ಬೇಸಾಯಕ್ಕೆ 17 ಸಾವಿರ, ನೀರಾವರಿಗೆ 21,500, ಬಹು ಮಾದರಿ ಬೆಲೆಗೆ 31 ಸಾವಿರ ರೂ. ಪರಿಹಾರವನ್ನು ನೀಡಲಾಗುತ್ತಿದೆ.
ಒಂದು ತಿಂಗಳೊಳಗಾಗಿಯೇ ರೈತರ ಖಾತೆಗೆ ಪರಿಹಾರ ಹಣ ಪಾವತಿಸುವುದಾಗಿ ಹೇಳಿದರು. ಇದರ ಜೊತೆಗೆ ಕೃಷಿ ಬೆಲೆ ವಿಮೆ ಪರಿಹಾರ ಕೂಡ ದೊರೆಯಲಿದೆ ಎಂದು ಹೇಳಿದರು.

ಬಿಎಂಟಿಸಿ ಬಸ್‌‍ ಡಿಕ್ಕಿಯಾಗಿ 4ನೇ ತರಗತಿ ವಿದ್ಯಾರ್ಥಿನಿ ಸಾವು

ಬೆಂಗಳೂರು, ಅ.11– ಯಮರೂಪಿಯಾಗಿ ಬಂದ ಬಿಎಂಟಿಸಿ ಬಸ್‌‍ ಡಿಕ್ಕಿ ಹೊಡೆದು 4ನೆ ತರಗತಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಮಹಾಲಕ್ಷ್ಮಿ ಬಡಾವಣೆಯ 1ನೆ ಹಂತದ ಸಿಗ್ನಲ್‌ ಬಳಿ ಇಂದು ಮಧ್ಯಾಹ್ನ ನಡೆದಿದೆ.

ಬೋವಿಪಾಳ್ಯದ ನಿವಾಸಿ ಭುವನಾ (9) ಮೃತ ದುರ್ದೈವಿ. ಪಾಂಚಜನ್ಯ ಶಾಲೆಯಲ್ಲಿ 4ನೆ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಇಂದು ಶಾಲೆ ಮುಗಿಸಿಕೊಂಡು ಮನೆಗೆ ಹೋಗುವಾಗ ಸುಮಾರು 12.20ರ ಸಮಯದಲ್ಲಿ ಒಂದನೆ ಹಂತದ ಸಿಗ್ನಲ್‌ ಬಳಿ ಬಿಎಂಟಿಸಿ ಬಸ್‌‍ ಡಿಕ್ಕಿ ಹೊಡೆದಿದೆ.

ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಸ್ಥಳೀಯರು ಆರೈಕೆ ಮಾಡಿ ನಂತರ ಹತ್ತಿರದ ಪೋರ್ಟಿಸ್‌‍ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ತಲೆಗೆ ತೀವ್ರವಾಗಿ ಪೆಟ್ಟುಬಿದ್ದ ಹಿನ್ನೆಲೆಯಲ್ಲಿ ಆಕೆ ಕೊನೆಯುಸಿರೆಳೆದಿದ್ದಾಳೆ.

ಘಟನೆ ನಂತರ ಬಿಎಂಟಿಸಿ ಚಾಲಕ ವಾಹನ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ. ಸ್ಥಳೀಯರು ಈ ಘಟನೆ ಕಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಕೆ ಜತೆಗಿದ್ದ ಕೆಲ ಸಹಪಾಠಿಗಳು ಈ ದೃಶ್ಯ ನೋಡಿ ಕಣ್ಣೀರು ಹಾಕಿದ್ದಾರೆ. ಸುದ್ದಿ ತಿಳಿದ ಮಲ್ಲೇಶ್ವರಂ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬೆಂಗಳೂರು : ನಿರ್ಮಾಣ ಹಂತದ ಕಟ್ಟಡದ 13ನೇ ಮಹಡಿಯಿಂದ ಬಿದ್ದು ಇಬ್ಬರು ಕಾರ್ಮಿಕರ ಸಾವು

ಬೆಂಗಳೂರು, ಅ.11- ನಿರ್ಮಾಣ ಹಂತದ ವಸತಿ ಸಮುಚ್ಚಯದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು 13ನೇ ಮಹಡಿಯಿಂದ ಕೆಳಗೆ ಬಿದ್ದು, ಮೃತಪಟ್ಟಿರುವ ದುರ್ಘಟನೆ ಬೆಳ್ಳಂದೂರು ಪೊಲೀಸ್‌‍ ಠಾಣಾ ವ್ಯಾಪ್ತಿಯ ರಾಮ್‌ದೇವ್‌ ಮೆಡಿಕಲ್ಸ್ ಬಳಿ ನಡೆದಿದೆ. ಪಶ್ಚಿಮ ಬಂಗಾಳದ ಸೊನ್‌ಪುರ್‌ನ ಅಮಿರ್‌ ಹುಸೇನ್‌(33), ಮುಮ್ತಾಜ್‌ ಅಲಿ ಮೋಲಾ(28) ಮೃತ ದುರ್ದೈವಿಗಳು.

