Home Blog Page 93

ಗಡಿಯಲ್ಲಿ ಗುಂಡಿನ ಚಕಮಕಿ, ಗುಂಡುಹಾರಿಸಿದ ಪಾಕಿಗಳಿಗೆ ಭಾರತೀಯ ಸೇನೆ ತಕ್ಕ ತಿರುಗೇಟು

ಶ್ರೀನಗರ,ಸೆ.21- ಆಪರೇಷನ್‌ ಸಿಂಧೂರದ ನಂತರ ಜಮು ಮತ್ತು ಕಾಶೀರದ ಕುಪ್ವಾರಾದ ನಿಯಂತ್ರಣ ರೇಖೆಯ (ಎಲ್‌‍ಒಸಿ) ನೌಗಮ್‌ ಸೆಕ್ಟರ್‌ನಲ್ಲಿ ಭಾರತ ಮತ್ತು ಪಾಕಿಸ್ತಾನಿ ಪಡೆಗಳ ನಡುವೆ ಗುಂಡಿನ ದಾಳಿ ನಡೆದಿದೆ. ಆದರೆ, ಈ ಘಟನೆಯು ಕದನ ವಿರಾಮ ಉಲ್ಲಂಘನೆಗೆ ಸಮನಾಗಿರುವುದಿಲ್ಲ. ಎಲ್‌‍ಒಸಿ ಉದ್ದಕ್ಕೂ ಎರಡೂ ಕಡೆಯಿಂದ ಸಣ್ಣ ಶಸ್ತ್ರಾಸ್ತ್ರಗಳ ಗುಂಡಿನ ಚಕಮಕಿ ನಡೆದಿದ್ದು, ಇದು ಕದನ ವಿರಾಮ ಉಲ್ಲಂಘನೆಯಲ್ಲ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಸಂಜೆ 6.15 ರ ಸುಮಾರಿಗೆ ಗುಂಡಿನ ಚಕಮಕಿ ಪ್ರಾರಂಭವಾಗಿ ಸುಮಾರು ಒಂದು ಗಂಟೆ ಕಾಲ ನಿರಂತರವಾಗಿ ಮುಂದುವರೆಯಿತು. ನಂತರ ಗುಂಡಿನ ಚಕಮಕಿ ನಿಂತಿತು. ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಇಲ್ಲಿಯವರೆಗೆ, ಸೇನೆಯು ಘಟನೆಯ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

26 ಜೀವಗಳನ್ನು ಬಲಿ ಪಡೆದ ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಭಾರತ ಮೇ 7 ರಂದು ಆಪರೇಷನ್‌ ಸಿಂಧೂರ್‌ ಅನ್ನು ಪ್ರಾರಂಭಿಸಿದಾಗಿನಿಂದ ಮೇ ತಿಂಗಳಲ್ಲಿ ಉದ್ವಿಗ್ನತೆ ಭುಗಿಲೆದ್ದ ತಿಂಗಳುಗಳ ನಂತರ ಗುಂಡಿನ ಚಕಮಕಿ ನಡೆದಿದೆ. ನಾಲ್ಕು ದಿನಗಳ ಸಂಘರ್ಷವು ಎರಡೂ ಕಡೆಯವರು ಕದನ ವಿರಾಮ ಒಪ್ಪಂದಕ್ಕೆ ಬರುವುದರೊಂದಿಗೆ ಕೊನೆಗೊಂಡಿತ್ತು.

ಸಂಘರ್ಷದ ಸಮಯದಲ್ಲಿ ಪಾಕಿಸ್ತಾನದಲ್ಲಿ ಹಲವಾರು ವಾಯುನೆಲೆಗಳು ಮತ್ತು ಒಂಬತ್ತು ಭಯೋತ್ಪಾದಕ ಉಡಾವಣಾ ಪ್ಯಾಡ್‌‍ಗಳು ನಾಶವಾದರೂ, ಭಾರತಕ್ಕೆ ಯಾವುದೇ ಗಮನಾರ್ಹ ಹಾನಿಯಾಗಿಲ್ಲ. ಕೊನೆಯ ಬಾರಿಗೆ ಎರಡೂ ದೇಶಗಳ ನಡುವೆ ಮೇ 10, 2025 ರಂದು ಕದನ ವಿರಾಮ ಉಲ್ಲಂಘನೆ ಉಂಟಾಗಿತ್ತು.

ಆಗಸ್ಟ್‌ 5 ರಂದು, ಎರಡೂ ದೇಶಗಳ ನಡುವೆ ಕದನ ವಿರಾಮ ಉಲ್ಲಂಘನೆಯ ಕೆಲವು ವರದಿಗಳು ಹೊರಬಂದವು. ಆದಾಗ್ಯೂ, ಭಾರತೀಯ ಸೇನೆಯು ಪಾಕಿಸ್ತಾನದಿಂದ ಯಾವುದೇ ಕದನ ವಿರಾಮ ಉಲ್ಲಂಘನೆಯನ್ನು ನಿರಾಕರಿಸಿತು. ನೆರೆಯ ದೇಶದಿಂದ ಯಾವುದೇ ಅಪ್ರಚೋದಿತ ಗುಂಡಿನ ದಾಳಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ ಸೇನೆಯು ಹೇಳಿಕೆಯಲ್ಲಿ, ಪೂಂಚ್‌ ಪ್ರದೇಶದಲ್ಲಿ ಕದನ ವಿರಾಮ ಉಲ್ಲಂಘನೆಯ ಕುರಿತು ಕೆಲವು ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ವರದಿಗಳು ಬಂದಿವೆ. ನಿಯಂತ್ರಣ ರೇಖೆಯಲ್ಲಿ ಯಾವುದೇ ಕದನ ವಿರಾಮ ಉಲ್ಲಂಘನೆಯಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ದಯವಿಟ್ಟು ಪರಿಶೀಲಿಸದ ಮಾಹಿತಿಯನ್ನು ಹರಡುವುದನ್ನು ತಪ್ಪಿಸಿ ಎಂದು ಮನವಿ ಮಾಡಿದೆ.

ವಾಯುಪಡೆಯ ಮಾಜಿ ಸೈನಿಕರಿಗೆ ವಾಯುಪಡೆಯ ಮುಖ್ಯಸ್ಥರಾದ ಏರ್‌ ಚೀಫ್‌ ಮಾರ್ಷಲ್‌ ಎ.ಪಿ.ಸಿಂಗ್‌, ಭಯೋತ್ಪಾದನಾ ವಿರೋಧಿ ಉದ್ದೇಶಗಳು ಸಾಧಿಸಿದ ತಕ್ಷಣ ಆಪರೇಷನ್‌ ಸಿಂಧೂರ್‌ ಕೊನೆಗೊಂಡಿತು ಎಂದು ಹೇಳಿದರು.

ಸಂಘರ್ಷವನ್ನು ದೀರ್ಘಗೊಳಿಸುವುದರಿಂದ ಘರ್ಷಣೆ ವೆಚ್ಚವಾಗುತ್ತದೆ. ನಾವು ಯುದ್ಧವನ್ನು ಬಹಳ ಬೇಗನೆ ನಿಲ್ಲಿಸಿದೆವು. ಹೌದು, ಅವರು ನಿಸ್ಸಂದೇಹವಾಗಿ ಹಿಂದೆ ಸರಿದರು, ಆದರೆ ನಮ ಉದ್ದೇಶಗಳೇನು? ನಮ ಉದ್ದೇಶ ಭಯೋತ್ಪಾದನಾ ವಿರೋಧಿಯಾಗಿತ್ತು. ನಾವು ಅವರ ಮೇಲೆ ದಾಳಿ ಮಾಡಬೇಕಾಗಿತ್ತು. ನಾವು ಹಾಗೆ ಮಾಡಿದ್ದೆವು. ಹಾಗಾದರೆ ನಮ ಉದ್ದೇಶಗಳು ಈಡೇರಿದ್ದರೆ, ನಾವು ಸಂಘರ್ಷವನ್ನು ಏಕೆ ಕೊನೆಗೊಳಿಸಬಾರದು? ನಾವು ಏಕೆ ಮುಂದುವರಿಯಬೇಕು? ಏಕೆಂದರೆ ಯಾವುದೇ ಸಂಘರ್ಷವು ದುಬಾರಿ ಬೆಲೆಯನ್ನು ಹೊಂದಿರುತ್ತದೆ ಅದನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ವಿವಾದಿತ ಜಾತಿಗಳನ್ನು ಕೈಬಿಟ್ಟು ಸಮೀಕ್ಷೆ, ಬಿಜೆಪಿಗರ ಹೋರಾಟಕ್ಕೆ ಸಿಕ್ಕ ಜಯ

ಬೆಂಗಳೂರು : ಕ್ರಿಶ್ಚಿಯನ್ ಪದ ಜೋಡಿತ ಹಿಂದು ಉಪ ಜಾತಿಗಳ ಪಟ್ಟಿಯನ್ನು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಸಂದರ್ಭದಲ್ಲಿ ಕೈ ಬಿಡುವುದಕ್ಕೆ ಕೊನೆಗೂ ಹಿಂದುಳಿದ ವರ್ಗಗಳ ಆಯೋಗ ನಿರ್ಧರಿಸಿದ್ದು, ಬಿಜೆಪಿ ಓಬಿಸಿ ನಾಯಕರ ಹೋರಾಟಕ್ಕೆ ಜಯ ದೊರೆತಂತಾಗಿದೆ.

46 ಇಂತ ಹೊಸ ಜಾತಿಯನ್ನು ಆಯೋಗ ಪಟ್ಟಿ ಮಾಡಿತ್ತು. ಇದು ಸಾಮಾಜಿಕ ಹಾಗೂ ಮೀಸಲಾತಿ ವ್ಯವಸ್ಥೆಯಲ್ಲಿ ಭಾರಿ ಮಟ್ಟದ ಏರುಪೇರು ಹಾಗೂ ವಿಪ್ಲವಕ್ಕೆ ಕಾರಣವಾಗಬಹುದೆಂದು ಬಿಜೆಪಿ ಗುರುತಿಸಿತ್ತು. ಸಾಮಾನ್ಯವಾಗಿ ಇಂಥ ವಿಚಾರಗಳಲ್ಲಿ ಒಂದು‌ ನರೇಟಿವ್ ಸೃಷ್ಟಿ ಮಾಡುವಲ್ಲಿ ವಿಫಲವಾಗುತ್ತಲೇ ಇದ್ದ ಬಿಜೆಪಿ ಈ ಬಾರಿ ಮಾತ್ರ ಜಾಗೃತಗೊಂಡಿತು.

