ನವದೆಹಲಿ,ಜ.25- ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ನಡೆದಿದ್ದ ಉಗ್ರರ ದಾಳಿ 2008 ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಕಾಗಿದ್ದ ಪ್ರಮುಖ ಆರೋಪಿ ತಹವ್ವುರ್ ಹುಸೇನ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕದ ನ್ಯಾಯಾಲಯ ಆದೇಶ ಪ್ರಕಟಿಸಿದೆ.ಇದರಿಂದಾಗಿ ಭಾರತಕ್ಕೆ ರಾಜತಾಂತ್ರಿಕ ಹೋರಟದಲ್ಲಿ ಬಹುದೊಡ್ಡ ಗೆಲುವು ಸಿಕ್ಕಂತಾಗಿದೆ.
2008ರ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ಹುಸೇನ್ ರಾಣಾನನ್ನು ಸ್ಥಳಾಂತರ ಮಾಡುವಂತೆ ಭಾರತ ಬಹಳ ಪ್ರಯತ್ನ ನಡೆಸುತ್ತಿತ್ತು.ಅಮೆರಿಕದ ಮೇಲನವಿ ನ್ಯಾಯಾಲಯದ ನ್ಯಾಯಾಧೀಶರ ಸಮಿತಿ ರಾಣಾನನ್ನು ಹಸ್ತಾಂತರಿಸುವಂತೆ ಆದೇಶಿಸಿರುವುದರಿಂದ ಸದ್ಯ ಜೈಲಿನಲ್ಲಿರುವ ಪಾಕಿಸ್ತಾನಿ ಮೂಲದ ಕೆನಡಾ ಉದ್ಯಮಿ ತಹವ್ವುರ್ ರಾಣಾನನ್ನು ಶೀಘ್ರವೇ ಭಾರತಕ್ಕೆ ಕರೆ ತರುವ ಸಾಧ್ಯತೆಯಿದೆ.
ಮುಂಬೈನಲ್ಲಿ ಭೀಕರ ಭಯೋತ್ಪಾದಕ ದಾಳಿಗಳನ್ನು ನಡೆಸಿದ ಭಯೋತ್ಪಾದಕ ಸಂಘಟನೆಗೆ ಬೆಂಬಲ ನೀಡಿದ ಆರೋಪದ ಮೇಲೆ ಪಾಕಿಸ್ತಾನಿ ಪ್ರಜೆ ರಾಣಾನನ್ನು ಅಮೆರಿಕದ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗಿತ್ತು. ವಿದೇಶಿ ಭಯೋತ್ಪಾದಕ ಸಂಘಟನೆಗೆ ಸಾಮಗ್ರಿಗಳ ಬೆಂಬಲವನ್ನು ಒದಗಿಸಿದ ಮತ್ತು ಡೆನಾರ್ಕ್ನಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ವಿಫಲವಾದ ಸಂಚಿಗೆ ಸಹ ಇದೇ ರೀತಿ ನೆರವು ನೀಡಲು ಪಿತೂರಿ ನಡೆಸಿದ್ದಕ್ಕಾಗಿ ರಾಣಾಗೆ ಶಿಕ್ಷೆ ವಿಧಿಸಲಾಗಿತ್ತು.
ಭಾರತ-ಅಮೆರಿಕ ಹಸ್ತಾಂತರ ಒಪ್ಪಂದವು ರಾಣಾ ಅವರ ಹಸ್ತಾಂತರಕ್ಕೆ ಅನುಮತಿ ನೀಡುತ್ತದೆ ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿದೆ. ರಾಣಾ ವಿರುದ್ಧ ಮಾಡಿರುವ ಆರೋಪಗಳನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ಪರಿಗಣಿಸಲು ಪೂರಕವಾಗಿ ಭಾರತವು ಸಾಕಷ್ಟು ಸಮರ್ಥ ಪುರಾವೆಗಳನ್ನು ಒದಗಿಸಿದೆ ಎಂದು ಮೂವರು ನ್ಯಾಯಾಧೀಶರಾದ ಮಿಲನ್ ಡಿ ಸಿತ್, ಬ್ರಿಡ್ಜೆಟ್ ಎಸ್ ಬೇಡ್ ಮತ್ತು ಸಿಡ್ನಿ ಎ ಫಿಟ್ಜ್ವಾಟರ್ ಅವರನ್ನು ಒಳಗೊಂಡ ಸಮಿತಿಯು ಹೇಳಿದೆ.