ಡಿಎನ್‌ಆರ್‌ ಹರಿಸ್ತಾ ಡೆವಲಪರ್‌ರ‍ಸ ವತಿಯಿಂದ ಇಲ್ಲಿ ವಸತಿ ಸಮುಚ್ಚಯವನ್ನು ನಿರ್ಮಿಸಲಾಗುತ್ತಿತ್ತು. ಇದನ್ನು ಇಂಪಿರಿಯಲ್‌ ಬಿಲ್ಡ್ ಟೆಕ್‌ ಪ್ರವೇಟ್‌ ಲಿಮಿಟೆಡ್‌ ಸಂಸ್ಥೆ ಕಾಮಗಾರಿಯ ಜವಾಬ್ದಾರಿ ವಹಿಸಿಕೊಂಡಿತ್ತು.

ನಿನ್ನೆ ಸಂಜೆ 13ನೇ ಅಂತಸ್ತಿನಲ್ಲಿ ಸುಮಾರು 10 ಮಂದಿ ಕಾರ್ಮಿಕರು ಬಾಲ್ಕಾನಿ ನಿರ್ಮಾಣ ಕಾಮಗಾರಿಯನ್ನು ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಅಳವಡಿಸಿದ್ದ ಸೆಂಟ್ರಿಂಗ್‌ ಕುಸಿದು ಮೇಲಿನಿಂದ ಇಬ್ಬರು ಕೆಳಗೆ ಬಿದಿದ್ದಾರೆ. ತೀವ್ರವಾಗಿ ಗಾಯಗೊಂಡ ಅವರು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ.

ಬೆಳ್ಳಂದೂರು ಠಾಣೆ ಪೊಲೀಸರು ಘಟನೆಗೆ ಕುರಿತಂತೆ ನಿರ್ಲಕ್ಷ್ಯ ಸೇರಿದಂತೆ ಹಲವು ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಟ್ಟಡ ನಿರ್ಮಾಣ ಕಾಮಗಾರಿ ಉಸ್ತುವಾರಿ ವತಿಯಿಂದ ಇಂಪಿರಿಯಲ್‌ ಬಿಲ್ಡ್ ಟೆಕ್‌ನ ಸೈಟ್‌ ಎಂಜಿನಿಯರ್‌ ಸೇರಿದಂತೆ ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಅಧಿಕಾರ ಹಸ್ತಾಂತರ, ಸಂಪುಟ ಸರ್ಜರಿ ಸದ್ಯಕ್ಕೆ ಇಲ್ಲ : ಡಿ.ಕೆ.ಶಿವಕುಮಾರ್‌

ಬೆಂಗಳೂರು, ಅ.11- ಸದ್ಯಕ್ಕೆ ಸಚಿವ ಸಂಪುಟ ಪುನರ್‌ ರಚನೆ ಅಥವಾ ಅಧಿಕಾರ ಹಂಚಿಕೆಯ ಬಗ್ಗೆ ಯಾವುದೇ ಚರ್ಚೆಗಳಿಲ್ಲ. ಕೆಲವರಿಗೆ ಹೆಚ್ಚು ಆತುರವಿದೆ. ಅಂಥವರು ಅನಗತ್ಯವಾಗಿ ವದಂತಿಗಳನ್ನು ಹರಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆಕ್ಷೇಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರೇಟರ್‌ ಬೆಂಗಳೂರು, ಜಿಲ್ಲಾ ಪಂಚಾಯತ್‌, ತಾಲ್ಲೂಕು ಪಂಚಾಯತ್‌ಗಳ ಚುನಾವಣೆಗಳು ಹತ್ತಿರ ಬರುತ್ತಿವೆ. ಇದರ ಪೂರ್ವ ತಯಾರಿ ಕುರಿತು ಮುಖ್ಯಮಂತ್ರಿಯವರು ಸಚಿವರಿಗೆ ಸೂಚನೆಗಳನ್ನು ನೀಡಲು ಔತಣ ಕೂಟ ಆಯೋಜಿಸಿದ್ದಾರೆ. ಇದರ ಹೊರತಾಗಿ ಬೇರೆ ಏನೂ ಇಲ್ಲ ಎಂದು ಸ್ಪಷ್ಟಪಡಿದಿರು.
ಸದ್ಯಕ್ಕೆ ಸಚಿವ ಸಂಪುಟ ಪುನರ್‌ ರಚನೆ, ಅಧಿಕಾರ ಹಸ್ತಾಂತರ ಎಂಬ ಸಾಧ್ಯತೆಗಳಿಲ್ಲ.

