ಬೆಂಗಳೂರು,ಆ.19 : ವಿಜಯನಗರ ಸಾಮ್ರಾಜ್ಯದ ಗತ ವೈಭವ, ಹಂಪಿಯ ಇತಿಹಾಸ, ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲು ಹಂಪಿಯಲ್ಲಿ ಪಾಳು ಬಿದ್ದಿರುವ ದೇವಸ್ಥಾನಗಳನ್ನು ಭಾರತೀಯ ಸರ್ವೇಕ್ಷಣಾಲಯದ ನಿಯಮಗಳನುಸಾರ ಪುನರುಜ್ಜೀವನಗೊಳಿಸಿ ನಿತ್ಯ ಪೂಜಾಕೈಂಕರ್ಯವನ್ನು ನಡೆಸಲು ಸಂಕಲ್ಪತೊಟ್ಟಿರುವುದಾಗಿ ವಿಜಯನಗರ ಸಾಮ್ರಾಜ್ಯದ ವಂಶಸ್ಥ 19 ನೇ ಕೃಷ್ಣ ದೇವರಾಯ ಹೇಳಿದ್ದಾರೆ.
ಬನ್ನೇರುಘಟ್ಟ ರಸ್ತೆಯ ಮಿರಾಯಿ ಗ್ರೀನ್್ಸ ನಲ್ಲಿ ರೋಟರಿ ಕ್ಲಬ್ ನಿಂದ ಆಯೋಜಿಸಲಾದ ವಿಜಯನಗರ ಸಾಮ್ರಾಜ್ಯದ 20 ನೇ ವಂಶಸ್ಥ, ಯುವ ಮತ್ತು ಕ್ರಿಯಾಶೀಲ ಬರಹಗಾರ ತಿರುಮಲ ವೆಂಕಟ ದೇವರಾಯರ ರಚಿತ ಇನ್ ದಿ ಎಂಪೈರ್ ಆಫ್ ಗಾಡ್ ಕಿಂಗ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಂಪಿಯಲ್ಲಿ ವಿಜಯವಿಠಲ ಸೇರಿ ಕೆಲವೇ ದೇವಾಲಯಗಳಲ್ಲಿ ಪೂಜೆ ನೆರವೇರುತ್ತಿದೆ. ಉಳಿದಂತೆ ಸಾಸಿವೆಕಾಳು ಗಣಪ, ಕಡಲೆಕಾಳು ಗಣಪ ಸೇರಿ ಸಾಕಷ್ಟು ಗುಡಿಗಳಿವೆ. ಇಲ್ಲಿ ನಿತ್ಯ ಪೂಜೆ ನೆರವೇರಬೇಕು. ಈಗಾಗಲೇ ಪಂಡಿತರ ಜೊತೆ ಚರ್ಚಿಸಿದ್ದು, ಭಾರತೀಯ ಪುರಾತತ್ವ ಇಲಾಖೆಯ ನಿಯಮಗಳನ್ವಯ ಹಂಪಿಯಲ್ಲಿ ಈ ಹಿಂದೆ ನಡೆಯುತ್ತಿದ್ದ ಪೂಜಾ ವಿಧಿ ವಿಧಾನಗಳನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ. ಇತರೆ ಎಎಸ್ಐ ಅಡಿ ಬರುವ ಪಾರಂಪರಿಕ ತಾಣಗಳಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.
ನನ್ನ ಮಗ ಮೂರನೇ ವರ್ಷದಿಂದ ಪುಸ್ತಕ ಓದುವ ಬಗ್ಗೆ ಒಲವು ಹೊಂದಿದ್ದ. ವ್ಯಾಪಕ ಅಧ್ಯಯನ ಮಾಡುತ್ತಿದ್ದು, ಐರೋಪ್ಯ ಇತಿಹಾಸವನ್ನು ತಿಳಿದುಕೊಂಡಿದ್ದಾನೆ. ಇತಿಹಾಸ ಅಧ್ಯಯನ ಮಾಡಿರುವ ಈತ ಲಂಡನ್ ನಲ್ಲಿ ರಾಜಕೀಯ ಶಾಸ್ತ್ರದಲ್ಲಿ ಮಾಸ್ಟರ್ಸ್ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಹಿಂದಿನ ಇತಿಹಾಸಕಾರರು ವಿಜಯನಗರದ ಬಗ್ಗೆ ಬರೆದಿರುವುದೆಲ್ಲವೂ ಐತಿಹಾಸಿಕ ಸತ್ಯ. ಈ ಕೃತಿಯಲ್ಲಿ ಇತಿಹಾಸಕ್ಕೆ ಕಥೆಯ ರೂಪ ಕೊಟ್ಟಿದ್ದಾನೆ. ಕಾಲೇಜು ಸಂದರ್ಭದಲ್ಲೂ ವಿಜಯನಗರದ ಬಗ್ಗೆ ಆಳವಾಗಿ ಅಧ್ಯಯನ ಮಾಡುತ್ತಿದ್ದ ಎಂದರು.
