ಮಾಸ್ಕೋ, ಜೂ.1 – ಪಶ್ಚಿಮ ರಷ್ಯಾದ ಬ್ರಿಯಾನ್ಸ್ ಪ್ರದೇಶದಲ್ಲಿ ಸೇತುವೆ ಕುಸಿದ ಪರಿಣಾಮವಾಗಿ ಪ್ರಯಾಣಿಕರ ರೈಲು ಹಳಿತಪ್ಪಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದು, 30 ಜನರು ಗಾಯಗೊಂಡಿದ್ದಾರೆ. ಅಪಘಾತದ ದೃಶಾವಳಿಗಳು ಎದೆ ಝಲ್ಲೆನಿಸುವಂತಿದೆ. ‘ಈ ದುರಂತವು ಉಕ್ರೇನ್ ಗಡಿಯಲ್ಲಿರುವ ರಷ್ಯಾದ ಬ್ರಿಯಾನ್ಸ್ ಪ್ರದೇಶದಲ್ಲಿ ಸಂಭವಿಸಿದೆ.
2022ರಲ್ಲಿ ರಷ್ಯಾ ಉಕ್ರೇನ್ ಮೇಲೆ ಸಂಪೂರ್ಣ ಆಕ್ರಮಣವನ್ನು ಪ್ರಾರಂಭಿಸಿದಾಗಿನಿಂದ ಈ ಪ್ರದೇಶದಲ್ಲಿ ಹೆಚ್ಚಿನ ಉದ್ವಿಗ್ನತೆ ಕಂಡುಬಂದಿದೆ. ಉಕ್ರೇನ್ ಗಡಿಗೆ ಹೊಂದಿಕೊಂಡಿರುವ ಬ್ರಿಯಾನ್ಸ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ.
ರಷ್ಯಾದ ಅಧಿಕಾರಿಗಳ ಪ್ರಕಾರ, ಸಾರಿಗೆ ಕಾರ್ಯಾಚರಣೆಯಲ್ಲಿ ಅಕ್ರಮ ಹಸ್ತಕ್ಷೇಪ ದ ಪರಿಣಾಮವಾಗಿ ಸೇತುವೆ ಕುಸಿದಿದೆ. ರೈಲು ಮಾಸ್ಕೋದಿಂದ ಕಿಮೋವೊ ಪಟ್ಟಣಕ್ಕೆ ಪ್ರಯಾಣಿಸುತ್ತಿದ್ದಾಗ, ಹಳಿತಪ್ಪಿದ ಸೇತುವೆಗೆ ಡಿಕ್ಕಿ ಹೊಡೆದಿದೆ. ಗಾಯಗೊಂಡವರಲ್ಲಿ ಇಬ್ಬರು ಮಕ್ಕಳು ಸೇರಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಬ್ರಿಯಾನ್ಸ್ ಪ್ರಾಂತ್ಯದ ಗವರ್ನರ್ ಅಲೆಕ್ಸಾಂಡರ್ ಬೊಗೊಮಾಜ್ ತಿಳಿಸಿದ್ದಾರೆ.
