Home Blog Page 73

ಏಷ್ಯಾಕಪ್‌ ಬೇಕಾದರೆ ಸೂರ್ಯ ಬಂದು ಪಡೆಯಲಿ ; ಟ್ರೋಫಿ ಕಳ್ಳ ಮೊಹ್ಸಿನ್‌ ನಖ್ವಿ ಮೊಂಡಾಟ

ನವದೆಹಲಿ, ಅ.1- ಏಷ್ಯಾ ಕಪ್‌ ಮತ್ತು ಮೆಡಲ್‌ಗಳು ಬೇಕಾದರೆ ಭಾರತೀಯ ಟಿ20 ಕ್ರಿಕೆಟ್‌ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ ಬಂದರೆ ಮಾತ್ರ ನೀಡುವುದಾಗಿ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ ಮುಖ್ಯಸ್ಥ ಹಾಗೂ ಪಾಕ್‌ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಮೊಹ್ಸಿನ್‌ ನಖ್ವಿ ಮೊಂಡು ಹಠ ಹಿಡಿದಿದ್ದಾರೆ.

ಮಳೆ ನಿಂತರೂ, ಮಳೆ ಹನಿ ನಿಂತಿಲ್ಲ ಎಂಬಂತೆ ಏಷ್ಯಾಕಪ್‌ ಮುಗಿದರೂ ವಿವಾದ ಇನ್ನೂ ಕೂಡ ಕೊನೆಗೊಂಡಿಲ್ಲ. ಹ್ಯಾಂಡ್‌ಶೇಕ್‌ನಿಂದ ಶುರುವಾದ ಈ ವಿವಾದ ಇದೀಗ ಏಷ್ಯಾಕಪ್‌ ಟ್ರೋಫಿ ಹಸ್ತಾಂತರದ ವಿಷಯಕ್ಕೆ ಬಂದು ನಿಂತಿದೆ.

ದುಬೈ ಇಂಟರ್‌ನ್ಯಾಷನಲ್‌‍ ಸ್ಟೇಡಿಯಂನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ್‌ ತಂಡವನ್ನು ಬಗ್ಗು ಬಡಿದು ಟೀಮ್‌ ಇಂಡಿಯಾ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು.ಈ ಚಾಂಪಿಯನ್‌ ಪಟ್ಟದ ಬೆನ್ನಲ್ಲೇ ಭಾರತೀಯ ಆಟಗಾರರು ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ ಮುಖ್ಯಸ್ಥ ಹಾಗೂ ಪಿಸಿಬಿ ಅಧ್ಯಕ್ಷ ಮೊಹ್ಸಿನ್‌ ನಖ್ವಿಯಿಂದ ಟ್ರೋಫಿ ಸ್ವೀಕರಿಸಲ್ಲ ಎಂದು ಪಟ್ಟು ಹಿಡಿದಿದ್ದರು. ಟೀಮ್‌ ಇಂಡಿಯಾ ಆಟಗಾರರ ಈ ನಿರ್ಧಾರದಿಂದ ಮುಖಭಂಗಕ್ಕೆ ಒಳಗಾದ ನಖ್ವಿ, ಏಷ್ಯಾಕಪ್‌ ಟ್ರೋಫಿ ಹಾಗೂ ವಿನ್ನರ್‌ ತಂಡದ ಮೆಡಲ್‌ಗಳನ್ನು ಹೊಟೇಲ್‌ ರೂಮ್‌ಗೆ ಕೊಂಡೊಯ್ಯುವಂತೆ ಸೂಚಿಸಿದ್ದರು.

ಹೀಗಾಗಿ ಭಾರತೀಯ ಆಟಗಾರರು ಟ್ರೋಫಿ ಇಲ್ಲದೆ ಏಷ್ಯಾಕಪ್‌ ಅನ್ನು ಸಂಭ್ರಮಿಸಿದ್ದರು.ಇದೀಗ ಟೀಮ್‌ ಇಂಡಿಯಾಗೆ ಟ್ರೋಫಿ ಹಿಂತಿರುಗಿಸುವಂತೆ ಬಿಸಿಸಿಐ ಕಾರ್ಯದರ್ಶಿ ರಾಜೀವ್‌ ಶುಕ್ಲಾ ಆಗ್ರಹಿಸಿದ್ದಾರೆ.

ಎಸಿಸಿ ಸಭೆಯಲ್ಲಿ ಈ ಬಗ್ಗೆ ವಾದಗಳು ನಡೆದಿದ್ದು, ನಖ್ವಿ ಅವರ ನಡೆಗೆ ಬಿಸಿಸಿಐ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ಆಕ್ರೋಶದ ಬೆನ್ನಲ್ಲೇ ಟ್ರೋಫಿ ಹಸ್ತಾಂತರಿಸಲು ನಖ್ವಿ ಒಪ್ಪಿಕೊಂಡಿದ್ದಾರೆ.
ಆದರೆ ಇದಕ್ಕೂ ಒಂದು ಷರತ್ತು ವಿಧಿಸಿ ಉದ್ಧಟತನ ಮೆರೆದಿದ್ದಾರೆ.ಹೌದು, ಟೀಮ್‌ ಇಂಡಿಯಾಗೆ ಟ್ರೋಫಿ ಬೇಕಿದ್ದರೆ ಭಾರತ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ ಬಂದು ನನ್ನ ಕೈಯಿಂದ ಸ್ವೀಕರಿಸಬೇಕು ಎಂದಿದ್ದಾರೆ.

ನಖ್ವಿ ಅವರ ಈ ಬೇಡಿಕೆಗೂ ಬಿಸಿಸಿಐ ಆಕ್ರೋಶ ವ್ಯಕ್ತಪಡಿಸಿದ್ದರೂ ಎಸಿಸಿ ಮುಖ್ಯಸ್ಥ ತನ್ನ ಪಟ್ಟನ್ನು ಸಡಿಲಿಸಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ಏಷ್ಯಾಕಪ್‌ ವಿವಾದ ಸದ್ಯಕ್ಕಂತು ಮುಗಿಯುವ ಸಾಧ್ಯತೆಯಿಲ್ಲ ಎನ್ನಲಾಗಿದೆ.

