ಮೈಸೂರು, ಜೂ.9 – ಕಳೆದ ಹನ್ನೊಂದು ವರ್ಷದಲ್ಲಿ ಕೇಂದ್ರ ಸರ್ಕಾರ ಕೊಟ್ಟ ಮಾತಿನಂತೆ ಯಾವುದನ್ನೂ ಈಡೇರಿಸಿಲ್ಲ. ಕೇವಲ ಪ್ರಚಾರದಿಂದ ಮಾತ್ರ ಉಳಿದುಕೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. `ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹನ್ನೊಂದು ವರ್ಷಗಳ ಆಡಳಿತಕ್ಕೆ ಕೇವಲ ಸೊನ್ನೆ ಅಂಕ ಮಾತ್ರ ನೀಡಲು ಸಾಧ್ಯ ಎಂದರು.
ಮಾಧ್ಯಮದವರು ಮೋದಿ ಅವರಿಗೆ ಹೆಚ್ಚಿನ ಪ್ರಚಾರಕೊಟ್ಟು, ಸುಳ್ಳು ವಿಚಾರಗಳನ್ನು ಹಬ್ಬಿಸುತ್ತಾರೆ. ಹೀಗಾಗಿಯೇ ಮೋದಿ ಸರ್ಕಾರ ಬದುಕಿದೆ ಎಂದರು. ನೋಟು ಅಮಾನೀಕರಣ ಮಾಡುವಾಗ ಮೋದಿ ಹೇಳಿದ್ದೇನು? ಅದು ಈಡೇರಿದೆಯೇ? ಅದರಿಂದ ಯಾರಿಗೆ ಅನುಕೂಲವಾಗಿದೆ? ಅಚ್ಚೇದಿನ್ ಆಯೇಗಾ ಎಂದಿದ್ದರು. ಅದು ಬಂದಿದೆಯೇ? ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಅದು ಸಾಧ್ಯವಾಗಿದೆಯೇ ಎಂದು ಪ್ರಶ್ನಿಸಿದರು.
ರೈತರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಹೇಳಿದ್ದರು, ಆಗಿದ್ದರೆ ಒಂದು ವರ್ಷ ದೆಹಲಿಯಲ್ಲಿ ರೈತರು ಚಳುವಳಿ ಮಾಡಿದ್ದೇಕೆ? ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯವರು ಹೇಳಿದ್ದರಲ್ಲಿ ಯಾವುದನ್ನೂ ಮಾಡಿಲ್ಲ. ಕೇವಲ ಪ್ರಚಾರದಿಂದ ಬದುಕಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆಯಲ್ಲಿ ಪಂಚಖಾತ್ರಿಗಳನ್ನು ಘೋಷಣೆ ಮಾಡಿದಾಗ, ಅದನ್ನು ಜಾರಿ ಮಾಡಲಾಗುವುದಿಲ್ಲ. ಒಂದು ವೇಳೆ ಆ ಯೋಜನೆಗಳು ಜಾರಿಯಾದರೆ ರಾಜ್ಯಸರ್ಕಾರ ದಿವಾಳಿ ಯಾಗಲಿದೆ ಎಂದು ಮೋದಿ ಅವರು ಹೇಳಿದ್ದರು. ಅನಂತರ ಬಿಜೆಪಿಯವರೇ ಮಧ್ಯಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ, ದೆಹಲಿ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಿದ್ದಾರೆ ಎಂದು ತಿರುಗೇಟು ನೀಡಿದ್ದರು.
ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿ ತೆರಿಗೆಯಲ್ಲಿ ರಾಜ್ಯಸರ್ಕಾರಗಳಿಗೆ ಶೇ. 50ರಷ್ಟು ಪಾಲುಬೇಕು ಎಂದಿದ್ದರು. ಅವರೇ ಪ್ರಧಾನಿಯಾದಾಗ ಅದನ್ನು ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು. ರಾಜ್ಯದ ವಿಷಯವಾಗಿ ನಿರಂತರವಾಗಿ ಅನ್ಯಾಯವಾಗುತ್ತದೆ. ಈ ಬಗ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡುವ ಬದಲು ಬಿಜೆಪಿ ಸುಳ್ಳು ಮಾಹಿತಿಗಳ ಮೂಲಕ ಅಪಪ್ರಚಾರ ಮಾಡುತ್ತಿದೆ ಎಂದು ಕಿಡಿ ಕಾರಿದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ನೀಡುವುದಾಗಿ ಹೇಳಿದ್ದರು. ಕೇಂದ್ರ 15ನೇ ಹಣಕಾಸು ಆಯೋಗ 11,495 ಕೋಟಿ ರೂ.ಗಳನ್ನು ಕರ್ನಾಟಕಕ್ಕೆ ಕೊಡಬೇಕೆಂದು ಶಿಫಾರಸ್ಸು ಮಾಡಿತ್ತು. ಇದ್ಯಾವುದು ಇನ್ನೂ ಬಂದಿಲ್ಲ. ಇವೆಲ್ಲ ದೊಡ್ಡ ವಿಷಯಗಳಲ್ಲವೇ? ಬಿಜೆಪಿಯವರು ಪ್ರಶ್ನೆ ಮಾಡಬೇಕಲ್ಲವೇ ಎಂದರು.