ಸಾಮಾಜಿಕ ಹೋರಾಟಗಾರ ವಾದಿರಾಜ್ ಸಾಮರಸ್ಯ, ಮಾಜಿ ಸಚಿವ ವಿ.ಸುನೀಲ್ ಕುಮಾರ್, ಸಂಸದ ಪಿ.ಸಿ.ಮೋಹನ್ ಮುಂಚೂಣಿಯಲ್ಲಿ ನಿಂತು ಹೋರಾಟಕ್ಕೆ ಅಣಿಯಾಗಿದ್ದರಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು ಹಿಂದು ಜಾತಿ ಉಪನಾಮ ಬಳಕೆಯ ವಿರುದ್ಧ ಒಂದು ಜಾಗೃತಿ ಮೂಡಿತು. ಸುನೀಲ್ ಕುಮಾರ್ ಹಾಗೂ ಪಿ.ಸಿ.ಮೋಹನ್ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗಕ್ಕೆ ಭೇಟಿ ನೀಡಿ ಈ ಬಗ್ಗೆ ಮೊದಲು ಮನವಿ ಸಲ್ಲಿಸಲಾಯಿತು.

ಆ ಬಳಿಕ ಕ್ರಿಶ್ಚಿಯನ್ನರನ್ನು ಹಿಂದು ಜಾತಿಗಳೊಳಗೆ ತುರುಕುವುದನ್ನು ಖಂಡಿಸಿ ಸಾಮಾಜಿಕ ಜಾಗೃತಿ ವೇದಿಕೆ ಅಡಿಯಲ್ಲಿ ವಾದಿರಾಜ್ ಹಾಗೂ ಸುನೀಲ್ ಕುಮಾರ್ ಸಂಘಟಿಸಿದ ದುಂಡು ಮೇಜಿನ ಸಭೆಗಳು ಇತರೆ ಜಾತಿಯವರಲ್ಲೂ ಈ ಬಗ್ಗೆ ಜಾಗೃತಿ ಮೂಡಿಸಿತು. ಈ ಬಗ್ಗೆ ರಾಜ್ಯಪಾಲರಿಗೂ ದೂರು ನೀಡಿ ಕ್ರಿಶ್ಚಿಯನ್ ಧರ್ಮ ಜೋಡಿತ ಹಿಂದು ಜಾತಿಗಳ ಪ್ರತ್ಯೇಕ ಸೃಷ್ಟಿಯಿಂದ ಆಗುವ ಅನಾಹುತದ ಬಗ್ಗೆ ಮನವರಿಕೆ ಮಾಡಲಾಯಿತು.

ಇದು ಸಮಾಜದ ಎಲ್ಲ ವರ್ಗದಲ್ಲೂ ಎಚ್ಚರಿಕೆಯ ಗಂಟೆ ಮೊಳಗಿಸುವ ಜತೆಗೆ ಸಮೀಕ್ಷೆ ಸಂದರ್ಭದಲ್ಲಿ ಎಲ್ಲರೂ ಧರ್ಮದ ಕಾಲಮ್ಮಿನಲ್ಲಿ ಹಿಂದು ಎಂದೇ ನಮೂದಿಸಬೇಕೆಂದು ಪಕ್ಷವಾಗಿ ಬಿಜೆಪಿ ಅಧಿಕೃತ ನಿರ್ಣಯ ತೆಗೆದುಕೊಳ್ಳುವುದಕ್ಕೆ ಕಾರಣವಾಗಿದೆ. ಒಕ್ಕಲಿಗ, ಲಿಂಗಾಯತ ಸೇರಿದಂತೆ ಪ್ರಬಲ ಸಮುದಾಯಗಳು ಕೂಡಾ ಇದಕ್ಕೆ ಕೈ‌ಜೋಡಿಸಿವೆ. ಸಾಮಾನ್ಯವಾಗಿ ಹಿಂದುತ್ವದ ವಿಚಾರದಲ್ಲಿ ಮಾತ್ರ ನರೇಟಿವ್ ಕಟ್ಟುತ್ತಿದ್ದ ಬಿಜೆಪಿ ಈ ಬಾರಿ ಸಾಮಾಜಿಕ – ಶೈಕ್ಷಣಿಕ ವಿಚಾರದಲ್ಲೂ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದು ಶ್ಲಾಘನೀಯ.

ಹಿಂದೂ -ಕ್ರಿಶ್ಚಿಯನ್‌ ಪದ ತೆಗೆಯಲು ಬಿಜೆಪಿ ಆಗ್ರಹ
ರಾಜ್ಯ ಸರ್ಕಾರ ನಾಳೆಯಿಂದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ ನಡೆಸಲು ಉದ್ದೇಶಿಸಿರುವ ಸಾಮಾಜಿಕ, ಶೈಕ್ಷಣಿಕ(ಜಾತಿ ಗಣತಿ) ಸಮೀಕ್ಷೆಯಲ್ಲಿ ಹಿಂದು-ಕ್ರಿಶ್ಚಿಯನ್‌ ಕಾಲಂ ಅನ್ನು ತಕ್ಷಣವೇ ತೆಗೆದು ಹಾಕ ಬೇಕೆಂದು ಬಿಜೆಪಿ ಒತ್ತಾಯಿಸಿದೆ. ಉಪಜಾತಿಗಳ ಕಾಲಂನಲ್ಲಿ ಹಿಂದು-ಕ್ರಿಶ್ಚಿಯನ್‌ ಪದ ಸೇರಿಸಿರುವುದು ಮತಾಂತರಕ್ಕೆ ಪರೋಕ್ಷವಾಗಿ ಸರ್ಕಾರವೇ ಕುಮಕು ನೀಡಿದಂತಿದೆ. ಹೀಗಾಗಿ ಹಿಂದುಳಿದ ವರ್ಗಗಳ ಆಯೋಗವು ಈ ಪದವನ್ನು ತೆಗೆದು ಹಾಕಲು ಸರ್ಕಾರ ನಿರ್ದೇಶನ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಬಿಜೆಪಿ ಎಚ್ಚರಿಕೆ ಕೊಟ್ಟಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಹಾಗೂ ಶಾಸಕ ಸಿ.ಎನ್‌.ಅಶ್ವತ್ಥನಾರಾಯಣ ಕಾಂಗ್ರೆಸ್‌‍ ಸರ್ಕಾರ ಜಾತಿ ಸಮೀಕ್ಷೆ ನಡೆಸಲು ಮುಂದಾಗಿದೆ. ಜಾತಿ ಸಮೀಕ್ಷೆ ಹೆಸರಲ್ಲಿ ಹಿಂದೂ ಸಮಾಜ ಒಡೆಯುವ ಪ್ರಯತ್ನ ಮಾಡುತ್ತಿದೆ. ಜಾತಿ ಸಮೀಕ್ಷೆ ಮೂಲಕ ಕೆಟ್ಟ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದರು.ಪಕ್ಷಾತೀತವಾಗಿ ಹೊಸ ಜಾತಿಗಳ ಪಟ್ಟಿಗೆ ವಿರೋಧಿಸಲಾಗುತ್ತಿದೆ. ಕ್ರಿಶ್ಚಿಯನ್‌ ಜತೆ 48 ಜಾತಿಗಳನ್ನು ಸೇರಿಸಿ ಹೊಸ ಜಾತಿಗಳನ್ನು ಸೃಷ್ಟಿಸಲಾಗಿದೆ. ಇನ್ನೂ ಅಧಿಕೃತವಾಗಿ ಈ 48 ಜಾತಿಗಳ ಪಟ್ಟಿ ಹಿಂದಕ್ಕೆ ಪಡೆಯುವ ಘೋಷಣೆ ಮಾಡಿಲ್ಲ.

ಹಿಂದೂಗಳ ಮೀಸಲಾತಿ ಕಸಿದು ಧರ್ಮಾಂತರವಾದವರಿಗೆ ಕೊಡುವ ದುರುದ್ದೇಶದಿಂದ ಹೊಸ ಜಾತಿಗಳ ಸೃಷ್ಟಿ ಮಾಡಿದ್ದಾರೆ. ಜತೆಗೆ ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರ ಮಾಡುವ ಕುಮಕ್ಕು, ಹಿಂದೂ ಧರ್ಮ ಒಡೆಯುವ ಪಿತೂರಿ ಇದು ಎಂದು ಆರೋಪಿಸಿದರು.ಈ ಕೂಡಲೇ 48 ಅನಧಿಕೃತ ಜಾತಿಗಳ ಪಟ್ಟಿಯನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು. ಈ ಹೊಸ ಜಾತಿಗಳಿಗೆ ಸಾಂವಿಧಾನಿಕ ಮಾನ್ಯತೆ ಇಲ್ಲ. ಇಷ್ಟೆಲ್ಲ ವಿರೋಧ ಮಾಡುತ್ತಿದ್ದರೂ ಸರ್ಕಾರ ಭಂಡತನ ತೋರುತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರಕ್ಕೆ ಜಾತಿ ಜನಗಣತಿ ಮಾಡಲು ಅವಕಾಶ ಇಲ್ಲ. ಆದರೂ ಮಾಡಲು ಹೊರಟಿದ್ದಾರೆ. ಯಾವುದೇ ಸಿದ್ಧತೆ ಇಲ್ಲದೇ ಯಾರ ಸಲಹೆಯೂ ಪಡೆಯದೇ ತರಾತುರಿಯಲ್ಲಿ ಸಮೀಕ್ಷೆಗೆ ಮುಂದಾಗಿದ್ದಾರೆ. ಇದು ಬೇಜವಾಬ್ದಾರಿತನದ ನಡೆ, ಅಧಿಕಾರದ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸಮೀಕ್ಷೆ ನಡೆಸುವ ಸಿಬ್ಬಂದಿಗೂ ತರಬೇತಿ ಕೊಟ್ಟಿಲ್ಲ ಎಂದು ಆರೋಪಿಸಿದರು.ಸಮೀಕ್ಷೆ ಮಾಡಲು ಯಾರ ವಿರೋಧವೂ ಇಲ್ಲ. ಸಮೀಕ್ಷೆ ಬಗ್ಗೆ ಬಿಜೆಪಿಯ ನಿಲುವೂ, ಆದಿಚುಂಚನಗಿರಿ ಮಠದ ನಿಲುವೂ ಸ್ಪಷ್ಟವಾಗಿದೆ. ಸಮೀಕ್ಷೆ ಗೊಂದಲಗಳಿಲ್ಲದೇ ವೈಜ್ಞಾನಿಕವಾಗಿ ಜಿಯೋ ಟ್ಯಾಗಿಂಗ್‌ ಮಾಡಿ ಸಮೀಕ್ಷೆ ಮಾಡಬೇಕು ಎಂಬುದು ನಮ ಒತ್ತಾಯ ಎಂದರು.
ತೆಲಂಗಾಣ ಮಾದರಿ ಎಂದು ಹೇಳುತ್ತಿದ್ದಾರ. ಅಲ್ಲಿ ಸಮೀಕ್ಷೆಗೆ ಮೂರು ತಿಂಗಳು ತಗೊಂಡರು. ಆದರೆ ನಮ ರಾಜ್ಯದ ಮಾದರಿ ಬೇರೆ ಇದೆ. ಇವರು ಮತಾಂತರಕ್ಕೆ ಪ್ರೋತ್ಸಾಹ ಕೊಟ್ಟು ತರಾತುರಿಯಲ್ಲಿ ಸಮೀಕ್ಷೆ ಮಾಡುತ್ತಿದ್ದಾರೆ ಎಂದು ದೂರಿದರು.