ರೆಪೋ ದರ ಶೇ. 5.5 ರಷ್ಟು ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ

ಮುಂಬೈ, ಅ. 1 (ಪಿಟಿಐ) ಸುಂಕದ ಅನಿಶ್ಚಿತತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಇಂದು ಸತತ ಎರಡನೇ ಬಾರಿಗೆ ಬಡ್ಡಿದರವನ್ನು ಶೇ. 5.5 ರಷ್ಟು ಯಥಾಸ್ಥಿತಿಯಲ್ಲಿ ಇರಿಸಿದೆ.

ಪ್ರಸಕ್ತ ಹಣಕಾಸು ವರ್ಷದ ನಾಲ್ಕನೇ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ ಆರ್‌ಬಿಐ ಗವರ್ನರ್‌ ಸಂಜಯ್‌ ಮಲ್ಹೋತ್ರಾ ಅವರು, ಹಣಕಾಸು ನೀತಿ ಸಮಿತಿ (ಎಂಪಿಸಿ) ಅಲ್ಪಾವಧಿಯ ಸಾಲ ದರ ಅಥವಾ ರೆಪೊ ದರವನ್ನು ಶೇ. 5.5 ರಷ್ಟು ಯಥಾಸ್ಥಿತಿಯಲ್ಲಿ ಇರಿಸಲು ಸರ್ವಾನುಮತದಿಂದ ನಿರ್ಧರಿಸಿದೆ ಎಂದು ಹೇಳಿದರು.

ಜಿಎಸ್‌‍ಟಿ ದರ ತರ್ಕಬದ್ಧಗೊಳಿಸುವಿಕೆಯು ಬಳಕೆ ಮತ್ತು ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆಯಾದರೂ, ಸುಂಕ ಸಂಬಂಧಿತ ಬೆಳವಣಿಗೆಗಳು ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಆರ್ಥಿಕ ವಿಸ್ತರಣೆಯನ್ನು ನಿಧಾನಗೊಳಿಸಬಹುದು ಎಂದು ಅವರು ಹೇಳಿದರು.

ಫೆಬ್ರವರಿ 2025 ರಿಂದ, ಆರ್‌ಬಿಐ ರೆಪೊ ದರವನ್ನು 100 ಬೇಸಿಸ್‌‍ ಪಾಯಿಂಟ್‌ಗಳಿಂದ ಕಡಿಮೆ ಮಾಡಿದೆ. ಜೂನ್‌ನಲ್ಲಿ ನಡೆದ ತನ್ನ ಹಿಂದಿನ ನೀತಿ ಪರಿಶೀಲನೆಯಲ್ಲಿ, ರೆಪೊ ದರವನ್ನು ಶೇ. 50 ಬೇಸಿಸ್‌‍ ಪಾಯಿಂಟ್‌ಗಳಿಂದ ಶೇ. 5.5 ಕ್ಕೆ ಇಳಿಸಿತ್ತು.

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವು ಎರಡೂ ಕಡೆಗಳಲ್ಲಿ ಶೇ. 2 ರ ಅಂತರದಲ್ಲಿ ಶೇ. 4 ರಷ್ಟಿರುವಂತೆ ನೋಡಿಕೊಳ್ಳುವ ಕಾರ್ಯವನ್ನು ಸರ್ಕಾರ ಕೇಂದ್ರ ಬ್ಯಾಂಕ್‌ಗೆ ವಹಿಸಿದೆ.

ಸಮಿತಿಯ ಶಿಫಾರಸಿನ ಆಧಾರದ ಮೇಲೆ, ಫೆಬ್ರವರಿ ಮತ್ತು ಏಪ್ರಿಲ್‌ನಲ್ಲಿ ರೆಪೊ ದರವನ್ನು ತಲಾ 25 ಬೇಸಿಸ್‌‍ ಪಾಯಿಂಟ್‌ಗಳಷ್ಟು ಮತ್ತು ಜೂನ್‌ನಲ್ಲಿ 50 ಬೇಸಿಸ್‌‍ ಪಾಯಿಂಟ್‌ಗಳಷ್ಟು ಕಡಿಮೆ ಮಾಡಿತು, ಚಿಲ್ಲರೆ ಹಣದುಬ್ಬರವನ್ನು ಕಡಿಮೆ ಮಾಡುವ ಮೂಲಕ.ಈ ವರ್ಷದ ಫೆಬ್ರವರಿಯಿಂದ ಚಿಲ್ಲರೆ ಹಣದುಬ್ಬರವು ಶೇಕಡಾ 4 ಕ್ಕಿಂತ ಕಡಿಮೆಯಾಗಿದೆ. ಆಹಾರ ಬೆಲೆಗಳ ಸಡಿಲಿಕೆ ಮತ್ತು ಅನುಕೂಲಕರ ಮೂಲ ಪರಿಣಾಮದಿಂದಾಗಿ ಆಗಸ್ಟ್‌ನಲ್ಲಿ ಇದು ಆರು ವರ್ಷಗಳ ಕನಿಷ್ಠ ಮಟ್ಟವಾದ 2.07 ಶೇಕಡಾಕ್ಕೆ ಇಳಿದಿದೆ.

ಹೈದರಾಬಾದ್‌ : 6 ಕೋಟಿ ಮೌಲ್ಯದ 1210 ಕೆಜಿ ಗಾಂಜಾ ವಶ

ಹೈದರಾಬಾದ್‌, ಅ. 1 (ಪಿಟಿಐ) ಒಡಿಶಾದ ಮಲ್ಕನ್‌ಗಿರಿ ಜಿಲ್ಲೆಯಿಂದ ಹೈದರಾಬಾದ್‌ ಮೂಲಕ ರಾಜಸ್ಥಾನಕ್ಕೆ ಗಾಂಜಾ ಸಾಗಿಸುತ್ತಿದ್ದ ಅಂತರರಾಜ್ಯ ಮಾದಕವಸ್ತು ಮಾರಾಟ ಜಾಲವನ್ನು ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಕಾರ್ಯಚರಣೆಯಲ್ಲಿ ಸುಮಾರು 6.25 ಕೋಟಿ ರೂ. ಮೌಲ್ಯದ 1,210 ಕೆಜಿ ತೂಕದ ಕಳ್ಳಸಾಗಣೆ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಮತ್ತು ಈ ಸಂಬಂಧ ಒಬ್ಬ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅದು ತಿಳಿಸಿದೆ.