ಇದರ ವಿರುದ್ಧ ರಾಣಾ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಕ್ಯಾಲಿಫೋರ್ನಿಯಾದ ಸೆಂಟ್ರಲ್ ಡಿಸ್ಟ್ರಿಕ್ಟ್ನ ಜಿಲ್ಲಾ ನ್ಯಾಯಾಲಯವು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಆತ ಸಲ್ಲಿಸಿದ್ದ ಮೇಲನವಿ ಅರ್ಜಿಯನ್ನು ನೈಂತ್ ಸರ್ಕೀಟ್ನ ಮೇಲನವಿ ನ್ಯಾಯಾಲಯದ ನ್ಯಾಯಾಧೀಶರ ಸಮಿತಿ ವಿಚಾರಣೆ ನಡೆಸಿತ್ತು.
ಭಾರತ-ಅಮೆರಿಕ ಒಪ್ಪಂದ :
ಹಸ್ತಾಂತರ ಆದೇಶದ ಹೇಬಿಯಸ್ ಕಾರ್ಪಸ್ನ ಪರಿಶೀಲನೆಯ ಸೀಮಿತ ವ್ಯಾಪ್ತಿಯ ಅಡಿಯಲ್ಲಿ, ರಾಣಾ ವಿರುದ್ಧದ ಆಪಾದಿತ ಅಪರಾಧವು ಅಮೆರಿಕ ಮತ್ತು ಭಾರತದ ನಡುವಿನ ಹಸ್ತಾಂತರ ಒಪ್ಪಂದದ ನಿಯಮಗಳಿಗೆ ಒಳಪಟ್ಟಿದೆ ಎಂದು ಸಮಿತಿಯು ಅಭಿಪ್ರಾಯಪಟ್ಟಿದೆ. ಹಸ್ತಾಂತರಕ್ಕೆ ವಿನಂತಿಸಲಾದ ವ್ಯಕ್ತಿಯು, ಗಡಿಪಾರಿಗೆ ಮನವಿ ಮಾಡಲಾದ ಅಪರಾಧಕ್ಕಾಗಿ ಶಿಕ್ಷೆಗೆ ಒಳಗಾಗಿದ್ದರೆ ಅಥವಾ ಖುಲಾಸೆಗೊಂಡಿದ್ದರ ಹೊರತಾದ ನಾನ್ ಬಿಸ್ ಐಡೆಮ್ ವಿನಾಯಿತಿಯನ್ನು ಈ ಒಪ್ಪಂದವು ಒಳಗೊಂಡಿದೆ.
ಒಪ್ಪಂದದ ಸರಳ ಅಂಶ, ವಿದೇಶಾಂಗ ಇಲಾಖೆಯ ತಾಂತ್ರಿಕ ವಿಶ್ಲೇಷಣೆ ಮತ್ತು ಇತರ ಸಂಸ್ಥೆಗಳ ಸಂಬಂಧಿತ ಕಾನೂನು ಆಧಾರದಲ್ಲಿ, ಅಪರಾಧ ಎಂಬ ಪದವು ಉಲ್ಲೇಖಿಸಲಾದ ಕೃತ್ಯಗಳಿಗಿಂತ ಹೆಚ್ಚಾಗಿ ಆರೋಪಿಸಲಾದ ಅಪರಾಧವನ್ನು ಸೂಚಿಸುತ್ತದೆ ಮತ್ತು ಪ್ರತಿ ಅಪರಾಧದ ಅಂಶಗಳ ವಿಶ್ಲೇಷಣೆಯ ಅಗತ್ಯವಿದೆ ಎಂದು ಸಮಿತಿಯು ಅಭಿಪ್ರಾಯಪಟ್ಟಿದೆ.
