Homeರಾಷ್ಟ್ರೀಯಮೀನಾಕ್ಷಿ ನಟರಾಜನ್‌ ನಾಮಪತ್ರ ತಿರಸ್ಕಾರ: ಚುನಾವಣಾ ಆಯೋಗಕ್ಕೆ ಮೊರೆ ಹೋಗುವಂತೆ ಸುಪ್ರೀಂ ಸೂಚನೆ

ಮೀನಾಕ್ಷಿ ನಟರಾಜನ್‌ ನಾಮಪತ್ರ ತಿರಸ್ಕಾರ: ಚುನಾವಣಾ ಆಯೋಗಕ್ಕೆ ಮೊರೆ ಹೋಗುವಂತೆ ಸುಪ್ರೀಂ ಸೂಚನೆ

SC points Congress' Meenakshi Natarajan to EC remedy in nomination dispute

ನವದೆಹಲಿ, ಜೂನ್‌ 12- ಅಭ್ಯರ್ಥಿಯ ನಾಮಪತ್ರವನ್ನು ಚುನಾವಣಾಧಿಕಾರಿ ತಿರಸ್ಕರಿಸಿದ ಬಳಿಕ ಪರಿಹಾರಕ್ಕಾಗಿ ಸಂಪರ್ಕಿಸಬೇಕಾದ ಸೂಕ್ತ ವೇದಿಕೆ ಚುನಾವಣಾ ಆಯೋಗವೇ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಮಧ್ಯಪ್ರದೇಶ ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌‍ ನಾಯಕಿ ಮೀನಾಕ್ಷಿ ನಟರಾಜನ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.
ನ್ಯಾಯಮೂರ್ತಿಗಳಾದ ಪ್ರಶಾಂತ್‌ ಕುಮಾರ್‌ ಮಿಶ್ರಾ ಮತ್ತು ಅತುಲ್‌ ಎಸ್‌‍. ಚಂದುಕರ್‌ ಅವರಿದ್ದ ಪೀಠವು, ಈ ಹಂತದಲ್ಲಿ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸಿದ ಯಾವುದೇ ತೀರ್ಪು ಇದೆಯೇ ಎಂದು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿತು.

ಚುನಾವಣಾಧಿಕಾರಿಯ ನಿರ್ಧಾರ ಎಷ್ಟೇ ತಪ್ಪಾಗಿರಲಿ, ನಾಮಪತ್ರ ತಿರಸ್ಕೃತವಾದ ಬಳಿಕ ಸಾಮಾನ್ಯವಾಗಿ ಪರಿಹಾರಕ್ಕಾಗಿ ಬೇರೆ ವೇದಿಕೆಯನ್ನು ಆಶ್ರಯಿಸಬೇಕಾಗುತ್ತದೆ. ಇಂತಹ ಹಂತದಲ್ಲಿ ಈ ನ್ಯಾಯಾಲಯ ಮಧ್ಯಪ್ರವೇಶಿಸಿರುವ ಯಾವುದೇ ತೀರ್ಪು ಇದೆಯೇ?ಎಂದು ಪೀಠ ಪ್ರಶ್ನಿಸಿತು.

ಮೀನಾಕ್ಷಿ ನಟರಾಜನ್‌ ಪರ ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ ವಾದ ಮಂಡಿಸಿ, ಅಭ್ಯರ್ಥಿಯು ಬಹಿರಂಗಪಡಿಸಬೇಕಾದ ಕ್ರಿಮಿನಲ್‌ ಪ್ರಕರಣವೆಂದರೆ ಕನಿಷ್ಠ ಎರಡು ವರ್ಷಗಳ ಶಿಕ್ಷೆ ವಿಧಿಸಬಹುದಾದ ಪ್ರಕರಣವಾಗಿರಬೇಕು ಎಂದು ಹೇಳಿದರು.

ಪ್ರಸ್ತುತ ಪ್ರಕರಣದಲ್ಲಿ ಕೇವಲ ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಿದ್ದು, ಅದನ್ನು ಅಫಿಡವಿಟ್‌ನಲ್ಲಿ ನಮೂದಿಸದ ಕಾರಣಕ್ಕೆ ನಾಮಪತ್ರ ತಿರಸ್ಕರಿಸಿರುವುದು ಸರಿಯಲ್ಲ ಎಂದು ಅವರು ವಾದಿಸಿದರು.