ಲಾಲ್‌ಬಾಗ್‌ನಲ್ಲಿ ಇಂದು ನಾಗರಿಕರ ಜೊತೆ ಮಾತನಾಡುವಾಗ ಕೆಲವರು, ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗ ಬೇಕೆಂದು ಹೇಳಿದ್ದಾರೆ. ನಾನು ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಾಜಕೀಯ ಮಾತನಾಡದಂತೆ ಸೂಚನೆ ನೀಡಿದ್ದೇನೆ. ಇಲ್ಲಿ ನಾನು ಜನರ ಜೊತೆ ಮಾತನಾಡುತ್ತಿರುವ ಸಂದರ್ಭದಲ್ಲೇ ನನ್ನ ಹೇಳಿಕೆಯನ್ನು ತಿರುಚಿ ತಪ್ಪಾಗಿ ಪ್ರಸಾರ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ, ಕೆಲವು ಮಾಧ್ಯಮಗಳು ಸುದ್ದಿ ತಿರುಚಿ ವಿವಾದ ಸೃಷ್ಟಿಸುತ್ತಿವೆ. ನಾನು ಸಾರ್ವಜನಿಕರ ಭೇಟಿಗೆ ಬಂದಾಗ ಕೆಲವರು ನೀವು ಮುಖ್ಯಮಂತ್ರಿ ಆಗಬೇಕು, ಆ ಸಮಯ ಹತ್ತಿರ ಬರುತ್ತಿದೆಯೇ ಎಂದು ಕೇಳಿದರು. ಆದರೆ ಸಿಎಂ ಆಗುವ ಕಾಲ ಹತ್ತಿರ ಬರುತ್ತಿದೆ ಎಂದು ನಾನೇ ಹೇಳಿದ್ದೇನೆ ಎಂದು ಕೆಲವು ಮಾಧ್ಯಮಗಳು ತಿರುಚಿ ಪ್ರಸಾರ ಮಾಡುತ್ತಿವೆ. ನೀವು ಹಾಗೆಲ್ಲ ಸುದ್ದಿ ತಿರುಚಿ ತೋರಿಸಬೇಡಿ ಎಂದು ಎಚ್ಚರಿಕೆ ನೀಡಿದರು.

ನಾನು ಸಿಎಂ ಹುದ್ದೆ ಅಲಂಕರಿಸಲು ಆತುರದಲ್ಲಿ ಇಲ್ಲ. ನಾನು ಇಲ್ಲಿಗೆ ಬಂದಿರುವುದು ಸಾರ್ವಜನಿಕರ ಸೇವೆ ಮಾಡಲು. ರಾಜಕಾರಣ ಮಾಡಲು ಅಲ್ಲ. ಜನರ ಸೇವೆ ಮಾಡಲು ಹಗಲು ರಾತ್ರಿ ತಿರುಗುತ್ತಿದ್ದೇನೆ. ನೀವು ಇದೇ ರೀತಿ ಸುದ್ದಿ ತಿರುಚುವುದಾದರೆ, ನಾನು ನಿಮಗೆ ಸಹಕಾರ ನೀಡುವುದಿಲ್ಲ. ಕಾರ್ಯಕ್ರಮಗಳಿಗೆ ಕರೆಯುವುದೂ ಇಲ್ಲ, ಮಾಧ್ಯಮಗೋಷ್ಠಿ ನಡೆಸುವುದೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾನು ಆ ಹೇಳಿಕೆ ಎಲ್ಲಿ ನೀಡಿದ್ದೇನೆ? ಮಾಧ್ಯಮಗಳು ರಾಜಕಾರಣ ಮಾಡುವುದು ಬೇಡ. ನಾನು ಆ ರೀತಿ ಹೇಳಿಲ್ಲ, ಅದರ ಅಗತ್ಯವೂ ನನಗೆ ಇಲ್ಲ. ನನಗೆ ನನ್ನ ಗುರಿ ಗೊತ್ತಿದೆ. ಭಗವಂತ ನನಗೆ ಅವಕಾಶ ಕೊಟ್ಟಿದ್ದಾನೆ, ಮುಖ್ಯಮಂತ್ರಿಯಾಗುವ ಅವಕಾಶ ಯಾವಾಗ ಕೊಡುತ್ತಾನೆ ಎಂಬುದು ಗೊತ್ತಿದೆ. ಇದೇ ರೀತಿ ಮಾಧ್ಯಮಗಳು ತಪ್ಪು ಮಾಹಿತಿ ನೀಡುವುದು ಮುಂದುವರೆಸಿದರೆ, ನನಗೆ ಮಾಧ್ಯಮಗಳನ್ನು ಬಿಟ್ಟು ರಾಜಕಾರಣ ಮಾಡುವುದು ಗೊತ್ತಿದೆ.