ರಾಜ್ಯದ ಸಮೀಕ್ಷೆಗೆ ಸಂವಿಧಾನದ ಮಾನ್ಯತೆ ಇಲ್ಲ. ಸಮೀಕ್ಷೆಯ ಕಾಲಂನಲ್ಲಿ ಗುಪ್ತರೋಗದ ಬಗ್ಗೆಯೂ ಮಾಹಿತಿ ಕೇಳುವ ಪ್ರಶ್ನೆ ಇದೆ. ಇವರು ಎಡಬಿಡಂಗಿಯಾಗಿ ಸಮೀಕ್ಷೆ ಮಾಡುತ್ತಿದ್ದಾರೆ. ಗುಪ್ತ ರೋಗದ ಬಗ್ಗೆ ಯಾಕೆ ಮಾಹಿತಿ ಕೇಳುತ್ತಾರೆ. ಈ ಬಗ್ಗೆ ಮಾಹಿತಿ ಕೇಳುತ್ತಾರೆ ಎಂದರೆ ಅಲ್ಲಿಗೆ ಸಮೀಕ್ಷೆ ಬಿದ್ದುಹೋಯಿತು ಎಂದೇ ಅರ್ಥ. ಗುಪ್ತರೋಗದ ಬಗ್ಗೆ ಕೇಳುವ ವಿಚಾರ ಕಾನೂನಾತಕವಲ್ಲ ಎಂದು ತಿಳಿಸಿದರು.
ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಮಾತನಾಡಿ ಸರಕಾರ 47 ಕ್ರಿಶ್ಚಿಯನ್‌ ಜೋಡಿತ ಜಾತಿಗಳ ಪಟ್ಟಿ ತೆಗೆಯದೇ 33 ಹೊಸ ಜಾತಿಗಳನ್ನಷ್ಟೇ ಮಾತ್ರ ತೆಗೆದಿದೆ ಎಂಬ ಮಾಹಿತಿ ಇದೆ. 47 ಹೊಸ ಜಾತಿಗಳ ಹೆಸರು ತೆಗೆದಿರುವ ಬಗ್ಗೆ ಸರ್ಕಾರ ಪ್ರಕಟಣೆ, ಜಾಹೀರಾತು ಹೊರಡಿಸಲಿ ಎಂದರು.

33 ರದ್ದು ಮಾಡಿ 13 ಹೊಸ ಜಾತಿಗಳ ಹೆಸರು ಉಳಿಸಿದ್ದೇಕೆ? ಮಾದಾರ, ಕುರುಬ, ಬ್ರಾಹಣ, ಮಡಿವಾಳ, ಬಂಜಾರ, ನೇಕಾರ, ಒಕ್ಕಲಿಗ, ಲಿಂಗಾಯತ ಕ್ರಿಸ್ಚಿಯನ್‌ ಹೆಸರುಗಳನ್ನು ಉಳಿಸಿದ್ದಾರೆ ಎಂಬ ಸುದ್ದಿ ಇದೆ. ಈ ಹೊಸ ಜಾತಿಗಳ ಹೆಸರು ಒತ್ತಾಯಪೂರ್ವಕವಾಗಿ ಯಾಕೆ ಉಳಿಸಿದ್ದೀರಿ? ಎಂದು ಪ್ರಶ್ನಿಸಿದರು.ಇದು ದುರುದ್ದೇಶಪೂರ್ವಕವಾಗಿ ಮಾಡುತ್ತಿರುವ ಸಮೀಕ್ಷೆ ಕ್ರಿಶ್ಚಿಯನ್‌ ಜೋಡಿತ ಎಸ್ಸಿ ಸಮುದಾಯಗಳನ್ನು ಯಾಕೆ ಉಳಿಸಿದ್ದೀರಿ? ಎಸ್ಸಿ ಸಮುದಾಯ ಕ್ರಿಶ್ಚಿಯನ್‌ಗೆ ಮತಾಂತರವಾಗಲಿ ಎಂಬ ಉದ್ದೇಶವಿದೆಯೇ? ಎಂದು ಪ್ರಶ್ನೆ ಮಾಡಿದರು.

ಎಲ್ಲ ಹೊಸ ಜಾತಿಗಳ ಪಟ್ಟಿಯಿಂದ ತೆಗೆಯಬೇಕು. ಇಲ್ಲದಿದ್ದರೆ ನಾವು ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಸರ್ವೆ ಮಾಡುವವರಿಗೆ ಇನ್ನು ತರಬೇತಿ ನೀಡಿಲ್ಲ. ನಾಗಮೋಹನ ದಾಸ್‌‍ ಸರ್ವೆ ಮಾಡಿ ಇನ್ನೂ ಎರಡು ತಿಂಗಳು ಆಗಿಲ್ಲ. ಈಗ ಮತ್ತೆ ಎಸ್ಸಿ, ಎಸ್ಟಿ ಅವರ ಮನೆಗೆ ಸರ್ವೆ ಹೋದರೆ ಅವರು ಏನು ಅಂದುಕೊಳ್ಳುತ್ತಾರೆ? ಎಂದು ತರಾಟೆಗೆ ತೆಗೆದುಕೊಂಡರು.ಮೂರು ತಿಂಗಳ ಅಂತರದಲ್ಲಿ ಯಾಕೆ ಮತ್ತೆ ಸರ್ವೆ. ಅಷ್ಟು ಆತುರದ ಸರ್ವೆ ಯಾಕೆ? ಆಯೋಗದ ಬುಕ್‌ಲೆಟ್‌ನಲ್ಲಿ ಅನೇಕ ತಪ್ಪುಗಳಿವೆ. ಎರಡು ಸಲ ಬುಕ್‌ಲೆಟ್‌ ಮುದ್ರಣ ಮಾಡಿದ್ದಾರೆ. ಅಧಿಕಾರಿಗಳಿಗೆ ಕೇಳಿದರೆ ಸಿಎಂ ಕಡೆಯಿಂದ ಒತ್ತಡ ಇದೆ ಎನ್ನುತ್ತಾರೆ. ಸಿಎಂಗೆ ಏನೋ ಒಂದು ಹಿಡನ್‌ ಅಜೆಂಡಾ ಇದೆ ಎಂದು ವ್ಯಂಗ್ಯವಾಡಿದರು.

ವಿವಾದಿತ 33 ಜಾತಿಗಳನ್ನು ನಿಷ್ಕ್ರಿಯಗೊಳಿಸಿ ನಾಳೆಯಿಂದ ರಾಜ್ಯದಲ್ಲಿ ಜಾತಿ ಸಮೀಕ್ಷೆ

ಬೆಂಗಳೂರು,ಸೆ.21-ರಾಜ್ಯದ ಎಲ್ಲಾ ನಾಗರಿಕರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಾಳೆಯಿಂದ ಪ್ರಾರಂಭವಾಗುತ್ತಿದ್ದು, ಸಕಲ ಸಿದ್ದತೆ ಮಾಡಿಕೊಳ್ಳ ಲಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್‌ ನಾಯಕ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಾಗಿದ್ದು, ಜಾತಿ ಗಣತಿ ಅಥವಾ ಜಾತಿ ಸಮೀಕ್ಷೆಯಲ್ಲ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ರಾಜ್ಯದ ಎರಡು ಕೋಟಿ ಮನೆಗಳ ಜಿಯೋಟ್ಯಾಗಿಂಗ್‌ ಹಾಗೂ ಗಣತಿ ಬ್ಲಾಕ್‌ನ ನಕ್ಷೆ ಕಾರ್ಯ ಪೂರ್ಣಗೊಂಡಿದೆ. ಬ್ಲಾಕ್‌ ನಕ್ಷೆಯಲ್ಲಿ ಮನೆಗಳನ್ನು ಗುರುತಿಸುವ ಜೊತೆಗೆ ರಸ್ತೆಗಳನ್ನು ನಕ್ಷೆಗಳಲ್ಲಿ ನಮೂದಿಸಲಾಗಿದ್ದು, ಗಣತಿದಾರರು ಸಮೀಕ್ಷೆಗಾಗಿ ಮನೆ ಮನೆಗಳಿಗೆ ತಲುಪಲು ಅನುಕೂಲವಾಗಲಿದೆ. ಒಬ್ಬ ಸಮೀಕ್ಷಕರಿಗೆ 140ರಿಂದ 150 ಮನೆಗಳ ಬ್ಲಾಕ್‌ಗಳನ್ನು ಹಂಚಿಕೆ ಮಾಡಿ ಸಮೀಕ್ಷೆ ಕಾರ್ಯವನ್ನು ವಹಿಸಲಾಗಿದೆ. ಒಟ್ಟು 1.61 ಲಕ್ಷ ಬ್ಲಾಕ್‌ಗಳನ್ನು ಮಾಡಲಾಗಿದೆ ಎಂದರು.