ಜನಪ್ರತಿನಿಧಿಗಳ ಕಾಯ್ದೆಯಡಿ ಕ್ರಿಮಿನಲ್‌ ಪ್ರಕರಣದ ಮಾಹಿತಿ ಬಹಿರಂಗಪಡಿಸಿಲ್ಲ ಎಂಬ ಕಾರಣ ನೀಡಿ ಮಧ್ಯಪ್ರದೇಶ ರಾಜ್ಯಸಭೆ ಚುನಾವಣೆಯ ನಾಮಪತ್ರವನ್ನು ತಪ್ಪಾಗಿ ತಿರಸ್ಕರಿಸಲಾಗಿದೆ ಎಂದು ಸಿಂಘ್ವಿ ಹೇಳಿದರು.

ರಾಜ್ಯಸಭೆ ಚುನಾವಣೆಯ ಚುನಾವಣಾಧಿಕಾರಿ ಅರವಿಂದ್‌ ಶರ್ಮಾ ಹೊರಡಿಸಿದ್ದ ಆದೇಶದಲ್ಲಿ, ಮೀನಾಕ್ಷಿ ನಟರಾಜನ್‌ ಸಲ್ಲಿಸಿದ್ದ ಫಾರ್ಮ್‌-26 ಅಫಿಡವಿಟ್‌ ಅಪೂರ್ಣವಾಗಿದೆ ಎಂದು ಉಲ್ಲೇಖಿಸಲಾಗಿತ್ತು.

ಲಭ್ಯ ದಾಖಲೆಗಳನ್ನು ಪರಿಶೀಲಿಸಿದಾಗ, ನ್ಯಾಯಾಲಯದಲ್ಲಿ ದಾಖಲಾಗಿದ್ದ ಒಂದು ದೂರಿನ ವಿವರವನ್ನು ಅವರು ಅಫಿಡವಿಟ್‌ನಲ್ಲಿ ನಮೂದಿಸಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.
ಮಧ್ಯಪ್ರದೇಶ ವಿಧಾನಸಭೆಯ ಅಧಿಕಾರಿಯೊಬ್ಬರ ಪ್ರಕಾರ, ಆಡಳಿತಾರೂಢ ಬಿಜೆಪಿ ಅಭ್ಯರ್ಥಿ ಮಹೇಶ್‌ ಕೇವಟ್‌‍ ಅವರು ಮೀನಾಕ್ಷಿ ನಟರಾಜನ್‌ ವಿರುದ್ಧ ಚುನಾವಣಾಧಿಕಾರಿಗೆ ದೂರು ನೀಡಿದ್ದರು.

ತೆಲಂಗಾಣದಲ್ಲಿ ತಮ ವಿರುದ್ಧ ದಾಖಲಾಗಿದ್ದ ಪ್ರಕರಣದ ಮಾಹಿತಿಯನ್ನು ಅಫಿಡವಿಟ್‌ನಲ್ಲಿ ಉಲ್ಲೇಖಿಸಿಲ್ಲ ಎಂದು ಆರೋಪಿಸಿ ಅವರು ದೂರು ಸಲ್ಲಿಸಿದ್ದರು.ಸದ್ಯ ಮೀನಾಕ್ಷಿ ನಟರಾಜನ್‌ ಅವರ ಅರ್ಜಿಯ ವಿಚಾರಣೆಯನ್ನು ಮುಂದುವರಿಸಿರುವ ಸುಪ್ರೀಂ ಕೋರ್ಟ್‌, ಇಂತಹ ಪ್ರಕರಣಗಳಲ್ಲಿ ತನ್ನ ಮಧ್ಯಪ್ರವೇಶಕ್ಕೆ ಸಂಬಂಧಿಸಿದ ಹಿಂದಿನ ತೀರ್ಪುಗಳನ್ನು ಸಲ್ಲಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿದೆ.

ಈ ಮೂಲಕ, ನಾಮಪತ್ರ ತಿರಸ್ಕಾರಕ್ಕೆ ಸಂಬಂಧಿಸಿದ ವಿವಾದಗಳಲ್ಲಿ ಚುನಾವಣಾ ಆಯೋಗದ ಪಾತ್ರ ಮತ್ತು ನ್ಯಾಯಾಂಗದ ಮಧ್ಯಪ್ರವೇಶದ ಮಿತಿಗಳ ಕುರಿತು ಮಹತ್ವದ ಕಾನೂನು ಚರ್ಚೆಗೆ ಈ ಪ್ರಕರಣ ವೇದಿಕೆಯಾಗುವ ಸಾಧ್ಯತೆ ಇದೆ.

RELATED ARTICLES

Latest News