ವಿಶ್ವಾಸಾರ್ಹ ಮಾಹಿತಿಯ ಮೇರೆಗೆ, ಪೊಲೀಸ್‌‍ ತಂಡಗಳು ಅಬ್ದುಲ್ಲಾಪುರ್ಮೆಟ್‌ನ ಕೊಥಗುಡ ಎಕ್ಸ್ ರಸ್ತೆಯ ಬಳಿ ರಾಷ್ಟ್ರೀಯ ಹೆದ್ದಾರಿ 65 ರಲ್ಲಿ ಟ್ರಕ್‌ ಅನ್ನು ತಡೆದು ವಾಹನದ ಚಾಲಕನನ್ನು ಬಂಧಿಸಲಾಗಿದೆ ಎಂದು ರಾಚಕೊಂಡ ಪೊಲೀಸ್‌‍ ಆಯುಕ್ತ ಜಿ. ಸುಧೀರ್‌ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜಸ್ಥಾನದ ಜೋಧಪುರ ಜಿಲ್ಲೆಯ ನಿವಾಸಿಯಾಗಿರುವ ಆರೋಪಿಯು ಮಲ್ಕನ್‌ಗಿರಿಯಲ್ಲಿ ಗುರುತಿಸಲಾಗದ ಮೂಲಗಳಿಂದ ಸುಮಾರು 1,210 ಕೆಜಿ ಗಾಂಜಾವನ್ನು ಸಂಗ್ರಹಿಸಿದ್ದನು.ಪೊಲೀಸರ ಗಮನ ಸೆಳೆಯುವುದನ್ನು ತಪ್ಪಿಸಲು ಅವನು ಸಿಮೆಂಟ್‌ ಚೀಲಗಳ ಅಡಿಯಲ್ಲಿ ಕಳ್ಳಸಾಗಣೆ ಮಾಡಿದ ವಸ್ತುಗಳನ್ನು ಮರೆಮಾಡಿದನು ಮತ್ತು ಟಾರ್ಪಾಲಿನ್‌ನಿಂದ ಲೋಡ್‌ ಅನ್ನು ಮುಚ್ಚಿದನು.

ನಂತರ ಅವನು ಹೈದರಾಬಾದ್‌ ಮೂಲಕ ರಾಜಸ್ಥಾನದ ಕಡೆಗೆ ಪ್ರಯಾಣವನ್ನು ಪ್ರಾರಂಭಿಸಿದನು ಎಂದು ಪೊಲೀಸರು ತಿಳಿಸಿದ್ದಾರೆ.ಮಲ್ಕನ್‌ಗಿರಿಯ ದೂರದ ಅರಣ್ಯ ಪ್ರದೇಶಗಳಿಂದ ವಶಪಡಿಸಿಕೊಂಡ ಗಾಂಜಾವನ್ನು ರಾಜಸ್ಥಾನದ ವಿವಿಧ ಸ್ಥಳಗಳಿಗೆ ವಿತರಿಸಲು ಉದ್ದೇಶಿಸಲಾಗಿತ್ತು, ಇದು ಮಾದಕವಸ್ತು ಕಳ್ಳಸಾಗಣೆ ಜಾಲದ ವ್ಯಾಪಕ ವ್ಯಾಪ್ತಿಯನ್ನು ಒತ್ತಿಹೇಳುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಪ್ರಸ್ತುತ ಬಂಧನದಲ್ಲಿದ್ದಾನೆ ಮತ್ತು ಸಿಂಡಿಕೇಟ್‌ನ ಹೆಚ್ಚುವರಿ ಸದಸ್ಯರನ್ನು ಗುರುತಿಸಲು ಮತ್ತು ಪೂರೈಕೆ ಸರಪಳಿಯನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂಡೋನೇಷ್ಯಾದಲ್ಲಿ ಶಾಲಾ ಕಟ್ಟಡ ಕುಸಿತ ದುರಂತ : ಅವಶೇಷಗಳಡಿ ಸಿಲುಕಿದ 91 ವಿದ್ಯಾರ್ಥಿಗಳು

ಜಕಾರ್ತ, ಅ.1– ಇಂಡೋನೇಷ್ಯಾದಲ್ಲಿ ಕುಸಿದು ಬಿದ್ದ ಶಾಲಾ ಕಟ್ಟಡದ ಅಡಿಯಲ್ಲಿ ಸುಮಾರು 91 ವಿದ್ಯಾರ್ಥಿಗಳು ಹೂತು ಹೋಗಿರಬಹುದು ಎಂದು ಶಂಕಿಸಲಾಗಿದೆ.ಇಲ್ಲಿನ ಇಸ್ಲಾಮಿಕ್‌ ಶಾಲಾ ಕಟ್ಟಡ ಕುಸಿದು ಸುಮಾರು ಎರಡು ದಿನಗಳ ನಂತರ ಕನಿಷ್ಠ 91 ವಿದ್ಯಾರ್ಥಿಗಳು ಕಾಂಕ್ರೀಟ್‌ ಅವಶೇಷಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹಾಜರಾತಿ ದಾಖಲೆಗಳು ಮತ್ತು ಕಾಣೆಯಾದವರ ಆತಂಕಗೊಂಡ ಕುಟುಂಬಗಳ ವರದಿಗಳನ್ನು ಪರಿಶೀಲಿಸಿದ ನಂತರ ತಿಳಿಸಿದ್ದಾರೆ.