ರಾಜ್ಯದ ಜನರ ಸೇವೆ ಹಾಗೂ ಬೆಂಗಳೂರಿನ ನಾಗರಿಕರಿಗೆ ಉತ್ತಮ ಆಡಳಿತ ನೀಡಲು ಶ್ರಮಿಸುತ್ತಿದ್ದೇನೆ. ಆದರೆ ಒಳ್ಳೆಯ ಕೆಲಸ ಬಿಟ್ಟು ವಿವಾದ ಸೃಷ್ಟಿಸಲು ಕೆಲವು ಮಾಧ್ಯಮಗಳು ಪ್ರಯತ್ನಿಸುತ್ತಿವೆ. ಇದೇ ರೀತಿ ನನ್ನ ವಿಚಾರದಲ್ಲಿ ಸುಳ್ಳು ಸುದ್ದಿ ಹಾಕಿ, ದಾರಿ ತಪ್ಪಿಸುವ ಪ್ರಯತ್ನ ಮಾಡಿದರೆ ನಾನು ಮಾನನಷ್ಟ ಮೊಕದ್ದಮೆ ಹಾಕಬೇಕಾಗುತ್ತದೆ ಎಂದು ಸಿಡಿಮಿಡಿ ವ್ಯಕ್ತಪಡಿಸಿದರು.

ಕೋಲ್ಡ್ರಿಫ್ ಕಫ್ ಸಿರಪ್‌ ಘೋಷಿಸಿದ ದೆಹಲಿ ಸರ್ಕಾರ

ನವದೆಹಲಿ,ಅ.11- ದೇಶದಲ್ಲಿ ಹಲವಾರು ಮಕ್ಕಳ ಸಾವಿಗೆ ಕಾರಣವಾಗಿ ಈಗಾಗಲೇ ಹಲವು ರಾಜ್ಯಗಳಲ್ಲಿ ನಿಷೇಧಕ್ಕೊಳಪಟ್ಟಿರುವ ಕೋಲ್ಡಿಫ್‌ ಕೆಮ್ಮು ಸಿರಪ್‌ ಗುಣಮಟ್ಟದಿಂದ ಕೂಡಿಲ್ಲ ಎಲ್ಲ ಎಂದು ಘೋಷಿಸಿದ ನಂತರ ದೆಹಲಿ ಸರ್ಕಾರವು ಮಾರಾಟ, ಖರೀದಿ ಮತ್ತು ವಿತರಣೆಯನ್ನು ನಿಷೇಧಿಸಿದೆ ಎಂದು ಅಧಿಕೃತ ಆದೇಶ ತಿಳಿಸಿದೆ.

ಆದೇಶದ ಪ್ರಕಾರ, ತಮಿಳುನಾಡಿನ ಸ್ರೆಸನ್‌ ಫಾರ್ಮಾಸ್ಯುಟಿಕಲ್‌ ತಯಾರಕರು ಮೇ 2025ರಲ್ಲಿ ತಯಾರಿಸಿದ ಕೋಲ್ಡಿಫ್‌ ಸಿರಪ್‌ (ಪ್ಯಾರೆಸಿಟಮಾಲ್‌, ಫೆನೈಲ್ಫಿನ್‌ ಹೈಡ್ರೋಕ್ಲೋರೈಡ್‌, ಕ್ಲೋರ್ಫೆನಿರಮೈನ್‌ ಮಲೇಟ್‌ ಸಿರಪ್‌), ಡೈಎಥಿಲೀನ್‌ ಗ್ಲೈಕಾಲ್‌ (46.28ರಿಂದ ಮಾನವನ ಆರೋಗ್ಯಕ್ಕೆ ಹಾನಿಕಾರಕ) ವಿಷಕಾರಿ ರಾಸಾಯನಿಕದೊಂದಿಗೆ ಕಲಬೆರಕೆಯಾಗಿರುವುದು ಕಂಡುಬಂದಿದೆ.

