Homeರಾಜ್ಯಕಂಚಿನ ಪದಕ ಗೆದ್ದ ಪ್ಯಾರಾ ಅಥ್ಲೀಟ್‌ ಶಿಲ್ಪಾಗೆ ಎಚ್‌ಡಿಕೆ ಅಭಿನಂದನೆ

ಕಂಚಿನ ಪದಕ ಗೆದ್ದ ಪ್ಯಾರಾ ಅಥ್ಲೀಟ್‌ ಶಿಲ್ಪಾಗೆ ಎಚ್‌ಡಿಕೆ ಅಭಿನಂದನೆ

ನವದೆಹಲಿ,ಆ.5- ಪ್ರಸಕ್ತ 2026ರ ಕಾಮನ್‌ವೆಲ್ತ್‌‍ ಕ್ರೀಡಾಕೂಟದ ಮಹಿಳೆಯರ ಶಾಟ್‌ಪುಟ್‌-57 ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಭಾರತದ ಪ್ಯಾರಾ ಅಥ್ಲೀಟ್‌, ಹೆಮ್ಮೆಯ ಕನ್ನಡತಿ ಶಿಲ್ಪಾ ಕೆ.ಶೈಲಾ ಅವರನ್ನು ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರು ನವದೆಹಲಿಯ ತಮ ನಿವಾಸದಲ್ಲಿ ಇಂದು ಸತ್ಕರಿಸಿ ಗೌರವಿಸಿದರು.ಇಲ್ಲಿನ ತಮ ನಿವಾಸಕ್ಕೆ ಶಿಲ್ಪಾ ಅವರನ್ನು ಹಾಗೂ ಅವರ ಇಬ್ಬರು ತರಬೇತುದಾರರನ್ನು ಬರಮಾಡಿಕೊಂಡು ಗೌರವಿಸಿದ ಸಚಿವರು, ಶಿಲ್ಪಾ ಅವರ ಸಾಧನೆ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಿಲ್ಪಾ ಅವರ ಹಿನ್ನೆಲೆ, ಅವರ ಈವರೆಗಿನ ಸಾಧನೆ ಹಾಗೂ ಅವರ ತಂದೆ-ತಾಯಿ ಇನ್ನಿತರ ಅಂಶಗಳ ಬಗ್ಗೆ ಮಾಹಿತಿ ಪಡೆದುಕೊಂಡ ಅವರು, ಕಾಮನ್‌ವೆಲ್ತ್‌‍ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿರುವ ನಿಮ ಸಾಧನೆ ಪ್ರೇರಣಾದಾಯಕ, ಐತಿಹಾಸಿಕ. ನೀವು ನನ್ನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕೆ.ಆರ್‌.ನಗರ ತಾಲೂಕಿನವರು. ಯುವ ತಲೆಮಾರಿಗೆ ನೀವು ಮಾದರಿ ಆಗಿದ್ದೀರಿ ಎಂದು ಪ್ರಶಂಸಿದರು.

ಇದೇ ಸಂದರ್ಭದಲ್ಲಿ ಶಿಲ್ಪಾ ಅವರ ತರಬೇತುದಾರರಾದ ಸತ್ಯನಾರಾಯಣ ಹಾಗೂ ಪುಷ್ಪಾ ನಿರಂಜನ್‌ ಪ್ರಸಾದ್‌ ಅವರನ್ನು ಸಚಿವರು ಸತ್ಕರಿಸಿದರು. ಕೆ.ಆರ್‌.ನಗರ ತಾಲ್ಲೂಕಿನ ಕಂಚುಗಾರಕೊಪ್ಪಲು ಗ್ರಾಮದ ಸಾಮಾನ್ಯ ರೈತ ಕುಟುಂಬದ ಕುಡಿಯಾದ ಶಿಲ್ಪಾ ಅವರು ತಮ ನಾಲ್ಕನೇ ವಯಸ್ಸಿನಲ್ಲಿದ್ದಾಗಲೇ ಭೀಕರ ಅಪಘಾತದಲ್ಲಿ ಎಡಗಾಲು ಕಳೆದುಕೊಂಡು ಅಂಗವೈಕಲ್ಯಕ್ಕೆ ತುತ್ತಾಗಿದ್ದರು. ಆ ನೋವು ಮತ್ತು ಅಂಗವೈಕಲ್ಯವನ್ನು ದಿಟ್ಟತನದಿಂದ ಮೆಟ್ಟಿ ನಿಂತ ಅವರು, ತಮ ಧೃಡ ಸಂಕಲ್ಪದೊಂದಿಗೆ ಇಡೀ ರಾಷ್ಟ್ರವೇ ಹೆಮೆಪಡುವ ಸಾಧನೆ ಮಾಡಿದ್ದಾರೆ ಎಂದು ಸಚಿವರು ಶ್ಲಾಘಿಸಿದರು.

ಶಿಲ್ಪಾ ಅವರ ಸಾಧನೆಯನ್ನು ಕಂಡು ನಾನು ಬಹಳ ಸಂತೋಷಪಟ್ಟಿದ್ದೇನೆ. ಗ್ರಾಮೀಣ ಪ್ರದೇಶದ ಹೆಣ್ಣುಮಗಳು, ಅದರಲ್ಲಿಯೂ ವಿಕಲಚೇತನ ಹೆಣ್ಣುಮಗಳು ಇಂಥ ಅನನ್ಯ ಸಾಧನೆ ಮಾಡಿರುವುದು ಸಮಾಜಕ್ಕೆ ಮತ್ತು ಯುವಜನತೆಗೆ ದಾರಿದೀಪ ಎನ್ನುವುದು ನನ್ನ ಅಭಿಪ್ರಾಯ. ಸದೃಢ ಇಚ್ಛಾಶಕ್ತಿ ಇದ್ದರೆ ಮಾತ್ರ ಯಾವುದೇ ಸಾಧನೆ ಕಷ್ಟವಲ್ಲ ಎಂಬುದನ್ನು ಅವರು ಸಾಭೀತುಪಡಿಸಿದ್ದಾರೆ ಎಂದು ಕುಮಾರಸ್ವಾಮಿ ಮೆಚ್ಚುಗೆ ಸೂಚಿಸಿದ್ದಾರೆ.

RELATED ARTICLES
spot_img

Latest News