ಸುಮಾರು 2 ಲಕ್ಷ ಶಿಕ್ಷಕರು ಹಾಗೂ ಇತರ ಸಿಬ್ಬಂದಿ ಸಮೀಕ್ಷೆ ಹಾಗೂ ಸಂಬಂಧಿತ ಕೆಲಸಗಳಲ್ಲಿ ನಿರತರಾಗಲಿದ್ದಾರೆ. ಇಲಾಖಾ ಅಧಿಕಾರಿಗಳು ಮೇಲುಸ್ತುವಾರಿ ಮಾಡುತ್ತಾರೆ ಎಂದರು.
ಒಬ್ಬ ಸಮೀಕ್ಷಕರು ದಿನವೊಂದಕ್ಕೆ 7ರಿಂದ 8 ಮನೆ ಸಮೀಕ್ಷೆ ಮಾಡಿದರೂ 2 ಕೋಟಿ ಕುಟುಂಬಗಳನ್ನು 16 ದಿನಗಳಲ್ಲಿ ಮೊಬೈಲ್‌ ಆ್ಯಪ್‌ನಲ್ಲಿ ಸಂಗ್ರಹಿಸಬಹುದಾಗಿದೆ. ಕುಟುಂಬಗಳ ದತ್ತಾಂಶಗಳನ್ನು ವಿಶೇಷ ತಂತ್ರಾಂಶವುಳ್ಳ ಮೊಬೈಲ್‌ ಆ್ಯಪ್‌ನಲ್ಲಿ ಸಂಗ್ರಹಿಸಲಾಗುತ್ತದೆ ಎಂದರು.

ಸಮೀಕ್ಷಾದಾರರಿಗೆ ಅಗತ್ಯ ತರಬೇತಿಯನ್ನು ನೀಡಲಾಗಿದೆ. ಸಮೀಕ್ಷಾ ನಮೂನೆಯಲ್ಲಿ ಒಟ್ಟು 60 ಪ್ರಶ್ನೆಗಳಿದ್ದು, ಅದಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಒಂದಕ್ಕಿಂತ ಹೆಚ್ಚು ಬಾರಿ ಸಮೀಕ್ಷೆಗೆ ಒಳಗಾಗುವುದನ್ನು ತಪ್ಪಿಸಲು 6 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರ ಆಧಾರ ಸಂಖ್ಯೆಯನ್ನು ಒದಗಿಸುವಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಪಡಿತರಚೀಟಿ ನಮೂದಿಸಿದರೆ ಅದರಲ್ಲಿರುವ ಮಾಹಿತಿಯೂ ಸ್ವಯಂಚಾಲಿತವಾಗಿ ಪ್ರದರ್ಶಿತವಾಗುತ್ತದೆ ಎಂದು ವಿವರಿಸಿದರು.

ಮನೆಯಿಂದ ಹೊರಗಿರುವವರ ಮಾಹಿತಿಯನ್ನು ಪಡೆಯಲು ಆಧಾರ್‌ ಪರಿಶೀಲನೆ ಆನ್‌ಲೈನ್‌ ಸಮೀಕ್ಷೆ ನಡೆಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅನಗತ್ಯ ವಿವಾದಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ. ಜಾತಿಗಳನ್ನು ಸೃಷ್ಟಿಸುವ ಕೆಲಸ ಆಯೋಗ ಮಾಡಿಲ್ಲ. ಅಸ್ತಿತ್ವದಲ್ಲಿವೆ ಎಂದು ಹೇಳಲಾದ ಜಾತಿಗಳನ್ನು ಸಮೀಕ್ಷಾದಾರರ ಅನುಕೂಲಕ್ಕಾಗಿ ಮೊಬೈಲ್‌ ಆ್ಯಪ್‌ನಲ್ಲಿ ಡ್ರಾಪ್‌ಡೌನ್‌ನಲ್ಲಿ ಪಟ್ಟಿ ಮಾಡಿ ಒದಗಿಸಲಾಗಿದೆ. ಇದು ಸಮೀಕ್ಷಾದಾರರ ಆಂತರಿಕ ಬಳಕೆಗೆ ಮಾತ್ರ. ಇದು ಸಾರ್ವಜನಿಕ ದಾಖಲೆಯಲ್ಲ. ಇದಕ್ಕೆ ಕಾನೂನು ಮಾನ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಮೀಕ್ಷೆಯಲ್ಲಿ ಸಂಗ್ರಹಿಸಲಾದ ಮಾಹಿತಿಗಳನ್ನು ಆಯೋಗವು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದ ಬಳಿಕ ವಿವಿಧ ಜಾತಿ ಜನಾಂಗಗಳಿಗೆ ಒದಗಿಸಬಹುದಾದ ಅನುಕೂಲತೆಗಳ ಬಗ್ಗೆ ಶಿಫಾರಸಿನೊಂದಿಗೆ ಸಮೀಕ್ಷೆ ವರದಿ ಮಾಡಲಿದೆ ಎಂದರು.

ಸಮೀಕ್ಷೆ ಸಮಯದಲ್ಲಿ ಕೆವೈಸಿ ನಡೆಸುವಲ್ಲಿ ಎದುರಾಗುತ್ತಿದ್ದ ಅಡಚಣೆಗಳನ್ನು ಪರಿಹರಿಸಲು ಫೇಸ್‌‍ ರೆಕಗ್ನೇಷನ್‌ ಕಲ್ಪಿಸಲಾಗಿದೆ. ತಪ್ಪು ಗೊಂದಲಕ್ಕೆ ಒಳಗಾಗಿದ್ದ 33 ಜಾತಿಗಳ ಹೆಸರನ್ನು ಪಟ್ಟಿಯಿಂದ ನಿಷ್ಕ್ರಿಯಗೊಳಿಸಲಾಗಿದೆ. ಆದರೂ ಯಾವುದೇ ಜಾತಿಯ ಹೆಸರನ್ನು ಸ್ವಯಂ ಇಚ್ಛೆಯಿಂದ ನಮೂದಿಸಲು ಅವಕಾಶವಿದೆ. 148 ಜಾತಿಗಳನ್ನು ಸೇರ್ಪಡೆ ಮಾಡಲಾಗಿದೆ. ಒಟ್ಟು 1561(ಎಸ್ಸಿ-ಎಸ್ಟಿ ಹೊರತುಪಡಿಸಿ) ಜಾತಿಗಳಿವೆ.

ನಾವು ಯಾವುದೇ ಜಾತಿಯನ್ನು ಸೃಷ್ಟಿ ಮಾಡಿಲ್ಲ. ಮಾಹಿತಿಗಾಗಿ ಕುಟುಂಬದ ಧರ್ಮ, ಜಾತಿ, ಉಪಜಾತಿಗಳ ಮಾಹಿತಿ ಪಡೆಯಲಾಗುತ್ತಿದೆ. ಅಸ್ತಿತ್ವದಲ್ಲಿರುವ ಜಾತಿ, ಧರ್ಮಗಳಲ್ಲದೆ ತರ ಅಂಶಗಳನ್ನು ನಮೂದಿಸಲು ಅವಕಾಶವಿದೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಆಯೋಗದ ಸದಸ್ಯ ಕಾರ್ಯದರ್ಶಿ ದಯಾನಂದ್‌ ಉಪಸ್ಥಿತರಿದ್ದರು.

ನಕಲಿ ದಾಖಲೆ ತೋರಿಸಿ ಹಿಂದೂ ಯುವತಿ ಜೊತೆ ಮದುವೆಯಾದ ಯೂಟ್ಯೂಬರ್‌ ಖ್ವಾಜಾ ಶಿರಹಟ್ಟಿ ವಿರುದ್ಧ ಕೇಸ್

ಹುಬ್ಬಳ್ಳಿ.ಸೆ.21-ಹಿಂದೂ ಯುವತಿಯನ್ನು ನಕಲಿ ದಾಖಲೆ ತೋರಿಸಿ ಮದುವೆಯಾದ ಯೂಟ್ಯೂಬರ್ ಖ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳಪ್ಪ ವಿರುದ್ಧ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದೀಗ ಯುವತಿಯ ಹೆತ್ತವರು ಹಿಂದೂಪರ ಸಂಘಟನೆಗಳ ಜೊತೆಗೆ ಠಾಣೆಗೆ ಆಗಮಿಸಿ ಮುಕಳಿಪ್ಪ ವಿರುದ್ಧ ಜೀವ ಬೆದರಿಕೆ ಮತ್ತು ಅಪಹರಣ ಪ್ರಕರಣ ದಾಖಲಿಸಿದ್ದಾರೆ. ರೀಲ್ಸ್ ಮಾಡುವ ಆರೋಪಿ ಮದುವೆ ಸಮಾರಂಭದ ವೇದಿಕೆ ಸಿದ್ದಪಡಿಸಿ ಕಳೆದ ನಾಲ್ಕು ತಿಂಗಳ ಹಿಂದೆ ನಮ್ಮ ಮಗಳನ್ನು ಅಪಹರಿಸಿಕೊಂಡು ಹೋಗಿ ಮದುವೆಯಾಗಿದ್ದಾನೆ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ.

ಅದು ರೀಲ್ಸ್ ಎಂದಿದ್ದ ಮುಕುಳಿಪ್ಪ, ಈಗ ನಿಜವಾಗಿ ಮದುವೆಯಾಗಿದ್ದೇನೆ ಎನ್ನುತ್ತಿದ್ದಾನೆ. ಇದು ಸುಳ್ಳು ಮದುವೆ. ನಮ್ಮ ಮಗಳನ್ನು ವಾಪಸ್ ಕಳುಹಿಸಿಕೊಡಿ ಎಂದಿದ್ದಕ್ಕೆ ಧಮ್ಮಿ ಹಾಕುತ್ತಿದ್ದಾನೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಯುವತಿಯ ಹೆತ್ತವರು ಠಾಣೆಗೆ ದೂರು ನೀಡಿದ್ದಾರೆ.