ಪೂರ್ವ ಜಾವಾ ಪ್ರಾಂತ್ಯದ ಶತಮಾನಗಳಷ್ಟು ಹಳೆಯದಾದ ಅಲ್‌ ಖೋಜಿನಿ ಇಸ್ಲಾಮಿಕ್‌ ಬೋರ್ಡಿಂಗ್‌ ಶಾಲೆಯ ಪ್ರಾರ್ಥನಾ ಮಂದಿರದಲ್ಲಿ ಸೋಮವಾರ ಮಧ್ಯಾಹ್ನ ಪ್ರಾರ್ಥನೆ ಸಲ್ಲಿಸುತ್ತಿದ್ದ ನೂರಾರು ಜನರ ಮೇಲೆ, ಹೆಚ್ಚಾಗಿ ಹದಿಹರೆಯದ ಹುಡುಗರ ಮೇಲೆ ರಚನೆ ಬಿದ್ದ ನಂತರ, ಬುಧವಾರ ಬೆಳಿಗ್ಗೆ ಬದುಕುಳಿದವರನ್ನು ಬಿಡುಗಡೆ ಮಾಡಲು 300 ಕ್ಕೂ ಹೆಚ್ಚು ರಕ್ಷಣಾ ಕಾರ್ಯಕರ್ತರು ಕಾರ್ಯಚರಣೆ ನಡೆಸಿದ್ದರು.

ಕಟ್ಟಡದಲ್ಲಿ ಅನಧಿಕೃತ ವಿಸ್ತರಣೆ ನಡೆಯುತ್ತಿದೆ.ಕನಿಷ್ಠ ಮೂರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಮತ್ತು 100 ಜನರು ಗಾಯಗೊಂಡಿದ್ದಾರೆ ಎಂದು ದೃಢಪಡಿಸಲಾಗಿದೆ.ಮಂಗಳವಾರ ತಡರಾತ್ರಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯು ಅವಶೇಷಗಳಲ್ಲಿ ಹೂತುಹೋಗಿರುವ ಜನರ ಸಂಖ್ಯೆಯನ್ನು ಹಿಂದಿನ 38 ರಿಂದ 91 ಕ್ಕೆ ಪರಿಷ್ಕರಿಸಿದೆ.

ಹಾಸನ : ಸಿಡಿಮದ್ದು ಸ್ಪೋಟದಲ್ಲಿ ಗಾಯಗೊಂಡಿದ್ದ ದಂಪತಿ ಚಿಕಿತ್ಸೆ ಫಲಿಸದೇ ಸಾವು

ಹಾಸನ,ಅ.1-ಹಳೇ ಆಲೂರು ಗ್ರಾಮದಲ್ಲಿ ಸಿಡಿಮದ್ದು ತಯಾರಿಸುವ ವೇಳೆ ಸ್ಪೋಟ ಸಂಭವಿಸಿ ಗಂಭೀರ ಗಾಯಗೊಂಡಿದ್ದ ದಂಪತಿ ಚಿಕಿತ್ಸೆ ಫಲಿಸದೇ ಬೆಳಗಿನ ಜಾವ ಮೃತಪಟ್ಟಿದ್ದಾರೆ.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸುದರ್ಶನ್‌ ಆಚಾರ್‌ (32) ಮತ್ತು ಕಾವ್ಯ (27) ಮೃತಪಟ್ಟ ದಂಪತಿ. ಇವರ ಸಾವಿನಿಂದ 14 ತಿಂಗಳ ಮಗು ಪೋಷಕರನ್ನು ಕಳೆದುಕೊಂಡು ಅನಾಥವಾಗಿದೆ.

ಮೊನ್ನೆ ಸಂಜೆ ಸುದರ್ಶನ್‌ ಆಚಾರ್‌ ಅವರು ಸಿಡಿಮದ್ದು ತಯಾರಿಸುತ್ತಿದ್ದಾಗ ಏಕಾಏಕಿ ಸ್ಪೋಟಗೊಂಡಿದೆ. ಸ್ಪೋಟದ ತೀವ್ರತೆಗೆ ಸುದರ್ಶನ್‌ ಅವರಿಗೆ ಗಂಭೀರವಾಗಿ ಸುಟ್ಟ ಗಾಯಗಳಾಗಿತ್ತು. ಪತ್ನಿ ಕಾವ್ಯ ಅವರ ಎರಡು ಕಾಲುಗಳು ಚಿದ್ರಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದರು.

ಅಲ್ಲದೇ ಸ್ಪೋಟದ ರಭಸಕ್ಕೆ ಮನೆಯ ಗೋಡೆ ಬಿರುಕು ಬಿಟ್ಟಿದೆ. ಸ್ಪೋಟದ ಶಬ್ದ ಕೇಳಿ ಅಕ್ಕಪಕ್ಕದವರು ಇವರ ಮನೆ ಬಳಿ ಬಂದು ನೋಡಿದಾಗ ದಂಪತಿ ಸಾವು ಬದುಕಿನ ನಡುವೆ ನರಳಾಡುತ್ತಿದ್ದುದ್ದು ಕಂಡು ಬಂದಿದೆ.

ತಕ್ಷಣ ಗಾಯಾಳು ದಂಪತಿಯನ್ನು ಹಿಮ್ಸೌ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಝೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.ಆದರೆ ದಂಪತಿ ಚಿಕಿತ್ಸೆ ಫಲಿಸದೆ ಬೆಳಗಿನ ಜಾವ ಮೃತಪಟ್ಟಿದ್ದು, ಈ ಸುದ್ದಿ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಅಂದು ಸ್ಟೋಟದ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಮನೆಯಲ್ಲಿದ್ದ ಎರಡು ಸಿಲಿಂಡರ್‌ ಹಾಗೂ ಗೀಸರ್‌ ಹಾಗೇ ಇದ್ದದ್ದು ಕಂಡುಬಂದಿದೆ. ಆದರೆ ಸ್ಪೋಟಕ್ಕೆ ಕಾರಣವೇನು ಎಂಬುದು ನಿಗೂಢವಾಗಿಯೇ ಉಳಿದಿದೆ.