2011 ರಲ್ಲಿ ಪಾಕಿಸ್ತಾನದ ಉಗ್ರ ಸಂಘಟನೆ ಲಷ್ಕರ್-ಎ-ತೋಯ್ಬಾಗೆ ಬೆಂಬಲ ನೀಡಿ ಮುಂಬೈ ದಾಳಿಗೆ ಕಾರಣನಾದ ರಾಣಾನನ್ನು ದೋಷಿ ಎಂದು ಯುಎಸ್ ನ್ಯಾಯಾಲಯ ಘೋಷಿಸಿತ್ತು. ಇನ್ನೊಂದೆಡೆ, ಹಸ್ತಾಂತರದ ಮನವಿಯನ್ನು ರಾಣಾ ಪರ ವಕೀಲರು ವಿರೋಧಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಭಾರತ- ಯುಎಸ್ ಆರೋಪಿಯ ಹಸ್ತಾಂತರ ಒಪ್ಪಂದ ಮಾಡಿಕೊಂಡಿವೆ. ರಾಣಾ ಹಸ್ತಾಂತರವು ಈ ಒಪ್ಪಂದದ ವ್ಯಾಪ್ತಿಯ ಅಡಿಯಲ್ಲಿಯೇ ನಡೆಯುತ್ತದೆ ಎಂದು ತಿಳಿಸಿದ್ದಾರೆ.
2008 ರ ನವೆಂಬರ್ 26ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಮುಂಬೈಗೆ ಆಗಮಿಸಿದ್ದ ಲಷ್ಕರ್-ಎ-ತೊಯ್ಬಾ ಸಂಘಟನೆಯ ಭಯೋತ್ಪಾದಕರು ಸಂಘಟಿತ ಗುಂಡಿನ ದಾಳಿ ನಡೆಸಿದ್ದರು. 300ಕ್ಕೂ ಹೆಚ್ಚು ಮಂದಿ ಗಾಯಗೊಂಡು 166ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಛತ್ರಪತಿ ಶಿವಾಜಿ ಟರ್ಮಿನಸ್ (ಸಿಎಸ್ಟಿ) ರೈಲು ನಿಲ್ದಾಣ, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್ ವ್ಯಾಪಾರ ಮತ್ತು ವಸತಿ ಸಂಕೀರ್ಣ, ಲಿಯೋಪೋಲ್ಡ್ ಕೆಫೆ, ತಾಜ್ ಹೋಟೆಲ್ ಮತ್ತು ಟವರ್ ಮತ್ತು ಒಬೆರಾಯ್-ಟ್ರೈಡೆಂಟ್ ಹೋಟೆಲ್ಗಳಲ್ಲಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು.
ಕಳೆದ ವರ್ಷವೇ ಹಸ್ತಾಂತರ :
2024ರಲ್ಲಿಯೇ ಭಾರತಕ್ಕೆ ತಹವ್ವುರ್ ಹುಸೇನ್ ರಾಣಾನನ್ನು ಹಸ್ತಾಂತರ ಮಾಡಲಾಗುತ್ತದೆ ಎಂಬ ಮಾಹಿತಿ ಇತ್ತು. ಆದರೆ ಈ ಪ್ರಕ್ರಿಯೆಗಳನ್ನು ಕೈಗೊಳ್ಳಲು ಯುಎಸ್ ಸುಪ್ರೀಂಕೋರ್ಟ್ ಒಪ್ಪಿಗೆ ಸಿಕ್ಕಿರಲಿಲ್ಲ. ಡಿಸೆಂಬರ್ನಲ್ಲಿ ಭಾರತಕ್ಕೆ ತಹವ್ವುರ್ ಹುಸೇನ್ ರಾಣಾ ಕರೆತರಲಾಗುತ್ತದೆ ಎಂದು ಮುಂಬೈನ ಜೈಲಿನಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿತ್ತು. ಸೆಪ್ಟೆಂಬರ್ನಲ್ಲಿ ಗಡಿಪಾರು ಮಾಡದಂತೆ ಕೋರಿ ತಹವ್ವುರ್ ಹುಸೇನ್ ರಾಣಾನನ್ನು ಸಲ್ಲಿಕೆ ಮಾಡಿದ್ದ ಮನವಿಯನ್ನು ಕೋರ್ಟ್ ವಜಾಗೊಳಿಸಿತ್ತು. ಹಸ್ತಾಂತರ ಒಪ್ಪಂದದ ಅಡಿಯಲ್ಲಿ ಭಾರತಕ್ಕೆ ಹಸ್ತಾಂತರ ಮಾಡಲು ಅವಕಾಶವಿದೆ ಎಂದು ಹೇಳಿತ್ತು.