ಜೀವ ಬೆದರಿಕೆ ಮತ್ತು ಅಪಹರಣ ಪ್ರಕರಣವನ್ನು ದಾಖಲಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ರಿಜಿಸ್ಟರ್ ಮದುವೆಯಾಗಿದ್ದು ಇದು ಲವ್ ಜಿಹಾದ್ ಎಂದು ಹಿಂದು ಸಂಘಟನೆಗಳು ಆರೋಪಿಸಿದೆ.

ಮಹಾಲಯ ಅಮಾವಾಸ್ಯೆ : ಶುಭಾಶಯ ಕೋರಿದ ಪ್ರಧಾನಿ ಮೋದಿ

ನವದೆಹಲಿ,ಸೆ.21- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹಾಲಯ ಅಮಾವಾಸ್ಯೆಯಂದು ಜನರಿಗೆ ಶುಭಾಶಯ ಕೋರಿದ್ದು, ದುರ್ಗಾ ಪೂಜೆಯ ಪವಿತ್ರ ದಿನಗಳು ಹತ್ತಿರವಾಗುತ್ತಿದ್ದಂತೆ ಪ್ರತಿಯೊಬ್ಬರ ಜೀವನವು ಬೆಳಕು ಮತ್ತು ಉದ್ದೇಶದಿಂದ ತುಂಬಲಿ ಎಂದು ಹಾರೈಸಿದ್ದಾರೆ.

ದುರ್ಗಾ ದೇವಿಯು ಕೈಲಾಸ ಪರ್ವತದಲ್ಲಿರುವ ತನ್ನ ವಾಸಸ್ಥಾನದಿಂದ ಭೂಮಿಗೆ ಇಳಿಯುವುದನ್ನು ಈ ದಿನದಂದು ಪ್ರಾರಂಭಿಸುತ್ತಾಳೆ ಎಂದು ಭಕ್ತರು ನಂಬುತ್ತಾರೆ. ನಿಮ್ಮೆಲ್ಲರಿಗೂ ಶುಭೋ ಮಹಾಲಯದ ಶುಭಾಶಯಗಳು. ದುರ್ಗಾ ಪೂಜೆಯ ಪವಿತ್ರ ದಿನಗಳು ಹತ್ತಿರವಾಗುತ್ತಿದ್ದಂತೆ, ನಮ್ಮ ಜೀವನವು ಬೆಳಕು ಮತ್ತು ಉದ್ದೇಶದಿಂದ ತುಂಬಿರಲಿ ಎಂದು ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮಾ ದುರ್ಗೆಯ ದೈವಿಕ ಆಶೀರ್ವಾದವು ಅಚಲವಾದ ಶಕ್ತಿ, ಶಾಶ್ವತ ಸಂತೋಷ ಮತ್ತು ಅದ್ಭುತ ಆರೋಗ್ಯವನ್ನು ತರಲಿ ಎಂದು ಪ್ರಧಾನಿ ಶೋಭ ಕೋರಿದ್ದಾರೆ.

ಹೊಸ ಹೆಚ್-1ಬಿ ವೀಸಾ ಗಳಿಗೆ ಮಾತ್ರ 100,000 ಡಾಲರ್ ಶುಲ್ಕ ಅನ್ವಯ : ಶ್ವೇತಭವನ

ವಾಷಿಂಗ್ಟನ್,ಸೆ.21- ಹೆಚ್1- ಬಿ ವೀಸಾ ಶುಲ್ಕಗಳಿಗೆ ಸಂಬಂಧಿಸಿದಂತೆ ಪ್ರಮುಖ ನವೀಕರಣವೊಂದು ಹೊರಬಿದ್ದಿದೆ. ಈಗಾಗಲೇ ಹೆಚ್1ಬಿ ವೀಸಾಗಳನ್ನು ಹೊಂದಿರುವವರು ಮತ್ತು ಪ್ರಸ್ತುತ ದೇಶದ ಹೊರಗೆ ಇರುವವರಿಗೆ ಮರುಪ್ರವೇಶಿಸಲು 100,000 ಡಾಲರ್ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಎಕ್ಸ್ ಪೋಸ್ಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಇದು ಹೊಸ ವೀಸಾಗಳಿಗೆ ಮಾತ್ರ ಅನ್ವಯಿಸುತ್ತದೆ, ನವೀಕರಣಗಳಿಗೆ ಅಲ್ಲ ಮತ್ತು ಪ್ರಸ್ತುತ ವೀಸಾ ಹೊಂದಿರುವವರಿಗೆ ಅಲ್ಲ ಎಂದು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಶ್ವೇತಭವನವು ಹೊಸ ನಿಯಮವು ಯಾವುದೇ ಪ್ರಸ್ತುತ ವೀಸಾ ಹೊಂದಿರುವವರು ಅಮೆರಿಕಕ್ಕೆ/ಅಮೆರಿಕದಿಂದ ಪ್ರಯಾಣಿಸುವವರಿಗೆ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಲು ಪ್ರಯತ್ನಿಸಿದೆ.ಅದರಂತೆ, ಹೆಚ್1 – ಬಿ ವೀಸಾಗಳ ಮೇಲೆ ವಿಧಿಸಲಾದ ವಾರ್ಷಿಕ 100,000 ಅಥವಾ ಅಂದಾಜು 8.3 ಮಿಲಿಯನ್ ಶುಲ್ಕವು ಹೊಸ ಅರ್ಜಿಗಳಿಗೆ ಮಾತ್ರ ಅನ್ವಯಿಸುತ್ತದೆ, ಈಗಾಗಲೇ ವೀಸಾಗಳಲ್ಲಿ ಕೆಲಸ ಮಾಡುತ್ತಿರುವ ವಿದೇಶಿ ಕಾರ್ಮಿಕರಿಗೆ ಅಲ್ಲ ಎಂದು ಅಮೆರಿಕ ಸರ್ಕಾರ ಸ್ಪಷ್ಟಪಡಿಸಿದೆ.

ಶ್ವೇತಭವನದ ಈ ಹೇಳಿಕೆಯು ಪ್ರಸ್ತುತ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಭಾರತೀಯ ಐಟಿ ವೃತ್ತಿಪರರಿಗೆ ನಿರಾಳತೆ ಹೊದಗಿಸಿದೆ. ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಪೊನಾರ್ಡ್ ಲುಟ್ಟಿಕ್ ಅವರೊಂದಿಗೆ ಅಧ್ಯಕ್ಷರು, ಹೆಚ್1-2 ವೀಸಾಗಳು ಎಂದು ಕರೆಯಲ್ಪಡುವ ತಂತ್ರಜ್ಞಾನ ಕಂಪನಿಗಳು ತುಂಬಲು ಕಷ್ಟಕರವೆಂದು ಭಾವಿಸುವ ಉನ್ನತ ಕೌಶಲ್ಯದ ಉದ್ಯೋಗಗಳಿಗೆ ಹೊಸ ಶುಲ್ಕವನ್ನು ವಿಧಿಸುವ ಘೋಷಣೆಗೆ ಸಹಿ ಹಾಕಿದ್ದರು.

ಘೋಷಣೆ ಸೆ.21 ರ EDT 12:01 ರಿಂದ ಜಾರಿಗೆ ಬರುತ್ತದೆ. ಆ ಕ್ಷಣದಿಂದ, ಪ್ರಾಯೋಜಕ ಉದ್ಯೋಗದಾತರು 100,000 ಶುಲ್ಕವನ್ನು ಪಾವತಿಸದ ಹೊರತು ಯಾವುದೇ ಹೆಚ್1ಬಿ ಉದ್ಯೋಗಿ ಅಮೆರಿಕಾ ಪ್ರವೇಶಿಸಲು ಸಾಧ್ಯವಿಲ್ಲ. ಉದ್ಯೋಗದಾತರು ಈ ಶುಲ್ಕದ ಪುರಾವೆಯನ್ನು ಒದಗಿಸಬೇಕು ಮತ್ತು ಅದನ್ನು ಒಳಗೊಂಡಿರದ ಯಾವುದೇ ಅರ್ಜಿಯನ್ನು ತಿರಸ್ಕರಿಸಲು ರಾಜ್ಯ ಮತ್ತು ಹೋಮ್ ಲ್ಯಾಂಡ್ ಸೆಕ್ಯುರಿಟಿ ಇಲಾಖೆಗಳಿಗೆ ನಿರ್ದೇಶಿಸಲಾಗಿದೆ. ನಿರ್ಬಂಧವು ವಿಸ್ತರಿಸದ ಹೊರತು12 ತಿಂಗಳವರೆಗೆ ಜಾರಿಯಲ್ಲಿರುತ್ತದೆ ಎಂದು ಟ್ರಂಪ್ ತಿಳಿಸಿದ್ದರು.

