ಹಾಸನ,ಅ.15-ಹಾಸನಾಂಬ ದೇವಿಯ ಸಾರ್ವಜನಿಕ ದರ್ಶನದ 6ನೇ ದಿನವಾದ ಇಂದೂ ಸಹ ಸಾಗರೋಪಾಧಿಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದಿದ್ದಾರೆ. ನಿರಂತರ ದರ್ಶನ ಇರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ದರ್ಶನ ಪಡೆಯಲಿದ್ದಾರೆ. ಇಂದೂ ಸಹ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ದೇವಾಲಯದ ಆವರಣ ಹಾಗೂ ಸುತ್ತಮುತ್ತ ಸರಥಿ ಸಾಲುಗಳಲ್ಲಿ ನಿಂತಿದ್ದ ಭಕ್ತರನ್ನು ಮಾತನಾಡಿಸಿ ಮೂಲಸೌಕರ್ಯಗಳ ಪರಿಶೀಲನೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೃಷ್ಣಭೈರೇಗೌಡ ಅವರು, ಕಳೆದ ಐದು ದಿನಗಳಿಂದ 6,40,700 ಮಂದಿ ದರ್ಶನ ಮಾಡಿದ್ದಾರೆ. ಇಂದು ಬೆಳಗ್ಗೆ ಒಂದು ಲಕ್ಷದ 1,22,600 ಮಂದಿ ದರ್ಶನ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು .
ಇಂದು ಒಂದೇ ದಿನ ಭಕ್ತರ ಸಂಖ್ಯೆ 2.50 ಲಕ್ಷ ದಾಟಬಹುದು ಎಂದ ಅವರು ಎಷ್ಟೇ ಜನ ಬಂದರೂ ಎಲ್ಲರಿಗೂ ಸುಗಮ ದರ್ಶನ ಆಗಲಿದೆ. ಎಲ್ಲಾ ವ್ಯವಸ್ಥೆ ಸರಿಯಾಗಿದ್ದು ದರ್ಶನ ಪಡೆಯಲು ಜನರಿಗೆ ಸ್ವಲ್ಪ ಸಮಯ ಹೆಚ್ಚಾಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ನಾಲ್ಕು ಗಂಟೆ ಸಮಯ ತಗುಲುತ್ತಿದ್ದು ಮುಂದಿನ ದಿನಗಳಲ್ಲಿ ಬರುವವರು ನಾಲ್ಕರಿಂದ ಐದು ಗಂಟೆ ಸರತಿ ಸಾಲಿನಲ್ಲಿ ನಿಲ್ಲಲು ತಯಾರಾಗಿ ಬರುವಂತೆ ಸಲಹೆ ನೀಡಿದರು.
ಒಂದು ಸಾವಿರ ,ರೂ.300 ವಿಶೇಷ ದರ್ಶನದ ಟಿಕೆಟ್ ಹಾಗೂ ಲಾಡು ಪ್ರಸಾದ ಮಾರಾಟದಿಂದ 4.21 ಲಕ್ಷ ಹಣ ಬಂದಿದೆ ಕಳೆದ ವರ್ಷಕ್ಕಿಂತ ಹೆಚ್ಚು ಹಣ ಸಂಗ್ರಹವಾಗುತ್ತಿದ್ದು ಆದಾಯ ಬರಲಿ ಬಿಡಲಿ ನಮಗೆ ಜನರಿಗೆ ಶೀಘ್ರ ದರ್ಶನ ಮಾಡಿಸುವುದೇ ಮುಖ್ಯ ಎಂದರು .
ದರ್ಶನೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಜನರು ತುಂಬಾ ಸಂತಸದಿಂದ ದರ್ಶನ ಮಾಡುತ್ತಿದ್ದಾರೆ. ದೇವಿಯ ಕೃಪೆಯಿಂದಾಗಿ ಎಲ್ಲವೂ ಅಚ್ಚುಕಟ್ಟಾಗಿ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಇನ್ನು ಎಂಟು ದಿನ ದರ್ಶನ ಇದೆ.ಎಲ್ಲಾ ದಿನ ಕನಿಷ್ಠ 50 ರಷ್ಟು ಜನರ ಸಂಖ್ಯೆ ಹೆಚ್ಚಾಗುವ ಜೊತೆಗೆ ಸವಾಲು ಎದುರಿಸಬೇಕಾಗಿದೆ ಆದರೂ ಉತ್ತಮ ವ್ಯವಸ್ಥೆ ಯೊಂದಿಗೆ ದರ್ಶನ ಮಾಡಿಸುತ್ತೇವೆ ಎಂದರು.
ಶಿಷ್ಟಾಚಾರ ನಿಯಮದಡಿ ಮಾಜಿ ಸಚಿವ ಗೋಪಾಲಯ್ಯ, ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ ಎಚ್ .ಕೆ ಸುರೇಶ್, ವಿನಯ್ ಗುರೂಜಿ, ನಯನಾ ಮೋಟಮ , ಛಲವಾದಿ ನಾರಾಯಣಸ್ವಾಮಿ, ಪಿಜಿ ಆರ್ ಸಿಂಧ್ಯಾ, ಪ್ರಥಮ್, ಚಿತ್ರ ನಟ ವಸಿಷ್ಠ ಸಿಂಹ, ಹರಿಪ್ರಿಯಾ, ಸೇರಿದಂತೆ ಇತರ ಗಣ್ಯರು ಇಂದು ಹಾಸನಾಂಬಾ ದೇವಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಎಸ್ ಲತಾ ಕುಮಾರಿ,ಜಿ.ಪಂ ಸಿಇಒ ಬಿ.ಆರ್ ಪೂರ್ಣಿಮಾ, ಎಸ್ ಪಿ ಮೊಹಮದ್ ಸುಜಿತಾ, ಸಂಸದ ಶ್ರೀಯಸ್ ಪಟೇಲ್ ಹಾಗೂ ದೇವಸ್ಥಾನ ಆಡಳಿತಾಧಿಕಾರಿ ಮಾರುತಿ ಜೊತೆಯಲ್ಲಿ ಇದ್ದರು.