ಇದೀಗ ಪೊಲೀಸರ ತನಿಖೆಯಿಂದ ಸಿಡಿಮದ್ದು ತಯಾರಿಕೆಗೆ ಬಳಸಿದ್ದ ಮದ್ದು ಸ್ಪೋಟಗೊಂಡು ಈ ದುರಂತ ನಡೆದಿರುವುದು ಗೊತ್ತಾಗಿದೆ. ಸುದರ್ಶನ್‌ ಅವರು ಜಾತ್ರೆ ಹಾಗೂ ಊರ ಹಬ್ಬಗಳಿಗಾಗಿ ಮನೆಯಲ್ಲಿ ಸಿಡಿಮದ್ದನ್ನು ತಯಾರಿಸುತ್ತಿದ್ದರು. ಅದಕ್ಕಾಗಿ ಮದ್ದನ್ನು ಸಂಗ್ರಹಿಸಿದ್ದರು. ಆಕಸಿಕವಾಗಿ ಬೆಂಕಿ ತಗುಲಿ ಸ್ಪೋಟಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ಇನ್ನಷ್ಟು ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.

ಸುದರ್ಶನ್‌ ಅವರ ಮನೆಯ ಸುತ್ತ ಆಲೂರು ಠಾಣೆ ಪೊಲೀಸರು ಹಾಗೂ ಮಂಗಳೂರಿನಿಂದ ಸ್ಥಳ ಪರಿಶೀಲನೆಗೆ ಬಾಂಬ್‌ ನಿಷ್ಕ್ರಿಯ ದಳ ಆಗಮಿಸಿದ್ದು, ಸ್ಥಳದಲ್ಲಿ ದೊರೆತ ಕೆಲವು ವಸ್ತುಗಳನ್ನು ಸಂಗ್ರಹಿಸಿ ಎಫ್‌ಎಸ್‌‍ಎಲ್‌ಗೆ ಕಳುಹಿಸಲಾಗಿದ್ದು ವರದಿ ಬಂದ ನಂತರವಷ್ಟೇ ಸ್ಪೋಟಕ್ಕೆ ನಿಖರ ಕಾರಣ ತಿಳಿದು ಬರಲಿದೆ.

ಅದೃಷ್ಟವಶಾತ್‌ ಮನೆಯಲ್ಲಿದ್ದ ಸುದರ್ಶನ್‌ ಅವರ 14 ತಿಂಗಳ ಮಗು ಸೇರಿ ಇತರ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಆಲೂರು ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶ್ವವಿಖ್ಯಾತ ಜಂಬೂ ಸವಾರಿಗೆ ಕ್ಷಣಗಣನೆ, ಅರಮನೆ ನಗರಿಯಲ್ಲಿ ಅಂತಿಮ ಸಿದ್ಧತೆ

ಮೈಸೂರು, ಅ. 1– ನಾಡಹಬ್ಬ ದಸರಾ ಮಹೋತ್ಸವದ ಅತ್ಯಂತ ಪ್ರಮುಖ ಆಕರ್ಷಣೆಯಾದ ಜಂಬುಸವಾರಿ ಮೆರವಣಿಗೆಗೆ ಅರಮನೆ ನಗರಿ ಸಜ್ಜಾಗಿದೆ.ನಾಳೆ ಮಧ್ಯಾಹ್ನ 1ರಿಂದ 1.18ರ ಒಳಗೆ ಸಲ್ಲುವ ಶುಭ ಧನುರ್‌ ಲಗ್ನದಲ್ಲಿ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಂದಿಧ್ವಜ ಪೂಜೆ ನೆರವೇರಿಸಲಿದ್ದಾರೆ.

ಮೆರವಣಿಗೆ ಸಾಗಿದ ನಂತರ ಸಂಜೆ 4.42 ರಿಂದ 5.06 ಒಳಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಹೊತ್ತ ಆನೆ ಅಭಿಮನ್ಯುವಿಗೆ ಸಿಎಂ ಪುಷ್ಪಾರ್ಚನೆ ನೆರವೇರಿಸಲಿದ್ದಾರೆ.

ಈ ಬಾರಿಯ ಜಂಬೂಸವಾರಿ ಮೆರವಣಿಗೆಯಲ್ಲಿ 60 ಸ್ತಬ್ಧ ಚಿತ್ರಗಳು ಸೇರಿದಂತೆ ನೂರಕ್ಕೂ ಹೆಚ್ಚು ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಿ ಬರಲಿವೆ.ಮೊದಲು ಮೆರವಣಿಗೆಯಲ್ಲಿ ನಂದಿಧ್ವಜ ಸಾಗಿದ ನಂತರ ನಿಶಾನೆ, ನೋಪತ್‌ ಆನೆಗಳು ಸಾಗಿ ಬರಲಿವೆ. ಇದರೊಂದಿಗೆ ಪೊಲೀಸ್‌‍ ಪಡೆ, ಅಶ್ವಪಡೆ, ಪೊಲೀಸ್‌‍ ಬ್ಯಾಂಡ್‌, ಮಂಗಳ ವಾದ್ಯದೊಂದಿಗೆ ಜಂಬೂ ಸವಾರಿ ಮೆರವಣಿಗೆ ಅರಮನೆಯಿಂದ ಬನ್ನಿಮಂಟಪದವರೆಗೆ ತೆರಳಲಿದೆ.

ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳ ನಡುವೆ ಸ್ತಬ್ಧಚಿತ್ರಗಳು ಸಹ ಸಾಗಿ ಬರಲಿವೆ. ಜಂಬೂಸವಾರಿ ವೀಕ್ಷಣೆಗಾಗಿ ಮೈಸೂರು ಅರಮನೆ ಆವರಣದಲ್ಲಿ 45,000 ಹಾಸನ ವ್ಯವಸ್ಥೆ ಮಾಡಲಾಗಿದೆ. ಗೋಲ್ಡ್‌‍ ಕಾರ್ಡ್‌ ಟಿಕೆಟ್‌ ಪಡೆದವರಿಗೂ ಹಾಗೂ ಪಾಸ್‌‍ ಪಡೆದವರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.