ಸಿರಪ್‌ನ ಹೇಳಲಾದ ಬ್ಯಾಚ್‌ ಅನ್ನು ಮಾರಾಟ ಮಾಡುವುದು, ಖರೀದಿಸುವುದು ಅಥವಾ ವಿತರಿಸುವುದನ್ನು ತಕ್ಷಣವೇ ನಿಲ್ಲಿಸಲು ಎಲ್ಲಾ ಮಧ್ಯಸ್ಥಗಾರರಿಗೆ ನಿರ್ದೇಶಿಸಲಾಗಿದೆ.ಉತ್ಪನ್ನದ ಸಂಭಾವ್ಯ ಆರೋಗ್ಯ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಉತ್ಪನ್ನವನ್ನು ಬಳಸದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸಾರ್ವಜನಿಕ ಹಿತಾಸಕ್ತಿಯಿಂದ ಹೊರಡಿಸಲಾದ ಸಾರ್ವಜನಿಕ ಸಲಹೆಯ ಕಟ್ಟುನಿಟ್ಟಾದ ಅನುಷ್ಠಾನ ಮತ್ತು ವ್ಯಾಪಕ ಪ್ರಸಾರಕ್ಕಾಗಿ ಎಲ್ಲಾ ಮಧ್ಯಸ್ಥಗಾರರ ಸಹಾಯವನ್ನು ಕೋರಲಾಗಿದೆ ಎಂದು ಅದು ಹೇಳಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣ : ರಿಲಯನ್ಸ್ ಪವರ್‌ನ ಸಿಎಫ್‌ಒ ಅಶೋಕ್‌ ಪಾಲ್‌ ಬಂಧನ

ನವದೆಹಲಿ,ಅ.11- 68 ಕೋಟಿ ರೂಪಾಯಿಗಳ ನಕಲಿ ಬ್ಯಾಂಕ್‌ ಗ್ಯಾರಂಟಿ ನೀಡಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೈಗಾರಿಕೋದ್ಯಮಿ ಅನಿಲ್‌ ಅಂಬಾನಿ ಅವರ ಗ್ರೂಪ್‌ ಕಂಪನಿ ರಿಲಯನ್ಸ್ ಪವರ್‌ನ ಸಿಎಫ್‌ಒ ಅಶೋಕ್‌ ಪಾಲ್‌ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.

ಅಶೋಕ್‌ ಪಾಲ್‌ ಅವರನ್ನು ಮನಿ ಲಾಂಡರಿಂಗ್‌ ಆಕ್ಟ್‌ (ಪಿಎಂಎಲ್‌ಎ) ನಿಬಂಧನೆಗಳಡಿ ಇ.ಡಿ ವಿಚಾರಣೆಗೆ ಒಳಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಬಂಧಿಸಲಾಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಮತ್ತು ಕಸ್ಟಡಿ ವಿಚಾರಣೆಗಾಗಿ ಏಜೆನ್ಸಿ ಅವರನ್ನು ವಶಕ್ಕೆ ಇಡಿ ಕೇಳಲಿದೆ. ಅಶೋಕ್‌ ಪಾಲ್‌ ಅವರು 25 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಚಾರ್ಟರ್ಡ್‌ ಅಕೌಂಟೆಂಟ್‌. ಏಳು ವರ್ಷಗಳಿಗೂ ಹೆಚ್ಚು ಕಾಲ ರಿಲಯನ್‌್ಸ ಪವರ್‌ನಲ್ಲಿ ಮುಖ್ಯ ಹಣಕಾಸು ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.

ಕೆಲವು ಕಂಪನಿಗಳಿಂದ ಕೋಟ್ಯಾಂತರ ರೂ.ಗಳ ಆರ್ಥಿಕ ಅಕ್ರಮಗಳ ಹಲವಾರು ಆರೋಪಗಳ ಹೊರತಾಗಿ, ಬ್ಯಾಂಕ್‌ ಸಾಲ ವಂಚನೆ-ಸಂಬಂಧಿತ ಹಣ ವರ್ಗಾವಣೆ ಪ್ರಕರಣದ ಭಾಗವಾಗಿ ತನಿಖಾ ಸಂಸ್ಥೆ ಈ ವರ್ಷದ ಜುಲೈನಲ್ಲಿ ದಾಳಿಗಳನ್ನು ನಡೆಸಿತ್ತು.
ಆಗಸ್ಟ್‌ನಲ್ಲಿ ಬಿಸ್ವಾಲ್‌ ಟ್ರೇಡ್‌ಲಿಂಕ್‌ ಪ್ರೈವೇಟ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಪಾರ್ಥ ಸಾರಥಿ ಬಿಸ್ವಾಲ್‌ ಅವರನ್ನು 68.2 ಕೋಟಿ ರೂ. ಮೌಲ್ಯದ ನಕಲಿ ಗ್ಯಾರಂಟಿಗಳನ್ನು ಸಲ್ಲಿಸಿದ್ದಕ್ಕಾಗಿ ಬಂಧಿಸಲಾಗಿತ್ತು.

