Saturday, April 26, 2025
Homeರಾಜ್ಯರಾಜ್ಯದಲ್ಲಿ 92 ಪಾಕ್ ಪ್ರಜೆಗಳು, ಬೆಂಗಳೂರಲ್ಲಿ ನಾಲ್ವರು

ರಾಜ್ಯದಲ್ಲಿ 92 ಪಾಕ್ ಪ್ರಜೆಗಳು, ಬೆಂಗಳೂರಲ್ಲಿ ನಾಲ್ವರು

92 Pakistani nationals in the state, four in Bengaluru

ಬೆಂಗಳೂರು, ಏ.26– ಅಧಿಕೃತವಾಗಿ ರಾಜ್ಯದಲ್ಲಿ 92 ಪಾಕ್ ಪ್ರಜೆಗಳು ವಾಸವಾಗಿರುವುದು ದೃಢಪಟ್ಟಿದ್ದು, ಅವರಲ್ಲಿ ಕೆಲವರು ಇನ್ನೆರಡು ದಿನಗಳಲ್ಲಿ ದೇಶ ತೊರೆಯಬೇಕಾಗಿದೆ. ನಗರದಲ್ಲಿ ನಾಲ್ಕು ಮಂದಿ ಪಾಕ್ ವಲಸಿಗರಿದ್ದು ರಾಜ್ಯದ ಇತರ ಭಾಗಗಳಲ್ಲಿ ಒಟ್ಟು 88 ಮಂದಿ ಇದ್ದಾರೆ. ಇವರಲ್ಲಿ 88 ಮಂದಿ ಲಾಂಗ್ ಟರ್ಮ್ ಹಾಗೂ ಉಳಿದವರು ಶಾರ್ಟ್ ಟರ್ಮ್ ವೀಸಾ ಪಡೆದುಕೊಂಡಿದ್ದಾರೆ.

ಶಾರ್ಟ್‌ಟರ್ಮ್ ವೀಸಾ ಪಡೆದಿರುವ ಪಾಕ್ ವಲಸಿಗರು ದೇಶ ತೊರೆಯಲೇಬೇಕಾಗಿರುವುದರಿಂದ ಬೇರೆ ಬೇರೆ ವೀಸಾದಲ್ಲಿ ರಾಜ್ಯಕ್ಕೆ ಬಂದಿರುವ ಪಾಕ್ ವಲಸಿಗರು ನಾಳೆಯೊಳಗೆ ದೇಶ ತೊರೆಯಬೇಕಾಗಿದೆ. ಇನ್ನು ಮೆಡಿಕಲ್ ವೀಸಾದಲ್ಲಿ ಬಂದಿರುವವರು ಏ.27 ರಂದು ದೇಶ ಬಿಡಬೇಕಾಗಿದೆ. ಒಟ್ಟಾರೆ ರಾಜ್ಯದಲ್ಲಿರುವ 92 ಪಾಕ್ ಪ್ರಜೆಗಳು ಪಾಸ್‌ಪೋರ್ಟ್ ಹೊಂದಿದ್ದು ಅಧಿಕೃತವಾಗಿ ರಾಜ್ಯದಲ್ಲಿ ನೆಲೆಸಿರುವುದು ಪತ್ತೆಯಾಗಿದೆ.

ಪಾಕ್ ವಲಸಿಗರಿಗೆ ಈಗಾಗಲೇ ನೋಟೀಸ್ ಜಾರಿ ಮಾಡಿದ್ದು, ನಿಗದಿತ ಅವಧಿಯೊಳಗೆ ದೇಶ ತೊರೆದು ಹೋಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅದೇ ರೀತಿ ನಗರದ ವಿವಿಧ ಭಾಗಗಳಲ್ಲಿರುವ ನಾಲ್ವರು ಪಾಕ್ ವಲಸಿಗರಿಗೂ ನೋಟೀಸ್ ಜಾರಿ ಮಾಡಲಾಗಿದೆ. ಈಗ ಪತ್ತೆಯಾಗಿರುವ 92 ಮಂದಿಯೂ ಅಧಿಕೃತ ವಲಸೆಗಾರರಾಗಿದ್ದಾರೆ. ಆದರೆ, ಅಕ್ರಮವಾಗಿ ರಾಜ್ಯದಲ್ಲಿ ಬೀಡುಬಿಟ್ಟಿರುವ ಅಕ್ರಮ ವಲಸಿಗರ ಸಂಖ್ಯೆ ಇನ್ನು
ದೃಢಪಟ್ಟಿಲ್ಲ, ಮುಂದಿನ ದಿನಗಳಲ್ಲಿ ಅವರನ್ನು ಪತ್ತೆ ಹಚ್ಚಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