ಜಂಬೂಸವಾರಿ ಮೆರವಣಿಗೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಮೈಸೂರು ಜಿಲ್ಲಾಡಳಿತ ಹಾಗೂ ನಗರ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.ಈ ಬಾರಿ ಜಂಬುಸವಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿರುವ ಹಳೆಯ ಹಾಗೂ ಶಿಥಿಲವಾದ ಕಟ್ಟಡಗಳು, ಮರಗಳ ಮೇಲೆ ಸಾರ್ವಜನಿಕರು ಏರಿ ವಿಜಯದಶಮಿ ಮೆರವಣಿಗೆ ವೀಕ್ಷಿಸುವುದನ್ನು ತಡೆಯಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

6384 ಸಿವಿಲ್‌ ಹಾಗೂ ಟ್ರಾಫಿಕ್‌ ಪೊಲೀಸ್‌‍ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 35 ಕೆಎಸ್‌‍ಆರ್‌ಪಿ ತುಕಡಿಗಳು, 15 ಸಿಎಆರ್‌ ಮತ್ತು ಡಿಆರ್‌ ತುಕಡಿಗಳು, 29 ಎಎಸ್‌‍ಸಿ, ಒಂದು ಗರುಡ ಫೋರ್ಸ್‌ ಹಾಗೂ 1500 ಹೋಂ ಗಾರ್ಡ್‌ಗಳನ್ನು ಕೂಡ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.

ಇವರೊಂದಿಗೆ 35 ಡಿವೈಎಸ್‌‍ಪಿ, 140 ಇನ್‌್ಸಪೆಕ್ಟರ್‌ಗಳು ಸಹ ಭದ್ರತೆಯ ಕಾರ್ಯ ನಿರ್ವಹಿಸಲಿದ್ದಾರೆ. ಪೊಲೀಸ್‌‍ ಇಲಾಖೆಯಿಂದ 220 ಸಿಸಿಟಿವಿ ಕ್ಯಾಮೆರಾಗಳನ್ನು ಜಂಬುಸವಾರಿ ಮಾರ್ಗದಾದ್ಯಂತ ಅಳವಡಿಸಲಾಗಿದೆ.

ದೊಡ್ಡಬಳ್ಳಾಪುರ : ಅಡಿಕೆ ತೋಟದಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆ

ದೊಡ್ಡಬಳ್ಳಾಪುರ, ಅ.1- ತಾಲೂಕಿನಲ್ಲಿ ವನ್ಯಜೀವಿಗಳ ಉಪಟಳ ದಿನೇ ದಿನೆ ಹೆಚ್ಚುತ್ತಿದ್ದು, ಅಡಿಕೆ ತೋಟದಲ್ಲಿ ಬೃಹತ್‌ ಗಾತ್ರದ ಹೆಬ್ಬಾವು ಪ್ರತ್ಯಕ್ಷವಾಗಿದ್ದು, ಕೂಲಿ ಕಾರ್ಮಿಕರು ಭಯಭೀತರಾಗಿದ್ದಾರೆ.ತಿಪ್ಪೂರು ಗ್ರಾಮದ ಅಡಿಕೆ ತೋಟದಲ್ಲಿ ಸುಮಾರು 9 ಅಡಿ ಉದ್ದ, 20 ಕೆಜಿ ತೂಕದ ಬೃಹತ್‌ ಹೆಬ್ಬಾವು ಪತ್ತೆಯಾಗಿದ್ದು, ರೈತರಲ್ಲಿ ಆತಂಕ ಉಂಟಾಗಿದೆ.

ಹೆಜ್ಜಾಜಿ ಗ್ರಾಮದ ಯೋಗಿ ಎಂಬುವವರು ಕಾರ್ಮಿಕರೊಂದಿಗೆ ಅಡಿಕೆ ಕೀಳಲು ತೆರಳಿದ ಸಂದರ್ಭದಲ್ಲಿ ಭಾರೀ ಗಾತ್ರದ ಹೆಬ್ಬಾವು ಕಂಡುಬಂದಿದೆ. ತಕ್ಷಣ ಉರಗ ರಕ್ಷಕ ನಾಗರಾಜ್‌ ಅವರಿಗೆ ಕರೆ ಮಾಡಿದರೂ, ಅವರು ಕೆಲಸದ ಒತ್ತಡದಲ್ಲಿದ್ದ ಕಾರಣ ತಮ ಮಿತ್ರ ಹಾಗೂ ಮತ್ತೊಬ್ಬ ಉರಗ ರಕ್ಷಕ ರಾಮಾಂಜಿನಪ್ಪ ಅವರಿಗೆ ಮಾಹಿತಿ ನೀಡಿದ್ದಾರೆ. ಅವರು ಸ್ಥಳಕ್ಕೆ ಧಾವಿಸಿ ಸುರಕ್ಷಿತವಾಗಿ ಹೆಬ್ಬಾವನ್ನು ಹಿಡಿದು ರಕ್ಷಣೆ ಮಾಡಿದ್ದಾರೆ.

ನಂತರ ಹೆಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಹಸ್ತಾಂತರಿಸಲಾಗಿದ್ದು, ಮಾಕಳಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಬಿಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಇಲಾಖೆ ಮೂಲಗಳಿಂದ ತಿಳಿದುಬಂದಿದೆ.

ಇತ್ತೀಚೆಗೆ ರೈತರು ನವಿಲು, ಕಾಡುಹಂದಿಗಳಿಂದ ಬೆಳೆ ರಕ್ಷಿಸಿಕೊಳ್ಳುವುದು ಒಂದು ಕಡೆಯಾದರೆ, ಚಿರತೆ-ಕರಡಿ ದಾಳಿಗಳಿಂದ ಸಾಕು ಪ್ರಾಣಿಗಳನ್ನ ಕಾಪಾಡಿಕೊಳ್ಳುವುದು ಮತ್ತೊಂದು ಕಡೆ.

