Homeರಾಜ್ಯದುರ್ಬಲಗೊಂಡ ನೈಋತ್ಯ ಮುಂಗಾರು, ರಾಜ್ಯದಲ್ಲಿ ಹೆಚ್ಚಾಯ್ತು ಬರದ ಛಾಯೆ

ದುರ್ಬಲಗೊಂಡ ನೈಋತ್ಯ ಮುಂಗಾರು, ರಾಜ್ಯದಲ್ಲಿ ಹೆಚ್ಚಾಯ್ತು ಬರದ ಛಾಯೆ

Weak southwest monsoon, drought situation in the state has increased

ಬೆಂಗಳೂರು, ಜು. 12-ನೈಋತ್ಯ ಮುಂಗಾರು ಮತ್ತೆ ರಾಜ್ಯದಲ್ಲಿ ದುರ್ಬಲಗೊಂಡಿದ್ದು, ಮಳೆ ಕೊರತೆಯಿಂದಾಗಿ ಬರದ ಛಾಯೆ ತೀವ್ರವಾಗತೊಡಗಿದೆ. ಜುಲೈ ತಿಂಗಳ ಮೊದಲ ವಾರದಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರಿ ಮಳೆಯಾದ ಪರಿಣಾಮ ಪ್ರಮುಖ ಜಲಾಶಯಗಳ ಒಳಹರಿವು ಹೆಚ್ಚಾಗಿ ನೀರಿನ ಸಂಗ್ರಹದಲ್ಲೂ ಏರಿಕೆಯಾಗಿತ್ತು. ಈಗ ಮಳೆ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಒಳಹರಿವು ಕ್ಷೀಣಿಸತೊಡಗಿದೆ.

ರಾಜ್ಯದ ಒಳನಾಡಿನಲ್ಲಿ ಮಳೆ ಕೊರತೆ ಉಂಟಾಗಿ ಮುಂಗಾರು ಹಂಗಾಮಿನ ಬೆಳೆಗಳ ಬಿತ್ತನೆಗೆ ಭಾರೀ ಹಿನ್ನಡೆ ಉಂಟಾಗಿದೆ. ಉತ್ತರ ಒಳನಾಡಿನ ಬಹಳಷ್ಟು ಕಡೆ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಮಾತ್ರ ಸಾಧಾರಣ ಮಳೆಯಾಗಿದೆ. ಮುಂಗಾರು ಮಳೆ ವಾಡಿಕೆಗಿಂತ ಕಡಿಮೆಯಾಗಿದ್ದು, ಬರದ ಛಾಯೆ ಜುಲೈನಲ್ಲೇ ಕಂಡು ಬರುತ್ತಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಜುಲೈ ಒಂದರಿಂದ ಜು.10ರವರೆಗೆ ರಾಜ್ಯದಲ್ಲಿ ವಾಡಿಕೆ ಮಳೆಯಾಗಿದೆ. ಅಂದರೆ, ವಾಡಿಕೆಯ 84 ಮಿ.ಮೀ. ಮಳೆಗೆ 85 ಮಿ.ಮೀ.ನಷ್ಟು ಮಳೆಯಾಗಿದೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.

ಆದರೆ, ದಕ್ಷಿಣ ಒಳನಾಡಿನಲ್ಲಿ ಶೇ.58ರಷ್ಟು ಹಾಗೂ ಉತ್ತರ ಒಳನಾಡಿನಲ್ಲಿ ಶೇ.6ರಷ್ಟು ಮಳೆ ಕೊರತೆ ಉಂಟಾಗಿದೆ. ದಕ್ಷಿಣ ಒಳನಾಡಿನಲ್ಲಿ 21 ಮಿ.ಮೀ.ಗೆ ಕೇವಲ 9 ಮಿ.ಮೀ.ನಷ್ಟು ಮಾತ್ರ ಮಳೆಯಾಗಿದ್ದು, ತೀವ್ರ ಮಳೆ ಕೊರತೆ ಎದುರಿಸುವಂತಾಗಿದೆ.

ಜೂನ್‌ ಒಂದರಿಂದ ಜು.10ರವರೆಗೆ ರಾಜ್ಯದ ವಾಡಿಕೆ ಮಳೆ ಪ್ರಮಾಣ 284 ಮಿ.ಮೀ. ಆಗಿದ್ದು, 201 ಮಿ.ಮೀ.ನಷ್ಟು ಮಾತ್ರ ಮಳೆಯಾಗಿದೆ. ಶೇ. 29 ರಷ್ಟು ಮಳೆ ಕೊರತೆ ಕಂಡುಬಂದಿದೆ. ದಕ್ಷಿಣ ಒಳನಾಡಿನಲ್ಲಿ ಶೇ.18, ಉತ್ತರ ಒಳನಾಡಿನಲ್ಲಿ ಶೇ. 23, ಮಲೆನಾಡಿನಲ್ಲಿ ಶೇ.32 ಹಾಗೂ ಕರಾವಳಿ ಭಾಗದಲ್ಲಿ ಶೇ.30 ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.

ಕಳೆದ ಜನವರಿಯಿಂದ ಜುಲೈ 10ರ ನಡುವಿನ ಅವಧಿಯಲ್ಲಿ ಅಂದರೆ ಕಳೆದ ಆರು ತಿಂಗಳಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಶೇ.18ರಷ್ಟು ಕಡಿಮೆ ಮಳೆಯಾಗಿದೆ. ಉತ್ತರ ಒಳನಾಡು ಹೊರತುಪಡಿಸಿದರೆ, ಉಳಿದೆಲ್ಲಾ ಭಾಗದಲ್ಲೂ ಮಳೆ ಕೊರತೆ ಉಂಟಾಗಿದೆ. ಇನ್ನೆರಡು ವಾರದಲ್ಲಿ ಮಳೆ ಚೇತರಿಕೆಯಾಗದೇ ಇದೇ ಪರಿಸ್ಥಿತಿ ಮುಂದುವರೆದರೆ ಬರ ಪರಿಸ್ಥಿತಿ ಎದುರಿಸಬೇಕಾಗುತ್ತದೆ.

RELATED ARTICLES

Latest News