ಜಾರಿಗೆ ಬಂದ ದಿನಾಂಕದ ನಂತರ ಅಮೆರಿಕ ಪ್ರವೇಶಿಸುವ ಅಥವಾ ಪ್ರವೇಶಿಸಲು ಪ್ರಯತ್ನಿಸುವವರಿಗೆ ಮಾತ್ರ ಇದು ಅನ್ವಯಿಸುತ್ತದೆ ಎಂದು ಆದೇಶವು ನಿರ್ದಿಷ್ಟಪಡಿಸುತ್ತದೆ. ಇದರರ್ಥ ಈ ನಿಯಮ ಪ್ರಾಥಮಿಕವಾಗಿ ವಿದೇಶದ ಹೊಸ
ಅರ್ಜಿದಾರರನ್ನು ಗುರಿಯಾಗಿಸುತ್ತದೆ, ಈಗಾಗಲೇ ಆಮೆರಿಕದಲ್ಲಿ ನಿಯಮಿತ ವಿಸ್ತರಣೆಗಳನ್ನು ಸಲ್ಲಿಸುತ್ತಿರುವ ಕಾರ್ಮಿಕರನ್ನು ಅಲ್ಲ, ಆದಾಗ್ಯೂ, ಅಸ್ತಿತ್ವದಲ್ಲಿರುವ ಹೆಚ್ 1 – ಬಿ ಹೊಂದಿರುವವರು ವಿದೇಶಕ್ಕೆ ಪ್ರಯಾಣಿಸಿದರೆ ಮತ್ತು ಹಿಂತಿರುಗಲು ವೀಸಾ ಸ್ಟ್ಯಾಂಪಿಂಗ್ ಅಗತ್ಯವಿದ್ದರೆ ಅವರೂ ಸಹ ಇದಕ್ಕೊಳಪಡುತ್ತಾರೆ. ಇಲ್ಲಿಯವರೆಗೆ, ಹೆಚ್ 1-ಬಿ ವೀಸಾಗಳು ಸುಮಾರು 1,500 ವರೆಗಿನ ವಿವಿಧ ಆಡಳಿತಾತ್ಮಕ ಶುಲ್ಕಗಳನ್ನು ಹೊಂದಿದ್ದವು ಎಂದು ಮಾಧ್ಯಮ ವರದಿ ತಿಳಿಸಿದೆ.

ಈ ಹೊಸ ವೆಚ್ಚವು ತೀವ್ರವಾದ ಏರಿಕೆಯನ್ನು ಸೂಚಿಸುತ್ತದೆ. ಪ್ರತಿ ಮರುಪ್ರವೇಶದಲ್ಲೂ ಜಾರಿಗೊಳಿಸಿದರೆ, ಉದಾಹರಣೆಗೆ ಉದ್ಯೋಗಿಯು ದೇಶ ತೊರೆದಾಗ ಮತ್ತು ಹೊಸ ವೀಸಾ ಮುದ್ರೆಯ ಅಗತ್ಯವಿರುವಾಗ, ಮೂರು ವರ್ಷಗಳ ಸಾಮಾನ್ಯ
ವಾಸ್ತವ್ಯದ ವೆಚ್ಚವು ಹಲವಾರು ಲಕ್ಷ ಡಾಲರ್‌ಗಳನ್ನು ತಲುಪಬಹುದು.

ಹೆಚ್ 1 – ಬಿ ವೀಸಾ ಪ್ರೋಗ್ರಾಮ್‌ನ ಹೆಚ್ಚಿನ ಪಾಲನ್ನು ಭಾರತೀಯರೇ ಹೊಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ವೀಸಾ ಅನುಮೋದನೆಗಳಲ್ಲಿ ಸರಿಸುಮಾರು ಶೇಕಡಾ 7173 ರಷ್ಟು ಭಾರತೀಯರ ಪಾಲಾಗಿದೆ. ಇನ್ನು ಚೀನಾಕ್ಕೆ ಹೋಲಿಸಿದಾಗ ಇದು ಶೇ 112 ಎಂದೆನಿಸಿದೆ.

2023 ರ ಹಣಕಾಸು ವರ್ಷದಲ್ಲಿ, ಭಾರತವು 191,000 ಹೆಚ್ 1 ಬಿ ವೀಸಾಗಳನ್ನು ಪಡೆದುಕೊಂಡಿದೆ: 2024 ರ ಹಣಕಾಸು ವರ್ಷದಲ್ಲಿ, ಅದು ಸುಮಾರು 207,000 ಕೈ ಬರಿತು. ಅಂದರೆ ಪ್ರಸ್ತುತ ಹೆಚ್ 1 – ಬಿಗಳಲ್ಲಿ 200,000 ಕ್ಕೂ ಹೆಚ್ಚು ಭಾರತೀಯ ವೃತ್ತಿಪರರ ಮೇಲೆ ನೇರವಾಗಿ ಪರಿಣಾಮ ಬೀರಬಹುದು. ಆರ್ಥಿಕ ಅಪಾಯವು ದಿಗ್ಧಮಗೊಳಿಸುವಂತಿದೆ. ಸಾಮಾನ್ಯ 60,000 ಭಾರತೀಯರಿಗೆ ತಕ್ಷಣಕ್ಕೆ ಇದರಿಂದ ಬೀಳುವ ಹೊರೆ ವಾರ್ಷಿಕ ಹೊರೆ 6 ಬಿಲಿಯನ್ (ಸುಮಾರು ರೂ. 53,000 ಕೋಟಿ). ಪೂರ್ಣ ಪ್ರಮಾಣದಲ್ಲಿ ತೆರಿಗೆ ವಿಧಿಸುವುದರಿಂದ ಭಾರತದ ವಾರ್ಷಿಕ ಹೊರೆ 1.8 ಲಕ್ಷ ಕೋಟಿ ರೂ.ಗಳಿಗೆ ಬರಬಹುದು.

ನೂತನ ಶುಲ್ಕ ಯಾರಿಗೆ ಅನ್ವಯ? :
ನೂತನ ವೀಸಾ ಶುಲ್ಕವು ಇಂದಿನಿಂದ ಜಾರಿಗೆ ಬರುತ್ತದೆ. ಇದು ಒಂದು ವರ್ಷದ ನಂತರ ಮುಕ್ತಾಯಗೊಳ್ಳಲಿದೆ. ಆದರೆ ಸರ್ಕಾರವು ಅದನ್ನು ಮುಂದುವರಿಸಲು ನಿರ್ಧರಿಸಿದರೆ ಅದನ್ನು ವಿಸ್ತರಿಸಬಹುದು.

ಆದರೆ ಅಮೆರಿಕದ ವಲಸೆ ನೀತಿ ವಕೀಲರು ಶ್ವೇತಭವನದ ಈ ಕ್ರಮವು ಅನೇಕ ನುರಿತ ನೌಕರರ ಜೀವನವನ್ನು ಹಾಳುಮಾಡುವ ಬೆದರಿಕೆ ಹಾಕುತ್ತದೆ ಮತ್ತು ಅಮರಿಕದ ವ್ಯವಹಾರದ ಮೇಲೆ ದೂರಗಾಮಿ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಟೆಕ್ಸಾಸ್‌ನ ಎಲ್ ಪಾಸೆದಲ್ಲಿ ನೆಲೆಸಿರುವ ಡಿಕಿನ್ಸನ್ ರೈಟ್ ಅವರ ವಲಸೆ ವಕೀಲರಾದ ಕ್ಯಾಥೀನ್ ಕ್ಯಾಂಪ್ ಬೆಲ್ ವಾಕರ್, ಲಿಂಕ್ಸ್‌ಇನ್‌ನಲ್ಲಿ ಪೋಸ್ಟ್ ಮಾಡುವ ಮೂಲಕ, ಶ್ವೇತಭವನದ ಈ ಕ್ರಮವು ಒಂದು ದಿನದ ಸೂಚನೆಯೊಂದಿಗೆ ಅಸ್ತಿತ್ವದಲ್ಲಿರುವ ಹೆಚ್ 1 – ಬಿ.ಪ್ರಕ್ರಿಯೆಯಲ್ಲಿ ಸಂಪೂರ್ಣ ಅವ್ಯವಸ್ಥೆಯನ್ನು ಉಂಟುಮಾಡುತ್ತದೆ ಎಂದಿದ್ದಾರೆ. ಶುಲ್ಕವು ಕಂಪನಿಗಳಿಗೆ ವಾರ್ಷಿಕ ವೆಚ್ಚವಾಗಿರುತ್ತದೆ ಎಂದು ಲುಬ್ಲಿಕ್ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

ಆದರೆ ಶ್ವೇತಭವನದ ಅಧಿಕಾರಿಯೊಬ್ಬರು ನಿನ್ನೆ ಮಾತನಾಡುತ್ತಾ ಇದು ಒಂದು ಬಾರಿ ಶುಲ್ಕ ಎಂದು ಹೇಳಿದರು. ಲುಬ್ಲಿಕ್ ಅವರ ಹೇಳಿಕೆಗಳು ಗೊಂದಲವನ್ನು ಬಿತ್ತುತ್ತವೆಯೇ ಎಂದು ಕೇಳಿದಾಗ, ಈ ವಿಷಯದ ಬಗ್ಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಲು ಅಧಿಕಾರವಿಲ್ಲದ ಮತ್ತು ಅನಾಮಧೇಯತೆಯ ಸ್ಥಿತಿಯ ಕುರಿತು ಮಾತನಾಡಿದ ಅಧಿಕಾರಿ, ಹೊಸ ಶುಲ್ಕ ಪ್ರಸ್ತುತ ನವೀಕರಣಗಳಿಗೆ ಅನ್ವಯಿಸುವುದಿಲ್ಲ ಆದರೆ ಆ ನೀತಿ ಚರ್ಚೆಯಲ್ಲಿದೆ ಎಂದು ಹೇಳಿದರು.

ವ್ಯಕ್ತಿಗತವಾಗಿ, ಲೆಕ್ಕಾಚಾರ ಮಾಡಿದರೆ ಅಮೆರಿಕದಲ್ಲಿ ವಾರ್ಷಿಕವಾಗಿ 120,000 ಗಳಿಸುವ ಮಧ್ಯಮ ಮಟ್ಟದ ಭಾರತೀಯ ಎಂಜಿನಿಯರ್ ಭರಿಸುವ ವಾರ್ಷಿಕ 100,000 ವೀಸಾ ಶುಲ್ಕವು ಅವರ ವೇತನದ NO ಪ್ರತಿಶತಕ್ಕಿಂತ ಹೆಚ್ಚು ಹೊಡೆತವನ್ನುಂಟು ಮಾಡುತ್ತದೆ, ಇದು ಅತಿ ಹೆಚ್ಚು ಸಂಬಳ ಪಡೆಯುವವರನ್ನು ಹೊರತುಪಡಿಸಿ ಉಳಿದವರಿಗೆ ವಲಸೆಯನ್ನು ಅಸಾಧ್ಯವಾಗಿಸುತ್ತದೆ. ಹೆಚ್ 1 ಬಿ ವೀಸಾ ಹೊಂದಿರುವವರಲ್ಲಿ ಶೇ.70 ಕ್ಕಿಂತ ಹೆಚ್ಚು ಜನರು ಭಾರತದವರಾಗಿದ್ದಾರೆ.

ಪ್ರತಾಪ್‌ ಸಿಂಹಗೆ ಸಚಿವ ಮಹದೇವಪ್ಪ ಟಾಂಗ್

ಮೈಸೂರು,ಸೆ.21- ದಸರಾ ಉದ್ಘಾಟಕರ ವಿವಾದ ವಿಚಾರ ಸಂಬಂಧ ಸುಪ್ರೀಂಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಅವರು ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಸಚಿವ ಹೆಚ್.ಸಿ ಮಹದೇವಪ್ಪ, ಸಂವಿಧಾನ ಪೀಠಿಕೆ ಟೌನ್ ಹಾಲ್ ಮುಂದೆ ಹಾಕಿದ್ದೇವೆ. ಭಾರತದಲ್ಲಿ 130 ಕೋಟಿ ಜನ ಇದ್ದಾರೆ. ಅವರಿಗೆ ಮುಕ್ತ ಧಾರ್ಮಿಕ ಆಚರಣೆಗೆ ಅವಕಾಶ ಕೊಟ್ಟಿದ್ದೇವೆ. ಇದರ ಉದ್ದೇಶ ಬಹುತ್ವ ಕಾಪಾಡುವುದು. ಗೊಂದಲಕ್ಕೆ, ಅನುಮಾನಕ್ಕೆ, ಅಪಮಾನಕ್ಕೆ ದ್ವೇಷಕ್ಕೆ ಅವಕಾಶ ಇಲ್ಲ ಎಂದು ಸಂವಿಧಾನ ಹೇಳಿದೆ. ಇದನ್ನೇ ಸುಪ್ರೀಂ ಕೋರ್ಟ್ ಹೇಳಿದೆ. ವಿರೋಧಿಗಳಿಗೆ ಸಂವಿಧಾನ ಬೀಗ ಹಾಕಿದೆ.

ವಿರೋಧಿಗಳಿಗೆ ಇನ್ನು ಮುಂದೆ ಬುದ್ದಿ ಬರಬೇಕು. ಅತ್ಯಂತ ಪ್ರೀತಿಯಿಂದ ಎಲ್ಲರೂ ದಸರಾ ಆಚರಣೆ ಮಾಡಬೇಕು. ಎಲ್ಲರೂ ಭಾಗಿಯಾಗಿ ಅಂತ ನಾನು ಆಹ್ವಾನ ಕೊಡುತ್ತೇನೆ ಎಂದರು.
ರಾಜ್ಯದಲ್ಲಿ ಜಾತಿಗಣತಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಹೆಚ್.ಸಿ.ಮಹದೇವಪ್ಪ, ಸ್ವಾತಂತ್ರ್ಯಕ್ಕಿಂತ ಮುಂಚೆಯ ವರ್ಣಾಶ್ರಮ ಮಾಡುತ್ತಿದ್ದಾರೆ. ಬಿಜೆಪಿಗೆ ಇದರಲ್ಲಿ ನಂಬಿಕೆ ಇದೆ. ನಾವು ಜಾತಿಗಣತಿ ಮಾಡುತ್ತಿರುವುದು ಪ್ರತಿಪ್ರಜೆಯ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಬದುಕು ಹೇಗಿದೆ ಅಂತ ತಿಳಿದುಕೊಳ್ಳೋದಕ್ಕೆ. ಇದರಲ್ಲಿ ಬಿಜೆಪಿ ವಿರೋಧ ಮಾಡೋದಕ್ಕೆ ಏನಿದೆ ಎಂದು ಪ್ರಶ್ನಿಸಿದರು.

ಇರುವ ಜಾತಿಗಳನ್ನು ಸಮೀಕ್ಷೆ ಮಾಡುತ್ತಿದ್ದೇವೆ. ನಾವು ಯಾವ ಜಾತಿಯನ್ನೂ ಹುಟ್ಟು ಹಾಕುತ್ತಿಲ್ಲ. ಹಿಂದೂಗಳನ್ನು ಯಾರೂ ಟಾರ್ಗೆಟ್ ಮಾಡುತ್ತಿಲ್ಲ. ಇದು ಬಿಜೆಪಿ ಹೇಳುವ ಅಪ್ಪಟ ಸುಳ್ಳು. ಹಿಂದೂ ಧರ್ಮ ಒಡೆಯುವ ಪ್ರಮೇಯ ನಮಗೆ ಇಲ್ಲ. ನಾನು ಹಿಂದೂವಾಗಿ ಹುಟ್ಟಿದ್ದೇನೆ. ಆದರೆ ಸಾಯುವಾಗ ಹಿಂದೂವಾಗಿ ಸಾಯಲ್ಲ ಅಂತ ಅಂಬೇಡ್ಕರ್ ಹೇಳಿದ್ದರು. ಹಾಗಾದರೆ ಹಿಂದೂ ಧರ್ಮದಲ್ಲಿ ಏನಿದೆ?. ಬಲವಂತವಾಗಿ ಮತಾಂತರ ತಪ್ಪು. ಅದು ಅವರ ಹಕ್ಕು. ಸಚಿವ ಸಂಪುಟದಲ್ಲಿ ಯಾವ ಒಡಕೂ ಇರಲಿಲ್ಲ. ಒಮ್ಮತದ ತೀರ್ಮಾನದ ಮೇಲೆ ನೂತನ ಸಮೀಕ್ಷೆ ಮಾಡುತ್ತಿದ್ದೇವೆ. ಲಿಂಗಾಯತ ಒಕ್ಕಲಿಗ ಸಮುದಾಯದವರು ಅವರವರ ವಿಚಾರಕ್ಕೆ ಸಭೆ ಮಾಡುತ್ತಿದ್ದಾರೆ ಎಂದರು.

ಸಿಎಂ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಹೆಚ್.ಸಿ.ಮಹದೇವಪ್ಪ, ಇರೋದು ಒಂದೇ ಸಿಎಂ ಕುರ್ಚಿ, ಅದರಲ್ಲಿ ಸಿದ್ದರಾಮಯ್ಯ ಭದ್ರವಾಗಿ ಕುಳಿತಿದ್ದಾರೆ. 2028ರ ತನಕ ಅವರೇ ಕುಳಿತಿರುತ್ತಾರೆ. ಕಾರ್ಯಕರ್ತರಿಗೆ ಆಸೆ ಇದೆ ಕೂಗುತ್ತಾರೆ ಎಂದು ಹೇಳುವ ಮೂಲಕ 5 ವರ್ಷ ಸಿದ್ದರಾಮಯ್ಯ ಸಿಎಂ ಎಂದು ಪರೋಕ್ಷವಾಗಿ ಹೇಳಿದರು.

ಪಾವಗಡ : ಮಕ್ಕಳನ್ನು ಕೊಂದು ತಾಯಿ ನೇಣಿಗೆ ಶರಣು

ಪಾವಗಡ,ಸೆ.21– ತನ್ನೆರಡು ಮಕ್ಕಳನ್ನೂ ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಾವಗಡ ತಾಲೂಕಿನ ಕಡಪಲಕೆರೆ ಗ್ರಾಮದಲ್ಲಿ ನಡೆದಿದೆ.ಸರಿತಾ(25) ತನ್ನ ಒಂದೂವರೆ ವರ್ಷದ ಮಗ ಪುಷ್ಪಕ್ ಹಾಗೂ ನಾಲ್ಕು ವರ್ಷದ ಯುಕ್ತಿಯ ಕತ್ತು ಕೊಯ್ದು ಕೊಂದು ನಂತರ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪತಿ ಸಂತೋಷ್ ಲಗೇಜ್ ಆಟೋ ಚಾಲಕನಾಗಿದ್ದು, ಯಾವ ಕಾರಣಕ್ಕೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತಿಳಿದುಬಂದಿಲ್ಲ.ಈ ಘಟನೆಯಿಂದ ಗ್ರಾಮ ಮತ್ತು ಇಡೀ ತಾಲ್ಲೂಕು ಬೆಚ್ಚಿಬಿದ್ದಿದ್ದು, ಸುದ್ದಿ ತಿಳಿದ ಕೂಡಲೇ ಮಧುಗಿರಿ ಡಿ.ವೈ.ಎಸ್ಪಿ. ಮಂಜುನಾಥ್ ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತ ದೇಹಗಳನ್ನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ಶವಪರೀಕ್ಷೆಯಾದ ನಂತರವೇ ಖಚಿತ ಮಾಹಿತಿ ದೊರೆಯಲಿದೆ.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ : ಅಭಿಮಾನಿಗಳಿಗೆ ಧನ್ಯವಾದ ಹೇಳಿದ ನಟ ಮೋಹನ್ ಲಾಲ್

ಕೊಚ್ಚಿ, ಸೆ.21-ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿರುವ ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ಅವರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರಶಸ್ತಿ ಘೋಷಣೆಯ ನಂತರ ಮೊದಲ ಬಾರಿಗೆ ಕೇರಳಕ್ಕೆ ಆಗಮಿಸಿದ ಮೋಹನ್ ಲಾಲ್, ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮೊದಲಿಗೆ ಈ ಗೌರವವನ್ನು ಮಲಯಾಳಂ ಚಲನಚಿತ್ರೋದ್ಯಮಕ್ಕೆ ಅರ್ಪಿಸುವುದಾಗಿ ಹೇಳಿದರು.

ಚಿತ್ರೋದ್ಯಮಕ್ಕೆ ಇನ್ನಷ್ಟು ಒಳ್ಳೆಯದಾಗಲಿ ಎಂದು ನಾನು ಬಯಸುತ್ತೇನೆ ಮತ್ತು ಈ ಮನ್ನಣೆ ಹೊಸ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ನಗುತ್ತಾ ಹೇಳಿದರು.ಇದೇ ವೇಲೆ ಭಾವುಕರಾದ ಮೋಹನ್ ಲಾಲ್ ದೇವರು, ಪ್ರೇಕ್ಷಕರು, ಪೋಷಕರು ಮತ್ತು ದೇಶಕ್ಕೆ ಹೃತ್ತೂರ್ವಕ ಧನ್ಯವಾದಗಳನ್ನು ವ್ಯಕ್ತಪಡಿಸಿದರು.

ಇದು ಅಪಾರ ಸಂತೋಷದ ಕ್ಷಣ. ನನ್ನ ಪ್ರಯಾಣದ ಭಾಗವಾಗಿದ್ದ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ ಎಂದರು.ನನ್ನ 48 ವರ್ಷಗಳ ಸುದೀರ್ಘ ವೃತ್ತಿ ಜೀವನವನ್ನು ನೆನಪಿಸಿಕೊಂಡ ಅವರು ನನ್ನೊಂದಿಗೆ ನಡೆದ ಪ್ರತಿಯೊಬ್ಬರನ್ನು ನಾನು ನೆನಪಿಸಿಕೊಳ್ಳುತ್ತೇನೆ ಮತ್ತು ಈ ಸಂದರ್ಭದಲ್ಲಿ ಅವರಿಗೆ ನನ್ನ ಪ್ರೀತಿ ಮತ್ತು ಪ್ರಾರ್ಥನೆಗಳನ್ನು ಕಳುಹಿಸುತ್ತೇನೆ ಎಂದು ಹೇಳಿದರು.

ತಮ್ಮನ್ನು ಇಂದು ಈ ಸ್ಥಿತಿಗೆ ತಂದಿದ್ದಕ್ಕಾಗಿ ಪ್ರೇಕ್ಷಕರು ಮತ್ತು ಮಲಯಾಳಂ ಚಲನಚಿತ್ರೋದ್ಯಮಕ್ಕೆ ಅವರು ಮನ್ನಣೆ ನೀಡಿದರು.ಮೋಹನ್ ಲಾಲ್ ಅವರು 2023 ಸಾಲಿಗೆ ಸಿನಿಮಾ ಕ್ಷೇತ್ರದಲ್ಲಿ ದೇಶದ ಅತ್ಯುನ್ನತ ಗೌರವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಪ್ರಕಟಿಸಿದೆ.

ಭಾರತೀಯ ಸಿನಿಮಾಕ್ಕೆ ನೀಡಿದ ಅಪ್ರತಿಮ ಕೊಡುಗೆ ಗಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ನಟ, ನಿರ್ದೇಶಕ ಮತ್ತು ನಿರ್ಮಾಪಕರನ್ನು ಗೌರವಿಸಲಾಗುತ್ತಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.

ದಸರಾ ರಜೆಗಳ ಪ್ರಯುಕ್ತ ಕೆಎಸ್‌ಆರ್‌ಟಿಸಿ ವಿಶೇಷ ಹೆಚ್ಚುವರಿ ಬಸ್ ವ್ಯವಸ್ಥೆ

ಬೆಂಗಳೂರು,ಸೆ.21- ಮೈಸೂರು ದಸರಾ ಉತ್ಸವದ ರಜೆಯ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ 2300ಕ್ಕೂ ಹೆಚ್ಚು ವಿಶೇಷ ಬಸ್ ವ್ಯವಸ್ಥೆಯನ್ನು ಕಲ್ಪಿಸಿದೆ. ದಸರಾ ಮಹೋತ್ಸವದ ಅಂಗವಾಗಿ ರಾಜ್ಯ ಹಾಗೂ ದೇಶದ ವಿವಿಧ ಕಡೆಗಳಿಂದ ಮೈಸೂರು ನಗರಕ್ಕೆ ಬರುವ ಪ್ರವಾಸಿಗರ ಹಾಗೂ ರಜೆಗಳ ಹಿನ್ನಲೆಯ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುವುದನ್ನು ಮನಗಂಡು ಕೆಎಸ್‌ಆರ್‌ಟಿಸಿ ವಿಶೇಷ ಬಸ್ ವ್ಯವಸ್ಥೆ ಒದಗಿಸಿದೆ. ಪ್ರಸ್ತುತ ಕಾರ್ಯಾಚರಣೆ ಮಾಡಲಾಗುತ್ತಿರುವ ಕರ್ನಾಟಕ ಸಾರಿಗೆ ರಾಜಹಂಸ, ಸ್ವೀಪರ್, ಐರಾವತ, ಐರಾವತ ಕ್ಲಬ್‌ ಕ್ಲಾಸ್, ಅಂಬಾರಿ ಕ್ಲಬ್‌ ಕ್ಲಾಸ್, ಪಲ್ಲಕ್ಕಿ ಸ್ವೀಪರ್, ಅಶ್ವಮೇಧ ಸಾರಿಗೆ ಸೇವೆಗಳ ಜೊತೆಗೆ ಹೆಚ್ಚುವರಿ ಬಸ್‌ಗಳ ವಿಶೇಷ ಸಾರಿಗೆ ಸೇವೆಗಳ ಸೌಲಭ್ಯವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆ ತಿಳಿಸಿದೆ.

ದಿನಾಂಕ ಸೆ.26, 27 ಹಾಗೂ 30ರಂದು ಬೆಂಗಳೂರಿನಿಂದ ರಾಜ್ಯದ ಮತ್ತು ಅಂತಾರಾಜ್ಯದ ವಿವಿಧ ಸ್ಥಳಗಳಿಗೆ 2300ಕ್ಕೂ ಹೆಚ್ಚು ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ವಿಶೇಷ ಬಸ್‌ಗಳ ಆಚರಣೆ ಮಾಡಲಾಗುವುದು. ನಂತರ ರಾಜ್ಯದ ಮತ್ತು ಅಂತಾರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಅ.2 ಹಾಗೂ 5ರಂದು ವಿಶೇಷ ಬಸ್‌ಗಳ ಸೇವೆಯನ್ನು ಒದಗಿಸಲಾಗುವುದು ಎಂದು ಹೇಳಿದೆ.

ರಾಜ್ಯದ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಮುಂತಾದ ಸ್ಥಳಗಳಿಗೆ ಹಾಗೂ ನೆರೆ ರಾಜ್ಯಗಳಲ್ಲಿನ ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚಿನಾಪಳ್ಳಿ, ಪುದುಕೋಟೆ, ಮಧುರೈ, ಪಣಜಿ, ಶಿರಡಿ, ಪೂನಾ, ಏರ್ನಾಕುಲಂ, ಪಾಲ್ಗಾಟ್ ಹಾಗೂ ಇತರೆ ಸ್ಥಳಗಳಿಗೆ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದೆ.

ಮೈಸೂರು ದಸರಾಕ್ಕೆ 610 ವಿಶೇಷ ಬಸ್
ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರಿಗೆ ಪ್ರತ್ಯೇಕವಾಗಿ 260 ಹೆಚ್ಚುವರಿ ಬಸ್ ಗಳನ್ನು ಹಾಗೂ ಮೈಸೂರಿನ ಸುತ್ತಮುತ್ತಲಿನ ಪ್ರೇಕ್ಷಣೀಯ, ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಾದ ಚಾಮುಂಡಿ ಬೆಟ್ಟ, ಕೆ.ಆರ್.ಎಸ್ ಅಣೆಕಟ್ಟು/ಬೃಂದಾವನ, ಶ್ರೀರಂಗಪಟ್ಟಣ, ನಂಜನಗೂಡು, ಮಡಿಕೇರಿ, ಮಂಡ್ಯ, ಮಳವಳ್ಳಿ, ಹೆಚ್.ಡಿ.ಕೋಟೆ, ಚಾಮರಾಜನಗರ, ಹುಣಸೂರು, ಕೆ.ಆರ್.ನಗರ, ಗುಂಡ್ಲುಪೇಟೆ ಇತ್ಯಾದಿ ಸ್ಥಳಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಲು 350 ಹೆಚ್ಚುವರಿ ಬಸ್‌ಗಳು ಸೇರಿದಂತೆ ಒಟ್ಟಾರೆ 610 ದಸರಾ ವಿಶೇಷ ಬಸ್‌ಗಳನ್ನು ಒದಗಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ಮಾನ ನಿಲ್ದಾಣದಿಂದ ಮೈಸೂರಿಗೆ ಪ್ರೈ ಬಸ್ ಮೂಲಕ ನೇರ ಸಾರಿಗೆ ಸೌಲಭ್ಯಕಲ್ಪಿಸಲಾಗಿರುತ್ತದೆ.

ಒಂದು ದಿನದ ವಿಶೇಷ ಪ್ರವಾಸ ಸಾರಿಗೆ
ಗಿರಿದರ್ಶಿನಿ : ಬಂಡೀಪುರ, ಗೋಪಾಲಸ್ವಾಂ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು ಮತ್ತು ಚಾಮುಂಡಿ ಬೆಟ್ಟ (ಪ್ರಯಾಣದರ ವಯಸ್ಕರಿಗೆ: 450 ರೂ. ಮಕ್ಕಳಿಗೆ 300 ರೂ.)
ಜಲದರ್ಶಿನಿ: ಗೋಲ್ಡನ್‌ಟೆಂಪಲ್ (ಬೈಲಕುಪ್ಪೆ),ದುಬಾರೆ ಅರಣ್ಯ ನಿಸರ್ಗಧಾಮ, ರಾಜಾಸೀಟ್, ಹಾರಂಗಿಜಲಾಶಯ ಮತ್ತು ಕೆ.ಆರ್.ಎಸ್. (ಪ್ರಯಾಣದರ ವಯಸ್ಕರಿಗೆ: 500 ರೂ. ಮತ್ತು ಮಕ್ಕಳಿಗೆ 350)
ದೇವದರ್ಶಿನಿ: ನಂಜನಗೂಡು, ಬ್ಲಫ್, ಮುಡುಕುತೊರೆ, ತಲಕಾಡು, ಸೋಮನಾಥಪುರ,
ಶ್ರೀರಂಗಪಟ್ಟಣ (ಪ್ರಯಾಣದರ ವಯಸ್ಕರಿಗೆ: 330 ರೂ. ಮತ್ತು ಮಕ್ಕಳಿಗೆ 225 ರೂ.)
ಈ ಪ್ಯಾಕೇಜ್‌ಗಳನ್ನು ಸೆ.27ರಿಂದ ಆ.7ರವರೆಗೆ ಕಲ್ಪಿಸಲಾಗಿದೆ.