ಈ ಎಲ್ಲಾ ಆತಂಕದ ನಡುವೆ ಈಗ ಬೃಹತ್‌ ಗಾತ್ರದ ಹೆಬ್ಬಾವು ಪತ್ತೆಯಾಗಿರುವುದರಿಂದ ರೈತರು ಹೊಲ, ಗ್ದೆ , ತೋಟಗಳ ಬಳಿ ಓಡಾಡಲು ಭಯ ಪಡುವಂತಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಮತ್ತೊಂದು ವಿಶ್ವ ದಾಖಲೆಗೆ ಸೇರ್ಪಡೆಯಾದ ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ

ಬೆಂಗಳೂರು, ಅ.1- ರಾಜ್ಯ ಸರ್ಕಾರದ ಮಹಿಳಾ ಸಬಲೀಕರಣದೆಡೆಗಿನ ಮಹತ್ವಾಕಾಂಕ್ಷೆ ಯೋಜನೆಯಾದ ಶಕ್ತಿ ಯೋಜನೆಯು 500 ಕೋಟಿ ಮಹಿಳಾ ಟಿಕೆಟ್‌ ಉಚಿತ ಪ್ರಯಾಣ ಮತ್ತೊಂದು ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ.

ಈಗಾಗಲೇ ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್ ರೆಕಾರ್ಡ್‌ನಲ್ಲಿ ಸೇರ್ಪಡೆಯಾಗಿತ್ತು. ನಾಲ್ಕು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಸಮಸ್ತ ಅಧಿಕಾರಿ/ ಸಿಬ್ಬಂದಿಗಳಿಗೆ ಹಾಗೂ ಕಾರ್ಮಿಕ ಮುಖಂಡರುಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಶಕ್ತಿ ಯೋಜನೆಯು ರಾಜ್ಯದ ಮಹಿಳೆಯರನ್ನು ಆರ್ಥಿಕ, ಸಾಮಾಜಿಕ ಹಾಗೂ ಔದ್ಯೋಗಿಕವಾಗಿ ಸಬಲರನ್ನಾಗಿಸಿದೆ.

ಶಕ್ತಿ ಯೋಜನೆಯನ್ನು ದೇಶದ ವಿವಿಧ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಿರುವುದು ಶಕ್ತಿ ಯೋಜನೆಯ ಯಶಸ್ಸನ್ನು ಬಿಂಬಿಸಿದೆ. ಇದರೊಂದಿಗೆ ಮತ್ತೊಂದು ವಿಶ್ವ ದಾಖಲೆಗೆ ಸೇರ್ಪಡೆಯಾಗಿರುವುದು ಹೆಮೆಯ ವಿಷಯವಾಗಿದೆ ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ. ಮಹಿಳಾ ಪ್ರಯಾಣಿಕರಿಗೂ ಅಭಿನಂದನೆ ಸಲ್ಲಿಸಿದ್ದಾರೆ.

ಆರ್‌ಎಸ್‌‍ಎಸ್‌‍ ಸೇರ್ಪಡೆಗೊಳ್ಳಲಿದ್ದಾರೆ ಕೇರಳ ಮಾಜಿ ಡಿಜಿಪಿ ಜಾಕೋಬ್‌ ಥಾಮಸ್‌‍

ಕೊಚ್ಚಿ, ಅ.1- ಕೇರಳದ ಮಾಜಿ ಪೊಲೀಸ್‌‍ ಮಹಾ ನಿರ್ದೇಶಕ ಜಾಕೋಬ್‌ ಥಾಮಸ್‌‍ ಅವರು ಪೂರ್ಣಾವಧಿ ಪ್ರಚಾರಕರಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌‍ಎಸ್‌‍)ಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.

ಕ್ರೈಸ್ತ ಸಮುದಾಯದ ಮೇಲೆ ಆರ್‌ಎಸ್‌‍ಎಸ್‌‍ ಮತ್ತು ಬಿಜೆಪಿ ಆಕ್ರಮಣಕಾರಿಯಾಗಿ ಪ್ರಭಾವ ಬೀರುತ್ತಿರುವ ಸನ್ನಿವೇಶದಲ್ಲಿ ಜಾಕೋಬ್‌ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ.
ಇಂದು ಎರ್ನಾಕುಲಂ ಜಿಲ್ಲೆಯ ಪಳ್ಳಕ್ಕರದಲ್ಲಿ ಗಣವೇಷ ಎಂದು ಹೆಸರಾದ ಆರ್‌ಎಸ್‌‍ಎಸ್‌‍ ಸಮವಸ್ತ್ರ ಧರಿಸಿ ಆರ್‌ಎಸ್‌‍ಎಸ್‌‍ನ ಪಥಸಂಚಲನದಲ್ಲಿ ಪಾಲ್ಗೊಳ್ಳುವುದಾಗಿ ಟಿಎನ್‌ಐಇ ಜೊತೆಗೆ ನಡೆಸಿದ ಸಂವಾದದ ವೇಳೆ ಜಾಕೋಬ್‌ ತಿಳಿಸಿದ್ದಾರೆ.

