ಬೆಂಗಳೂರು,ಮೇ27- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ವಿಷಯಗಳಲ್ಲೂ ಪಳಗಿರುವ ಹಳೆಯ ಹುಲಿ. ಅವರಿಗೆ ಯಾವ ಸಂದರ್ಭದಲ್ಲಿ ಯಾವ ತಂತ್ರ ಹೂಡಬೇಕೆಂಬುದು ಗೊತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಸುಮನೆ ಕೂರುವ ಜಾಯಮಾನದವರಲ್ಲ. ಯಾವಾಗ, ಯಾವ ಸಂದರ್ಭದಲ್ಲಿ ಏನು ದಾಳ ಉರುಳಿಸಬೇಕು ಎಂಬುದು ಚೆನ್ನಾಗಿ ಗೊತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.
ಸಿದ್ದರಾಮಯ್ಯ ರಾಜೀನಾಮೆ ಕೊಡುವವರೆಗೂ ಗ್ಯಾರಂಟಿಯಿಲ್ಲ. ಮೂರು ವರ್ಷದ ಸರ್ಕಾರದಲ್ಲಿ 2.5 ವರ್ಷ ಸಿಎಂ ಬದಲಾವಣೆ ಬಗ್ಗೆಯೇ ಚರ್ಚೆಯಾಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿಯಿಲ್ಲ. ಒಂದು ಕಡೆ ಬರಗಾಲ ಮತ್ತೊಂದು ಕಡೆ ನೆರೆ ಬರುತ್ತಿದೆ. ಬೆಂಗಳೂರು ಮಳೆಯಿಂದ ಮುಳುಗುತ್ತಿದೆ, ಗಾರ್ಬೆಜ್ನ ಹಗರಣ ನಡೆಯುತ್ತಿದೆ. ಇವೆಲ್ಲವನ್ನೂ ಬಿಟ್ಟು ಖುರ್ಚಿಗಾಗಿ ಹೊಡೆದಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಖುರ್ಚಿ ಉಳಿಸುವ ಯತ್ನ ಮಾಡುತ್ತಿದ್ದರೆ, ಡಿಕೆಶಿ ಸಿಎಂ ಆಗುವ ಯತ್ನ ಮಾಡುತ್ತಿದ್ದಾರೆ. ಈ ಮಧ್ಯೆ ರಾಜ್ಯದ ಜನರು ಬಡವರಾಗಿದ್ದಾರೆ. ಯಾವುದೇ ಮಂತ್ರಿಗಳು ಜಿಲ್ಲಾ ಪ್ರವಾಸ ಮಾಡುತ್ತಿಲ್ಲ, ಅಭಿವೃದ್ಧಿಗೆ ಹಣವಿಲ್ಲ. ಜನರ ಕೆಲಸ ಮಾಡಲು 135 ಸೀಟ್ ಗೆಲ್ಲಿಸಿದ್ದಾರೆ. ಜನರ ಕೆಲಸ ಮಾಡಿ ಎಂದು ಕಿಡಿಕಾರಿದರು.
