ಬೆಂಗಳೂರು,ಆ.10- ನೆಲಮಂಗಲದ ಪ್ರಸಿದ್ಧ ಶಿವಗಂಗೆ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದ ಸಾಫ್್ಟವೇರ್ ಎಂಜಿನಿಯರ್ ಸುಳಿವು ಮೂರು ದಿನಗಳು ಕಳೆದರೂ ಇನ್ನೂ ಸಿಕ್ಕಿಲ್ಲ. ಮಧ್ಯಪ್ರದೇಶದ ಇಂದೋರ್ ಮೂಲದ ಟೆಕ್ಕಿ ಅದ್ವೈತ್ ಉಪಾಧ್ಯಾಯ (31) ಕಾಡುಗೋಡಿಯಲ್ಲಿ ವಾಸವಾಗಿದ್ದರು.
ಶುಕ್ರವಾರ ಬೈಕ್ನಲ್ಲಿ ಚಾರಣಕ್ಕೆಂದು ಶಿವಗಂಗೆ ಬೆಟ್ಟಕ್ಕೆ ಹೋಗಿದ್ದ ಅದ್ವೈತ್ ಬೆಟ್ಟದ ಕೆಳಗೆ ಬೈಕ್ ನಿಲ್ಲಿಸಿ ಹೋದವರು ಇದುವರೆಗೂ ಪತ್ತೆಯಾಗಿಲ್ಲ.ಕಳೆದ ಮೂರು ದಿನದಿಂದಲೂ ಕಾಡುಗೋಡಿ ಹಾಗೂ ದಾಬಸ್ಪೇಟೆ ಪೊಲೀಸರು, ಅರಣ್ಯ ಇಲಾಖೆ, ಎಸ್ಡಿಆರ್ಎಫ್ನ ಅಧಿಕಾರಿಗಳೂ ಸೇರಿದಂತೆ 80 ಮಂದಿಯ ತಂಡಗಳು ಟೆಕ್ಕಿಯ ಶೋಧ ಕಾರ್ಯದಲ್ಲಿ ತೊಡಗಿವೆ.
10ಕ್ಕೂ ಹೆಚ್ಚು ಡ್ರೋನ್ ಕ್ಯಾಮೆರಾಗಳ ಮೂಲಕ ಬೆಟ್ಟದ ಸುತ್ತಲೂ ಹುಡುಕಾಡಿದ್ದಾರೆ. ಕತ್ತಲು ಆಗುತ್ತಿದ್ದಂತೆ ಅಧಿಕಾರಿಗಳು ಶೋಧ ಕಾರ್ಯ ನಿಲ್ಲಿಸಿ ಬೆಳಗಾಗುತ್ತಿದ್ದಂತೆ ಮತ್ತೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಟ್ರೆಕ್ಕಿಂಗ್ ಹೋಗಿದ್ದ ಅದ್ವೈತ್ ಉಪಾಧ್ಯಾಯ ಬೆಟ್ಟ ಏರುವ ಕೊನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆತನ ಮೊಬೈಲ್ ಟವರ್ ಕೊನೆಯದಾಗಿ ಈ ಸ್ಥಳದಲ್ಲೇ ಸ್ಥಗಿತವಾಗಿದೆ. ಪೊಲೀಸರು ಟೆಕ್ಕಿ ವಾಸವಾಗಿದ್ದ ಮನೆಯನ್ನು ಪರಿಶೀಲಿಸಿ ಲ್ಯಾಪ್ಟಾಪ್ ವಶಕ್ಕೆ ಪಡೆದು ಅದರಲ್ಲಿರುವ ಮಾಹಿತಿಗಳನ್ನು ತಪಾಸಣೆ ನಡೆಸಿದ ವೇಳೆ ಆತಂಕಕಾರಿ ಅಂಶಗಳು ಕಂಡು ಬಂದಿದೆ.
ಅದ್ವೈತ್ ಶಿವಗಂಗೆ ಬೆಟ್ಟದಿಂದ ಬಿದ್ದರೆ ಎಷ್ಟು ಹೊತ್ತಿಗೆ ಸಾಯಬಹುದು ಎಂಬ ಮಾಹಿತಿಯನ್ನು ಎಐ ತಂತ್ರಜ್ಞಾನ ಬೆಳೆಸಿ ಹುಡುಕಾಟ ನಡೆಸಿರುವುದು ಕಂಡು ಪೊಲೀಸರೇ ಒಂದು ಕ್ಷಣ ಗಾಬರಿಗೊಂಡಿದ್ದಾರೆ. ಈತ ಚಾರಣಕ್ಕೆ ಹೋದಾಗ ಬೆಟ್ಟದ ತುತ್ತ ತುದಿಯಲ್ಲಿ ಇತರೆ ಚಾರಣಿಗಳು ತೆಗೆದ ಫೋಟೋದಲ್ಲಿ ಅದ್ವೈತ್ ಸಹ ಇರುವುದು ಪತ್ತೆಯಾಗಿದೆ.ಸಿದ್ದಗಂಗೆ ಬೆಟ್ಟದ ತುತ್ತ ತುದಿಯೂ ಆಳವಾದ ಕಂದಕದಿಂದ ಕೂಡಿದ್ದು, ಪ್ರಪಾತ ಹಾಗೂ ಕಡಿದಾದ ಜಾಗಗಳಲ್ಲಿ ತಂಡಗಳು ನಿರಂತರವಾಗಿ ಹುಡುಕಾಟ ನಡೆಸುತ್ತಿವೆ.