ನಾನು ದಶಕಗಳಿಂದ ಸರಸಂಘ ಚಾಲಕ ಮೋಹನ್‌ ಭಾಗವತ್‌ ಸೇರಿದಂತೆ ಆರ್‌ಎಸ್‌‍ಎಸ್‌‍ನ ಉನ್ನತ ನಾಯಕರೊಂದಿಗೆ ಸಂಪರ್ಕದಲ್ಲಿದ್ದೇನೆ. ಆರ್‌ಎಸ್‌‍ಎಸ್‌‍ನ ಶಿಸ್ತು ಮತ್ತು ಅದರ ಕಾರ್ಯಕರ್ತರು ದೇಶಕ್ಕೆ ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆ ನನ್ನನ್ನು ಈ ಸಂಘಟನೆಯತ್ತ ಆಕರ್ಷಿಸಿವೆ. ಸ್ವಯಂ ಸೇವಕರು ನಿಜವಾಗಿಯೂ ದೇಶಪ್ರೇಮಿಗಳು ಮತ್ತು ಸ್ವಹಿತಾಸಕ್ತಿಯನ್ನು ಚಿಂತಿಸುವ ಯಾವುದೇ ಆರ್‌ಎಸ್‌‍ಎಸ್‌‍ ಕಾರ್ಯಕರ್ತನನ್ನು ನಾನು ಕಂಡಿಲ್ಲ. ಆರ್‌ಎಸ್‌‍ಎಸ್‌‍ ಬಿಟ್ಟರೆ ರಾಷ್ಟ್ರಕ್ಕಾಗಿ ಇಂಥ ಸಮರ್ಪಣೆ, ದೇಶಪ್ರೇಮ ಹೊಂದಿರುವ ಅನ್ಯ ಸಂಸ್ಥೆಯನ್ನು ಜಗತ್ತಿನಲ್ಲಿ ನಾ ಕಾಣೆ ಎಂದು ಅವರು ಹೇಳಿದ್ದಾರೆ.

ನಾನು ಐಪಿಎಸ್‌‍ ಅಧಿಕಾರಿಯಾಗಿ ಸೇವೆಯಲ್ಲಿದ್ದ ದಿನಗಳಿಂದಲೂ ಆರ್‌ಎಸ್‌‍ಎಸ್‌‍ನ ಸಾಹಚರ್ಯ ಹೊಂದಿದ್ದೇನೆ. ಪೂರ್ಣಾವಧಿ ಪ್ರಚಾರಕನಾಗಿ ಆರ್‌ಎಸ್‌‍ಎಸ್‌‍ಗೆ ಸೇರುವ ನನ್ನ ಇಚ್ಛೆಯನ್ನು ತಿಳಿಸಿದ್ದೇನೆ. ನನ್ನ ಸೇವೆಯನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಸಂಘಟನೆ ನಿರ್ಧರಿಸಬೇಕು ಎಂದು ಜಾಕೋಬ್‌ ನುಡಿದಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-10-2025)

ನಿತ್ಯ ನೀತಿ : ಪ್ರಾರಬ್ಧ ಕರ್ಮವನ್ನು ಅನುಭವಿಸಿದ ಮೇಲೆ ನಿಶ್ಚಯವಾಗಿಯೂ ಸತ್ಕರ್ಮದ ಫಲವು ದೊರೆಯುತ್ತದೆಂಬ ದೃಢ ವಿಶ್ವಾಸ, ನಂಬಿಕೆಯನ್ನಿಟ್ಟು ಸ್ಥೈರ್ಯದಿಂದ ಬದುಕಬೇಕು.

ಪಂಚಾಂಗ : ಬುಧವಾರ, 01-10-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ / ಮಾಸ: ಆಶ್ವಯುಜ / ಪಕ್ಷ:ಶುಕ್ಲ / ತಿಥಿ: ನವಮಿ / ನಕ್ಷತ್ರ: ಪೂ.ಷಾ. / ಯೋಗ: ಅತಿಗಂ / ಕರಣ: ಬಾಲವ
ಸೂರ್ಯೋದಯ – ಬೆ.06.09
ಸೂರ್ಯಾಸ್ತ – 06.10
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00

ರಾಶಿಭವಿಷ್ಯ :
ಮೇಷ: ಅಂದುಕೊಂಡ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ನೆರವೇರಲಿವೆ.
ವೃಷಭ: ಧ್ಯಾನ ಮಾಡುವುದರಿಂದ ಮನಸ್ಸು ನಕಾರಾತ್ಮಕ ಭಾವನೆಯಿಂದ ಹೊರಬರಲಿದೆ.
ಮಿಥುನ: ಬಹಳ ದಿನಗಳ ನಂತರ ಕಚೇರಿಯ ಕೆಲಸ-ಕಾರ್ಯಗಳು ತೃಪ್ತಿಕರವಾಗಲಿವೆ.

ಕಟಕ: ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ವಿದೇಶ ಪ್ರಯಾಣ ಮಾಡಬೇಕಾದ ಸಂದರ್ಭ ಬರಲಿದೆ.
ಸಿಂಹ: ಸಂಗಾತಿಯೊಂದಿಗೆ ಇದ್ದ ಕೆಲವು ಭಿನ್ನಾಭಿಪ್ರಾಯಗಳು ಬಗೆಹರಿಯಬಹುದು.
ಕನ್ಯಾ: ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರಿಂದ ಆರ್ಥಿಕ ಸಹಾಯ ಸಿಗಲಿದೆ.

ತುಲಾ: ತಂದೆ-ತಾಯಿಯರ ಹಿತವಚನವನ್ನು ಸಹನೆ ಯಿಂದ ಕೇಳುವುದು ಒಳಿತು.
ವೃಶ್ಚಿಕ: ಆರ್ಥಿಕ ವಿಚಾರದಲ್ಲಿ ತಕ್ಕಮಟ್ಟಿನ ಸುಧಾರಣೆ ಕಂಡುಕೊಳ್ಳುವಿರಿ.
ಧನುಸ್ಸು: ವಾಹನ ಚಾಲನೆ ಹಾಗೂ ವಾಹನದಲ್ಲಿ ಪ್ರಯಾಣಿಸುವಾಗ ಹೆಚ್ಚು ಜಾಗೃತರಾಗಿರಿ.

ಮಕರ: ಅತಿಯಾದ ಆಲಸ್ಯ ನಿಮ್ಮ ಕೆಲಸಕ್ಕೆ ಅಡ್ಡಿ ಉಂಟುಮಾಡಲಿದೆ. ದೂರ ಪ್ರಯಾಣ ಬೇಡ.
ಕುಂಭ: ಆಹಾರದಲ್ಲಿನ ಬದಲಾವಣೆಯಿಂದಾಗಿ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ.
ಮೀನ: ವೃತ್ತಿ ಜೀವನದಲ್ಲಿ ಬಹಳಷ್ಟು ಬದಲಾವಣೆ ಗಳಾಗಲಿವೆ. ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವಿರಿ.