Saturday, June 7, 2025
Homeರಾಜ್ಯಕಾಂಗ್ರೆಸ್‌‍ ಹೈಕಮಾಂಡ್‌ಗೆ ಶೋಭಾ ಕರಂದ್ಲಾಜೆ ಬಹಿರಂಗ ಸವಾಲ್‌

ಕಾಂಗ್ರೆಸ್‌‍ ಹೈಕಮಾಂಡ್‌ಗೆ ಶೋಭಾ ಕರಂದ್ಲಾಜೆ ಬಹಿರಂಗ ಸವಾಲ್‌

Shobha Karandlaje's open challenge to the Congress high command

ಬೆಂಗಳೂರು,ಜೂ.7- ಕಾಂಗ್ರೆಸ್‌‍ ಹೈಕಮಾಂಡ್‌ಗೆ ದಮು, ತಾಕತ್ತು ಇದ್ದರೆ ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣ ಸಂಬಂಧ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರಿಂದ ರಾಜೀನಾಮೆ ಪಡೆಯಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಹಿರಂಗ ಸವಾಲು ಹಾಕಿದರು.

ಪ್ರತಿಯೊಂದರಲ್ಲೂ ಮೂಗು ತೂರಿಸುವ ಕಾಂಗ್ರೆಸ್‌‍ ಹೈಕಮಾಂಡ್‌ ಇಷ್ಟೊಂದು ದೊಡ್ಡ ಘಟನೆ ನಡೆದಿದ್ದರೂ ಒಂದೇ ಒಂದು ಸಾಂತ್ವಾನವನ್ನೂ ಹೇಳಿಲ್ಲ. ಬದಲಾಗಿ ಸರ್ಕಾರವನ್ನು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಸಮರ್ಥಿಸಿಕೊಳ್ಳುತ್ತಿದೆ. ಅವರ ರಾಜೀನಾಮೆ ಪಡೆಯಲು ನಿಮಗೆ ಧಮು ತಾಕತ್ತು ಇಲ್ಲವೇ ಎಂದು ಪ್ರಶ್ನೆ ಮಾಡಿದರು.

ಪಕ್ಷದ ಕಚೇರಿಯಲ್ಲಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್‌‍.ಹರೀಶ್‌, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಅವರ ಜೊತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ತಮ ಮಾತಿನುದ್ದಕ್ಕೂ ಕಾಂಗ್ರೆಸ್‌‍ ಸರ್ಕಾರ ಹಾಗೂ ಹೈಕಮಾಂಡ್‌ ವಿರುದ್ದ ಬೆಂಕಿ ಉಗುಳಿದರು.
ಈ ಪ್ರಕರಣಕ್ಕೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರೇ ನೇರ ಕಾರಣ. ಈ ಇಬ್ಬರು ತಮ ಸ್ಥಾನಕ್ಕೆ ಗೌರವಯುತವಾಗಿ ರಾಜೀನಾಮೆ ನೀಡಬೇಕು. ನಂತರ ತನಿಖಾಧಿಕಾರಿಗಳು ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕೆಂದು ಒತ್ತಾಯಿಸಿದರು.

ಆರ್‌ಸಿಬಿ, ಡಿಎನ್‌ಎ ಮತ್ತಿತರರನ್ನು ತನಿಖಾಧಿಕಾರಿಗಳು ಬಂಧಿಸುವುದಾದರೆ ಸಿಎಂ ಮತ್ತು ಡಿಸಿಎಂ ಅವರುಗಳನ್ನು ಏಕೆ ಬಂಧಿಸಬಾರದು? ಈ ಪ್ರಕರಣದಲ್ಲಿ ಈ ಇಬ್ಬರೂ ಪ್ರಮುಖ ಆರೋಪಿಗಳಾಗಿದ್ದಾರೆ. ಎಲ್ಲದಕ್ಕೂ ಮೂಗು ತೂರಿಸುವ ಹೈಕಮಾಂಡ್‌ನವರು ಈಗ ಯಾಕೆ ಮೌನಕ್ಕೆ ಜಾರಿದ್ದಾರೆ? ಕಾಂಗ್ರೆಸ್‌‍ ಹೈಕಮಾಂಡ್‌ ನಾಯಕರು ಎಲ್ಲಿದ್ದೀರಪ್ಪ ಎಂದು ವ್ಯಂಗ್ಯವಾಡಿದರು.

ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ, ಕೆ.ಸಿ.ವೇಣುಗೋಪಾಲ್‌, ಸುರ್ಜೆವಾಲ ಎಲ್ಲಿ ಹೋಗಿದ್ದಾರೆ? ನಿಮ ಕೈಗೆ ರಕ್ತ ಅಂಟಿಕೊಂಡಿದೆ. ಯಾವುದೇ ಕಾರಣಕ್ಕೂ ಅದನ್ನು ತೊಳೆದುಕೊಳ್ಳಲು ಸಾಧ್ಯವಿಲ್ಲ. ನಿಜವಾಗಿಯೂ ಎಐಸಿಸಿಗೆ ದಮು, ತಾಕತ್ತಿದ್ದರೆ ಸಿಎಂ-ಡಿಸಿಎಂ ವಿರುದ್ಧ ತನಿಖೆಗೆ ಆದೇಶಿಸಲಿ ಎಂದು ಸವಾಲು ಎಸೆದರು.

ಕರ್ನಾಟಕ ರಾಜ್ಯ ಶೋಕಾಚರಣೆಯಲ್ಲಿದೆ. ತಂದೆತಾಯಂದಿರು ಮಕ್ಕಳನ್ನು ಕಳೆದುಕೊಂಡಿದ್ದಾರೆ. ನನ್ನ ಕ್ಷೇತ್ರದಲ್ಲಿ ಒಬ್ಬ ಹುಡುಗ ತೀರಿಕೊಂಡು, ತಾಯಿ ತಂದೆ ಇಬ್ಬರು ಡಿಪ್ರೆಶನ್‌ ಗೆ ಹೋಗಿದ್ದಾರೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಕೈಯಲ್ಲಿ ರಕ್ತ ಅಂಟಿದೆ. ತಮ ಕೈಯಲ್ಲಿರುವ ರಕ್ತವನ್ನು ಪೊಲೀಸರ ಮೂತಿಗೆ ಒರೆಸುತ್ತಿದ್ದಾರೆ. ಒಬ್ಬ ಪ್ರಾಮಾಣಿಕ ಆಯುಕ್ತರಾಗಿದ್ದ ಬಿ.ದಯಾನಂದ್‌ ಅವರನ್ನು ಕಾರಣವಿಲ್ಲದೆ ಅಮಾನತು ಮಾಡಿದ್ದಾರೆ ಎಂದು ಕಿಡಿಕಾರಿದರು.

ಬೆಂಗಳೂರಿನ ಇತಿಹಾಸದಲ್ಲೇ ಇದೊಂದು ಕಪ್ಪು ಚುಕ್ಕೆ. ವಿಧಾನಸೌಧ ಇದುವರೆಗೂ ಇದ್ದಿದ್ದು ಪ್ರಮಾಣ ವಚನ ಕಾರ್ಯಕ್ರಮಕ್ಕಾಗಿ ಮಾತ್ರ. ಲೋಕೋಪಯೋಗಿಯವರು 25ರಿಂದ 35 ಜನರಿಗೆ ಮಾತ್ರ ಅವಕಾಶ ಎಂದಿದ್ದಾರೆ. ಆದರೆ ನಿಮ ಕುಟುಂಬದವರು, ಜಮೀರ್‌, ಸಿದ್ದರಾಮಯ್ಯ, ರಾಮಲಿಂಗರೆಡ್ಡಿ ಪರಿವಾರದವರೇ ವೇದಿಕೆಯಲ್ಲಿ ಇದ್ದರು ಎಂದು ವಾಗ್ದಾಳಿ ನಡೆಸಿದರು.

ಆರ್‌ಸಿಬಿ ವಿಜಯೋತ್ಸವವನ್ನು ಹೆಣದ ಮೇಲೆ ಮಾಡಿದ್ದೀರಿ. ಒಬ್ಬ ಜವಾಬ್ದಾರಿಯುತ ಸರ್ಕಾರ ಈ ರೀತಿ ಮಾಡಬಹುದೇ? ನಮ ಪೊಲೀಸರು ಹಿಂದಿನ ಮಧ್ಯರಾತ್ರಿವರೆಗೂ ಕೆಲಸ ಮಾಡಿದ್ದಾರೆ. ನೀವು ಅನುಮತಿ ಕೊಟ್ಟಿಲ್ಲ ಅಂದರೆ ಹೇಗೆ ಎರಡು ಆಚರಣೆ ಸಾಧ್ಯ ಎಂದು ಪ್ರಶ್ನಿಸಿದರು.

ಆರ್‌ಸಿಬಿ ವಿಜಯೋತ್ಸವಕ್ಕೆ ಅವಕಾಶ ಕೊಟ್ಟಿದ್ದರೆ ಪೊಲೀಸರನ್ನು ಯಾಕೆ ಅಮಾನತು ಮಾಡಿದ್ದೀರಾ..? ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೂರು ಗೇಟ್‌ ಮಾತ್ರ ತೆಗೆದಿದ್ದು, ಜನರು ಸೇರಿದಾಗ ಯಾಕೆ ಗೇಟ್‌ಗಳನ್ನು ಓಪನ್‌ ಮಾಡಲಿಲ್ಲ. ಮಾತು ಎತ್ತಿದರೆ ಪ್ರಯಾಗ್‌ನಲ್ಲಿ ಆಗಿಲ್ಲವೇ ಎನ್ನುತ್ತಾರೆ.

66 ಕೋಟಿಗೂ ಹೆಚ್ಚು ಪ್ರಯಾಗ್‌ರಾಜ್‌ಗೆ ಬಂದಿದ್ದಾರೆ. ಆದರೆ ನೀವು ಕೇವಲ ಎರಡು ಲಕ್ಷ ಜನರ ನಿಯಂತ್ರಣ ಮಾಡುವುದಕ್ಕೆ ಆಗಿಲಿಲ್ಲವೇ? ಎಂದು ಪ್ರಶ್ನಿಸಿದರು. ನಟ ಪುನೀತ್‌ ರಾಜ್‌ಕುಮಾರ್‌ ಅವರು ತೀರಿಕೊಂಡಾಗಲೂ, ಮುಂಜಾಗ್ರತಾ ಕ್ರಮ ವಹಿಸದೇ ಅಂತ್ಯಕ್ರಿಯೆಗೆ ಮಾಡಲಾಗಿತ್ತು. ಕೇವಲ ನಿಮ ಪ್ರಚಾರದ ಹುಚ್ಚಿಗಾಗಿ ಕರ್ನಾಟಕ ಹನ್ನೊಂದು ಮಕ್ಕಳು ಬಲಿಯಾಗಿದ್ದಾರೆ ಎಂದು ಆರೋಪಿಸಿದರು.

ಪ್ರಕರಣ ಕುರಿತು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಮೈಕೆಲ್‌ ಡಿ ಕುನ್ಹಾ ಅವರಿಗೆ ಯಾಕೆ ತನಿಖೆ ವಹಿಸಿದ್ದೀರಿ? ಈಗಾಗಲೇ ಅವರು ಕೋವಿಡ್‌ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ಮತ್ತೆ ಅವರಿಗೆ ಕೊಟ್ಟಿರುವುದು ಪ್ರಕರಣವನ್ನು ಮುಚ್ಚಿ ಹಾಕಲು ಎಂದು ಅನುಮಾನ ವ್ಯಕ್ತಪಡಿಸಿದರು.

RELATED ARTICLES

Latest News