|ರಾಜ್ಯದ ಕೆಲವು ಮುಸ್ಲಿಂ ಕುಟುಂಬಗಳು ಹಲವು ವರ್ಷಗಳಿಂದ ಪಾಕಿಸ್ತಾನದ ಕುಟುಂಬಗಳ ಜತೆ ವೈವಾಹಿಕ ಸಂಬಂಧ ಹೊಂದಿವೆ. ಹೀಗಾಗಿ ರಾಜ್ಯದಲ್ಲಿನ 88 ಮಂದಿ ಪಾಕ್ ಪ್ರಜೆಗಳಿಗೆ ವೈವಾಹಿಕ ಸಂಬಂಧ ಇದೆ. ಇವರುಗಳು ಲಾಂಗ್‌ ಟರ್ಮ್ ವೀಸಾಗಳನ್ನು ಪಡೆದಿದ್ದಾರೆಂದು ತಿಳಿದುಬಂದಿದೆ.

ಶೈಕ್ಷಣಿಕ ವೀಸಾ ಮೇಲೆ ಬಂದಿರುವ ಪಾಕ್ ವಿದ್ಯಾರ್ಥಿಯೊಬ್ಬರು ದಾವಣಗೆರೆ ಜಿಲ್ಲೆಯ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ನಗರದ ಬಸವನಗುಡಿ, ಮೈಸೂರು, ಮಂಗಳೂರು, ಭಟ್ಕಳ ಸೇರಿದಂತೆ ರಾಜ್ಯದ ವಿವಿಧ ಕಡೆ ಈ 88 ಮಂದಿ ವಾಸವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ 15 ಪಾಕಿಸ್ತಾನಿಗಳಿದ್ದು, ಅವರಲ್ಲಿ ಕೆಲವು ಪಾಕ್ ಮಹಿಳೆಯರು ಸ್ಥಳೀಯ ಯುವಕರನ್ನು ವಿವಾಹವಾಗಿದ್ದಾರೆ. ಅವರಿಗೆ ಮಕ್ಕಳು ಇರುವುದರಿಂದ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶ ಇಲ್ಲಿನ ಪಾಕ್ ಪ್ರಜೆಗಳಿಗೆ ಅನ್ವಯವಾಗುವುದಿಲ್ಲ ಎಂದು ಎಸ್‌ಪಿ ಎಂ.ನಾರಾಯಣ ತಿಳಿಸಿದ್ದಾರೆ.

ಕಾರಣವೇನು? ಮಿನಿ ಸ್ಪಿಜರ್‌ಲ್ಯಾಂಡ್ ಖ್ಯಾತಿಯ ಕಾಶ್ಮೀರದ ಪಹಲ್ಟಾಮ್‌ನಲ್ಲಿ ಉಗ್ರರು 26 ಮಂದಿ ಅಮಾಯಕ ಹಿಂದೂ ಪ್ರವಾಸಿಗರನ್ನು ಗುಂಡಿಟ್ಟು ಕೊಂದ ಘಟನೆಯ ನಂತರ ನೆರೆಯ ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಕೆಲ ನಿರ್ಬಂಧಗಳನ್ನು ವಿಧಿಸಿದೆ. ಅದರಲ್ಲಿ ದೇಶದಲ್ಲಿ ನೆಲೆಸಿರುವ ಎಲ್ಲ ರೀತಿಯ ಪಾಕ್ ಪ್ರಜೆಗಳೂ ಕೂಡಲೇ ದೇಶ ಬಿಟ್ಟು ಹೋಗುವಂತೆ ಸೂಚನೆ ನೀಡಲಾಗಿದೆ.

ಅದೇ ರೀತಿ ದೇಶದ ಎಲ್ಲಾ ರಾಜ್ಯಗಳು ಕೇಂದ್ರ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶೀಸಿರುವುದರಿಂದ ಆಯಾ ರಾಜ್ಯಗಳಲ್ಲಿ ನೆಲೆಸಿರುವ ಪಾಕ್ ಪ್ರಜೆಗಳಿಗೆ ದೇಶ ತೊರೆಯುವಂತೆ ನೋಟೀಸ್ ನೀಡಲಾಗುತ್ತಿದೆ.

RELATED ARTICLES

Latest News