ರಿಲಯನ್‌್ಸ ಪವರ್ನ ಅಂಗಸಂಸ್ಥೆಯಾದ ರಿಲಯನ್ಸ್ ಎನ್‌ಯು ಬಿಇಎಸ್‌‍ಎಸ್‌‍ ಲಿಮಿಟೆಡ್‌ ಪರವಾಗಿ ಸೋಲಾರ್‌ ಎನರ್ಜಿ ಕಾರ್ಪೊರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌ಗೆ (ಎಸ್‌‍ಇಸಿಐ) ಸಲ್ಲಿಸಿದ 68.2 ಕೋಟಿ ರೂ.ಗಳ ಬ್ಯಾಂಕ್‌ ಗ್ಯಾರಂಟಿಗೆ ಸಂಬಂಧಿಸಿದ ಪ್ರಕರಣವು ನಕಲಿ ಎಂದು ಕಂಡುಬಂದಿದೆ.ಕಂಪನಿಯನ್ನು ಹಿಂದೆ ಮಹಾರಾಷ್ಟ್ರ ಎನರ್ಜಿ ಜನರೇಷನ್‌ ಲಿಮಿಟೆಡ್‌ ಎಂದು ಕರೆಯಲಾಗುತ್ತಿತ್ತು.

ಬ್ಯುಸಿನೆಸ್‌‍ ಗ್ರೂಪ್‌ಗಳಿಗೆ ನಕಲಿ ಬ್ಯಾಂಕ್‌ ಗ್ಯಾರಂಟಿಗಳನ್ನು ಒದಗಿಸುವ ದಂಧೆ ನಡೆಸುತ್ತಿದ್ದ ಆರೋಪಿ ಕಂಪನಿಯನ್ನು ಇಡಿ ಒಡಿಶಾ ಮೂಲದ ಬಿಸ್ವಾಲ್‌ ಟ್ರೇಡ್‌ಲಿಂಕ್‌ ಎಂದು ಗುರುತಿಸಿದೆ.ತನಿಖೆಯ ಭಾಗವಾಗಿ, ಇಡಿ ಆಗಸ್ಟ್‌ನಲ್ಲಿ ಕಂಪನಿ ಮತ್ತು ಅದರ ಪ್ರವರ್ತಕರ ವಿರುದ್ಧ ಹುಡುಕಾಟ ನಡೆಸಿತು ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಪಾರ್ಥ ಸಾರಥಿ ಬಿಸ್ವಾಲ್‌ ಅವರನ್ನು ಬಂಧಿಸಿತು.

ಮನಿ ಲಾಂಡರಿಂಗ್‌ ಪ್ರಕರಣವು ನವೆಂಬರ್‌ 2024ರ ದೆಹಲಿ ಪೊಲೀಸ್‌‍ನ ಆರ್ಥಿಕ ಅಪರಾಧ ವಿಭಾಗದ ಎಫ್‌ಐಆರ್ನಿಂದ ಬಂದಿದೆ. 8 ರಷ್ಟು ಕಮಿಷನ್‌ ವಿರುದ್ಧ ಕಂಪನಿಯು ನಕಲಿ ಬ್ಯಾಂಕ್‌ ಗ್ಯಾರಂಟಿಗಳನ್ನು ನೀಡುವಲ್ಲಿ ತೊಡಗಿದೆ ಎಂದು ಆರೋಪಿಸಲಾಗಿದೆ.ಈ ಪ್ರಕರಣದಲ್ಲಿ ರಿಲಯನ್‌್ಸ ಪವರ್‌ ವಂಚನೆ, ಫೋರ್ಜರಿ ಮತ್ತು ವಂಚನೆಯ ಸಂಚಿನ ಬಲಿಪಶು ಎಂದು ರಿಲಯನ್‌್ಸ ಗ್ರೂಪ್‌ ಹೇಳಿತ್ತು. ಈ ಸಂದರ್ಭದಲ್ಲಿ 2024ರ ನವೆಂಬರ್‌ 7ರಂದು ಷೇರು ವಿನಿಮಯ ಕೇಂದ್ರಕ್ಕೆ ಸರಿಯಾದ ಬಹಿರಂಗಪಡಿಸುವಿಕೆಯನ್ನು ಮಾಡಿದೆ.

2024 ರ ಅಕ್ಟೋಬರ್‌ನಲ್ಲಿ ದೆಹಲಿ ಪೋಲೀಸ್‌‍ನ ಇಒಡಬ್ಲು ನೊಂದಿಗೆ ಮೂರನೇ ವ್ಯಕ್ತಿಯ (ಆರೋಪಿ ಕಂಪನಿ) ವಿರುದ್ಧ ಕ್ರಿಮಿನಲ್‌ ದೂರು ದಾಖಲಿಸಲಾಗಿದೆ ಮತ್ತು ಕಾನೂನಿನ ಕಾರಣ ಪ್ರಕ್ರಿಯೆ ಅನುಸರಿಸುತ್ತದೆ ಎಂದು ಗುಂಪಿನ ವಕ್ತಾರರು ತಿಳಿಸಿದ್ದಾರೆ. ಈ ಬ್ಯಾಂಕ್‌ ಖಾತೆಗಳ ಮೂಲಕ ಕೋಟ್ಯಂತರ ರೂಪಾಯಿಗಳ ಅನುಮಾನಾಸ್ಪದ ವಹಿವಾಟು ನಡೆದಿದೆ.ಕಂಪನಿಯು ಕೇವಲ ಕಾಗದದ ಘಟಕವಾಗಿದೆ ಅದರ ನೋಂದಾಯಿತ ಕಚೇರಿಯು ಬಿಸ್ವಾಲ್‌ ಅವರ ಸಂಬಂಧಿಗೆ ಸೇರಿದ ವಸತಿ ಆಸ್ತಿಯಾಗಿದೆ. ಹುಡುಕಾಟದ ಸಮಯದಲ್ಲಿ ವಿಳಾಸದಲ್ಲಿ ಯಾವುದೇ ಕಂಪನಿಯ ದಾಖಲೆಗಳು ಕಂಡುಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

ಹಾಸನಾಂಬೆಗೆ ದರ್ಶನೋತ್ಸವಕ್ಕೆ ಕೆಎಸ್‌‍ಆರ್‌ಟಿಸಿ ವಿಶೇಷ ಬಸ್‌‍ ಟೂರ್‌ ಪ್ಯಾಕೇಜ್‌

ಬೆಂಗಳೂರು,ಅ.11– ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಭಕ್ತರು ಹಾಗೂ ಪ್ರವಾಸಿಗರಿಗೆ ಪ್ರವಾಸಿತಾಣಗಳನ್ನು ಪರಿಚಯಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌‍ಆರ್‌ಟಿಸಿ) ವತಿಯಿಂದ ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ಸ್ಥಳಗಳಿಂದ ಟೂರ್‌ ಪ್ಯಾಕೇಜ್‌ ಕಲ್ಪಿಸಿದೆ.

ವೋಲ್ವೋ, ಅಶ್ವಮೇಧ ಹಾಗೂ ಕರ್ನಾಟಕ ಸಾರಿಗೆಗಳಲ್ಲಿ ಟೂರ್‌ ಪ್ಯಾಕೇಜ್‌ ರೂಪಿಸಿದ್ದು, ಅ.22ರವರೆಗೆ ಈ ಸೌಲಭ್ಯವಿರುತ್ತದೆ. ಬೆಂಗಳೂರಿನಿಂದ ವೋಲ್ವೊ ಬಸ್‌‍ ಮೂಲಕ ಹಾಸನ ತಲುಪಿ, ಹಾಸನಾಂಬೆದೇವಿ, ಸಿದ್ದೇಶ್ವರ ದೇವಾಲಯ, ದೇವಿಗೆರೆ ಕಲ್ಯಾಣಿ, ಕೆಂಚಮನ ಹೊಸಕೋಟೆ ದೇವಾಲಯದ ಸ್ಥಳಗಳನ್ನು ವೀಕ್ಷಿಸಬಹುದಾಗಿದ್ದು, ಒಟ್ಟು 470 ಕಿ.ಮೀ ಪ್ರಯಾಣವಿದ್ದು, ಬೆಳಗ್ಗೆ 6 ಗಂಟೆಗೆ ಕೆಂಪೇಗೌಡ ಬಸ್‌‍ ನಿಲ್ದಾಣದಿಂದ ಹೊರಡಲಿದೆ.
ವಯಸ್ಕರಿಗೆ (ಹಾಸನಾಂಬದೇವಿ 1000 ರೂ. ಟಿಕೆಟ್‌ ದರ್ಶನ ಸೌಲಭ್ಯ ಸೇರಿದಂತೆ) 2500 ರೂ, ಮಕ್ಕಳಿಗೆ 1000 ರೂ. ಟಿಕೆಟ್‌ನ ದರ್ಶನ ಸೌಲಭ್ಯ ಸೇರಿದಂತೆ 2200 ರೂ. ದರ ನಿಗದಿ ಮಾಡಲಾಗಿದೆ.