ಕೃತಿಕಾರ ಮತ್ತು ವಿಜಯನಗರ ಸಾಮ್ರಾಜ್ಯದ 20 ನೇ ವಂಶಸ್ಥ ತಿರುಮಲ ದೇವರಾಯ ಮಾತನಾಡಿ, ವಿಜಯನಗರದ ಇತಿಹಾಸವನ್ನು ಕಥನದ ರೂಪದಲ್ಲಿ ಬರೆದಿದ್ದು, ಇತಿಹಾಸದ ಬಗ್ಗೆ ಅಧ್ಯಯನ ಮಾಡುವವರಷ್ಟೇ ಅಲ್ಲದೇ ಈ ಕೃತಿ ಪ್ರತಿಯೊಬ್ಬರನ್ನು ಸೆಳೆಯುತ್ತದೆ.ಆಸಕ್ತಿಯಿಂದ ಓದಿಸಿಕೊಂಡು ಹೋಗುತ್ತದೆ. ನಾನು ಹಂಪಿ, ಆನೆಗೊಂದಿಯಲ್ಲಿ ಆಡಿ ಬೆಳೆದಿದ್ದೇನೆ. ಇಲ್ಲಿನ ಇತಿಹಾಸವನ್ನು ಬಲ್ಲೆ. ಭಾರತವಷ್ಟೇ ಅಲ್ಲ ಇಡೀ ಪ್ರಪಂಚಕ್ಕೆ ಇಲ್ಲಿನ ಭವ್ಯ ಪರಂಪರೆ ಗೊತ್ತಾಗಬೇಕು ಎಂಬ ಕಾರಣದಿಂದ ಇಂಗ್ಲೀಷ್ ನಲ್ಲಿ ಕೃತಿ ರಚಿಸಿದ್ದೇನೆ ಎಂದರು.
ಆಗಿನ ವಿಜಯನಗರದ ಸಾಮ್ರಾಜ್ಯದ ಕಾಲದ ಘಟ್ಟದಲ್ಲಿ ಹೇಗಿತ್ತು ಎಂಬುದನ್ನು ತಿಳಿಸುವ ಉದ್ದೇಶ ತಮ್ಮದಾಗಿದೆ. ಇತಿಹಾಸದ ಪ್ಯಾಷನ್ ಇದ್ದರೆ ಮಾತ್ರ ಇತಿಹಾಸ ಓದಲು ಸಾಧ್ಯ. ಆದರೆ ಈ ಕೃತಿಯನ್ನು ಎಲ್ಲರೂ ಓದಬಹುದು. ಇದು ಆ ಕಾಲದ ವಿಷಯ. ಮುಂದಿನ ದಿನಗಳಲ್ಲಿ ಈ ಕೃತಿ ಆಧಾರಿಸಿ ಚಲನಚಿತ್ರ ನಿರ್ಮಿಸುವ ಗುರಿ ಹೊಂದಲಾಗಿದೆ. ಕನ್ನಡ ಮತ್ತು ತೆಲುಗಿನಲ್ಲಿ ಈ ಕೃತಿ ತರ್ಜುಮೆಯಾಗುತ್ತಿದೆ ಎಂದರು.
ರೋಟರಿ ಡಿಸ್ಟ್ರಿಕ್ ಗೌರ್ನರ್ ಬಿ.ಆರ್. ಶ್ರೀಧರ್ ಮಾತನಾಡಿ, ವಿಜಯನಗರದ ವಾಸ್ತುಶಿಲ್ಪ ಪ್ರತಿಯೊಬ್ಬರನ್ನು ಸೆಳೆಯುತ್ತದೆ. ಇಡೀ ಜಗತ್ತಿಗೆ ಇದು ಪ್ರೇರಣಾದಾಯಕ ತಾಣವಾಗಿದ್ದು, ಅಲ್ಲಿನ ವೈಶಿಷ್ಟ್ಯಕ್ಕೆ ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟಿರುವುದು ವಿಶೇಷವಾದದ್ದು. ಹಂಪಿಯಲ್ಲಿ ಮತ್ತಷ್ಟು ರಚನಾತ್ಮಕ ಕೆಲಸಗಳನ್ನು ಮಾಡಲು ರೋಟರಿ ಸಂಸ್ಥೆ ಸಿದ್ಧವಾಗಿದೆ ಎಂದರು.
ರೋಟರಿ ಬನ್ನೇರುಘಟ್ಟ ವಿಭಾಗದ ಅಧ್ಯಕ್ಷ ಡಾ. ಕನ್ವಾಲ್ ಕಮ್ರಾ ಎಸ್ ಮಾತನಾಡಿ, ಹಂಪಿ ನಮ್ಮ ಇತಿಹಾಸದ ಒಂದು ಪ್ರಮುಖ ಮೈಲಿಗಲ್ಲು. ರಾಮ ಮತ್ತು ಹನುಮಂತ ಭೇಟಿ ಮಾಡಿದ ಮೊದಲ ತಾಣ ಎಂಬ ಐತಿಹ್ಯವಿದೆ. ಇದು ವೈಭವದ ಇತಿಹಾಸ ಹೊಂದಿದ್ದು, ನಮ್ಮ ಭರತ ಖಂಡಕ್ಕೆ ಇದು ಕಳಶಪ್ರಾಯವಾಗಿದೆ.
ಹಂಪಿ ಒಂದು ಕಾಲದಲ್ಲಿ ಹೈಟೆಕ್ ನಗರವಾಗಿತ್ತು. ಇದು ನಮ್ಮ ದೇಶಕ್ಕೆ ಲೈಟ್ ಹೌಸ್ ಆಗಿದೆ. ನಮಗೆಲ್ಲ ಇದು ಸ್ಫೂರ್ತಿಯಾಗಿದೆ ಎಂದರು. ಆರ್.ಬಿ.ಬಿ.ಆರ್ ಕಾರ್ಯದರ್ಶಿ ಸುರೇಶ್ ಪ್ರಕಾಶ್, ಬನ್ನೇರುಘಟ್ಟ ರೋಟರಿ ಕ್ಲಬ್ ಸದಸ್ಯರಾದ ರಾಮ್ ಕುಲಕರ್ಣಿ, ವಂದನಾ ಕುಲಕರ್ಣಿ, ಅನಿಲ್, ವಿವಿಧ ರೋಟರಿ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.