ಉಕ್ರೇನ್ನಲ್ಲಿ ರಷ್ಯಾ ಸೇನಾ ಕಾರ್ಯಾಚರಣೆ ಪ್ರಾರಂಭವಾದಾಗಿನಿಂದ, ಬ್ರಿಯಾನ್ಸ್ ಸೇರಿದಂತೆ ಗಡಿ ಪ್ರಾಂತ್ಯಗಳಲ್ಲಿ ಶೆಲ್ ದಾಳಿ ಮತ್ತು ಡೋನ್ ದಾಳಿಗಳು ಹೆಚ್ಚಾಗಿ ನಡೆಯುತ್ತಿವೆ. ಈ ಘಟನೆಗೆ ಉಕ್ರೇನ್ನಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಮಾಸ್ಕೋ ರೈಲ್ವೆ ಪ್ರಕಾರ, ಸಾರಿಗೆ ಕಾರ್ಯಾಚರಣೆಗಳಲ್ಲಿ ಕಾನೂನುಬಾಹಿರ ಹಸ್ತಕ್ಷೇಪದ ಪರಿಣಾಮ ಸೇತುವೆ ಹಾನಿಗೊಳಗಾಗಿದೆ. ರಷ್ಯಾದ ಫೆಡರಲ್ ರಸ್ತೆ ಸಂಸ್ಥೆ ರೋಸಾವೊಡರ್ ರೈಲ್ವೆ ಮಾರ್ಗದ ಬಗ್ಗೆ ಮಾಹಿತಿ ನೀಡಿತ್ತು. ಇದ್ದಕ್ಕಿದ್ದಂತೆ ಸೇತುವೆ ಕುಸಿದು ಬೃಹತ್ ಕಾಂಕ್ರೀಟ್ ತುಂಡುಗಳು ಹಳಿಗಳ ಮೇಲೆ ಬಿದ್ದವು. ಇದು ರೈಲಿನ ಸಂಚಾರಕ್ಕೆ ಅಡ್ಡಿಯಾಯಿತು ಎನ್ನಲಾಗಿದೆ.
ನಜ್ಜುಗುಜ್ಜಾದ ರೈಲು ಬೋಗಿಗಳು ಹರಿದು ಚಲ್ಲಾಪಿಲ್ಲಿಯಾಗಿ ಬಿದ್ದಿರುವುದು, ಸಹಾಯಕ್ಕಾಗಿ ಪರದಾಡುತ್ತಿರುವ ಪ್ರಯಾಣಿಕರ ಚಿತ್ರಣ ಕಂಡುಬಂದಿದೆ. ಸೇತುವೆ ಕುಸಿಯುವ ಕೆಲವೇ ಕ್ಷಣಗಳ ಮೊದಲು ಕೆಲವು ವಾಹನಗಳು ಅಪಾಯದಿಂದ ಪಾರಾಗುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.
ಗಾಯಾಳುಗಳಿಗೆ ತಕ್ಷಣದ ನೆರವಿನ ಭರವಸೆ :
ರೈಲ್ವೆ ಅಪಘಾತದಿಂದ ಗಾಯಗೊಂಡವರಿಗೆ ಅಗತ್ಯವಿರುವ ಎಲ್ಲ ಸಹಾಯವನ್ನು ಮಾಡಲಾಗುತ್ತಿದೆ ಎಂದು ಗವರ್ನರ್ ಬೊಗೊಮಾಜ್ ಹೇಳಿದ್ದಾರೆ. ಈ ದುರಂತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲು ಸರ್ಕಾರವು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ರಷ್ಯಾದ ಅಧಿಕಾರಿಗಳು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಪ್ರಕಾರ, ರಾತ್ರಿಯಿಡೀ ರೈಲಿನಲ್ಲಿ ಸಿಲುಕಿದ್ದ ಜನರನ್ನು ರಕ್ಷಣಾ ಸಿಬ್ಬಂದಿ ಬೇರೆಡೆಗೆ ಸ್ಥಳಾಂತರಿಸುತ್ತಿರುವುದು, ಸುಮಾರು 180 ಸಿಬ್ಬಂದಿ ಕಾರ್ಯಪ್ರವೃತ್ತರಾಗಿರುವ ದೃಶ್ಯ ಕಂಡುಬಂದಿತು.
ಈ ದುರಂತವು ಬ್ರಿಯಾನ್ಸ್ ಪ್ರದೇಶದಲ್ಲಿ ಸಂಭವಿಸಿದೆ. ಇದು ಉಕ್ರೇನ್ ಗಡಿಗೆ ಸಮೀಪದಲ್ಲಿದೆ. ಉಕ್ರೇನ್ ಯುದ್ಧದ ನಂತರ ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ, ಸೇತುವೆ ಕುಸಿತವು ಉದ್ದೇಶಪೂರ್ವಕ ಕೃತ್ಯವೇ ಅಥವಾ ಬೇರೆ ಕಾರಣವಿದೆಯೇ ಎಂದು ತನಿಖೆ ಮಾಡಲಾಗುತ್ತಿದೆ.