ಇನ್ನು ಇದೇ ಮಾರ್ಗದಲ್ಲಿ ಹೊರಡುವ ಅಶ್ವಮೇಧ ಬಸ್‌‍ನಲ್ಲಿ ವಯಸ್ಕರಿಗೆ ಸಾವಿರ ರೂ. ಟಿಕೆಟ್‌, ದೇವಿಯ ದರ್ಶನ ಸೇರಿದಂತೆ 2 ಸಾವಿರ ರೂ, ಮಕ್ಕಳಿಗೆ 1100 ರೂ. ಟಿಕೆಟ್‌ನ ದರ್ಶನ ಸೌಲಭ್ಯ ಸೇರಿದಂತೆ 1900 ರೂ. ದರ ಇರಲಿದೆ.

ಸಾರಿಗೆ ಬಸ್‌‍ ಮೂಲಕ ಹಾಸನ, ಆಲೂರು ಮಾರ್ಗವಾಗಿ ಹಾಸನಾಂಬೆ ದೇವಾಲಯ, ಸಿದ್ದೇಶ್ವರ ದೇವಾಲಯ, ದೇವಿಗೆರೆ ಕಲ್ಯಾಣಿ, ಕೆಂಚಮನ ಹೊಸಕೋಟೆ ದೇವಾಲಯ ಸ್ಥಳಗಳನ್ನು ವೀಕ್ಷಿಸಬಹುದಾಗಿದ್ದು, ಒಟ್ಟು 90 ಕಿ.ಮೀ ಪ್ರಯಾಣದರವಿದ್ದು, ಹಾಸನ ನಗರ ಬಸ್‌‍ ನಿಲ್ದಾಣದಿಂದ ಬೆಳಗ್ಗೆ 8 ಗಂಟೆಗೆ ಬಸ್‌‍ ಹೊರಡಲಿದ್ದು, ಹಾಸನಾಂಬೆದೇವಿಯ 1000 ರೂ. ಟಿಕೆಟ್‌ ದರ್ಶನ ಸೌಲಭ್ಯ ಸೇರಿದಂತೆ 1400 ರೂ, ಮಕ್ಕಳಿಗೆ 1300 ರೂ, ಟಿಕೆಟ್‌ ದರ ಇರಲಿದೆ.

ಜಿಲ್ಲೆಯ ಪ್ರವಾಸಿ ತಾಣಗಳಾದ ಬೇಲೂರು ಚನ್ನಕೇಶದೇವಾಲಯ,ಯಗಚ ಜಲಾಶಯ, ಪುಷ್ಪಗಿರಿ, ಹೊಯ್ಸಳೇಶ್ವರ ದೇವಾಲಯ, ಶ್ರವಣಬೆಳಗೊಳ, ವಿಂದ್ಯಾಗಿರಿ ಬೆಟ್ಟ, ಚಂದಗಿರಿಬೆಟ್ಟ, ಮಾಲೆಕಲ್ಲು ತಿರುಪತಿ, ಜೇನುಕಲ್ಲು ಸಿದ್ದೇಶ್ವರ, ಹೇಮಾವತಿ ಜಲಾಶಯ, ಗೊರೂರು ಜಲಾಶಯ ಸೇರಿದಂತೆ ಮತ್ತಿತರ ಪ್ರವಾಸಿ ತಾಣಗಳಿಗೆ ಬಸ್‌‍ ಸೌಲಭ್ಯವನ್ನು ಕಲ್ಪಿಸಲಾಗಿದೆ.

ದೂರವಾಣಿ ಸಂಖ್ಯೆ 7760990518, 7760990519, 7760990523 ನಂಬರ್‌ಗೆ ಸಂಪರ್ಕಿಸಬಹುದು. ಜೊತೆಗೆ ಸಂಸ್ಥೆಯ ವೆಬ್‌ಸೆಟ್‌ ಮುಖಾಂತರ ಮಾಹಿತಿ ಪಡೆಯಬಹುದಾಗಿದೆ ಎಂದು ಕೆಎಸ್‌‍ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.